ಬೆಂಗಳೂರು: ಕ್ರೂರಿ ಕೊರೊನಾದ ನಿರಂಕುಶ ದಾಳಿಯ ಎದುರು ಸೆಣಸಾಡುತ್ತಿರುವ ವೀರ ನಾರಿಯರು ನಮ್ಮ ಆಶಾ ಕಾರ್ಯಕರ್ತೆಯರು. ಆದರೆ, ಇವರಿಗೂ ಹಲವಾರು ಸಮಸ್ಯೆಗಳು ಎದುರಾಗಿವೆ. ಜೊತೆಗೆ ಸರ್ಕಾರದ ಪೊಳ್ಳು ಭರವಸೆಗಳು ಹುಸಿಯಾಗಿರುವ ಹಿನ್ನೆಲೆಯಲ್ಲಿ ತಾಳ್ಮೆ ಕಳೆದುಕೊಂಡಿದ್ದಾರೆ.
ಹಾಗಾಗಿ ತಮ್ಮ ಪ್ರಮುಖ ಎರಡು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನಾಳೆ ರಾಜ್ಯಾದ್ಯಂತ ಧರಣಿ ನಡೆಸಲು ಮುಂದಾಗಿದ್ದಾರೆ. ಜೊತೆಗೆ ನಾಳಿನ ಪ್ರತಿಭಟನೆಗೆ ಸರ್ಕಾರ ಅನುಮತಿ ನೀಡದಿದ್ದರೆ ಜುಲೈ 10ರಿಂದ ಕರ್ತವ್ಯ ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳೇನು?
ಕೊರೊನಾದ ವಿರುದ್ಧ ದಿನವಿಡೀ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ ಗೌರವ ಧನ ಸಮರ್ಪಕವಾಗಿಲ್ಲ ಹಾಗೂ ಸೂಕ್ತವಾಗಿ ತಲುಪುತ್ತಿಲ್ಲ. ಸದ್ಯಕ್ಕೆ ಕೇವಲ 6 ಸಾವಿರ ರೂಪಾಯಿಗಳನ್ನ ನೀಡುತ್ತಿದ್ದಾರೆ. ಇಷ್ಟು ಕಡಿಮೆ ವೇತನದಲ್ಲಿ ಜೀವನ ಸಾಗಿಸುವುದು ಕಷ್ಟ. ಜೊತೆಗೆ ದಿನವಿಡೀ ಕಂಟೈನ್ಮೆಂಟ್ ಜೋನ್ಗಳಲ್ಲಿ ಕೆಲಸ ಮಾಡುವ ಇವರಿಗೆ ಅಗತ್ಯವಾದ ಸುರಕ್ಷತಾ ಪರಿಕರಗಳನ್ನು ಸರ್ಕಾರ ಪೂರೈಸುತ್ತಿಲ್ಲ ಎಂಬ ಕೊರಗು ಸಹ ಇದೆ.