Kanakapura Assembly Constituency: ಅಸೆಂಬ್ಲಿ ಚುನಾವಣೆ ಸಮ್ಮುಖದಲ್ಲಿ ಬಂಡೆಗಳ ನಾಡು ಕನಕಪುರ ಕ್ಷೇತ್ರ ರಾಜಕೀಯವಾಗಿ ಹೇಗಿದೆ?

|

Updated on: Apr 08, 2023 | 12:20 PM

Karnataka Assembly Elections 2023: 2008 ರ ಚುನಾವಣೆಯಲ್ಲಿ ಡಿಕೆ ಶಿವಕುಮಾರ್‌ಗೆ ಸೋಲಿನ ಭೀತಿ ಹುಟ್ಟಿಸಿ ಕೇವಲ 8 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದ ಡಿ.ಎಂ. ವಿಶ್ವನಾಥ್‌ ಈಚೆಗಷ್ಟೇ ಡಿಕೆಶಿ ಪಾಳಯ ಸೇರಿಕೊಂಡಿದ್ದಾರೆ. ಬಿಜೆಪಿಗೆ ಕನಕಪುರದಲ್ಲಿ ಪಕ್ಷ ಸಂಘಟನೆಯದ್ದೇ ಚಿಂತೆ ಆಗಿದೆ. 2013ರಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಆಗಿದ್ದ ಪಿಜಿಆರ್ ಸಿಂಧ್ಯಾ ಸದ್ಯ ಸಕ್ರಿಯ ರಾಜಕಾರಣದಿಂದ ದೂರವೇ ಇದ್ದಾರೆ.

Kanakapura Assembly Constituency: ಅಸೆಂಬ್ಲಿ ಚುನಾವಣೆ ಸಮ್ಮುಖದಲ್ಲಿ ಬಂಡೆಗಳ ನಾಡು ಕನಕಪುರ ಕ್ಷೇತ್ರ ರಾಜಕೀಯವಾಗಿ ಹೇಗಿದೆ?
ಡಿ ಕೆ ಶಿವಕುಮಾರ್‌ ತವರು ಕ್ಷೇತ್ರ ರಾಜಕೀಯವಾಗಿ ಹೇಗಿದೆ?
Follow us on

ರಾಮನಗರ: ರಾಜ್ಯದ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ (Karnataka Assembly Elections 2023) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರನ್ನು (DK Shivakumar) ತವರು ಕ್ಷೇತ್ರದಲ್ಲಿ (Kanakapura Assembly Constituency) ಕಟ್ಟಿಹಾಕಬಲ್ಲ ಸಮರ್ಥ ಎದುರಾಳಿ ಪ್ರತಿಪಕ್ಷಗಳಿಗೆ ಇನ್ನೂ ಸಿಕ್ಕಿಲ್ಲ. ಬಂಡೆಗಳ ನಾಡು ಕನಕಪುರ ಗ್ರಾನೈಟ್‌ ಶಿಲೆಗೆ ಹೆಸರುವಾಸಿ. ಇಲ್ಲಿನ ರಾಜಕಾರಣವೂ ಆ ಶಿಲೆಯಷ್ಟೇ ನಾಜೂಕಿನದ್ದಾಗಿದೆ. ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕಾಂಗ್ರೆಸ್ ಭದ್ರಕೋಟೆ ಆಗಿರುವ ಈ ಊರಿನಲ್ಲಿ ಡಿಕೆಶಿ ಪಾಳಯಕ್ಕೆ ಠಕ್ಕರ್ ನೀಡಬಲ್ಲ ಪ್ರತಿಸ್ಪರ್ಧಿಗಳ ಕೊರತೆ ಇದೆ. ಹಾಗೆ ನೋಡಿದರೆ ಡಿ.ಕೆ. ಶಿವಕುಮಾರ್ ಸೋಲಿಲ್ಲದ ಸರದಾರ. ಹಿಂದಿನ ಸಾತನೂರು ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡು ಸತತ ಏಳು ಬಾರಿ ಗೆಲುವಿನ ದಾಖಲೆ ಬರೆದಿದ್ದಾರೆ ಅವರು. ಈ ಹಿಂದೆ ಜನತಾ ಪರಿವಾರದ ಪಿಜಿಆರ್ ಸಿಂಧ್ಯಾ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಡಿಕೆಶಿ ಸಾತನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದರು. 2008 ರಲ್ಲಿ ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡನೆ ಆಗಿ, ಸಾತನೂರು ಕ್ಷೇತ್ರ ತನ್ನ ಅಸ್ತಿತ್ವ ಕಳೆದುಕೊಂಡ ಬಳಿಕ ಡಿಕೆಶಿ ಕನಕಪುರ ಕ್ಷೇತ್ರಕ್ಕೆ ಬಂದರು. ಅವರಿಗೆ ಸಿಂಧ್ಯಾ ಜಾಗ ಬಿಟ್ಟು ಹೊರಬಂದರು. ಅಲ್ಲಿಂದ ಜನತಾ ಪರಿವಾರ ಹಾಗೂ ಈಗಿನ ಜಾತ್ಯತೀತ ಜನತಾದಳಕ್ಕೆ ಕನಕಪುರ ಭಾಗದಲ್ಲಿ ಸಮರ್ಥ ಸೇನಾನಿ ಸಿಕ್ಕಿಲ್ಲ.

