SIM Cards: ಒಬ್ಬರಿಗೆ ಹೆಚ್ಚು ಸಿಮ್ ಕಾರ್ಡ್​ಗಳು ಸಿಗದು; ಈ ವರ್ಷ ಜಾರಿಗೆ ಬರುವ ಟೆಲಿಕಾಂ ಸುಧಾರಣೆಗಳ ಮುಖ್ಯಾಂಶಗಳನ್ನು ತಿಳಿದಿರಿ

Telecom Reforms in India: ಇನ್ನೆರಡು ತಿಂಗಳಲ್ಲಿ ಟೆಲಿಕಾಂ ವಲಯದ ಸುಧಾರಣೆಗಳು ಜಾರಿಗೆ ಬರುತ್ತವೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇದರಲ್ಲಿ ಒಂದು ಐಡಿ ಗುರುತಿಗೆ ಕೊಡಲಾಗುವ ಸಿಮ್ ಕಾರ್ಡ್ ಸಂಖ್ಯೆಯನ್ನು 9ಕ್ಕಿಂತ ಕಡಿಮೆಗೆ ಇಳಿಸಿವುದೂ ಒಂದು.

SIM Cards: ಒಬ್ಬರಿಗೆ ಹೆಚ್ಚು ಸಿಮ್ ಕಾರ್ಡ್​ಗಳು ಸಿಗದು; ಈ ವರ್ಷ ಜಾರಿಗೆ ಬರುವ ಟೆಲಿಕಾಂ ಸುಧಾರಣೆಗಳ ಮುಖ್ಯಾಂಶಗಳನ್ನು ತಿಳಿದಿರಿ
ಟೆಲಿಕಾಂ

Updated on: Jul 06, 2023 | 4:44 PM

ನವದೆಹಲಿ: ಕೇಂದ್ರ ಸರ್ಕಾರ 2021ರಲ್ಲಿ ಪ್ರಸ್ತಾಪಿಸಿದ್ದ ಟೆಲಿಕಾಂ ವಲಯದ ಸುಧಾರಣಾ ಕ್ರಮಗಳು ಈ ವರ್ಷದೊಳಗೆ ಜಾರಿಯಾಗುವ ಸಾಧ್ಯತೆ ಇದೆ. ಮೊನ್ನೆಯಷ್ಟೇ ಕೇಂದ್ರ ಟೆಲಿಕಾಂ ಸಚಿವ ಎ ವೈಷ್ಣವ್ (Union Minister Ashwini Vaishnaw) ಅವರು ಈ ಬಗ್ಗೆ ಮಾತನಾಡಿ ಮುಂದಿನ ಕೆಲ ತಿಂಗಳಲ್ಲಿ ಟೆಲಕಾಂ ಸುಧಾರಣೆಗಳನ್ನು ಅಳವಡಿಸಲಾಗುವುದು ಎಂದಿದ್ದ್ದಾರೆ. ಬಳಕೆದಾರರ ರಕ್ಷಣೆಗೆ ಆದ್ಯತೆ ಕೊಟ್ಟು ಸುಧಾರಣಾ ಕ್ರಮಗಳನ್ನು ರೂಪಿಸಲಾಗಿದೆ ಎಂದು ಹೇಳಿರುವ ಅಶ್ವಿನಿ ವೈಷ್ಣವ್, ಒಂದು ಗುರುತಿನ ಚೀಟಿಗೆ ನೀಡಲಾಗುವ ಸಿಮ್ ಕಾರ್ಡ್​ಗಳ ಸಂಖ್ಯೆಯ ಮಿತಿ ಇಳಿಸುವುದೂ ಈ ಸುಧಾರಣಾ ಕ್ರಮಗಳಲ್ಲಿ ಒಂದೆಂದು ಹೇಳಿದ್ದಾರೆ.

ಇದೀಗ ಒಬ್ಬ ವ್ಯಕ್ತಿಯ ಆಧಾರ್ ಕಾರ್ಡ್ ಹೆಸರಿನಲ್ಲಿ 9 ಸಿಮ್ ಕಾರ್ಡ್​ಗಳನ್ನು ಪಡೆಯಲು ಅವಕಾಶ ಇದೆ. ಮುಂದೆ ಜಾರಿಗೆ ಬರಲಿರುವ ಸುಧಾರಣಾ ಕ್ರಮದಲ್ಲಿ ಈ ಅವಕಾಶದಲ್ಲಿ ಬದಲಾವಣೆ ಮಾಡಲಾಗಲಿದೆ. ಒಂದು ಆಧಾರ್ ಗುರುತಿನ ಚೀಟಿಗೆ ನೀಡಲಾಗುವ ಸಿಮ್ ಕಾರ್ಡ್​ಗಳ ಸಂಖ್ಯೆಯನ್ನು 9ಕ್ಕಿಂತ ಕಡಿಮೆಗೆ ಇಳಿಸುವ ಪ್ರಸ್ತಾಪ ಇದೆ. ಆದರೆ, ಎಷ್ಟು ಸಿಮ್ ಕಾರ್ಡ್​ಗಳನ್ನು ನೀಡಲಾಗುವುದು ಎಂಬುದನ್ನು ತಿಳಿಸಿಲ್ಲ. ಆದರೆ ಭದ್ರತೆ ದೃಷ್ಟಿಯಿಂದ ಸಿಮ್ ಕಾರ್ಡ್ ಸಂಖ್ಯೆ ಕಡಿಮೆಗೊಳಿಸುವ ಆಲೋಚನೆ ಸರ್ಕಾರದ್ದಾಗಿದೆ.

