Chandrayaan-3: ಭಾರತ- ರಷ್ಯಾ ಚಂದ್ರಯಾನದ ಸಮಯ ಆಧರಿಸಿದ ಜ್ಯೋತಿಷ್ಯ ವಿಶ್ಲೇಷಣೆ ಇಲ್ಲಿದೆ

| Updated By: Rakesh Nayak Manchi

Updated on: Aug 20, 2023 | 8:21 PM

ಭಾರತದ ಇಸ್ರೋ ಚಂದ್ರಯಾನ- 3 ಯಶಸ್ಸು ಎಂದೆನಿಸಿಕೊಳ್ಳುವುದಕ್ಕೆ ಇನ್ನೇನು ಕೆಲವೇ ಮೆಟ್ಟಿಲ ದೂರದಲ್ಲಿದೆ. ಇತ್ತ ರಷ್ಯಾ ಕೂಡ ಚಂದ್ರಯಾನ ನೌಕೆ ಉಡ್ಡಯನ ಮಾಡಿತ್ತು. ಎರಡು ದೇಶಗಳ ಚಂದ್ರಯಾನಕ್ಕೆ ಉಡ್ಡಯನ ಮಾಡಿದ ಸಮಯದ ಆಧಾರದಲ್ಲಿ ಹೇಗೆ ಗ್ರಹ ಸ್ಥಿತಿಗಳು ಕೆಲಸ ಮಾಡಿವೆ ಎಂಬುದರ ವಿಶ್ಲೇಷಣೆಯೇ ಇಲ್ಲಿದೆ.

Chandrayaan-3: ಭಾರತ- ರಷ್ಯಾ ಚಂದ್ರಯಾನದ ಸಮಯ ಆಧರಿಸಿದ ಜ್ಯೋತಿಷ್ಯ ವಿಶ್ಲೇಷಣೆ ಇಲ್ಲಿದೆ
ಭಾರತ- ರಷ್ಯಾ ಚಂದ್ರಯಾನದ ಸಮಯ ಆಧರಿಸಿದ ಜ್ಯೋತಿಷ್ಯ ವಿಶ್ಲೇಷಣೆ
Follow us on

ಈ ದಿನದ ಲೇಖನದಲ್ಲಿ ಜ್ಯೋತಿಷ್ಯ ಗ್ರಹ ಸ್ಥಿತಿಗಳು-ಲೆಕ್ಕಾಚಾರಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಉದಾಹರಣೆ ಸಮೇತವಾಗಿ ವಿವರಿಸಲಾಗುವುದು. ಜ್ಯೋತಿಷ್ಯವೂ ವಿಜ್ಞಾನವೇ ಎಂಬುದನ್ನು ಯಾವುದೋ ಕಾಲದಿಂದ ಹೇಳುತ್ತಲೇ ಬರಲಾಗುತ್ತಿದೆ. ಆದರೂ ಈಗಿನ ರೀತಿಯಲ್ಲಿ ಉದಾಹರಣೆ ಸಮೇತ ತಿಳಿಸುವುದಕ್ಕೆ ಅವಕಾಶ ದೊರೆತರೆ ಯಾಕೆ ಹೇಳಬಾರದು? ಭಾರತದ ಇಸ್ರೋ ಚಂದ್ರಯಾನ- 3 (Chandrayaan 3) ಯಶಸ್ಸು ಎಂದೆನಿಸಿಕೊಳ್ಳುವುದಕ್ಕೆ ಇನ್ನೇನು ಕೆಲವೇ ಮೆಟ್ಟಿಲ ದೂರದಲ್ಲಿದೆ. ಇಸ್ರೋ ವಿಜ್ಞಾನಿಗಳ ದೇವತಾ ಪ್ರಾರ್ಥನೆ ಫಲ ನೀಡಲಿದೆ.

ನಿಮಗೆ ಗೊತ್ತಿರಲಿಕ್ಕೂ ಸಾಕು, ಭಾರತದ ನಂತರದಲ್ಲಿ ರಷ್ಯಾ ಕೂಡ ಚಂದ್ರ ಯಾನಕ್ಕೆ ಸಿದ್ಧತೆ ಮಾಡಿತು ಮತ್ತು ನೌಕೆಯನ್ನೂ ಕಳುಹಿಸಿತು. ರಷ್ಯಾ ದೇಶಕ್ಕೆ ಹೋಲಿಸಿದಲ್ಲಿ ಭಾರತವು ಚಂದ್ರ ಯಾನಕ್ಕೆ ಖರ್ಚು ಮಾಡಿದ್ದು ಕಡಿಮೆ ಮೊತ್ತ. ಹೀಗೆ ಎರಡು ದೇಶಗಳ ಚಂದ್ರಯಾನಕ್ಕೆ ಉಡ್ಡಯನ ಮಾಡಿದ ಸಮಯದ ಆಧಾರದಲ್ಲಿ ಹೇಗೆ ಗ್ರಹ ಸ್ಥಿತಿಗಳು ಕೆಲಸ ಮಾಡಿವೆ ಎಂಬುದರ ವಿಶ್ಲೇಷಣೆಯೇ ಈಗ ನಿಮ್ಮೆದುರು ಇದೆ.

