AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರವೇಶ ಮುಕ್ತ; ಲಾಕ್​ಡೌನ್​ ನಂತರ ನವ ಉತ್ಸಾಹ ಪಡೆಯಲು ಕೊವಿಡ್​ ನಿಯಮ ಅನುಸರಿಸಿ ಭೇಟಿ ನೀಡಿ

ಲಾಕ್​ಡೌನ್ ಬಳಿಕ‌ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪಾರ್ಕಿಂಗ್ ಬಳಿ ವಾಹನಗಳಿಗೆ ಸ್ಯಾನಿಟೈಸರ್​, ಬಳಿಕ ಥರ್ಮಲ್ ಸ್ಕ್ರೀನಿಂಗ್ ಪ್ರಮುಖ ಕಡೆ ಸ್ಯಾನಿಟೈಸರ್​ ಸಿಂಪಡಣೆ ಸೇರಿದಂತೆ ಸಿಬ್ಬಂದಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಒಳಪಡಿಸಲಾಗಿದೆ. ಶೌಚಾಲಯ, ವಿಶ್ರಾಂತಿ ಸ್ಥಳಗಳು, ಲಗೇಜ್ ರೂಮ್, ಗಾಲಿಕುರ್ಚಿಗಳು, ಬ್ಯಾಟರಿ ಚಾಲಿತ ವಾಹನಗಳ ಸೌಲಭ್ಯವಿದ್ದು, ಇವುಗಳನ್ನೂ ಸ್ಯಾನಿಟೈಜ್ ಮಾಡಲಾಗಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರವೇಶ ಮುಕ್ತ; ಲಾಕ್​ಡೌನ್​ ನಂತರ ನವ ಉತ್ಸಾಹ ಪಡೆಯಲು ಕೊವಿಡ್​ ನಿಯಮ ಅನುಸರಿಸಿ ಭೇಟಿ ನೀಡಿ
ಬನ್ನೇರುಘಟ್ಟ ಜೈವಿಕ ಉದ್ಯಾನವನ
TV9 Web
| Updated By: preethi shettigar|

Updated on: Jul 07, 2021 | 9:15 AM

Share

ಬೆಂಗಳೂರು​: ಕೊರೊನಾ ಎರಡನೇ ಅಲೆಯ ತೀವ್ರತೆಯನ್ನು ಅರಿತ ರಾಜ್ಯ ಸರ್ಕಾರ ಲಾಕ್​ಡೌನ್​ ಘೋಷಿಸಿತ್ತು. ಹೀಗಾಗಿ ಎಲ್ಲಾ ವ್ಯಾಪಾರ, ವ್ಯವಹಾರಗಳು ಬಂದ್​ ಆಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಜುಲೈ 5 ರಿಂದ ಲಾಕ್​ಡೌನ್​ ಮುಕ್ತಾಯವಾಗಿದೆ. ಅದರಂತೆ ಎಲ್ಲಾ ಚಟುವಟಿಕೆಗಳು ಪುನರಾರಂಭವಾಗಿದ್ದು, ಲಾಕ್​ಡೌನ್ ಕಾರಣದಿಂದ ಸ್ಥಗಿತಗೊಳಿಸಲಾಗಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಕೂಡ ಪ್ರವಾಸಿಗರನ್ನು ತನ್ನತ್ತ ಸೆಳೆಯುವುದಕ್ಕೆ ಸಿದ್ಧವಾಗಿದೆ. ಬರೋಬ್ಬರಿ ಎರಡು ತಿಂಗಳ ಬಳಿಕ ಮತ್ತೆ ಉದ್ಯಾನವನ ಆರಂಭವಾಗಿದ್ದು, ಕೆಲ ನಿಯಮಗಳ‌ನ್ನು ವಿಧಿಸಿ ಉದ್ಯಾನವನ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ಇಷ್ಟು‌ ದಿನ ಮನೆಯಲ್ಲಿಯೇ ಕೂತು ಟಿವಿಯಲ್ಲಿ‌ ಪ್ರಾಣಿ ಪ್ರಪಂಚ ನೋಡುತ್ತಿದ್ದ ಪ್ರವಾಸಿಗರಿಗೆ, ಸಫಾರಿ ಪ್ರವೇಶಕ್ಕೆ ಸರ್ವ ತಯಾರಿ ಮಾಡಲಾಗಿದೆ.

