Paytm vs RBI: ಪೇಟಿಎಂ ಮಾಡಿದ ತಪ್ಪುಗಳೇನು? ಆರ್​ಬಿಐನದ್ದು ಪ್ರತೀಕಾರದ ಕ್ರಮವಾ? ನಿರ್ಬಂಧದ ಹಿಂದಿನ ಅಸಲಿ ಕಾರಣ ಇದು

Paytm Payments Bank: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ನಿರ್ಬಂಧಿಸಿದ ಆರ್​ಬಿಐ ಕ್ರಮ ಹಲವರಿಗೆ ಅಚ್ಚರಿ ಎನಿಸಿದೆ. ಆರ್​ಬಿಐನ ಈ ಕ್ರಮಕ್ಕೆ ಕೆಲ ಪ್ರಬಲ ಕಾರಣಗಳಿವೆ. ಪೇಟಿಎಂ ಬ್ಯಾಂಕು ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲಿಲ್ಲ. ಅಸಮರ್ಪಕ ಕೆವೈಸಿ ದಾಖಲೆ, ರಿಲೇಟೆಡ್ ಪಾರ್ಟಿ ವಹಿವಾಟು ಈ ವಿಚಾರದಲ್ಲಿ ಪೇಟಿಎಂ ತಪ್ಪೆಸಗಿತ್ತು. ಪದೇ ಪದೇ ಎಚ್ಚರಿಕೆ ನೀಡಿದ ಬಳಿಕ ಆರ್​ಬಿಐ ಕಠಿಣ ಹೆಜ್ಜೆ ಇರಿಸಿದೆ.

Paytm vs RBI: ಪೇಟಿಎಂ ಮಾಡಿದ ತಪ್ಪುಗಳೇನು? ಆರ್​ಬಿಐನದ್ದು ಪ್ರತೀಕಾರದ ಕ್ರಮವಾ? ನಿರ್ಬಂಧದ ಹಿಂದಿನ ಅಸಲಿ ಕಾರಣ ಇದು
ಪೇಟಿಎಂ

Updated on: Feb 02, 2024 | 3:56 PM

ನವದೆಹಲಿ, ಫೆ. 2: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್​ಬಿಐ ನಿರ್ಬಂಧ ವಿಧಿಸಿದ ಕ್ರಮಕ್ಕೆ ಬಹಳ ಜನರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ತಳಮಟ್ಟದಿಂದ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಉದ್ಯಮಿಗಳ ಉತ್ಸಾಹವನ್ನು ಸರ್ಕಾರ ಕುಂದಿಸುತ್ತಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಪೇಟಿಎಂ ಬ್ಯಾಂಕ್ (Paytm Payments Bank) ಒಂದಷ್ಟು ನಿಯಮಗಳನ್ನು ಪಾಲಿಸಿಲ್ಲವಾದ್ದರಿಂದ ಆರ್​ಬಿಐ ನಿರ್ಬಂಧ ಹಾಕಿದೆ ಎಂಬುದು ಸದ್ಯ ಮೇಲ್ನೋಟಕ್ಕೆ ಗೊತ್ತಾಗಿರುವ ಕಾರಣ. ಇದು ನಿಜವೂ ಹೌದು. ಜೊತೆಗೆ, ಇನ್ನೂ ಬಹಳಷ್ಟು ಬಲವಾದ ಕಾರಣಗಳು ಆರ್​ಬಿಐ ಅನ್ನು ಈ ಅತಿರೇಕದ ಕ್ರಮಕ್ಕೆ (RBI extreme action) ದೂಡಿವೆ. ನಿಯಮಗಳ ಉಲ್ಲಂಘನೆ ಆಗುತ್ತಿದ್ದು, ಅದನ್ನು ಸರಿಪಡಿಸಿಕೊಳ್ಳುವಂತೆ ಆರ್​ಬಿಐ ಹಲವು ಬಾರಿ ಪೇಟಿಎಂ ಪೇಮೆಂಟ್ ಬ್ಯಾಂಕ್​ಗೆ ಹೇಳುತ್ತಲೇ ಬಂದಿತ್ತು. ಇದ್ಯಾವುದಕ್ಕೂ ಅದು ಸ್ಪಂದಿಸದೇ ಇದ್ದರಿಂದ ನಿರ್ಬಂಧ ಹೇರಿದೆ.

ಆರ್​ಬಿಐನ ನಿರ್ಬಂಧ ಕ್ರಮಕ್ಕೆ ಕಾರಣಗಳಿವು…

  • ಕೆವೈಸಿ ದಾಖಲೆಗಳು ಸರಿಯಾಗಿರಲಿಲ್ಲ
  • ಮನಿ ಲಾಂಡರಿಂಗ್ ಕಾನೂನುಗಳ ಪಾಲನೆಯಾಗಿಲ್ಲ
  • ರಿಲೇಟೆಡ್ ಪಾರ್ಟಿ ವಹಿವಾಟು ನಿಯಮಗಳ ಉಲ್ಲಂಘನೆಯಾಗಿದೆ.
  • ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಈ ಪೇಮೆಂಟ್ಸ್ ಬ್ಯಾಂಕ್ ಮೇಲೆ ಪರೋಕ್ಷ ನಿಯಂತ್ರಣ ಹೊಂದಿರುವ ಸಾಧ್ಯತೆ

ಇದನ್ನೂ ಓದಿ: ಇದು ಸ್ಪೀಡ್ ಬ್ರೇಕರ್ ಮಾತ್ರ, ಗಾಡಿ ನಿಲ್ಲಲ್ಲ; ಪೇಟಿಎಂ ಮುಖ್ಯಸ್ಥ ಶರ್ಮಾ ಹೇಳಿದ್ದಿದು

ಏನಿದು ಕೆವೈಸಿ ಲೋಪ?