ರಷ್ಯಾ ದೇಶ ಲೂನಾರ್ ಮಿಷನ್ ಕಳುಹಿಸಿದ್ದು ಆಗಸ್ಟ್ 11, 2023ರಂದು, ಮಿಥುನ ಲಗ್ನದಲ್ಲಿ (ಅಲ್ಲಿನ ಕಾಲಮಾನ ಪ್ರಕಾರ ಮಧ್ಯಾಹ್ನ 2.11). ಇನ್ನು ಇದೇ ತಿಂಗಳು, ಅಂದರೆ ಆಗಸ್ಟ್ 23ಕ್ಕೆ ಚಂದ್ರನ ಮೇಲೆ ಲೂನಾರ್ ಇಳಿಯಲಿದೆ. ಕೇವಲು ಹನ್ನೆರಡು ದಿನದ ಅವಧಿಯಲ್ಲಿ ತನ್ನ ಪ್ರಯಾಣದ ಗಮ್ಯವನ್ನು ತಲುಪಲಿದೆ. ಇತ್ತ ಭಾರತದ ಚಂದ್ರ ಯಾನದ ಪ್ರಯಾಣ 41 ದಿನ ತೆಗೆದುಕೊಳ್ಳಲಿದೆ. ಈಗ ನಾನು ಹೇಳಲು ಹೊರಟಿರುವುದು ಎರಡೂ ದೇಶದ ಚಂದ್ರಯಾನ ಉಡ್ಡಯನದ ಮುಹೂರ್ತ ಆಧಾರಿತವಾದ ವಿಶ್ಲೇಷಣೆಯನ್ನು.

ಇದನ್ನೂ ಓದಿ: ಚಂದ್ರನ ಮೇಲ್ಮೈಗೆ ಡಿಕ್ಕಿ; ರಷ್ಯಾದ ಬಾಹ್ಯಾಕಾಶ ನೌಕೆ ಲೂನಾ 25 ಕಕ್ಷೆ ಸೇರುವಲ್ಲಿ ವಿಫಲ

ಭಾರತವು ಚಂದ್ರಯಾನ ಉಡ್ಡಯನ ಮಾಡಿದ ಸಮಯದ ಆಧಾರದಲ್ಲಿ, ಆಗ ಚಂದ್ರನು ವೃಷಭ ರಾಶಿಯಲ್ಲಿ, ತನ್ನ ಉಚ್ಚ ಸ್ಥಿತಿಯಲ್ಲಿತ್ತು. ನೋಡಿ, ಅದೇ ರೀತಿ, ರಷ್ಯಾದ ಉಡ್ಡಯನ ಸಮಯದಲ್ಲಿಯೂ ಚಂದ್ರ ವೃಷಭದಲ್ಲಿ, ಉಚ್ಚ ಸ್ಥಿತಿಯಲ್ಲಿತ್ತು. ಆದರೆ ರಷ್ಯಾ ಉಡ್ಡಯನ ಮಾಡುವ ವೇಳೆ ಮಿಥುನ ಲಗ್ನವಾಗಿದ್ದರೆ, ಭಾರತದ ಚಂದ್ರಯಾನ ಶುರು ಆದ್ದದ್ದು ಮಿಥುನದಿಂದ ಮೂಲ ತ್ರಿಕೋಣ, ಅಂದರೆ ಐದನೇ ಮನೆಯಾದ ತುಲಾ ಲಗ್ನದಲ್ಲಿ. ಜತೆಗೆ ಚಂದ್ರನನ್ನು ತಲುಪುವ ಹೊತ್ತಿಗೆ ತುಲಾ ರಾಶಿಯಲ್ಲಿ ಚಂದ್ರ ಇರುತ್ತದೆ.