ಬೆಂಗಳೂರಿನ ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರಕೃತಿ ಮಡಿಲಿನಲ್ಲಿ ಕಂಗೊಳಿಸುತ್ತಿರುವ ವನ್ಯಜೀವಿಗಳ ಆಶ್ರಯ ತಾಣವಾಗಿದೆ. ಇಲ್ಲಿ ಸಾವಿರಾರು‌ ಪ್ರಭೇದದ ಜೀವರಾಶಿಗಳಿದ್ದು, ಪ್ರಾಣಿ ಪ್ರಿಯರನ್ನು ತನ್ನತ್ತ ಸೆಳೆಯುವ ಆಕರ್ಷಣೀಯ ತಾಣವಾಗಿದೆ . ಆದರೆ ಮಹಾಮಾರಿ ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಎರಡು ತಿಂಗಳಿಗೂ ಅಧಿಕ ಸಮಯ ಪ್ರವಾಸಿಗರ ಭೇಟಿ ನಿಷೇಧಿಸಲಾಗಿತ್ತು. ಇದೀಗ ಇಂದಿನಿಂದ ಹಲವು ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಮತ್ತೆ ‌ಉದ್ಯಾನವನನ್ನು ಪ್ರವಾಸಿಗರಿಗೆ ಮುಕ್ತ ಮಾಡಲಾಗಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಮೃಗಾಲಯ, ಚಿಟ್ಟೆ ಉದ್ಯಾನ ಮತ್ತು ಸಫಾರಿಯ ವೀಕ್ಷಕರ ಸಂಖ್ಯೆಯನ್ನು ಮಿತಿಗೊಳಿಸಲಾಗಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒಂದು ಕುಟುಂಬದ ಗರಿಷ್ಠ 7 ಮಂದಿಯನ್ನು 1 ಗುಂಪಾಗಿ ಪರಿಗಣಿಸಲಾಗುತ್ತಿದೆ.

ಪ್ರತಿ ಗುಂಪು ಕನಿಷ್ಠ 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಸಫಾರಿಗೆ ಹವಾ ನಿಯಂತ್ರಿತವಲ್ಲದ ಬಸ್ಸುಗಳು ಶೇ 50 ರಷ್ಟು ಸೇವೆ‌ ನೀಡಲಿವೆ. ಜೀಪ್​ಗಳಲ್ಲಿ ಸಫಾರಿಗೆ ತೆರಳಲು ಕುಟುಂಬಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ ಚಾಲಕ ಮತ್ತು ಪ್ರವಾಸಿಗರ ನಡುವೆ ರಕ್ಷಣಾತ್ಮಕ ಪರದೆ ಅಳವಡಿಸಿದ್ದು, ಜೀಪ್ ಸಫಾರಿ ಕುಟುಂಬ ಗುಂಪಿಗೆ ಮಾತ್ರ ಲಭ್ಯವಿದೆ. ಟಿಕೇಟ್ ಕಾಯ್ದಿರಿಸುವುದು ಸಂಪೂರ್ಣವಾಗಿ ಆನ್​ಲೈನ್​ ವ್ಯವಸ್ಥೆಗೆ ಸಿಮಿತವಾಗಿದೆ. ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು. ಮೊದಲು ಪ್ರವೇಶದ್ವಾರದಲ್ಲಿ ಡಿಜಿಟಲ್ ಥರ್ಮೋಮೀಟರ್ ಮೂಲಕ ಸ್ಕ್ಯಾನ್ ಮಾಡಿ, ನಂತರ ಸ್ಯಾನಿಟೈಸರ್​, ಹ್ಯಾಂಡ್ ವಾಶ್, ಸೇರಿದಂತೆ ಅಗತ್ಯ ವ್ಯವಸ್ಥೆಯನ್ನು ಎಲ್ಲಾ ಪ್ರವೇಶ ದ್ವಾರ ಮತ್ತು ನಿರ್ಗಮನ ಪ್ರದೇಶದ ಬಳಿ ವ್ಯವಸ್ಥೆ ಮಾಡಲಾಗಿದೆ. ಉದ್ಯಾನವನದ ರೆಸ್ಟೋರೆಂಟ್​​ಗಳಲ್ಲಿ ಊಟ ಉಪಹಾರಕ್ಕೆ ‌ಸದ್ಯ ನಿರ್ಬಂಧವಿದ್ದು, ಕೇವಲ, ಬಿಸ್ಕೆಟ್, ಟೀ ನೀರು ಮಾತ್ರ ಪ್ರವಾಸಿಗರಿಗೆ ಒದಗಿಸಲಾಗುತ್ತಿದೆ , ಆದರೂ ಮನೆಯಿಂದ ಟಿಫಿನ್ ತಂದು ಕೊಂಡರೆ ಇನ್ನೂ ಒಳಿತು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯ ನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.

