ದಾವಣಗೆರೆ: ಬಸಾಪೂರದ ಈ ಕ್ಷೇತ್ರದ ಜಾತ್ರೆಗೆ ಮಹಿಳೆಯರು ಬರುವಂತಿಲ್ಲ, ಬಂದ್ರೆ ಕಾದಿದೆ ಆಪತ್ತು!

ಬಸಾಪೂರ ಗ್ರಾಮದಿಂದ ಎರಡು ಕಿಲೋ ಮೀಟರ್ ದೂರದಲ್ಲಿ ಇರುವ ಮಹೇಶ್ವರ ಸ್ವಾಮೀ ಉಗ್ರ ದೇವರು. ಭಕ್ತರಲ್ಲಿ ಯಾವುದೇ ತಪ್ಪಾದರೂ ಶಿಕ್ಷೆ ಖಚಿತ ಎಂಬ ನಂಬಿಕೆ ಇಲ್ಲಿನ ಭಕ್ತರದ್ದು. ಹೀಗಾಗಿ ಸುತ್ತಲಿನ ಗ್ರಾಮಗಳ ಜನರು ಇಲ್ಲಿ ಕಟ್ಟು ನಿಟ್ಟಾಗಿ ಬಂದು ಜಾತ್ರೆಯ ದಿನ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿಯೇ ಹೋಗುತ್ತಾರೆ.

ದಾವಣಗೆರೆ: ಬಸಾಪೂರದ ಈ ಕ್ಷೇತ್ರದ ಜಾತ್ರೆಗೆ ಮಹಿಳೆಯರು ಬರುವಂತಿಲ್ಲ, ಬಂದ್ರೆ ಕಾದಿದೆ ಆಪತ್ತು!
ಬಸಾಪೂರದ ಈ ಕ್ಷೇತ್ರದ ಜಾತ್ರೆಗೆ ಮಹಿಳೆಯರು ಬರುವಂತಿಲ್ಲ!
Edited By:

Updated on: Jan 04, 2024 | 7:30 AM

ದಾವಣಗೆರೆ, ಜನವರಿ 4: ದಾವಣಗೆರೆ (Davanagere) ತಾಲೂಕು ಬಸಾಪೂರದ (Basapura) ಮಹೇಶ್ವರ ಸ್ವಾಮೀ ಕ್ಷೇತ್ರದಲ್ಲೊಂದು (Maheshwara swamy temple) ವಿಚಿತ್ರ ಜಾತ್ರೆ ನಡೆಯುತ್ತದೆ. ಈ ಜಾತ್ರೆ ವೇಳೆ ಬಳೆ ಶಬ್ದ ಕೇಳುವಂತಿಲ್ಲ. ಮಹಿಳೆಯರಂತೂ ಜಾತ್ರೆಯತ್ತ ಸುಳಿಯುವಂತೆಯೇ ಇಲ್ಲ. ಈ ಜಾತ್ರೆ ವೇಳೆ ದೇವರ ದರ್ಶನ, ಅಡಿಗೆ ಮಾಡುವುದು ಹಾಗೂ ಊಟ ಮಾಡುವುದು ಎಲ್ಲವೂ ಗಂಡಸರೇ. ಹೀಗಾಗಿ ಇದೊಂದು ಗಂಡಸರ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ.

ಬಸಾಪೂರ ಗ್ರಾಮದಿಂದ ಎರಡು ಕಿಲೋ ಮೀಟರ್ ದೂರದಲ್ಲಿ ಇರುವ ಮಹೇಶ್ವರ ಸ್ವಾಮೀ ