ವಿಷ್ಣುವರ್ಧನ್ಗೆ ‘ಕರ್ನಾಟಕ ರತ್ನ’ ನೀಡುವಂತೆ ಅನಿರುದ್ಧ್ ಜತ್ಕರ್ ಮನವಿ
ನಟ ಅನಿರುದ್ಧ್ ಜತ್ಕರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಲಾಗಿದೆ. ಅಭಿಮಾನಿಗಳ ಪರವಾಗಿ ಅನಿರುದ್ಧ್ ಅವರು ಪತ್ರ ಬರೆದಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ...

ನಟ ವಿಷ್ಣುವರ್ಧನ್ (Vishnuvardhan) ಅವರು ನಿಧನರಾಗಿ 15 ವರ್ಷಗಳು ಕಳೆದಿವೆ. ಜನರಿಗೆ ಅವರ ಮೇಲಿನ ಅಭಿಮಾನ ಕಿಂಚಿತ್ತೂ ಕಡಿಮೆ ಆಗಿಲ್ಲ. ಈಗ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಜತ್ಕರ್ ಅವರು ಕರ್ನಾಟಕ ಸರ್ಕಾರಕ್ಕೆ ಒಂದು ಮನವಿ ಸಲ್ಲಿಸಿದ್ದಾರೆ. ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಅನಿರುದ್ಧ್ ಜತ್ಕರ್ (Aniruddha Jatkar) ಅವರು ಮನವಿ ಪತ್ರ ನೀಡಿದ್ದಾರೆ. ಅವರು ಬರೆದ ಪತ್ರದ ವಿವರ ಇಲ್ಲಿದೆ..
‘ನಾನು ಈ ಪತ್ರವನ್ನು ಸಾಹಸಸಿಂಹ ಎಂದು ಹೆಮ್ಮೆಯಿಂದ ಕರೆಯಲ್ಪಡುವ, ಕನ್ನಡಿಗರ ಹೃದಯಸಿಂಹಾಸನದಲ್ಲಿ ಸದಾ ಸ್ಥಾನ ಪಡೆದ ದಿಗ್ಗಜ ನಟರಾದ ಡಾ. ವಿಷ್ಣುವರ್ಧನ್ ಅವರ ಕೋಟ್ಯಾಂತರ ಅಭಿಮಾನಿಗಳ ಪರವಾಗಿ, ಗೌರವದೊಂದಿಗೆ ಹಾಗೂ ಹೃದಯಪೂರ್ವಕ ಮನವಿಯೊಂದಿಗೆ ಬರೆಯುತ್ತಿದ್ದೇನೆ’ ಎಂದು ಅನಿರುದ್ಧ್ ಜತ್ಕರ್ ಅವರು ಪತ್ರ ಆರಂಭಿಸಿದ್ದಾರೆ.
‘ಕನ್ನಡ ಚಲನಚಿತ್ರರಂಗಕ್ಕೂ ಮತ್ತು ನಮ್ಮ ರಾಜ್ಯದ ಸಾಂಸ್ಕೃತಿಕ ಪರಂಪರೆಗೆ ವಿಷ್ಣುವರ್ಧನ್ ಅವರು ನೀಡಿರುವ ಕೊಡುಗೆ ಅಪರೂಪ ಹಾಗೂ ಅಪಾರ. ಅವರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಿದ ರೀತಿ ಕೂಡ ಅನೇಕರಿಗೆ ಪ್ರೇರಣೆ. ಅವರು ನಾಯಕನಟನಾಗಿ 225ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು.’
‘ಅವರು ನಮ್ಮನ್ನು ಭೌತಿಕವಾಗಿ ಅಗಲಿ 15 ವರ್ಷಗಳು ದಾಟಿದರೂ, ಜನರ ಹೃದಯದಲ್ಲಿ ಅವರು ಹೊಂದಿರುವ ಸ್ಥಾನ ಮಾತ್ರ ಅಚಲವಾಗಿದೆ. ಆದರೆ, ಇದುವರೆಗೆ ಅವರಿಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಕೂಡ ದೊರಕಿಲ್ಲ. ನಮ್ಮ ರಾಜ್ಯದ ಅತ್ಯುನ್ನತ ಗೌರವವಾದ ಕರ್ನಾಟಕ ರತ್ನ ಪ್ರಶಸ್ತಿಯೂ ಇವರಿಗೆ ಕನಿಷ್ಟ ಪಕ್ಷ ಮರಣೋತ್ತರವಾಗಿ ಆದರೂ ಇನ್ನೂ ಲಭಿಸಿಲ್ಲ ಎಂಬುದು ವಿಷಾದನೀಯ.’
ಇದನ್ನೂ ಓದಿ: ಕನ್ನಡದ ಇತಿಹಾಸದ ಬಗ್ಗೆ ವಿಷ್ಣುವರ್ಧನ್ ಅದೆಷ್ಟು ಸುಂದರವಾಗಿ ಮಾತನಾಡಿದ್ದರು ನೋಡಿ; ಇಲ್ಲಿದೆ ವಿಡಿಯೋ
‘ಈ ವರ್ಷದ ಸೆಪ್ಟೆಂಬರ್ 18ರಂದು ಅವರ 75ನೇ ಜನ್ಮವಾರ್ಷಿಕೋತ್ಸವವಿದೆ. ಈ ವಿಶೇಷ ಸಂದರ್ಭದಲ್ಲಿ, ಅವರ ಅಪಾರ ಸಾಧನೆಗಳನ್ನು ಗೌರವಿಸಿ, ಅಭಿಮಾನಿಗಳ ಹಿತೈಷಿಗಳ ಇಚ್ಛೆ ಈಡೇರಿಸುವಂತೆ, ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಬೇಕೆಂಬ ಮನವಿ ಇದಾಗಿದೆ. ನಮ್ಮವರನ್ನು ಗೌರವಿಸುವುದು ಅಂದರೆ ನಮ್ಮ ಗುರುತನ್ನು, ಬೇರುಗಳನ್ನು ಮತ್ತು ಬುನಾದಿಯನ್ನು ಗೌರವಿಸುವುದು. ಅವರ ಸಾಧನೆಗಳನ್ನು ನಾವು ಸ್ಮರಿಸಿದರೆ, ಅದು ನಾವು ನಮನ್ನೇ ಗೌರವಿಸುವಂತಾಗುತ್ತದೆ. ಈ ಕನಸು ನನಸಾಗುತ್ತದೆ ಎಂಬ ನಂಬಿಕೆ ನನಗಿದೆ. ಈ ಮನವಿಗೆ ಗೌರವಯುತವಾದ ಸ್ಪಂದನೆ ಲಭಿಸುವ ನಿರೀಕ್ಷೆಯೊಂದಿಗೆ, ಧನ್ಯವಾದಗಳೊಂದಿಗೆ, ಅನಿರುದ್ಧ್ ಜತಕರ’.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








