ಶೂನ್ಯದಿಂದ ಬೆಳೆದು ನಿಂತ ಗೋವಿಂದ ಬಾಬು ಪೂಜಾರಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 16, 2022 | 9:00 AM

ಪೂಜಾರಿ ಅವರು ತಮ್ಮ ಸಂಸ್ಥೆ ಮೂಲಕ 5,000 ಜನರಿಗೆ ಉದ್ಯೋಗ ನೀಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜಾರ್ಖಂಡ್, ಗುಜರಾತ್‌ನಲ್ಲಿ ಸಂಸ್ಥೆ, ಅತ್ಯಾಧುನಿಕ ಕಿಚನ್‌ಗಳನ್ನು ಹೊಂದಿದ್ದು, ವಿವಿಧ ಕಾರ್ಪೊರೇಟ್ ಕಂಪನಿಗಳಿಗೆ ಕೇಟರಿಂಗ್ ಸೇವೆ ಒದಗಿಸುತ್ತಿದೆ.

ಶೂನ್ಯದಿಂದ ಬೆಳೆದು ನಿಂತ ಗೋವಿಂದ ಬಾಬು ಪೂಜಾರಿ
ಗೋವಿಂದ ಬಾಬು ಪೂಜಾರಿ
Follow us on

ಬಡವನಾಗಿ ಹುಟ್ಟುವುದು ತಪ್ಪಲ್ಲ ಬಡವನಾಗಿಯೇ ಸಾಯುವುದು ತಪ್ಪು ಎನ್ನುವ ಮಾತಿನಂತೆ, ಸತತ ಪರಿಶ್ರಮ ಮತ್ತು ಸಾಧನೆಯ ಮೂಲಕ ಬಡತನದ ಬೇಗೆಯಲ್ಲಿ ಬೇಯುತ್ತಿದ್ದವರು ಅಗಾಧ ಶ್ರೀಮಂತರಾದ ಹಲವಾರು ನಿದರ್ಶನಗಳು ಇದೆ. ಅಂತವರ ಸಾಲಿಗೆ ಸೇರುವವರು ಗೋವಿಂದ ಬಾಬು ಪೂಜಾರಿ ಪುಡಿಗಾಸು ಇಲ್ಲದೆ ಮುಂಬೈ ಮಹಾನಗರ ಹೋಗಿದ್ದ ಹುಡುಗ ಇಂದು ನೂರಾರು ಕೋಟಿಯ ವ್ಯವಹಾರ ನಡೆಸುವ ಉದ್ಯಮಿಯಾಗಿ ಬೆಳೆದು ನಿಂತದ್ದು ಅದ್ಭುತವೇ ಸರಿ. ದಿನದಿಂದ ದಿನಕ್ಕೆ ತನ್ನ ಉದ್ಯಮವನ್ನು ವಿಸ್ತರಿಸುತ್ತಿರುವ ಈ ಸಾಧಕ ಸಾಗಿ ಬಂದ ಹಾದಿ ಪ್ರೇರಣದಾಯಿಯಾದದ್ದು. 1977ರಲ್ಲಿ ಕುಂದಾಪುರದ ಬಿಜೂರಿನ ಕೃಷಿ ಕುಟುಂಬವೊಂದರಲ್ಲಿ ಜನಿಸಿದ ಗೋವಿಂದ ಬಾಬು ಪೂಜಾರಿ ಬಾಲ್ಯದಿಂದಲೇ ಏಳು ಬೀಳುಗಳನ್ನು ಕಂಡವರು. ಕಷ್ಟಗಳ ಅರಿವಿದ್ದ ಇವರು 13ನೇ ವಯಸ್ಸಿನಲ್ಲಿಯೇ ಬದುಕಿನಲ್ಲಿ ಏನಾದರೂ ಸಾಧಿಸುವ ಹೊಂಗನಸಿನೊಂದಿಗೆ ಮುಂಬೈ ಪಟ್ಟಣದಲ್ಲಿ ಕೆಲಸಕ್ಕೆ ಸೇರಿದರು. ಹೋಟೆಲ್ ಒಂದರಲ್ಲಿ ಚಹಾ ಮಾಡುವ ಮೂಲಕ ವೃತ್ತಿ ಬದುಕು ಆರಂಭಿಸಿದ ಗೋವಿಂದ ಅವರು ನಂತರದ ವರ್ಷಗಳಲ್ಲಿ ಬಿಎಸ್‌ಟಿ ಕ್ಯಾಂಟೀನ್‌ನಲ್ಲಿ ಅಡುಗೆ ಸಹಾಯಕನಾಗಿ ಸೇರಿಕೊಂಡರು.

