ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಸರ್ಪ್ರೈಸ್ ಸಿಕ್ಕಿದೆ. ಮನೆಯಲ್ಲಿರುವ ಆರು ಸ್ಪರ್ಧಿಗಳು ಕಿಚ್ಚ ಸುದೀಪ್ ಅವರು ಮಾಡಿದ ವಿಶೇಷ ಅಡುಗೆಯನ್ನು ಸವಿದಿದ್ದಾರೆ. ಇದಕ್ಕೆ ಅದೃಷ್ಟ ಮಾಡಿರಬೇಕು ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇನ್ನು, ಕಿಚ್ಚ ಸುದೀಪ್ ಮಾಡಿದ ಅಡುಗೆಯನ್ನು ತಿಂದ ಮನೆ ಮಂದಿಯ ಸಂತಸ ಮುಗಿಲುಮುಟ್ಟಿತ್ತು.
ಕನ್ನಡ ಬಿಗ್ ಬಾಸ್ ಸೀಸನ್ 8 ಕೊನೆಯ ಹಂತ ತಲುಪಿದೆ. ಮನೆಯಲ್ಲಿ 6 ಸ್ಪರ್ಧಿಗಳಿದ್ದು ಓರ್ವ ಸ್ಪರ್ಧಿ ವಾರದ ಮಧ್ಯದಲ್ಲಿ ಮನೆಯಿಂದ ಹೊರ ಹೋಗುತ್ತಿದ್ದಾರೆ. ಆ ಸ್ಪರ್ಧಿ ಯಾರು ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಈ ಮಧ್ಯೆ ಮನೆಯ ಸದಸ್ಯರಿಗೆ ವಿಶೇಷ ಆಯ್ಕೆ ನೀಡಲಾಗಿತ್ತು.
View this post on Instagram
ಬಿಗ್ ಬಾಸ್ ಮನೆಯ ಗಾರ್ಡನ್ ಏರಿಯಾದಲ್ಲಿ ಕಿವಿ ಒಂದನ್ನು ಇರಿಸಲಾಗಿತ್ತು. ಆ ಕಿವಿ ಬಳಿ ಹೋಗಿ ಸ್ಪರ್ಧಿಗಳು ತಮ್ಮಿಚ್ಛೆಯನ್ನು ಕೋರಬೇಕು. ಅದು ಈಡೇರಿಸುವಂತಿದ್ದರೆ ಬಿಗ್ ಬಾಸ್ ಅದನ್ನು ಪೂರ್ಣಗೊಳಿಸುತ್ತಾರೆ. ಮನೆಯ ಎಲ್ಲಾ ಸ್ಪರ್ಧಿಗಳು ತಮ್ಮಿಷ್ಟದ್ದನ್ನು ಕೋರಿದ್ದಾರೆ. ಈ ವೇಳೆ ದಿವ್ಯಾ ಉರುಡುಗ ವಿಶೇಷ ಬೇಡಿಕೆ ಒಂದನ್ನು ಇಟ್ಟಿದ್ದರು.
‘ನಮಗೆ ಕಿಚ್ಚ ಸುದೀಪ್ ಅಡುಗೆ ಊಟ ಮಾಡಬೇಕು. ಹೀಗಾಗಿ, ಮನೆ ಮಂದಿಗೆ ಕಿಚ್ಚ ಸುದೀಪ್ ಅಡುಗೆ ಮಾಡಿ ಕಳಿಸೋಕೆ ಹೇಳಿ. ಪ್ಲೀಸ್ ದಯವಿಟ್ಟು ಕೊಟ್ಟು ಕಳಿಸಿ ಬಿಗ್ ಬಾಸ್’ ಎಂದು ಮನವಿ ಮಾಡಿದ್ದರು.
ಈ ಮನವಿಯನ್ನು ಕಿಚ್ಚ ಸುದೀಪ್ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಎಲ್ಲಾ ಸ್ಪರ್ಧಿಗಳಿಗೆ ಸುದೀಪ್ ಪ್ರೀತಿಯಿಂದ ಅಡುಗೆ ಮಾಡಿ ಕಳುಹಿಸಿದ್ದಾರೆ. ಬಿರಿಯಾನಿ, ಕೇಕ್ ಸೇರಿ ಅನೇಕ ರೀತಿಯ ಖಾದ್ಯಗಳು ಕಿಚ್ಚ ಸುದೀಪ್ ಕಿಚನ್ನಿಂದ ಬಿಗ್ ಬಾಸ್ ಮನೆ ತಲುಪಿದೆ. ಅಲ್ಲದೆ, ಪ್ರತಿಯೊಬ್ಬರಿಗೂ ಕಿವಿಮಾತನ್ನು ಸುದೀಪ್ ಹೇಳಿದ್ದು ವಿಶೇಷವಾಗಿತ್ತು. ಸುದೀಪ್ ಮಾಡಿದ ಅಡುಗೆ ಅದ್ಭುತವಾಗಿತ್ತು ಎಂದು ಮನೆ ಮಂದಿ ಕೊಂಡಾಡಿದ್ದಾರೆ. ಅಲ್ಲದೆ, ಸುದೀಪ್ಗೆ ಮನಃಪೂರ್ವಕವಾಗಿ ಧನ್ಯವಾದ ಹೇಳಿದ್ದಾರೆ.
ಮೊದಲ ಇನ್ನಿಂಗ್ಸ್ ವೇಳೆ ಕಿಚ್ಚ ಸುದೀಪ್ಗೆ ಅನಾರೋಗ್ಯ ಕಾಡಿತ್ತು. ಈ ಕಾರಣಕ್ಕೆ ಅವರು ಕೆಲವು ವಾರ ಶೋ ನಡೆಸಿಕೊಡೋಕೆ ಬಂದಿರಲಿಲ್ಲ. ಈ ವೇಳೆ ಮನೆ ಮಂದಿ ಎಲ್ಲರೂ ಸುದೀಪ್ಗೆ ಅಡುಗೆ ಮಾಡಿ ಕೊಟ್ಟಿದ್ದರು. ಈಗ ಸುದೀಪ್ ಮನೆ ಮಂದಿಗೆ ಅಡುಗೆ ಮಾಡಿ ಕಳುಹಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಗೂ ಮೊದಲು ಮಿಡ್ವೀಕ್ ಎಲಿಮಿನೇಷನ್; ಇಂದು ಹೊರ ಹೋಗುವ ಸ್ಪರ್ಧಿ ಇವರೇನಾ?