ಗ್ರಹಗಳ ಪೈಕಿ ಗುರುವು ಆಕಾಶ ತತ್ವ. ಸಪ್ತಮ ಸ್ಥಾನವನ್ನು ನಭೋ ಮಂಡಲ ಎನ್ನುತ್ತಾರೆ. ಭಾರತದಿಂದ ಉಡ್ಡಯನ ಮಾಡಿರುವ ತುಲಾ ಲಗ್ನಕ್ಕೆ ಸಪ್ರಮ ಸ್ಥಾನದಲ್ಲಿ (ಮೇಷ ರಾಶಿ) ಗುರು ಗ್ರಹವು ಇದೆ. ಇನ್ನು ರಷ್ಯಾ ಕಳುಹಿಸಿದ ಸಮಯಕ್ಕೆ ಇದ್ದ ಲಗ್ನ ಮಿಥುನ ಲಗ್ನದ ಅಂಬರಾಧಿಪತಿ ಗುರು ಮೇಷದಲ್ಲಿ. ಭಾರತದಿಂದ ಕಳುಹಿಸಿದ ಸಮಯದಲ್ಲಿ ಅಂಬರ ಸ್ಥಾನದಲ್ಲಿದ್ದ ಗುರು ಗ್ರಹವು ಷಷ್ಠಾಧಿಪತಿಯಾಗಿ, ಅಂಬರಾಧಿಪತಿಯಾದ ಕುಜ ಗ್ರಹವನ್ನು ಪಂಚಮ ಸ್ಥಾನದಿಂದ ವೀಕ್ಷಣೆ ಮಾಡುತ್ತದೆ.

ಇನ್ನು ರಷ್ಯಾದ ಸಮಯದ ಪ್ರಕಾರ, ಅಂಬರಾಧಿಪತಿ ಗುರುವು ಲಾಭ ಸ್ಥಾನದಲ್ಲಿದ್ದು, ಷಷ್ಟಾಧಿಪತಿ ಆದ ಕುಜ ಗ್ರಹದ ವೀಕ್ಷಣೆ ಮಾಡುತ್ತದೆ. ಎರಡೂ ದೇಶಗಳು ಉಡ್ಡಯನ ಮಾಡುವ ವೇಳೆ ಕುಜ ಗ್ರಹವು ಸಿಂಹ ರಾಶಿಯಲ್ಲಿ ಇತ್ತು. ಕುಜ ಅಂದರೆ ಯಂತ್ರಕಾರಕ. ನಿಮಗೆ ಆರಂಭದಲ್ಲೇ ಹೇಳಿದಂತೆ ನಾನು ಮಾಡುವುದಕ್ಕೆ ಹೊರಟಿದ್ದು ಜ್ಯೋತಿಷ್ಯ ವಿಶ್ಲೇಷಣೆಯನ್ನು. ಅಂದರೆ ಎರಡೂ ದೇಶಗಳು ಉಡ್ಡಯನ ಮಾಡಿದ ಸಮಯದ ಹೋಲಿಕೆ ಮಾತ್ರ ಮಾಡುತ್ತಿರುವುದು.

ಒಂದು ಸುದ್ದಿಯ ಪ್ರಕಾರ, ರಷ್ಯಾದ ನೌಕೆಗೆ ಏನೋ ತೊಂದರೆ ಆಗಿದೆ ಎಂಬ ವರದಿ ಬಂದಿದೆ. ಅದಕ್ಕೆ ಕಾರಣ ಏನೆಂದರೆ, ಅವರು ಕಳುಹಿಸಿದ ಲಗ್ನ ಮುಹೂರ್ತಕ್ಕೆ ಯಂತ್ರಕಾರಕ ಕುಜನು ಷಷ್ಟಾಧಿಪತಿಯಾಗಿದ್ದ. ಷಷ್ಟವು ಋಣ, ಶತ್ರು ಚಿಂತನೆಗೆ ಇರುವಂಥದ್ದು.

ಇದೀಗ ಮುಂದೆ ಕಾದು ನೋಡೋಣ. ನಮ್ಮ ದೇವತಾ ಸಾನ್ನಿಧ್ಯಗಳು ವೈಜ್ಞಾನಿಕವಾಗಿಯೇ, ತತ್ವ ಸಿದ್ಧಾಂತಗಳ ಆಧಾರದಲ್ಲೇ ಪ್ರತಿಷ್ಠೆಗೊಂಡವು. ಅದರ ಶಕ್ತಿಯ ಎದುರು ಇತರ ಯಾವ ಶಕ್ತಿಯೂ ಇಲ್ಲ. ಚಂದ್ರನ ದಕ್ಷಿಣ ದ್ರುವದಲ್ಲಿ ಇಳಿಸುವ ಭಾರತದ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸೋಣ. ಸಿಂಹ- ಕುಜರಿಂದ ದಕ್ಷಿಣ ಭಾಗದ ಚಿಂತನೆಯ ಕ್ರಮವೂ ಇದೆ. ಸಿಂಹ ರಾಶಿಯು ನಿರ್ಜನ, ಅಗ್ನಿ ತತ್ವ, ನೀರಿಲ್ಲದೇ ಇರುವ ಕ್ಷೇತ್ರ ಚಿಂತನೆ ಎಂಬುದೂ ಆಗಿದೆ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಕಾಪು (ಉಡುಪಿ)

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:42 pm, Sun, 20 August 23