ಇದನ್ನೂ ಓದಿVishnaw: ಒಂದೆರಡು ತಿಂಗಳಲ್ಲಿ ಟೆಲಿಕಾಂ ಸುಧಾರಣೆಗಳು ಜಾರಿ; ಬಳಕೆದಾರ ರಕ್ಷಣೆಗೆ ಆದ್ಯತೆ- ಸಚಿವ ವೈಷ್ಣವ್

ಎರಡು ತಿಂಗಳ ಹಿಂದೆ (ಮೇ 2023) ಕೇಂದ್ರದ ದೂರಸಂಪರ್ಕ ಇಲಾಖೆ ಸಂಚಾರ್ ಸಾಥಿ (Sanchar Sathi Portal) ಹೆಸರಿನ ಪೋರ್ಟಲ್​ವೊಂದನ್ನು ಬಿಡುಗಡೆ ಮಾಡಿತ್ತು. ಆಧಾರ್ ಗುರುತಿನ ಚೀಟಿ ಜೊತೆ ಮೊಬೈಲ್ ನಂಬರ್​ಗಳು ಜೋಡಿತವಾಗಿವೆಯಾ ಎಂಬುದನ್ನು ಈ ಪೋರ್ಟಲ್ ಮೂಲಕ ಪರಿಶೀಲಿಸಬಹುದು. ಹಾಗೆಯೇ, ಮೊಬೈಲ್ ಫೋನ್ ಕಳೆದುಹೋದರೆ ಈ ಪೋರ್ಟಲ್ ಮೂಲಕ ಟ್ರ್ಯಾಕ್ ಮಾಡಲು ಸಾಧ್ಯ. ಇಂಥ ಕೆಲ ವಿಧಾನಾತ್ಮಕ ಹಾಗೂ ರಚನಾತ್ಮಕ ಸುಧಾರಣೆಗಳನ್ನು ಇಲಾಖೆ ಕೈಗೊಂಡಿದೆ.

ಟೆಲಿಕಾಂ ವಲಯದಲ್ಲಿನ ಇತರ ಪ್ರಮುಖ ಸುಧಾರಣಾ ಕ್ರಮಗಳು

  • ಎಜಿಆರ್ ಹಂಚಿಕೆ ನೀತಿ
  • ಬ್ಯಾಂಕ್ ಗ್ಯಾರಂಟಿ (ಬಿಜಿ) ಹಂಚಿಕೆ ನೀತಿ
  • ಬಡ್ಡಿ ದರ ನೀತಿ ಮತ್ತು ದಂಡವಿಧಿಸುವಿಕೆ ಕ್ರಮ ತೆಗೆದುಹಾಕುವುದು
  • ಸ್ಪೆಕ್ಟ್ರಂ ಹರಾಜಿಗೆ ಬ್ಯಾಂಕ್ ಗ್ಯಾರಂಟಿ ಒದಗಿಸುವ ನಿಯಮ ಕೈಬಿಡುವುದು
  • ಮುಂದಿನ ಹರಾಜು ವೇಳೆ ಸ್ಪೆಕ್ಟ್ರಂ ಅವಧಿಯನ್ನು 20ರಿಂದ 30 ವರ್ಷಕ್ಕೆ ಹೆಚ್ಚಿಸುವುದು
  • 10 ವರ್ಷದ ಬಳಿಕ ಸ್ಪೆಕ್ಟ್ರಂ ವಾಪಸ್ ಮಾಡುವ ಅನುಮತಿ ನೀಡುವುದು
  • ಸ್ಪೆಕ್ಟ್ರಂ ಬಳಕೆ ಶುಲ್ಕ (ಎಸ್​ಯುಸಿ) ಒದಗಿಸಬೇಕೆನ್ನುವ ನಿಯಮ ಕೈಬಿಡುವುದು
  • ಕೆಲ ಷರುತ್ತುಗಳಿಗೆ ಅನ್ವಯವಾಗಿ ಟೆಲಿಕಾಂ ವಲಯಕ್ಕೆ ನೂರು ಪ್ರತಿಶತದಷ್ಟು ಎಫ್​ಡಿಐ ಹೂಡಿಕೆಗೆ ಅನುಮತಿ
  • ಸ್ಪೆಕ್ಟ್ರಂ ಹರಾಜುಗಳಿಗೆ ನಿಗದಿತ ಸಮಯ
  • ಸೆಲ್ಫ್ ಕೆವೈಸಿಗೆ ಅನುಮತಿ
  • ಇಕೆವೈಸಿ ಸಲ್ಲಿಕೆಗೆ ಒಂದು ರೂ ದರ
  • ಪ್ರೀಪೇಡ್ ಮತ್ತು ಪೋಸ್ಟ್ ಪೇಡ್ ಸೇವೆ ಅದಲುಬದಲು ಮಾಡಿಕೊಂಡರೆ ಹೊಸದಾಗಿ ಕೆವೈಸಿ ಸಲ್ಲಿಸುವ ಅವಶ್ಯಕತೆ ಇಲ್ಲ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us