AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI MPC Meet: ವರಲಕ್ಷ್ಮೀ ಹಬ್ಬದಂದೇ ಆರ್​ಬಿಐ ಗವರ್ನರ್ ಸುದ್ದಿಗೋಷ್ಠಿ: ಅಡುಗೆಮನೆ ಬಜೆಟ್​ ಮೇಲೇನು ಪರಿಣಾಮ

Reserve Bank of India: ಹಣದುಬ್ಬರವನ್ನು ನಿಯಂತ್ರಿಸುವ ಮೂಲಕ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗದಂತೆ ತಡೆಯುವುದು, ಹಣದ ಹರಿವು ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಹಣಕಾಸು ನೀತಿಯ ಮೂಲಕ ಆರ್​ಬಿಐ ಘೋಷಿಸುತ್ತದೆ.

RBI MPC Meet: ವರಲಕ್ಷ್ಮೀ ಹಬ್ಬದಂದೇ ಆರ್​ಬಿಐ ಗವರ್ನರ್ ಸುದ್ದಿಗೋಷ್ಠಿ: ಅಡುಗೆಮನೆ ಬಜೆಟ್​ ಮೇಲೇನು ಪರಿಣಾಮ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Aug 05, 2022 | 8:15 AM

Share

ಮುಂಬೈ: ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಭಾರತೀಯ ರಿಸರ್ವ್​ ಬ್ಯಾಂಕ್​ನ ‘ಹಣಕಾಸು ನೀತಿ ಸಮಿತಿ’ (Monetary Policy Committee – MPC) ಸಭೆಯು ಇಂದು ಮುಕ್ತಾಯವಾಗಲಿದೆ. ಆಗಸ್ಟ್​ 3ರಿಂದ ಆರಂಭವಾಗಿರುವ ಸಭೆಯ ನಿರ್ಣಯಗಳನ್ನು ಭಾರತೀಯ ರಿಸರ್ವ್​ ಬ್ಯಾಂಕ್​ನ (Reserve Bank of India – RBI) ಗವರ್ನರ್ ಶಕ್ತಿಕಾಂತ್ ದಾಸ್ ಮಾಧ್ಯಮಗೋಷ್ಠಿಯಲ್ಲಿ ಪ್ರಕಟಿಸಲಿದ್ದಾರೆ. ಹಲವು ವರ್ಷಗಳ ಗರಿಷ್ಠ ಮಟ್ಟ ತಲುಪಿರುವ ಹಣದುಬ್ಬರ ನಿಯಂತ್ರಣ ಮತ್ತು ಬಡ್ಡಿದರ ನಿರ್ವಹಣೆಯ ಬಗ್ಗೆ ಆರ್​ಬಿಐ ತೆಗೆದುಕೊಳ್ಳಲಿರುವ ನಿರ್ಧಾರದ ಬಗ್ಗೆ ದೇಶದ ಜನರು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಆಹಾರ ಧಾನ್ಯಗಳು, ತರಕಾರಿ, ಖಾದ್ಯ ತೈಲ, ಇಂಧನ ಸೇರಿದಂತೆ ಅತ್ಯಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ಅಡುಗೆಮನೆ ಬಜೆಟ್ ಏರುಪೇರಾಗಿದ್ದು, ಆರ್​ಬಿಐ ತೆಗೆದುಕೊಳ್ಳುವ ನಿರ್ಣಯದಿಂದ ಇದರು ಸರಿಯಾದೀತಾ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಕಳೆದ ಮೇ ತಿಂಗಳಲ್ಲಿ ಆರ್​ಬಿಐ ಅನಿರೀಕ್ಷಿತ ಎಂಬಂತೆ ರೆಪೊ ದರಗಳನ್ನು 40 ಮೂಲಾಂಶಗಳಷ್ಟು (40-basis-point) ಹೆಚ್ಚಿಸಿತ್ತು. ಜೂನ್​ ತಿಂಗಳಲ್ಲಿ ಮತ್ತೆ 50 ಮೂಲಾಂಶಗಳ ಏರಿಕೆ ಕಂಡಿತ್ತು. ಇದರೊಂದಿಗೆ ಬಡ್ಡಿದರ ಹೆಚ್ಚಳದ ಪ್ರಕ್ರಿಯೆ ಆರಂಭಿಸಿದ್ದ ಆರ್​ಬಿಐ ಈವರೆಗೆ 90 ಮೂಲಾಂಶಗಳಷ್ಟು ಬಡ್ಡಿದರ ಹೆಚ್ಚಿಸಿದೆ. ಅಮೆರಿಕದಲ್ಲಿ ಇದೇ ಅವಧಿಯಲ್ಲಿ 225 ಮೂಲಾಂಶಗಳಷ್ಟು ಬಡ್ಡಿದರ ಹೆಚ್ಚಳವಾಗಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿ ಗಮನಿಸಿದರೆ ಇಂದು (ಆಗಸ್ಟ್ 5) ಸಹ ಆರ್​ಬಿಐ ಮತ್ತೊಮ್ಮೆ ಬಡ್ಡಿದರ ಹೆಚ್ಚಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಪ್ರಸ್ತುತ ಪಾಲಿಸಿ ರೆಪೊದರಗಳು ಶೇ 4.90 ಇದೆ. ಬ್ಯಾಂಕ್ ರೆಪೊದರಗಳು ಶೇ 5.15, ಆರ್​ಬಿಐ ಬ್ಯಾಂಕ್​ಗಳ ಹಣವನ್ನು ಇರಿಸಿಕೊಳ್ಳುವ ಸ್ಟಾಂಡಿಂಗ್ ಡೆಪಾಸಿಟ್ ದರ ಶೇ 4.65 ಇದೆ.