ಇರ್ಲಾದ ಸನ್ನಿ ಬಾರ್ ನಲ್ಲಿ ಬಾಣಸಿಗನಾಗಿ ಮುಂದೆ ಸ್ವ -ಉದ್ಯೋಗದ ಗುರಿಯೊಂದಿಗೆ ಜನರಲ್ ಸ್ಟೋರ್ ಒಂದನ್ನು ತೆರೆದರು . ಆದರೆ ಇದು ಕೈ ಹಿಡಿಯಲಿಲ್ಲ ಸಾಕಷ್ಟು ನಷ್ಟ ಅನುಭವಿಸಿದರು. ಮತ್ತೆ ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಕ್ಲೀನಿಂಗ್ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಡುಗೆಯ ವಿಶೇಷ ಆಸಕ್ತಿ ಹೊಂದಿದ್ದ ಗೋವಿಂದ ಅವರು ತನ್ನ ಸ್ವ ಪರಿಶ್ರಮದಿಂದ ಹಂತ ಹಂತವಾಗಿ ಎತ್ತರದ ಶಿಖರವನ್ನು ತಲುಪಿದ್ದರು,  ಶೆಫ್ ಸ್ಥಾನವನ್ನು ಗಳಿಸಿಕೊಂಡರು. ಒಮ್ಮೆ ಸೋಲುಂಡರು ಕೂಡಾ ಇವರ ಸ್ವ ಉದ್ಯಮದ ಕನಸು ಕಮರಲಿಲ್ಲ . 2007ರಲ್ಲಿ 7 ಮಂದಿ ನೌಕರರೊಂದಿಗೆ ‘ಷೆಫ್ ಟಾಕ್ ಕೇಟರಿಂಗ್ ಸರ್ವಿಸಸ್ ‘ ಸಂಸ್ಥೆಯನ್ನು ಕಟ್ಟಿದರು . ಮುಂದೆ ಇದು ‘ಷೆಫ್ ಟಾಕ್ ಫುಡ್ ಆ್ಯಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ. ಲಿ.’ ಆಗಿ ಬದಲಾಯಿತು.

ಪ್ರಸ್ತುತ ಪೂಜಾರಿ ಅವರು ತಮ್ಮ ಸಂಸ್ಥೆ ಮೂಲಕ 5,000 ಜನರಿಗೆ ಉದ್ಯೋಗ ನೀಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜಾರ್ಖಂಡ್, ಗುಜರಾತ್‌ನಲ್ಲಿ ಸಂಸ್ಥೆ, ಅತ್ಯಾಧುನಿಕ ಕಿಚನ್‌ಗಳನ್ನು ಹೊಂದಿದ್ದು, ವಿವಿಧ ಕಾರ್ಪೊರೇಟ್ ಕಂಪನಿಗಳಿಗೆ ಕೇಟರಿಂಗ್ ಸೇವೆ ಒದಗಿಸುತ್ತಿದೆ. ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ 25,000 ಚದರ ಅಡಿ ವಿಸ್ತೀರ್ಣದಲ್ಲಿ ಇರುವ ಅತ್ಯಾಧುನಿಕ ಕಿಚನ್, ‘ಐಎಸ್ಒ’ ಮಾನ್ಯತೆಯನ್ನೂ ಪಡೆದಿದೆ.

ಯಶಸ್ಸಿನ ಬೆನ್ನ ಹತ್ತಿದ ಗೋವಿಂದ ಅವರು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ಮತ್ಸ್ಯಬಂಧನ ಕಂಪನಿಯ ಸಹಯೋಗದಲ್ಲಿ ರಾಣಿ ಮೀನು ಮತ್ತು ಬೂತಾಯಿ ಮೀನುಗಳಿಂದ ಚಿಪ್ಸ್ಗಳನ್ನು ತಯಾರಿಸುವ ಕಂಪನಿಯನ್ನು ಆರಂಭಿಸಿದರು. ಇದರೊಂದಿಗೆ ಪ್ರಗ್ನ್ಯಾ ಸಾಗರ್ ಹೋಟೆಲ್ ಮತ್ತು ರೆಸಾರ್ಟ್, ಶೆಫ್ ಟಾಕ್ ನ್ಯೂಟ್ರಿಫುಡ್ ಸಂಸ್ಥಗೆಳನ್ನು ಸ್ಥಾಪಿಸುವ ಮೂಲಕ ವರ್ಷಕ್ಕೆ ನೂರಾರು ಕೋಟಿ ವಹಿವಾಟು ನಡೆಸುವ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ.

ತಾನೆಷ್ಟೇ ಎತ್ತರಕ್ಕೆ ಬೆಳೆದರೂ ಸಾಮಾಜಿಕ ಕಳಕಳಿಯನ್ನು ಮರೆಯದ ಗೋವಿಂದ ಅವರು ಶ್ರೀವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಮೂಲಕ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಉಪ್ಪುಂದದಲ್ಲಿ ಶ್ರೀ ವರಲಕ್ಷ್ಮೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದಾರೆ. ಇದರೊಂದಿಗೆ ಹತ್ತು ಹಲವಾರು ಸಂಘ ಸಂಸ್ಥೆಗೆ ಸಹಕಾರ ನೀಡುತ್ತಿದ್ದಾರೆ
ಹುಟ್ಟೂರಲ್ಲಿ ಶಾಲೆ ಕಟ್ಟಬೇಕು, ಉದ್ದಿಮೆಯನ್ನು ವಿಸ್ತರಿಸಿ ಮತ್ತಷ್ಟು ಜನರಿಗೆ ಉದ್ಯೋಗ ನೀಡಬೇಕು ಎಂದು ತಮ್ಮ ಭವಿಷ್ಯದ ಕನಸುಗಳನ್ನು ಪೂಜಾರಿ ಅವರು ಹಂಚಿಕೊಳ್ಳುತ್ತಾರೆ.

ಸ್ವಂತಪರಿಶ್ರಮದಿಂದ ಬದುಕು ಕಟ್ಟಿಕೊಂಡ ಇವರಿಗೆ ಫಾಸ್ಟೆಸ್ಟ್ ಗ್ರೋವಿಂಗ್ ಪುಡ್ ಸರ್ವೀಸ್ ಕಂಪನಿ – ಎಐಎಫ್ 2017, ಮೋಸ್ಟ್ ಹೈಜಿನಿಕ್ ಕೆಫೆಟೇರಿಯಾ – ಬಿಎಆರ್‌ಸಿ 2018, ಫಾಸ್ಟೆಸ್ಟ್ ಗ್ರೋವಿಂಗ್ ಎಂಟರ್‌ಪ್ರೈಸ್ – ಬಿಸಿಸಿಐ ಆ್ಯಂಡ್ ಎಚ್‌ಡಿಎಫ್‌ಸಿ ಬ್ಯಾಂಕ್ 2019 ಮತ್ತು ಆಹಾರೋದ್ಯಮ ಸಾಧನಶ್ರೀ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳು ಒಲಿದು ಬಂದಿದೆ. ಲಜೀರೋದಿಂದ ಹೀರೋ ಆದ ಗೋವಿಂದ ಅವರ ಸಾಧನೆ ಇನ್ನಷ್ಟು ಯುವಕರಿಗೆ ಪ್ರೇರಣೆಯಾಗುವ ಮೂಲಕ ಸದೃಢ ಸಮಾಜ ನಿರ್ಮಾಣವಾಗಲಿ ಎಂಬುವುದೇ ಈ ಲೇಖನದ ಆಶಯ.

– ಜಗದೀಶ್ ಬಳಂಜ