Bengaluru Water crisis: ಕುಡಿಯುವ ನೀರಿನ ಬಳಕೆಗೆ ಹಲವು ನಿರ್ಬಂಧ, ಮನೆ ಮಾಲೀಕರಿಗೆ ಸಂಕಷ್ಟ

ಅನಗತ್ಯ ಉದ್ದೇಶಗಳಿಗೆ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಿ BWSSB ಆದೇಶ ಹೊರಡಿಸಿದ್ದರಿಂದ ಬೆಂಗಳೂರು ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಕಾವೇರಿ ಅಥವಾ ಬೋರ್ ವೆಲ್ ನೀರನ್ನು ಕಾರು ತೊಳೆಯಲು ಬಳಸಿದರೆ 5 ಸಾವಿರ ದಂಡ ತೆರಬೇಕಾಗಿರುವುದರಿಂದ ನಿವಾಸಿಗಳು ಕಂಗಾಲಾಗಿದ್ದಾರೆ. ಇಂತಹ ಅವಶ್ಯಕತೆಗೆ ಬಳಸಲು ನೀರಿಲ್ಲ ಬೇರೇನು ಮಾಡುವುದು ಎಂದು ತಲೆ ಕೆಡಿಸಿಕೊಂಡಿದ್ದಾರೆ.

Bengaluru Water crisis: ಕುಡಿಯುವ ನೀರಿನ ಬಳಕೆಗೆ ಹಲವು ನಿರ್ಬಂಧ, ಮನೆ ಮಾಲೀಕರಿಗೆ ಸಂಕಷ್ಟ
ಬೆಂಗಳೂರು ಜಲ ಮಂಡಳಿ
Follow us
|

Updated on: Mar 12, 2024 | 7:52 AM

ಬೆಂಗಳೂರು, ಮಾರ್ಚ್​.12: ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಅಭಾವ ಎದುರಾಗಿದೆ (Drinking Water Crisis). ಹೀಗಾಗಿ ಕುಡಿಯುವ ನೀರನ್ನು (ಕಾವೇರಿ ಮತ್ತು ಬೋರ್‌ವೆಲ್) ಕಾರು ತೊಳೆಯಲು ಸೇರಿದಂತೆ ಅನವಶ್ಯಕವಾಗಿ ಬಳಸುವುದನ್ನು ನಿಷೇಧಿಸಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧಿಸೂಚನೆ ಹೊರಡಿಸಿದೆ. ಇದೀಗ ಬೆಂಗಳೂರಿನಲ್ಲಿ ಎದುರಾಗಿರುವ ತೀವ್ರ ನೀರಿನ ಸಮಸ್ಯೆಯ ನಡುವೆ ಬೆಂಗಳೂರಿನ ಮನೆ ಮಾಲೀಕರು (Independent House Owners) ಆತಂಕ ವ್ಯಕ್ತಪಡಿಸಿದ್ದಾರೆ.