2008 ರ ಚುನಾವಣೆಯಲ್ಲಿ ಶಿವಕುಮಾರ್‌ಗೆ ಸೋಲಿನ ಭೀತಿ ಹುಟ್ಟಿಸಿ ಕೇವಲ 8 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದ ಡಿ.ಎಂ. ವಿಶ್ವನಾಥ್‌ ಈಚೆಗಷ್ಟೇ ಡಿಕೆಶಿ ಪಾಳಯ ಸೇರಿಕೊಂಡಿದ್ದಾರೆ. 2013ರಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಆಗಿದ್ದ ಪಿಜಿಆರ್ ಸಿಂಧ್ಯಾ ಸದ್ಯ ಸಕ್ರಿಯ ರಾಜಕಾರಣದಿಂದ ದೂರವೇ ಇದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ನಿಂದ ನಾರಾಯಣ ಗೌಡ ಕಡೆ ಕ್ಷಣದಲ್ಲಿ ಅಭ್ಯರ್ಥಿ ಆಗಿದ್ದರು. ಪಕ್ಷದ ವರಿಷ್ಠರೂ ಇತ್ತ ಪ್ರಚಾರಕ್ಕೆ ಬರಲಿಲ್ಲ. ಹೀಗಿದ್ದೂ ಜೆಡಿಎಸ್‌ 47,643 ಮತದಾರರನ್ನು ಸೆಳೆಯುವಲ್ಲಿ ಯಶಸ್ವಿ ಆಗಿತ್ತು. ಇಲ್ಲಿ ಹಿಂದಿನಿಂದಲೂ ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಸಾಂಪ್ರದಾಯಿಕ ಮತಗಳಿವೆ. ಈಚೆಗಷ್ಟೇ ಪಂಚರತ್ನ ಯಾತ್ರೆ ಮೂಲಕ ಕನಕಪುರದಲ್ಲಿ ಅಬ್ಬರಿಸಿ ಹೋಗಿರುವ ಹೆಚ್‌.ಡಿ. ಕುಮಾರಸ್ವಾಮಿ ಇನ್ನೂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚಿಂತೆ ಮಾಡಿಲ್ಲ.

ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ನಾರಾಯಣ ಗೌಡ ಈ ಬಾರಿಯೂ ಜೆಡಿಎಸ್‌ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಹಲವು ಬಾರಿ ಸ್ಪರ್ಧಿಸಿದ್ದರೂ ಗೆಲುವು ಅವರ ಕೈ ಹಿಡಿದಿಲ್ಲ. ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜು ಸಹ ಆಕಾಂಕ್ಷಿ ಆಗಿದ್ದಾರೆ. ಕನಕಪುರದವರೇ ಆದ ಅವರು ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನಲ್ಲಹಳ್ಳಿ ಶಿವಕುಮಾರ್‌ ಹೆಸರೂ ಸಹ ಕೇಳಿ ಬರುತ್ತಿದೆ. ಬಿಜೆಪಿಗೆ ಕನಕಪುರದಲ್ಲಿ ಪಕ್ಷ ಸಂಘಟನೆಯದ್ದೇ ಚಿಂತೆ ಆಗಿದೆ. ಇರುವ ಕೆಲವೇ ಮಂದಿ ಮುಖಂಡರು, ಕಾರ್ಯಕರ್ತರಲ್ಲೂ ಗುಂಪುಗಾರಿಕೆ ಇದೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಇನ್ನೂ ಕಗ್ಗಂಟಾಗಿಯೇ ಇದೆ. ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ನಂದಿನಿ ಗೌಡ ಈ ಬಾರಿಯೂ ಟಿಕೆಟ್‌ ಸಿಗುವ ವಿಶ್ವಾಸದಲ್ಲಿ ಇದ್ದಾರೆ. ಬಿಜೆಪಿಯ ಕನಕಪುರ ಪ್ರಭಾರಿ ಆಗಿರುವ ಸೀಗೆಕೋಟೆ ರವಿಕುಮಾರ್‌ ಹೆಸರು ಸಹ ಚಾಲ್ತಿಯಲ್ಲಿ ಇದೆ.

