ಶ್ರೀಲಂಕಾದಲ್ಲಿ ನಿಜವಾಗಲೂ ಏನಾಗುತ್ತಿದೆ: ಪುರುಷೋತ್ತಮ ಬಿಳಿಮಲೆ ಬರಹ

ಶ್ರೀಲಂಕಾದ ಸಮಸ್ಯೆಗಳಿಗೆ ಸುದೀರ್ಘ ಹಿನ್ನೆಲೆಯಿದೆ. 2009ರಷ್ಟು ಹಿಂದೆ ತಮಿಳರ ಸಮಸ್ಯೆಯನ್ನು ಪರಿಹರಿಸಿಕೊಂಡ ಮೇಲೆ ಅದು ಉಗ್ರ ರಾಷ್ಟ್ರೀಯತೆಯ ಕಡೆ ವೇಗವಾಗಿ ಹೊರಳಿಕೊಂಡಿತು.

ಶ್ರೀಲಂಕಾದಲ್ಲಿ ನಿಜವಾಗಲೂ ಏನಾಗುತ್ತಿದೆ: ಪುರುಷೋತ್ತಮ ಬಿಳಿಮಲೆ ಬರಹ
ಲೇಖಕ ಪುರುಷೋತ್ತಮ ಬಿಳಿಮಲೆ (ಎಡಚಿತ್ರ) ಮತ್ತು ಶ್ರೀಲಂಕಾದ ಮಹಿಳೆ (ಬಲಚಿತ್ರ)
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 03, 2022 | 11:44 AM

ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ವಿಶ್ವದ ಗಮನ ಸೆಳೆದಿರುವ ಶ್ರೀಲಂಕಾದ ಇಂದಿನ ಸ್ಥಿತಿಗೆ ಏನು ಕಾರಣ ಎಂಬ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ. ಅಲ್ಲಿನ ಆಡಳಿತ ತೆಗೆದುಕೊಂಡ ಈ ಹಿಂದೆ ತಪ್ಪು ತೀರ್ಮಾನಗಳು ಹೇಗೆ ಶ್ರೀಲಂಕಾದ ಇಂದಿನ ಬಿಕ್ಕಟ್ಟಿಗೆ ಕಾರಣವಾಗಿವೆ ಎಂಬ ಕುರಿತು ಕನ್ನಡದ ಹಿರಿಯ ಸಾಹಿತಿ ಪುರುಷೋತ್ತಮ ಬಿಳಿಮಲೆ ಅವರ ಬರಹ ಇಲ್ಲಿದೆ. ಸಾಮಾಜಿಕ ಅಸಮಾನತೆ ಮತ್ತು ಧಾರ್ಮಿಕ ಮೂಲಭೂತವಾದವು ಒಂದು ದೇಶವನ್ನು ಹೇಗೆ ಆರ್ಥಿಕ ಬಿಕ್ಕಟ್ಟಿಗೆ ದೂಡಬಲ್ಲದು ಎಂದು ವಿವರಿಸಲು ಈ ಬರಹ ಯತ್ನಿಸುತ್ತದೆ. ಪುರುಷೋತ್ತಮ ಬಿಳಿಮಲೆ ಅವರ ಫೇಸ್​ಬುಕ್​ ಖಾತೆಯಲ್ಲಿ ಪ್ರಕಟವಾಗಿದ್ದ ಬರಹವನ್ನು ಅವರ ಅನುಮತಿಯೊಂದಿಗೆ ಮರುಪ್ರಕಟಿಸಲಾಗಿದೆ. ಈ ಬರಹದಲ್ಲಿ ವ್ಯಕ್ತವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ.

ನೆರೆಯ ರಾಷ್ಟ್ರ ಮಾತ್ರವಲ್ಲ, ರಾಮಾಯಣ ಕಾಲದಿಂದಲೂ ಭಾರತದೊಂದಿಗೆ ಸಂಬಂಧವಿರುವ ಶ್ರೀಲಂಕಾದಲ್ಲಿ ನಿಜವಾಗಲೂ ಏನಾಗುತ್ತಿದೆ (Sri Lanka Economic Crisis) ಎಂದು ಹೇಳುವಲ್ಲಿ ಬಹುತೇಕ ಭಾರತೀಯ ಮಾಧ್ಯಮಗಳು ವಿಫಲವಾಗಿವೆ. ಅವುಗಳಿಗೆ ಹತ್ತಿರದ ಶ್ರೀಲಂಕಾಕ್ಕಿಂತ ದೂರದ ರಶಿಯಾ ಉಕ್ರೇನ್​ಗಳೇ ಆಕರ್ಷಕ ಸಾಮಗ್ರಿಗಳಾಗಿವೆ. ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಷರ ಮೇಲೆ ಜನ ಮುಗಿಬಿದ್ದಿದ್ದಾರೆ. ಅಲ್ಲಿರುವ ಸುಮಾರು ಎರಡು ಕೋಟಿಗೂ ಹೆಚ್ಚು ಜನರು ಮತ್ತೊಮ್ಮೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಬಡತನ ಮತ್ತು ಹಸಿವಿನಿಂದ ಆ ದೇಶ ಇದೀಗ ಕಂಗೆಟ್ಟಿದೆ. ಅರ್ಥಶಾಸ್ತಜ್ಞರ ಪ್ರಕಾರ ಶ್ರೀಲಂಕಾದ ರಾಷ್ಟ್ರೀಯ ಉತ್ಪಾದನೆಯು ಅದರ ಖರ್ಚಿಗಿಂತ ಎಷ್ಟೋ ಕಡಿಮೆಯಿರುವುದರಿಂದ ಸಮಸ್ಯೆ ಬಹಳ ಗಂಭೀರವಾಗಿದೆ. ಅಂತಾರಾಷ್ಟ್ರೀಯ ಸಾಲದ ಮಟ್ಟವೂ ಹಿಡಿತ ಮೀರಿ ಬೆಳೆದಿದೆ.

ಇದಕ್ಕೆ ಮುಖ್ಯ ಕಾರಣ ಕೋವಿಡ್ ಉಂಟು ಮಾಡಿದ ಬಿಕ್ಕಟ್ಟುಗಳು. ಕೋವಿಡ್ ಅವಧಿಯಲ್ಲಿ ಅಲ್ಲಿಯ ಆರ್ಥಿಕತೆಯ ಬೆನ್ನೆಲುಬಾಗಿರುವ ಪ್ರವಾಸೋದ್ಯಮವು ಸಂಪೂರ್ಣವಾಗಿ ನೆಲಕಚ್ಚಿತು. ತೀವ್ರ ರಾಷ್ಟ್ರೀಯವಾದಿಯಾಗಿರುವ ರಾಜಪಕ್ಷ 2021ರಲ್ಲಿ ರಾಸಾಯನಿಕ ಗೊಬ್ಬರಗಳನ್ನು ನಿಷೇಧಿಸಿದ್ದರಿಂದ ಅಲ್ಲಿನ ಕೃಷಿ ಕೈಗಾರಿಕೆಯೂ ಕುಸಿಯಿತು. ಸಣ್ಣಸಣ್ಣ ಕೈಗಾರಿಕೆಗಳು ಮುಚ್ಚಿಹೋಗಿ ಜನರು ಬೀದಿಗೆ ಬಿದ್ದರು. ಉಕ್ರೇನ್- ರಶಿಯಾ ಯುದ್ಧದಿಂದಾಗಿ ಶ್ರೀಲಂಕಾಕ್ಕೆ ಈಗ ತೈಲ ಕೊಡುವವರೂ ಇಲ್ಲ. ಐಎಂಎಫ್ ಸಾಮಾನ್ಯವಾಗಿ ಅಸ್ಥಿರ ಆರ್ಥಿಕತೆ ಇರುವಲ್ಲಿಗೆ ವಿಶೇಷ ಒತ್ತು ಕೊಡುವುದಿಲ್ಲ.

ಶ್ರೀಲಂಕಾದ ಸಮಸ್ಯೆಗಳಿಗೆ ಸುದೀರ್ಘ ಹಿನ್ನೆಲೆಯಿದೆ. 2009ರಷ್ಟು ಹಿಂದೆ ತಮಿಳರ ಸಮಸ್ಯೆಯನ್ನು ಪರಿಹರಿಸಿಕೊಂಡ ಮೇಲೆ ಅದು ಉಗ್ರ ರಾಷ್ಟ್ರೀಯತೆಯ ಕಡೆ ವೇಗವಾಗಿ ಹೊರಳಿಕೊಂಡಿತು. ಇವತ್ತು ಈ ಉಗ್ರ ರಾಷ್ಟ್ರವಾದವು ಬೌದ್ಧ ಸಿಂಹಳೀಯರನ್ನು ಕೇಂದ್ರದಲ್ಲಿರಿಸಿಕೊಂಡು ಬೆಳೆದಿದೆ. ಈ ಬೆಳವಣಿಗೆಗಳು ಅಲ್ಲಿನ ಅಲ್ಪಸಂಖ್ಯಾಕರಾದ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರನ್ನು ಮೂಲೆಗೆ ತಳ್ಳಿ ಅವರನ್ನು ಅನುತ್ಪಾದಕಗೊಳಿಸಿತು. ಅಲ್ಪಸಂಖ್ಯಾಕರ ಹಲವು ಪ್ರಾರ್ಥನಾ ಸ್ಥಳಗಳನ್ನು ಕಾನೂನು ಪ್ರಕಾರವೇ ಒಡೆದು ಹಾಕಲಾಯಿತು. ಆ ಸ್ಥಳಗಳಲ್ಲಿ ಬೌದ್ಧ ವಿಹಾರಗಳನ್ನು ಕಟ್ಟಲಾಯಿತು. ಇದಕ್ಕೆ ಸರಕಾರ ಕೊಟ್ಟ ಕಾರಣ- ‘ಪ್ರಾಚ್ಯವಸ್ತು ವಿಭಾಗದ ಪ್ರಕಾರ ಇವು ಬೌದ್ದರಿಗೆ ಸೇರಿದ ಜಾಗಗಳು’.

2019ರ ಈಸ್ಟರ್ ಬಾಂಬ್ ಪ್ರಕರಣವು ಕ್ರಿಶ್ಚಿಯನ್ ಮತ್ತು ಮುಸ್ಲಿಮರನ್ನು ನಿರ್ಣಾಯಕವಾಗಿ ಒಡೆಯಿತು. ಸಿಂಹಳೀಯ ಸಂಸ್ಕೃತಿಯ ಸಾರ್ವಭೌಮತ್ವಕ್ಕೆ ಕ್ರಿಶ್ಚಿಯನ್ ಮತ್ತು ಮುಸ್ಲಿಮರು ಅಪಾಯವೆಂದು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಯಿತು. ಈ ಕೆಲಸವನ್ನು Bodu Bala Sena (BBS) ಎಂಬ ತೀವ್ರಗಾಮಿ ಬೌದ್ಧ ಸಂಘಟನೆಯು ಮಾಡುತ್ತಿದ್ದರೂ ಸರಕಾರವು ಅದರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಸಂಘಟನೆಯು ದ್ವೇಷ ಭಾಷಣವನ್ನು ಜನರ ನಡುವೆ ಸಾಮಾನ್ಯ ಪ್ರಕ್ರಿಯೆ ಎಂಬಂತೆ ಮಾಡಿತು. ಇದರ ಆಧಾರದ ಮೇಲೆಯೇ ಈಗಿನ ಸರಕಾರದ ಗೊಟಬಯ ರಾಜಪಕ್ಷ ಮತ್ತು ಮಹಿಂದಾ ರಾಜಪಕ್ಷ ಸಹೋದರರು ಅಧಿಕಾರಕ್ಕೆ ಬಂದದ್ದನ್ನು ನಾವೇ ಕಂಡಿದ್ದೇವೆ. ಅಧಿಕಾರಕ್ಕೆ ಬರುವವರಿಗೆ ಇದಕ್ಕಿಂತ ಸುಲಭದ ಹಾದಿ ಬೇರೆ ಇಲ್ಲ.‌

ಈ ನಡುವೆ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರ ಹಾಜರಾತಿಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಯಿತು ಎಂದು Commission on the Status of Women (CSW) ವರದಿ ಮಾಡಿತು. ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಬುರ್ಖಾವನ್ನು ಮತ್ತು ಮುಸ್ಲಿಂ ಶಾಲೆಗಳನ್ನು ನಿಷೇಧಿಸುವ ತೀರ್ಮಾನವನ್ನು ಸರಕಾರ ತೆಗೆದುಕೊಂಡರೂ ಅಂತಾರಾಷ್ಟ್ರೀಯ ಒತ್ತಡಗಳನ್ನು ಗಮನಿಸಿ ‘ಇದಕ್ಕೆ ಸ್ವಲ್ಪ ಸಮಯಬೇಕು’ ಎಂದು ಹೇಳಿ ತೀರ್ಮಾನವನ್ನು ಮುಂದೂಡಿತು. 2020ರ ಕೋವಿಡ್ ಸಮಯದಲ್ಲಿ ಮುಸ್ಲಿಮರ ಧರ್ಮಾನುಸಾರ ಅಂತ್ಯಸಂಸ್ಕಾರ ನಡೆಸಲು ಶ್ರೀಲಂಕಾ ಸರಕಾರ ಅನುಮತಿ ನೀಡಲಿಲ್ಲ. 2009ರ ಆನಂತರದ ಶ್ರೀಲಂಕಾ ಚುನಾವಣೆಗಳು ಅಲ್ಪಸಂಖ್ಯಾಕರ ಮೇಲಿನ ಆರೋಪಗಳ ಮೂಲಕವೇ ನಡೆದುವೇ ವಿನಾ ಅಭಿವೃದ್ಧಿಯ ಮಾತುಗಳಿಂದ ಅಲ್ಲ. ಈ ನಡುವೆ ಸಂವಿಧಾನದ 20ನೇ ಪರಿಚ್ಚೇದಕ್ಕೆ ತಿದ್ದುಪಡಿ ತಂದು ರಾಜಪಕ್ಷ ತನ್ನ ಅಧಿಕಾರವನ್ನು ಇನ್ನಷ್ಟು ಬಲಪಡಿಸಿಕೊಂಡರು. ಅವರ ಅಧಿಕಾರವನ್ನು ಇದೀಗ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರಶ್ನಿಸುವಂತಿಲ್ಲ.

ಶ್ರೀಲಂಕಾದ ಬೆಳವಣಿಗೆಗಳ ಕುರಿತು ಈಚೆಗೆ The United States Commission on International Religious Freedom (USCIRF) ಹೇಳಿದ ಒಂದು ಮಾತೆಂದರೆ- ‘ಒಡೆದ ಸಮುದಾಯಗಳನ್ನು ಮತ್ತೆ ಬೆಸೆಯಲು ಬಹಳ ಕಾಲಾವಕಾಶ ಬೇಕು’. ಒಂದು ಸದೃಢ ಮತ್ತು ಸುಸಂಕೃತ ರಾಷ್ಟ್ರವನ್ನು ಕಟ್ಟುವುದಕ್ಕೆ ಇತಿಹಾಸದ ಸರಿಯಾದ ಗ್ರಹಿಕೆ ಬೇಕು, ಭವಿಷ್ಯದ ಕುರಿತು ಕನಸುಗಳೂ ಬೇಕು. ಎಲ್ಲಕ್ಕಿಂತ ಮಿಗಿಲಾಗಿ ‘ನಾವೇನು ಮಾಡುತ್ತಿದ್ದೇವೆ’ ಎಂಬ ಕುರಿತು ಒಂದು ತಿಳಿವಳಿಕೆಯೂ ಬೇಕು. ಇವಿಲ್ಲವಾದರೆ ರಾಷ್ಟ್ರವೊಂದರ ಕುಸಿತವನ್ನು ಯಾರಿಗೂ ತಪ್ಪಿಸಲಾಗದು. ಇದಕ್ಕೆ ಶ್ರೀಲಂಕಾದ ಇಂದಿನ ಅವಸ್ಥೆಯೇ ಸಾಕ್ಷಿ.

ಇದನ್ನೂ ಓದಿ: ಶ್ರೀಲಂಕಾಕ್ಕೆ ಭಾರತದಿಂದ ಅಕ್ಕಿ ಸರಬರಾಜು ಆರಂಭ: ಆರ್ಥಿಕ ಸಂಕಷ್ಟದಲ್ಲಿರುವ ದೇಶಕ್ಕೆ ಸಹಾಯಹಸ್ತ

ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾದ ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಘೋಷಣೆ: ಈವರೆಗಿನ 10 ಪ್ರಮುಖ ಬೆಳವಣಿಗೆಗಳಿವು

Published On - 11:33 am, Sun, 3 April 22

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್