ಮಲಯಾಳಂ ಚಿತ್ರರಂಗದ ನಟ ದಿಲೀಪ್ಗೆ (Dileep) ಮತ್ತಷ್ಟು ಸಂಕಷ್ಟ ಎದುರಾಗಿದೆ. 2017ರಲ್ಲಿ ನಟಿಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಹೆಚ್ಚಿನ ತನಿಖೆಯನ್ನು ವಿರೋಧಿಸಿ ನಟ ದಿಲೀಪ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ. ಜತೆಗೆ ತನಿಖೆ ಮುಂದುವರೆಸುವಂತೆ ಅಪರಾಧ ವಿಭಾಗಕ್ಕೆ ಕೋರ್ಟ್ ಅನುಮತಿ ನೀಡಿದೆ. ಮುಂದಿನ ತನಿಖೆಯನ್ನು ಆದಷ್ಟು ವೇಗವಾಗಿ ಅಂದರೆ ಏಪ್ರಿಲ್ 15ರ ಒಳಗೆ ಮುಕ್ತಾಯಗೊಳಿಸಬೇಕು ಎಂದು ತನಿಖಾ ಸಂಸ್ಥೆಗೆ ನ್ಯಾಯಮೂರ್ತಿ ಕೌಸರ್ ಎಡಪ್ಪಗತ್ ಆದೇಶಿಸಿದ್ದಾರೆ. ನಟ ದಿಲೀಪ್ ಕುಮಾರ್ರನ್ನು ಹಿರಿಯ ವಕೀಲ ಬಿ.ರಾಮನ್ ಪಿಳ್ಳೈ ಮತ್ತು ವಕೀಲರಾದ ಫಿಲಿಪ್.ಟಿ.ವರ್ಗೀಸ್ ಮತ್ತು ಥಾಮಸ್.ಟಿ.ವರ್ಗೀಸ್ ಅವರು ಪ್ರತಿನಿಧಿಸಿದ್ದರು. ತನಿಖೆಯು ಒಂದು ನೆಪವಾಗಿದ್ದು ಪ್ರಕರಣದ ವಿಚಾರಣೆಯನ್ನು ಮತ್ತಷ್ಟು ವಿಳಂಬಗೊಳಿಸುವ ಪ್ರಯತ್ನವಾಗಿದೆ ಎಂದು ಅವರು ಪ್ರತಿಪಾದಿಸಿದ್ದರು. 2017ರ ನವೆಂಬರ್ನಲ್ಲಿ ಅಂತಿಮ ವರದಿ ಸಲ್ಲಿಸಿ, 2020ರ ಜನವರಿಯಲ್ಲಿ ಆರೋಪ ಪಟ್ಟಿ ಹೊರಿಸಲಾಗಿತ್ತು. ಪ್ರಸ್ತುತ ತನಿಖೆಯಲ್ಲಿ ಒಬ್ಬರನ್ನು ಮಾತ್ರ ವಿಚಾರಣೆಗೆ ಒಳಪಡಿಸಲು ಬಾಕಿಯಿರುವುದರಿಂದ ಆ ಪ್ರಕರಣದ ಮುಂದಿನ ತನಿಖೆಗೆ ಅವಕಾಶ ನೀಡಬಾರದು ಎಂದು ದಿಲೀಪ್ ವಾದಿಸಿದ್ದರು.
ಅವರ ಮನವಿಯನ್ನು ವಿರೋಧಿಸಿ, ಪೊಲೀಸರ ಪರ ವಾದ ಮಂಡಿಸಿದ ಪ್ರಾಸಿಕ್ಯೂಷನ್ ಡೈರೆಕ್ಟರ್ ಜನರಲ್ (ಡಿಜಿಪಿ) ಟಿಎ.ಶಾಜಿ ಮತ್ತು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ನಾರಾಯಣನ್ 2017ರಲ್ಲಿ ನಟಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಲು ಯಾವುದೇ ಕಾನೂನು ತಡೆ ಅಥವಾ ಅಡ್ಡಿಯಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ವಿಚಾರಣೆಯು ಅದರ ಕೊನೆಯ ಹಂತದಲ್ಲಿದೆ ಮತ್ತು ಅದಕ್ಕೆ ಯಾವುದೇ ಪೂರ್ವಾನುಮತಿ ಅಗತ್ಯವಿಲ್ಲ ಎಂದು ವಾದಿಸಲಾಗಿತ್ತು.
ತೀರ್ಪಿಗೂ ಮುನ್ನ ಯಾವುದೇ ಹೊಸ ಸಾಕ್ಷ್ಯ ಲಭ್ಯವಾದರೆ ವಿಚಾರಣೆ ಮುಂದುವರೆಸಬಹುದು ಎಂದು ಪ್ರಾಸಿಕ್ಯೂಷನ್ ಹೇಳಿತ್ತು. ಅಲ್ಲದೇ ಹಲ್ಲೆಗೆ ಒಳಗಾದ ವ್ಯಕ್ತಿಯು ನ್ಯಾಯಯುತವಾದ ವಿಚಾರಣೆ ನಡೆಯಬೇಕು ಮಗತ್ತು ಹಲ್ಲೆಯ ಹಿಂದಿನ ನಿಜಾಂಶ ಬಯಲಿಗೆ ಬರಬೇಕು ಎಂಬ ಕಾರಣದಿಂದ ಹೆಚ್ಚುವರಿ ತನಿಖೆಯನ್ನು ಬೆಂಬಲಿಸಿದ್ದರು.
2017ರ ಫೆಬ್ರವರಿ 17ರಂದು ನಟಿಯೋರ್ವರನ್ನು ಅಪಹರಿಸಿ ಎರಡು ಗಂಟೆಗಳ ಕಾಲ ದೌರ್ಜನ್ಯ, ಹಲ್ಲೆ ನಡೆಸಲಾಗಿತ್ತು. ಮತ್ತು ಇದನ್ನು ಚಿತ್ರೀಕರಿಸಿ ಬ್ಲಾಕ್ಮೇಲ್ಗೆ ಯತ್ನಿಸಲಾಗಿತ್ತು. ನಟಿ ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ತಾರೆಯಾಗಿದ್ದಾರೆ. ಅವರು ಈ ಪ್ರಕರಣಕ್ಕೆ ಸಂಬಂಧ ಬಹಿರಂಗವಾಗಿಯೂ ಮಾತನಾಡಿದ್ದಾರೆ.
ಈ ಪ್ರಕರಣದಲ್ಲಿ ಒಟ್ಟು 10 ಆರೋಪಿಗಳಿದ್ದು, ಪೊಲೀಸರು 7 ಮಂದಿಯನ್ನು ಬಂಧಿಸಿದ್ದರು. ದಿಲೀಪ್ರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ:
Salman Khan: ‘ನನ್ನೆಲ್ಲಾ ಪ್ರೇಯಸಿಯರಿಗೆ ಮದುವೆಯಾಗಿದೆ’ ಎಂದು ಅಲವತ್ತುಕೊಂಡ ಸಲ್ಮಾನ್ ಖಾನ್; ಮುಂದಿನ ಕತೆ ಏನು?
‘ದ್ವೇಷ ಮಾಡೋಕೆ ಶುರು ಮಾಡಿದ್ರೆ, ದ್ವೇಷಿಸಿದವನ ಹೃದಯ ನಿಲ್ಲೋವರೆಗೂ ಬಿಡಲ್ಲ’; ಕಿರಣ್ ರಾಜ್ ಮಾಸ್ ಎಂಟ್ರಿ