ಇನ್ನು ಈ ಮಧ್ಯೆ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಅಪ್ಪಾಜಿಗೌಡ ಹೆಸರು ಶಿಫಾರಸು ಮಾಡುತ್ತಿದ್ದಂತೆ ಕಾರ್ಯಕರ್ತರು, ಮುಖಂಡರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಕನಕಪುರ ಕೋಟೆ ಗಣಪತಿ ದೇವಾಲಯದಲ್ಲಿ ಗುರುವಾರ ಪಕ್ಷದ ತಾಲ್ಲೂಕು ಘಟಕದ ವತಿಯಿಂದ ನಡೆದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಟಿಕೆಟ್‌ ಹಂಚಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದಲ್ಲಿ 15–20 ವರ್ಷದಿಂದ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇವೆ. ಪಕ್ಷಕ್ಕೆ ಇಲ್ಲಿ ಅಧಿಕಾರ ಇಲ್ಲದಿದ್ದರೂ ಎಲ್ಲ ನೋವು ಸಹಿಸಿಕೊಂಡು ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಆದರೆ, ಚುನಾವಣೆ ಬಂದಾಗ ಸ್ಥಳೀಯರಿಗೆ ಅವಕಾಶ ನೀಡದೆ ಹೊರಗಡೆ ವ್ಯಕ್ತಿಗೆ ಟಿಕೆಟ್‌ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನಕಪುರ ಕ್ಷೇತ್ರದಲ್ಲಿ 297 ಮತಗಟ್ಟೆಗಳಿವೆ. ಇವುಗಳಲ್ಲಿ ಮಹಿಳೆಯರನ್ನು ಆಕರ್ಷಿಸಲು ಮತಗಟ್ಟೆ ಸಂಖ್ಯೆ 28, 29, 221, 14 ಮಹಿಳಾ ಮತಗಟ್ಟೆ, ಸಖಿ ಮತಗಟ್ಟೆಗಳನ್ನಾಗಿ ಮಾಡಲಾಗಿದೆ. ಕ್ಷೇತ್ರದಲ್ಲಿ 1,09,290 ಪುರುಷ ಮತದಾರರು, 1,12.136 ಮಹಿಳಾ ಮತದಾರರು, 4 ಇತರ ಮತದಾರರು ಸೇರಿ ಒಟ್ಟು 2,21,430 ಮತದಾರರಿದ್ದಾರೆ. ಇನ್ನು ಕನಕಪುರದಲ್ಲಿ ಪ್ರಸಿದ್ದ ಪ್ರವಾಸಿ ಸ್ಥಳಗಳು ಇವೆ. ಮೇಕೆದಾಟು, ಸಂಗಮ, ಚುಂಚಿ ಫಾಲ್ಸ್ ಬೆಂಗಳೂರಿಗರಿಗೆ ನೆಚ್ಚಿನ ಸ್ಥಳ. ಜೊತೆಗೆ ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದಲ್ಲಿ ಇರುವ ಕಬ್ಬಾಳಮ್ಮ ದೇವಸ್ಥಾನ ಭಕ್ತರ ಪಾಲಿನ ನೆಚ್ಚಿನ ಧಾರ್ಮಿಕ ಸ್ಥಳ. ಇಲ್ಲಿ ರೇಷ್ಮೆ ಹಾಗೂ ರಾಗಿ ಬೆಳೆಯನ್ನ ಹೆಚ್ಚಾಗಿ ಬೆಳೆಯಲಾಗುತ್ತದೆ.

ಜಾತಿವಾರು ಲೆಕ್ಕಚಾರ: ಒಕ್ಕಲಿಗ- ಒಂದು ಲಕ್ಷದ ಹತ್ತು ಸಾವಿರ, ಎಸ್ ಸಿ-ಎಸ್ ಟಿ- 45 ಸಾವಿರ, ಮುಸ್ಲಿಂಮರು 15 ಸಾವಿರ, ಲಿಂಗಾಯತ- 10 ಸಾವಿರ, ಕುರುಬ- 6 ಸಾವಿರ, ಕ್ರಿಶ್ಚಿಯನ್- 4 ಸಾವಿರ, ಲಂಬಾಣಿ- 5 ಸಾವಿರ, ಕುಂಬಾರ 4 ಸಾವಿರ, ಬಣಜಿಗ- 3 ಸಾವಿರ, ಇತರೆ- 20 ಸಾವಿರ

ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9, ರಾಮನಗರ

ಕರ್ನಾಟಕ ವಿಧಾನಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