ಲಾಕ್​ಡೌನ್ ಬಳಿಕ‌ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪಾರ್ಕಿಂಗ್ ಬಳಿ ವಾಹನಗಳಿಗೆ ಸ್ಯಾನಿಟೈಸರ್​, ಬಳಿಕ ಥರ್ಮಲ್ ಸ್ಕ್ರೀನಿಂಗ್ ಪ್ರಮುಖ ಕಡೆ ಸ್ಯಾನಿಟೈಸರ್​ ಸಿಂಪಡಣೆ ಸೇರಿದಂತೆ ಸಿಬ್ಬಂದಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಒಳಪಡಿಸಲಾಗಿದೆ. ಶೌಚಾಲಯ, ವಿಶ್ರಾಂತಿ ಸ್ಥಳಗಳು, ಲಗೇಜ್ ರೂಮ್, ಗಾಲಿಕುರ್ಚಿಗಳು, ಬ್ಯಾಟರಿ ಚಾಲಿತ ವಾಹನಗಳ ಸೌಲಭ್ಯವಿದ್ದು, ಇವುಗಳನ್ನೂ ಸ್ಯಾನಿಟೈಜ್ ಮಾಡಲಾಗಿದೆ. ವಿಶ್ರಾಂತಿಗಾಗಿ ಉದ್ಯಾನವನದ ಒಳಗಡೆ ಮತ್ತು ಸುತ್ತಮುತ್ತಲು ಕಲ್ಲು ಬೆಂಚುಗಳನ್ನು ಒದಗಿಸಲಾಗಿದೆ. ವಾತಾವರಣ ಸಹ ಪ್ರಶಾಂತವಾಗಿದ್ದು, ಪ್ರಾಣಿಗಳು ಸಹ ಸ್ವಚ್ಛಂದವಾಗಿ ವಿಹರಿಸುತ್ತಿವೆ. ಒಟ್ಟು 5 ಬಗೆಯ ಸಫಾರಿ ತಾಣಗಳು ಈ ಪಾರ್ಕ್​ನಲ್ಲಿದ್ದು, ಜಿಂಕೆ, ಆನೆ, ಸಿಂಹ, ಹುಲಿ ಸಫಾರಿ ನೋಡುಗರಿಗೆ ರೋಮಾಂಚನ ನೀಡಲಿದೆ.

ಒಟ್ಟಿನಲ್ಲಿ ಲಾಕ್​ಡೌನ್​ನಿಂದಾಗಿ ಮನೆಯಲ್ಲಿಯಲ್ಲಿಯೇ ಬಂದಿಯಾಗಿದ್ದ ಜನಕ್ಕೆ ಬೆಂಗಳೂರು ಸಮೀಪದಲ್ಲೇ ಕಾನನದ ನಡುವೆ ಇರುವ ಈ ಬನ್ನೇರುಘಟ್ಟ ಜೈವಿಕ ಉದ್ಯಾನವನ ಹೊಸ ಉತ್ಸಾಹ ನೀಡಲಿದೆ. ಉದ್ಯಾನವನದ ಅಧಿಕಾರಿಗಳು ಪ್ರವಾಸಿಗರ ಅರೋಗ್ಯ ದೃಷ್ಟಿಯಿಂದ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಹಾಗಾಗಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಭಯ ಬೇಡ. ಆದರೆ ಜಾಗ್ರತೆಯಿಂದ ಕೊವಿಡ್​ ನಿಯಮ ಪಾಲಿಸಿ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ ಪ್ರಾಣಿ, ಪಕ್ಷಿಗಳನ್ನು ನೋಡಿ ಲಾಕ್​ಡೌನ್​ ಬೇಜಾರು ಕಳೆಯಬಹುದು ಎನ್ನುವುದು ಮಾತ್ರ ನಿಜ.

ಇದನ್ನೂ ಓದಿ: ಬನ್ನೇರುಘಟ್ಟ ಸಮೀಪದಲ್ಲಿ ಕಾಣಿಸಿಕೊಂಡ ಮೊಸಳೆ; ಸೆರೆ ಹಿಡಿದ ಜೈವಿಕ ಉದ್ಯಾನವನ ಸಿಬ್ಬಂದಿ

ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಕರಡಿ ಸೆರೆ; ಪರಾರಿಯಾಗಿದ್ದ ಕರಡಿಯೇ ಬೋನಿಗೆ ಬಿತ್ತಾ ಎನ್ನುವುದು ಮಾತ್ರ ನಿಗೂಢ