ಇತ್ತೀಚೆಗಷ್ಟೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು (ಅಕ್ಟೋಬರ್ 28) ಸಂಜೆ 4:30ರ ಸುಮಾರಿಗೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಸಾಮಾನ್ಯ ಪರೀಕ್ಷೆಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಅಣ್ಣಾಥೆ’ ಸಿನಿಮಾದ ಶೂಟಿಂಗ್ಗಾಗಿ ರಜನಿಕಾಂತ್ ಹೈದರಾಬಾದ್ಗೆ ತೆರಳಿದ್ದರು. ಒಂದು ತಿಂಗಳ ಕಾಲ ಅಲ್ಲಿಯೇ ಇದ್ದು, ಶೂಟ್ ಪೂರ್ಣಗೊಳಿಸಿದ್ದರು. ನಂತರ ಅವರು ಏಕಾಏಕಿ ಅಮೆರಿಕಕ್ಕೆ ತೆರಳಿದ್ದರು. ಅಮೆರಿಕದ ಪ್ರತಿಷ್ಠಿತ ಆಸ್ಪತ್ರೆಯಾದ ಮೆಯೋ ಕ್ಲಿನಿಕ್ ಎದುರು ರಜನಿಕಾಂತ್ ನಡೆದುಬರುತ್ತಿರುವ ಫೋಟೋ ವೈರಲ್ ಆಗಿತ್ತು. ಆಸ್ಪತ್ರೆಗೆ ಭೇಟಿ ನೀಡಿದ ಕಾರಣ ಏನಿರಬಹುದು ಎಂದು ಕೂಡ ಅಭಿಮಾನಿಗಳು ಚಿಂತೆಗೀಡಾಗಿದ್ದರು. ‘ಅಷ್ಟು ತರಾತುರಿಯಲ್ಲಿ ವಿಮಾನ ಹತ್ತಲು ಅವರು ನಿರ್ಧರಿಸಿದ್ದು ಯಾಕೆ? ಕೊವಿಡ್ ಸಂದರ್ಭದಲ್ಲೂ ವಿದೇಶಕ್ಕೆ ಪ್ರಯಾಣ ಮಾಡುವ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಎಂದರೆ ಅವರ ಆರೋಗ್ಯದಲ್ಲಿ ಏನೋ ಗಂಭೀರ ಸಮಸ್ಯೆ ಇರಬಹುದು’ ಎಂದು ಕೆಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆತಂಕ ವ್ಯಕ್ತಪಡಿಸಿದ್ದರು.
ಅಕ್ಟೋಬರ್ 27ರಂದು ‘ಅಣ್ಣಾಥೆ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿತ್ತು. ‘ಅಣ್ಣಾಥೆ’ ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ. ರಜನಿಕಾಂತ್, ಕೀರ್ತಿ ಸುರೇಶ್, ನಯನತಾರಾ, ಮೀನಾ, ಖುಷ್ಬು, ಪ್ರಕಾಶ್ ರಾಜ್, ಜಗಪತಿ ಬಾಬು ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ. ದೀಪಾವಳಿ ನಿಮಿತ್ತ ಈ ಸಿನಿಮಾ ನವೆಂಬರ್ 4ರಂದು ತೆರೆಗೆ ಬರುತ್ತಿದೆ.
ಫ್ಯಾಮಿಲಿ ಎಂಟರ್ಟೇನ್ಮೆಂಟ್ ಸಿನಿಮಾಗಳನ್ನು ನಿರ್ದೇಶನ ಮಾಡೋಕೆ ಪಾಂಡಿರಾಜ್ ಹೆಸರುವಾಸಿ. ರಜನಿ ಜತೆ ಮಾಡುತ್ತಿರುವ ಸಿನಿಮಾ ಕೂಡ ಹೀಗೆಯೇ ಇರಲಿದೆ ಎನ್ನುವುದಕ್ಕೆ ಟ್ರೇಲರ್ನಲ್ಲಿ ಸಾಕ್ಷ್ಯ ಸಿಕ್ಕಿತ್ತು.
ಇದನ್ನೂ ಓದಿ: ಅಣ್ಣಾಥೆ ಶೂಟಿಂಗ್ ಮುಗಿದ ಬೆನ್ನಲ್ಲೇ ಕೊವಿಡ್ ಎರಡನೇ ಡೋಸ್ ಲಸಿಕೆ ಪಡೆದ ರಜನಿಕಾಂತ್