ಭಾರತದಲ್ಲಿ ಹಣದುಬ್ಬರ ಪ್ರಮಾಣವು ಶೇ 6ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿಯೇ ಇರುತ್ತದೆ. ಈ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ, ಅಂದರೆ ಜನವರಿ 2023ರ ನಂತರ ಇದು ಶೇ 6ಕ್ಕಿಂತ ಕಡಿಮೆಯಾಗಬಹುದು ಎಂದು ಆರ್​ಬಿಐ ಅಂದಾಜಿಸಿದೆ. ಮುಂಗಾರು ಮಳೆ ದೇಶಾದ್ಯಂತ ಸಮರ್ಪಕವಾಗಿ ಸುರಿದು, ಆಹಾರ ಧಾನ್ಯಗಳು ಉತ್ಪಾದನೆ ಹಾಗೂ ತರಕಾರಿ ಬೆಲೆ ಸ್ಥಿರತೆ ಕಂಡರೆ ಹಣದುಬ್ಬರ ನಿಯಂತ್ರಣಕ್ಕೆ ಬರಬಹುದು ಎನ್ನುವ ನಿರೀಕ್ಷೆ ಅರ್ಥಶಾಸ್ತ್ರಜ್ಞರದು.

ಹಣದುಬ್ಬರಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮ ತೆಗೆದುಕೊಳ್ಳುವುದರ ಜೊತೆಗೆ, ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ, ರೂಪಾಯಿ ಮೌಲ್ಯ ಕುಸಿತ ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನೂ ಆರ್​ಬಿಐ ಇಂದು ಘೋಷಿಸಲಿದೆ.

ಹಣಕಾಸು ನೀತಿ ಸಮಿತಿ ಸಭೆ: ಏಕಿಷ್ಟು ಪ್ರಾಮುಖ್ಯತೆ

ಭಾರತದ ಎಲ್ಲ ಸರ್ಕಾರಿ, ಖಾಸಗಿ, ಸಹಕಾರಿ ಬ್ಯಾಂಕ್​ಗಳು ಮತ್ತು ಸರ್ಕಾರೇತರ ಹಣಕಾಸು ಸಂಸ್ಥೆಗಳ ಕಾರ್ಯನಿರ್ವಹಣೆಗೆ ರಿಸರ್ವ್​ ಬ್ಯಾಂಕ್ ನೀತಿ ನಿಯಮಗಳನ್ನು ರೂಪಿಸುತ್ತದೆ. ಹಣಕಾಸು ನೀತಿ ರೂಪಿಸುವ ಈ ಪ್ರಕ್ರಿಯೆಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ಹಣಕಾಸು ನೀತಿ ಸಮಿತಿ (Monetary Policy Committee – MPC) ಮೇಲೆ ಇರುತ್ತದೆ. ಈ ಸಮಿತಿಯಲ್ಲಿ ಆರು ಸದಸ್ಯರು ಇರುತ್ತಾರೆ. ಮೂವರು ರಿಸರ್ವ್ ಬ್ಯಾಂಕ್​ ಸೇರಿದವರಾಗಿದ್ದರೆ, ಉಳಿದ ಮೂವರನ್ನು ಸರ್ಕಾರ ನೇಮಿಸಿರುತ್ತದೆ. ಸಮಿತಿಯ ಅಂತಿಮ ನಿರ್ಧಾರದ ಮುಖ್ಯಾಂಶಗಳನ್ನು ರಿಸರ್ವ್​ ಬ್ಯಾಂಕ್ ಗವರ್ನರ್ ಮಾಧ್ಯಮಗೋಷ್ಠಿಯಲ್ಲಿ ಪ್ರಕಟಿಸುತ್ತಾರೆ. ವಿಸ್ತೃತ ಮಾಹಿತಿ ಆರ್​ಬಿಐ ವೆಬ್​ಸೈಟ್​ನಲ್ಲಿ ಪ್ರಕಟವಾಗುತ್ತದೆ.

ಹಣದುಬ್ಬರವನ್ನು ನಿಯಂತ್ರಿಸುವ ಮೂಲಕ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗದಂತೆ ತಡೆಯುವುದು, ಹಣದ ಹರಿವು, ನಗದು ಮೀಸಲು ಅನುಪಾತ, ಲಿಕ್ವಿಡಿಟಿ, ಸರ್ಕಾರಿ ಬಾಂಡ್​, ವಿದೇಶಿ ಮೀಸಲು ನಿಧಿ, ರೂಪಾಯಿ ಮೌಲ್ಯ ಕಾಪಾಡುವುದು, ಅತ್ಯಗತ್ಯ ಸಂದರ್ಭದಲ್ಲಿ ಷೇರುಪೇಟೆ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ, ಬ್ಯಾಂಕ್ ನಿಯಮಾವಳಿ ರೂಪಿಸುವುದು ಈ ಸಮಿತಿಯ ಜವಾಬ್ದಾರಿಯಾಗಿರುತ್ತದೆ.

Published On - 8:15 am, Fri, 5 August 22

Follow Us
Web contact
Web contact

TV9 Kannada

Read More
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