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಸಿಸ್ಟಂ ಆಡಿಟ್ ಅನ್ನು ಆರ್​ಬಿಐ ನಡೆಸಿದಾಗ ಹಲವು ಲೋಪದೋಷಗಳು ಬೆಳಕಿಗೆ ಬಂದಿದ್ದವು. ಅದರಲ್ಲಿ ಪ್ರಮುಖವಾದುದು ಕೆವೈಸಿ ದಾಖಲೆಯ ವಿಚಾರ. ಕ್ಲೈಂಟ್​ಗಳಿಂದ ಸರಿಯಾದ ಕೆವೈಸಿ ದಾಖಲೆಗಳನ್ನು ಪಡೆಯಲಾಗಿಲ್ಲ. ಈ ಮೂಲಕ ಅಕ್ರಮ ಹಣ ವರ್ಗಾವಣೆಯ ಸಾಧ್ಯತೆ ಹೆಚ್ಚಾಗಿದೆ. ಪೇಟಿಎ ಬ್ಯಾಂಕ್​ನಲ್ಲಿ ವಹಿವಾಟು ಆಗುವ ಹಣದ ಮೂಲವನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಕ್ಲೈಂಟ್​ಗಳನ್ನು ಸೇರಿಸಿಕೊಳ್ಳುವಾಗ ಕೆವೈಸಿ ದಾಖಲೆಗಳ ಮೂಲಕ ಅವರ ಹಿನ್ನೆಲೆಯನ್ನು ಪರಿಶೀಲಿಸುವ ಗೊಡವೆಗೆ ಹೋಗಲಾಗಿಲ್ಲ ಎಂಬುದು ಆರ್​ಬಿಐ ಆಕ್ಷೇಪವಾಗಿದೆ.

ಸರಿಯಾದ ಕೆವೈಸಿ ದಾಖಲೆಗಳಿಲ್ಲದ ವರ್ತಕ ಖಾತೆ (Merchant Account) ಮೂಲಕ ದೊಡ್ಡ ಪ್ರಮಾಣದ ವಹಿವಾಟುಗಳಾಗಿರುವುದನ್ನು ಆಡಿಟಿಂಗ್ ವೇಳೆ ಪತ್ತೆ ಮಾಡಲಾಗಿತ್ತು. ಈ ಬಗ್ಗೆ ಪೇಟಿಎಂ ಬ್ಯಾಂಕ್​ಗೆ ಆರ್​ಬಿಐ ಪದೇ ಪದೇ ಎಚ್ಚರಿಕೆ ನೀಡುತ್ತಿತ್ತು. ಆದರೆ, ಬ್ಯಾಂಕ್ ತನ್ನ ನಡವಳಿಕೆ ತಿದ್ದಿಕೊಳ್ಳಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಪೇಟಿಎಂ ಫಾಸ್​ಟ್ಯಾಗ್, ವ್ಯಾಲಟ್ ಬಳಕೆ ನಿಲ್ಲಿಸಬೇಕಿಲ್ಲ; ಅಷ್ಟಕ್ಕೂ ಆರ್​ಬಿಐ ನಿರ್ಬಂಧ ಹಾಕಿದ್ದು ಯಾಕೆ, ಡೀಟೇಲ್ಸ್ ನೋಡಿ

ರಿಲೇಟೆಡ್ ಪಾರ್ಟಿ ವಹಿವಾಟು

ಪೇಟಿಎಂ ಪೇಮೆಂಟ್ಸ್ ಬ್ಯಾಂಕು ಮತ್ತು ಪೇಟಿಎಂ ಮೊದಲಾದವುಗಳು ಸೋದರ ಸಂಸ್ಥೆಗಳೇ ಆದರೂ ಕಾನೂನು ಪ್ರಕಾರ, ಪೇಟಿಎಂ ಪೇಮೆಂಟ್ ಬ್ಯಾಂಕು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಬ್ಯಾಂಕು ಸ್ವಾಯತ್ತವಾಗಿರಬೇಕು. ಆದರೆ, ಪೇಟಿಎಂ ಗ್ರೂಪ್ ಮತ್ತು ಬ್ಯಾಂಕ್ ಮಧ್ಯೆ ಅವಲಂಬನೆ ಮತ್ತು ವ್ಯವಹಾರ ಬಹಳ ಗಾಢವಾಗಿತ್ತು. ಪೇಮೆಂಟ್ ಬ್ಯಾಂಕ್ ಅನ್ನು ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಪರೋಕ್ಷವಾಗಿ ನಿಯಂತ್ರಿಸುವ ಸಾಧ್ಯತೆ ಇರುವುದು ಆರ್​ಬಿಐಗೆ ಮೇಲ್ನೋಟಕ್ಕೆ ತೋರಿದೆ. ಇದೂ ಕೂಡ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್​ಬಿಐ ಮುಗಿಬೀಳಲು ಕಾರಣವಾಗಿದೆ ಎಂದು ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us