ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಇಂದು ಬಿಡುಗಡೆ ಆಗಿದೆ. ಆಂಧ್ರ, ತೆಲಂಗಾಣ, ಕರ್ನಾಟಕ ಸೇರಿದಂತೆ ಹಲವೆಡೆ ಮಧ್ಯ ರಾತ್ರಿಯಿಂದಲೇ ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಮುಂಚಿತವಾಗಿ ಟಿಕೆಟ್ ಬುಕ್ ಮಾಡಿ ಕಾದು ಸಿನಿಮಾ ವೀಕ್ಷಿಸಿದ್ದಾರೆ. ಆದರೆ ಕೆಲವು ಚಿತ್ರಮಂದಿರಗಳಲ್ಲಿ ನಿರೀಕ್ಷೆಯಂತೆಯೇ ಅಭಿಮಾನಿಗಳ ಅಬ್ಬರದಿಂದ ಗಲಾಟೆಗಳು ಸಹ ನಡೆದಿವೆ. ಕೆಲವೆಡೆ ಪೊಲೀಸರು ಲಾಠಿ ಬೀಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಆಂಧ್ರ-ತೆಲಂಗಾಣಗಳಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗಿ ವರದಿಯಾಗಿವೆ.
ಕಡಪ ಜಿಲ್ಲೆಯಲ್ಲಿ ಜೂ ಎನ್ಟಿಆರ್ ಅಭಿಮಾನಿಗಳು ಹೆಚ್ಚಿಗಿದ್ದು, ‘ದೇವರ’ ಸಿನಿಮಾದ ಮಧ್ಯ ರಾತ್ರಿ ಶೋಗೆ ಟಿಕೆಟ್ ಇಲ್ಲದೆ ಹಲವು ಅಭಿಮಾನಿಗಳು ನುಗ್ಗಲು ಯತ್ನಿಸಿದ್ದಾರಂತೆ. ಈ ವೇಳೆ ಚಿತ್ರಮಂದಿರದ ಸಿಬ್ಬಂದಿ ಹಾಗೂ ಅಭಿಮಾನಿಗಳ ನಡುವೆ ಜಗಳಗಳು ನಡೆದಿದ್ದು, ಕೊನೆಗೆ ಮಧ್ಯ ಪ್ರವೇಶಿಸಿದ ಪೊಲೀಸರು ಲಾಠಿ ಬೀಸಿ ಅಭಿಮಾನಿಗಳನ್ನು ಚದುರಿಸಿದ್ದಾರೆ. ಇನ್ನೂ ಕೆಲವು ಚಿತ್ರಮಂದಿರಗಳ ಬಳಿಯೂ ಸಹ ಅಭಿಮಾನಿಗಳು ಹದ್ದು ಮೀರಿ ವರ್ತಿಸಿದ ಘಟನೆಗಳು ವರದಿಯಾಗಿವೆ.
ಇದನ್ನೂ ಓದಿ:‘ದೇವರ’ ಸಿನಿಮಾ ಹೇಗಿದೆ? ಮೊದಲ ಶೋ ನೋಡಿದವರು ಹೇಳಿದ್ದೇನು?
ಕಡಪ ಜಿಲ್ಲೆಯ ರಾಜ ಚಿತ್ರಮಂದಿರದಲ್ಲಿ ‘ದೇವರ’ ಸಿನಿಮಾದ ಮಧ್ಯ ರಾತ್ರಿ ಶೋ ಪ್ರದರ್ಶಿಸಲಾಗಿತ್ತು, ಈ ವೇಳೆ ಟಿಕೆಟ್ ಇಲ್ಲದ ಹಲವು ಅಭಿಮಾನಿಗಳು ನುಗ್ಗಿದ್ದರು. ಸಿನಿಮಾ ಪ್ರದರ್ಶನಗೊಂಡ ಕೆಲ ಹೊತ್ತಿನ ಬಳಿಕ ಚಿತ್ರಮಂದಿರ ಮಾಲೀಕರು ಸಿನಿಮಾ ಪ್ರದರ್ಶನವನ್ನು ಕೆಲ ಕಾಲ ನಿಲ್ಲಿಸಿ, ಟಿಕೆಟ್ ಇಲ್ಲದೆ ಒಳಗೆ ಹೋಗಿದ್ದ ಅಭಿಮಾನಿಗಳನ್ನು ಹೊರಗಟ್ಟುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳು ಸಿಬ್ಬಂದಿಯೊಂದಿಗೆ ಜಗಳ ಮಾಡಿದ್ದಾರೆ. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರಾದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ಇದ್ದಾಗ ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಿದ್ದಾರೆ. ಅದಾದ ಬಳಿಕ ಸಿನಿಮಾ ಪ್ರದರ್ಶನ ಮುಂದುವರೆದಿದೆ.
ಜೂ ಎನ್ಟಿಆರ್ ಒಬ್ಬರೇ ಹೀರೋ ಆಗಿ ನಟಿಸಿದ ಸಿನಿಮಾ ಬಿಡುಗಡೆ ಸುಮಾರು ಆರು ವರ್ಷಗಳ ಬಳಿಕ ಈಗ ‘ದೇವರ’ ಸಿನಿಮಾ ಬಿಡುಗಡೆ ಆಗುತ್ತಿದೆ. ಇದಕ್ಕೆ ಮುಂಚೆ ‘ಆರ್ಆರ್ಆರ್’ ಸಿನಿಮಾ ಬಿಡುಗಡೆ ಆಗಿತ್ತಾದರೂ ಅದು ಮಲ್ಟಿಸ್ಟಾರರ್ ಸಿನಿಮಾ ಆಗಿತ್ತು. ಅದೇ ಕಾರಣಕ್ಕೆ ಜೂ ಎನ್ಟಿಆರ್ ಅಭಿಮಾನಿಗಳು ಈ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಸಿನಿಮಾ ಬಿಡುಗಡೆಗೆ ಮುಂಚೆ ಅಡ್ವಾನ್ಸ್ ಟಿಕೆಟ್ ಬುಕಿಂಗ್ನಲ್ಲಿಯೇ ದಾಖಲೆ ಬರೆದಿದೆ. ಸಿನಿಮಾಕ್ಕೆ ಭಾರಿ ಸಂಖ್ಯೆಯ ಶೋಗಳು ಸಹ ದೊರಕಿವೆ. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿಬಂದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಸಿನಿಮಾದ ಮೊದಲ ಭಾಗವಷ್ಟೆ ಈಗ ಬಿಡುಗಡೆ ಆಗಿದ್ದು, ಸಿನಿಮಾದ ಎರಡನೇ ಭಾಗ ಇನ್ನೊಂದು ವರ್ಷದ ಬಳಿಕ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