ಭಾರತದ ಜೊತೆ ವ್ಯಾಪಾರ ಸಂಬಂಧ ಮರಳಿ ಸ್ಥಾಪಿಸಲು ಪಾಕಿಸ್ತಾನ ಒಲವು

Pakistan Foreign Minister Ishaq Dar: ಭಾರತದೊಂದಿಗಿನ ವ್ಯಾಪಾರ ಸಂಬಂಧವನ್ನು ಕಡಿದುಕೊಂಡಿದ್ದ ಪಾಕಿಸ್ತಾನ ಈಗ ಮರಳಿ ಸ್ಥಾಪಿಸುವ ಆಸಕ್ತಿ ತೋರಿದೆ. ಲಂಡನ್​ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ಪಾಕಿಸ್ತಾನದ ವಿದೇಶಾಂಗ ಸಚಿವರು, ಭಾರತ ಮತ್ತು ಪಾಕಿಸ್ತಾನ ಮಧ್ಯೆ ಮತ್ತೆ ವ್ಯಾಪಾರ ಸಂಬಂಧ ಆರಂಭವಾಗುವ ನಿರ್ಧಾರವನ್ನು ಪರಿಗಣಿಸುವುದಾಗಿ ಹೇಳಿದ್ದಾರೆ. 2019ರಲ್ಲಿ ಭಾರತ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಪಾಕಿಸ್ತಾನ ತಗಾದೆ ವ್ಯಕ್ತಪಡಿಸಿ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿತ್ತು.

ಭಾರತದ ಜೊತೆ ವ್ಯಾಪಾರ ಸಂಬಂಧ ಮರಳಿ ಸ್ಥಾಪಿಸಲು ಪಾಕಿಸ್ತಾನ ಒಲವು
ಇಶಾಕ್ ದರ್
Follow us
|

Updated on: Mar 24, 2024 | 2:45 PM

ಇಸ್ಲಾಮಾಬಾದ್, ಮಾರ್ಚ್ 24: ಕಳೆದ ಐದು ವರ್ಷದಿಂದ ಸ್ಥಗಿತಗೊಂಡಿರುವ ಭಾರತದೊಂದಿಗಿನ ವ್ಯಾಪಾರ ಸಂಬಂಧವನ್ನು (India Pakistan trade relations) ಪುನಃಸ್ಥಾಪಿಸಲು ಪಾಕಿಸ್ತಾನ ಆಸಕ್ತಿ ತೋರುತ್ತಿರುವಂತಿದೆ. ಪಾಕಿಸ್ತಾನದಲ್ಲಿ ಚುನಾವಣೆ ಬಳಿಕ ಅಸ್ತಿತ್ವಕ್ಕೆ ಬಂದಿರುವ ಹೊಸ ಸರ್ಕಾರ ಭಾರತದ ಜೊತೆಗಿನ ರಾಜತಾಂತ್ರಿಕ ನಿಲುವನ್ನು ಬದಲಿಸುವ ಇರಾದೆಯಲ್ಲಿದೆ. ಈ ವಿಚಾರವನ್ನು ವಿದೇಶಾಂಗ ಸಚಿವ ಇಶಾಕ್ ದರ್ ತಿಳಿಸಿದ್ದಾರೆ. ಲಂಡನ್​ನಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಪಾಕ್ ಸಚಿವರು ಭಾರತದೊಂದಿಗೆ ತಮ್ಮ ದೇಶ ವ್ಯಾಪಾರ ಸಂಬಂಧ ಪುನಾರಂಭಿಸುವ ನಿರ್ಧಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.

‘ಪಾಕಿಸ್ತಾನದ ಉದ್ಯಮಿಗಳು ಭಾರತದೊಂದಿಗೆ ವ್ಯಾಪಾರ ಸಂಬಂಧ ಪುನಾರಂಭವಾಗಬೇಕೆಂದು ಬಯಸುತ್ತಿದ್ದಾರೆ. ಇದನ್ನು ಪಾಕಿಸ್ತಾನವೂ ಪರಿಗಣಿಸಲು ಸಿದ್ಧ ಇದೆ. ಭಾರತದೊಂದಿಗೆ ವ್ಯಾಪಾರ ನಡೆಸುವ ವಿಚಾರವನ್ನು ನಾವು ಗಂಭೀರವಾಗಿ ಅವಲೋಕಿಸುತ್ತೇವೆ’ ಎಂದು ಇಶಾಕ್ ದರ್ ತಿಳಿಸಿದ್ದಾರೆ.