ಕುಡಿಯುವ ನೀರನ್ನು ಅನವಶ್ಯಕ ಉದ್ದೇಶಗಳಿಗೆ ಬಳಸಿದವರಿಗೆ BWSSB 5,000 ರೂ ದಂಡವನ್ನು ವಿಧಿಸುತ್ತಿದೆ. ಆದರೆ ಕುಡಿಯುವ ನೀರು ಬಿಟ್ಟು ಇತರೆ ಬಳಕೆಗೆ ನೀರು ಸಿಗುತ್ತಿಲ್ಲ. ನೀರಿನ ಪರ್ಯಾಯ ಮೂಲಗಳಿಲ್ಲದ ಕಾರಣ ನಿವಾಸಿಗಳು ಚಿಂತಿಸುವಂತಾಗಿದೆ. ಮತ್ತು BWSSB ಆದೇಶವನ್ನು ಉಲ್ಲಂಘಿಸಿ 5,000 ರೂ ದಂಡವನ್ನು ಪಾವತಿಸಬೇಕಾಗುವಂತಹ ಪರಿಸ್ಥಿತಿ ಎದುರಾಗುತ್ತಿದೆ. BWSSB ಆದೇಶದ ಪ್ರಕಾರ, ಕುಡಿಯುವ ನೀರನ್ನು ಕಾರುಗಳನ್ನು ತೊಳೆಯುವುದು ಅಥವಾ ಸಸ್ಯಗಳಿಗೆ ನೀರು ಹಾಕುವುದು ಮುಂತಾದ ಅನವಶ್ಯಕ ಉದ್ದೇಶಗಳಿಗೆ ಬಳಸಬಾರದು ಎಂದು ಆದೇಶ ನೀಡಿದೆ. ಅಪಾರ್ಟ್ಮೆಂಟ್​ಗಳಲ್ಲಿ ವಾಸಿಸುವ ಜನರು ಕೊಳಚೆ ನೀರಿನ ಸಂಸ್ಕರಣಾ ಘಟಕದಿಂದ (STP) ಇತರೆ ಬಳಕೆಗೆ ನೀರನ್ನು ಪಡೆಯುತ್ತಾರೆ. ಆದರೆ ಮನೆಗಳಲ್ಲಿ ವಾಸಿಸುವ ಜನರಿಗೆ ಅಂತಹ ಆಯ್ಕೆಗಳಿಲ್ಲ.

ದೊಡ್ಡ ಬೊಮ್ಮಸಂದ್ರದ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ ಕಾವೇರಿ ನೀರಿನ ಸಂಪರ್ಕ ಮಾತ್ರ ಹೊಂದಿದ್ದು ಬೇರೆ ದಾರಿಯಿಲ್ಲದ ಕಾರಣ ತಮ್ಮ ತೋಟಕ್ಕೆ ಅದೇ ಕುಡಿಯುವ ನೀರನ್ನು ಬಳಸುತ್ತಿದ್ದಾರೆ. ನನಗೆ ಬೇರೆ ಮಾರ್ಗವಿಲ್ಲದೆ ನನ್ನ ತೋಟಕ್ಕೆ ಕುಡಿಯುವ ನೀರನ್ನೇ ಬಳಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಅಂತರ್ಜಲವು ಸಾಮಾನ್ಯ ಸಂಪನ್ಮೂಲವಾಗಿರುವುದರಿಂದ, ನಮ್ಮ ಬಡಾವಣೆಯಲ್ಲಿ ದಶಕಗಳ ಹಿಂದೆ ನಾವು ಮನೆಗಳನ್ನು ನಿರ್ಮಿಸುವಾಗ ಪ್ರತ್ಯೇಕ ಬೋರ್‌ವೆಲ್‌ಗಳನ್ನು ಕೊರೆಯದಿರಲು ನಿರ್ಧರಿಸಿದ್ದೇವೆ. ನಮ್ಮ ಮನೆಗೆ ಕಾವೇರಿ ನೀರು ಮಾತ್ರ ಸಿಗುತ್ತದೆ. ಬೆಂಗಳೂರಿನ ಎಲ್ಲಾ ಮನೆಗಳಂತೆ ನಮ್ಮಲ್ಲೂ ಒಂದು ಚಿಕ್ಕ ತೋಟವಿದೆ, ಅದು ನೀರಿಲ್ಲದೆ ಈ ಬೇಸಿಗೆಯಲ್ಲಿ ಒಣಗುತ್ತಿದೆ. ಹೀಗಾಗಿ, ನೀರಿನ ಬಳಕೆಯ ಬಗ್ಗೆ ಜಾಗೃತರಾಗಿ, ನಾವು ನಮ್ಮ ಸಸ್ಯಗಳಿಗೆ ಬೇಕಾಗುವಷ್ಟು ಕಾವೇರಿ ನೀರನ್ನು ಬಳಸುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: Bengaluru Water Crisis: ನೀರಿನ ಬಿಕ್ಕಟ್ಟಿಗೆ ಬೇಸತ್ತು ಬೆಂಗಳೂರಿನಿಂದ ಊರಿಗೆ ತೆರಳುತ್ತಿರುವ ಟೆಕ್ಕಿಗಳು!

