Bangalore Mysore Expressway: ಸರ್ವೀಸ್ ರಸ್ತೆ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸರ್ವೀಸ್​ ರಸ್ತೆ ಬಗ್ಗೆ ಏರ್ಪಟ್ಟಿದ್ದ ಗೊಂದಲಗಳಿಗೆ ಸ್ವತಃ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತೆರೆ ಎಳೆದಿದ್ದಾರೆ. ಹಾಗಾದ್ರೆ, ನಿತಿನ್ ಗಡ್ಕರಿ ಹೇಳಿದ್ದೇನು ಎನ್ನುವುದು ಈ ಕೆಳಗಿನಂತಿದೆ ನೋಡಿ.

Bangalore Mysore Expressway: ಸರ್ವೀಸ್ ರಸ್ತೆ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ ಸಚಿವ ನಿತಿನ್ ಗಡ್ಕರಿ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Mar 08, 2023 | 11:02 AM

ನವದೆಹಲಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ((Bengaluru-Mysuru Expressway) ) ಒಂದಲ್ಲ ಒಂದು ವಿವಾದಕ್ಕೆ ಕಾರಣವಾಗುತ್ತಿದೆ. ಸರ್ವೀಸ್ ರಸ್ತೆ (Service Road) ಇಲ್ಲದೇ ಟೋಲ್​ ಸಂಗ್ರಹಿಸಲು ಮುಂದಾಗಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಇದೀಗ ಇದೇ ಸರ್ವೀಸ್​ ರಸ್ತೆ ವಿಚಾರವಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ಸ್ಪಷ್ಟನೆ ನೀಡಿದ್ದಾರೆ. ಹೊಸದಾಗಿ ನಿರ್ಮಾಣ ಮಾಡಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ 6 ಮುಖ್ಯ ಪಥಗಳು ಹಾಗೂ ಎರಡು ಸರ್ವೀಸ್ ರಸ್ತೆಗಳು ಇದ್ದು, ಭಾರತಮಾಲಾ ಪರಿಯೋಜನಾ ಅಡಿಯಲ್ಲಿ8,478 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: Bengaluru-Mysuru Expressway: ಮೈಸೂರು ಬೆಂಗಳೂರು ದಶಪಥ; ಸರ್ವಿಸ್ ರಸ್ತೆ ಆಗುವವರೆಗೂ ಟೋಲ್ ಬೇಡವೆಂದ ಡಿಕೆ ಶಿವಕುಮಾರ್

ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಎಕ್ಸ್‌ಪ್ರೆಸ್‌ವೇ ನ ಫೋಟೋಗಳನ್ನು ಹಂಚಿಕೊಂಡಿರುವ ಸಚಿವರು, 118 ಕಿಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ 6 ಮುಖ್ಯ ಕ್ಯಾರೇಜ್‌ವೇ ಲೇನ್‌ಗಳನ್ನು ಮತ್ತು ಎರಡೂ ಬದಿಗಳಲ್ಲಿ 2 ಸರ್ವಿಸ್ ರಸ್ತೆ ಲೇನ್‌ಗಳನ್ನು ಒಳಗೊಂಡಿದೆ. ಇದನ್ನು ಭಾರತಮಾಲಾ ಪರಿಯೋಜನಾ ಅಡಿಯಲ್ಲಿ8,478 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ 10-ಲೇನ್ ಯೋಜನೆಯಾಗಿದ್ದು, ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಬೆಂಗಳೂರಿನಿಂದ ನಿಡಗಟ್ಟಾ ಮತ್ತು ನಿಡಗಟ್ಟಾದಿಂದ ಮೈಸೂರಿಗೆ. ಮೊದಲ ಹಂತದಲ್ಲಿ, 52 ಕಿಮೀ ಗ್ರೀನ್‌ಫೀಲ್ಡ್ ಇದ್ದು, ಐದು ಬೈಪಾಸ್‌ಗಳನ್ನು ಒಳಗೊಂಡಿದೆ. ಈ ಬೈಪಾಸ್ ಬೆಂಗಳೂರಿನ ಟ್ರಾಫಿಕ್ ಬ್ಲಾಕ್‌ಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಎಲ್ಲಾ ಪ್ರಯಾಣಿಕರಿಗೆ ತೊಂದರೆ ಮುಕ್ತ ಪ್ರಯಾಣವನ್ನು ನೀಡಲಿದೆ ಎಂದು ಹೇಳಲಾಗಿದೆ.

ಹೋರಾಟದ ಎಚ್ಚರಿಕೆ ನೀಡಿದ್ದ ಡಿಕೆಶಿ

ಮೈಸೂರು – ಬೆಂಗಳೂರು ದಶಪಥ ರಸ್ತೆಗೆ ಸರ್ವೀಸ್ ರಸ್ತೆ ಆಗುವವರೆಗೂ ಟೋಲ್ (Toll) ಸಂಗ್ರಹ ಮಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಆಗ್ರಹಿಸಿದ್ದರು. ಒಂದು ವೇಳೆ ತರಾತುರಿಯಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾದರೆ ಅದರ ವಿರುದ್ಧ ಕಾಂಗ್ರೆಸ್ (Congress) ದೊಡ್ಡ ಮಟ್ಟದ ಹೋರಾಟ ಮಾಡಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದರು. ಇದೀಗ ಸ್ವತಃ ಕೇಂದ್ರ ಸಚಿವರೇ ಸರ್ವೀಸ್ ರಸ್ತೆ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮುಂದೂಡಿಕೆ; ಸಂಸದ ಪ್ರತಾಪ್ ಸಿಂಹ

ಟೋಲ್ ಎಷ್ಟು?

118 ಕಿಮೀ ಎಕ್ಸ್‌ಪ್ರೆಸ್‌ವೇ ಎರಡು ಟೋಲ್-ಕಲೆಕ್ಷನ್ ಪಾಯಿಂಟ್‌ಗಳನ್ನು ಹೊಂದಿದೆ. ಇದು ಆರು ವರ್ಗದ ವಾಹನಗಳಿಗೆ ಟೋಲ್ ವಿಧಿಸುತ್ತದೆ. ಮೇಯಿಂದ ಟೋಲ್ ಸಂಗ್ರಹ ಶುರುವಾಗಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಪ್ರಕಾರ, 24 ಗಂಟೆಗಳ ಒಳಗೆ ಹಿಂದಿರುಗುವ ಪ್ರಯಾಣಕ್ಕೆ ಪ್ರತಿ ಕಾರಿಗೆ 205 ರೂಪಾಯಿ ಟೋಲ್ ಶುಲ್ಕ ವಿಧಿಸಲಿದೆ. ಮಿನಿ ಬಸ್‌ಗಳಿಗೆ ಏಕಮುಖ ಪ್ರಯಾಣಕ್ಕೆ 220 ರೂಪಾಯಿ ಇದ್ದರೆ, ಬಸ್ ಗಳಿಗೆ 460 ರೂ. ವಿಧಿಸಲಾಗುತ್ತದೆ.

ಭಾರತಮಾಲಾ ಪರಿಯೋಜನಾ ಅಡಿಯಲ್ಲಿ 8,478 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಎಕ್ಸ್‌ಪ್ರೆಸ್‌ವೇಯನ್ನು ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

Published On - 10:59 am, Wed, 8 March 23