ಇದನ್ನೂ ಓದಿ: ಇದು ‘ಮೋದಿ ಕಿ ಗ್ಯಾರಂಟಿ’; ಪ್ರಧಾನಿ ನರೇಂದ್ರ ಮೋದಿ ಭೇಟಿಗಾಗಿ ಧನ್ಯವಾದ ಸಲ್ಲಿಸಿದ ಭೂತಾನ್ ಪಿಎಂ

ಬೆಲ್ಜಿಯಂ ರಾಜಧಾನಿನಗರಿ ಬ್ರುಸೆಲ್ಸ್​ನಲ್ಲಿ ನಡೆದ ನ್ಯೂಕ್ಲಿಯಾರ್ ಎನರ್ಜಿ ಶೃಂಗಸಭೆಯಲ್ಲಿ ಪಾಲ್ಗೊಂಡ ಬಳಿಕ ಲಂಡನ್​ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಆರ್ಥಿಕ ಮತ್ತು ಹಣಕಾಸು ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನಕ್ಕೆ ಈಗ ಭಾರತದೊಂದಿಗೆ ವ್ಯಾಪಾರ ಸಂಬಂಧ ಮರಳುವ ಅವಶ್ಯಕತೆಯೂ ಇದೆ.

ಭಾರತ 370ನೇ ವಿಧಿ ರದ್ದು ಮಾಡಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಜಮ್ಮು ಕಾಶ್ಮೀರ ಮತ್ತು ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಸಿತ್ತು. ಭಾರತ ಕಾಶ್ಮೀರಿಗರ ಅಭಿಪ್ರಾಯಕ್ಕೆ ವಿರುದ್ಧವಾಗಿ ಒಮ್ಮುಖ ನಿರ್ಧಾರ ತೆಗೆದುಕೊಂಡಿದೆ ಎಂದು ಆರೋಪಿಸಿ ಪಾಕಿಸ್ತಾನವು ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದೆ. ಈ ಕ್ರಮಗಳನ್ನು ಭಾರತ ರದ್ದುಗೊಳಿಸುವವರೆಗೂ ಸಂಬಂಧ ಮರಳಿ ಸ್ಥಾಪಿಸುವುದಿಲ್ಲ ಎಂದು ಹೇಳುತ್ತಲೇ ಬಂದಿರುವ ಪಾಕಿಸ್ತಾನ ಈಗ ತನ್ನ ನಿಲುವನ್ನು ಬದಲಿಸಿಕೊಂಡಂತಿದೆ.

ಇದನ್ನೂ ಓದಿ: ಭಾರತದಲ್ಲಿ ಎಐ ಯೋಜನೆಗಳಿಗೆ ಭವಿಷ್ಯ ಇಲ್ಲ: ಮಾಜಿ ಗೂಗಲ್ ಉದ್ಯೋಗಿ ಹತಾಶೆಯಿಂದ ಹೇಳಿದ್ದು ಯಾಕೆ ಗೊತ್ತಾ?

ಜಮ್ಮು ಕಾಶ್ಮೀರದ 370ನೇ ವಿಧಿಯನ್ನು ರದ್ದುಗಳಿಸಿದ ತನ್ನ ಕ್ರಮವನ್ನು ಭಾರತ ಬಲವಾಗಿ ಸಮರ್ಥಿಸಿಕೊಂಡಿದೆ. ಇಡೀ ಜಮ್ಮು ಕಾಶ್ಮೀರ ಮತ್ತು ಲಡಾಖ್ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂಬುದು ಭಾರತದ ಸ್ಪಷ್ಟ ನಿಲುವು. ಹಾಗೆಯೇ, ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುವವರೆಗೂ ತಾನೂ ಕೂಡ ಯಾವ ಸಂಬಂಧಕ್ಕೆ ಆಸ್ಪದ ಕೊಡುವುದಿಲ್ಲ ಎಂಬುದು ಭಾರತದ ನಿಲುವು ಕೂಡ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