ಇದಲ್ಲದೆ, ನಗರದ ಅನೇಕ ನಿವಾಸಿಗಳು ಕಾವೇರಿ ಅಥವಾ ಬೋರ್‌ವೆಲ್ ಅಥವಾ ಯಾವುದೇ ಇತರ ನೀರಿನ ಮೂಲವನ್ನು ಬಳಸುತ್ತಿದ್ದರೆ ಅದನ್ನು ಜಲ ಮಂಡಳಿಯು ಹೇಗೆ ಪರಿಶೀಲಿಸುತ್ತದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸಿಟಿಜನ್ಸ್ ಆಕ್ಷನ್ ಫೋರಮ್ (ಸಿಎಎಫ್) ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಲ್ಲೇಖಿಸಿ ವಿಜಯನ್ ಮೆನನ್ ಪ್ರಶ್ನಿಸಿದರು, ಈ ರೀತಿಯ ನಿಯಮದ ಅನುಷ್ಠಾನ ಅಸಾಧ್ಯ. ನೀರನ್ನು ಸಂರಕ್ಷಿಸುವಂತೆ ಜನರಲ್ಲಿ ಮನವಿ ಮಾಡಬಹುದು. ಆದರೆ ತೀರ ಅವಶ್ಯಕವಲ್ಲದಕ್ಕೆ ಬಳಸಬೇಡಿ ಎಂಬುವುದು ತಪ್ಪು ಎಂದರು.

BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ಹೆಚ್ಚುತ್ತಿರುವ ನೀರಿನ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದರು. ನೀರಿನ ಬಳಕೆಗೆ ನಾವು ಸಂಪೂರ್ಣ ನಿಷೇಧ ಹೇರಿಲ್ಲ, ಆದರೆ “ನೀರಿನ ಬಳಕೆಯನ್ನು ತಾತ್ಕಾಲಿಕವಾಗಿ ಕಡಿಮೆಗೊಳಿಸಬೇಕು” ಎಂದು ಅವರು ಹೇಳಿದರು.

ಇದನ್ನೂ ಓದಿ: ಶಾಲೆಗಳಲ್ಲಿ ನೀರು, ಶೌಚಾಲಯ ಸ್ಥಿತಿಗತಿ ವರದಿ ಸಲ್ಲಿಸದ ಬಿಬಿಎಂಪಿ: ವಿಳಂಬ ನೀತಿಗೆ ಹೈಕೋರ್ಟ್ ಅಸಮಾಧಾನ

“ಮನೆಗಳಲ್ಲಿ ಇರುವವರು ನೆಲ ಸ್ವಚ್ಛಗೊಳಿಸಲು ಬಕೆಟ್ ನೀರನ್ನು ಬಳಸಬಹುದು, ಆದರೆ ಅವರು ತಮ್ಮ ಕಾರನ್ನು ತೊಳೆಯಲು ಹೆಚ್ಚು ಹೆಚ್ಚು ನೀರನ್ನು ಬಳಸುವಂತಿಲ್ಲ. ಸಸ್ಯಗಳಿಗೆ ಸ್ವಲ್ಪ ಪ್ರಮಾಣದ ನೀರನ್ನು ಸಹ ಹಾಕಬಹುದು. ಆದರೆ ನೀರನ್ನು ಪೋಲು ಮಾಡದಿರುವುದು ಮುಖ್ಯ” ಎಂದು ಮನೋಹರ್ ಹೇಳಿದರು.

BWSSB ಮೀಟರ್ ರೀಡರ್‌ಗಳು ತಮ್ಮ ವಲಯಗಳಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಲು ಬೆಳಿಗ್ಗೆ ಮತ್ತು ತಡರಾತ್ರಿಯಲ್ಲಿ ತಪಾಸಣೆ ಮಾಡಲು ಸೂಚಿಸಲಾಗಿದೆ. ಯಾವುದೇ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ವರದಿ ಮಾಡುವ ಮೂಲಕ ಸಾರ್ವಜನಿಕರು ತಮ್ಮ ಕೈಲಾದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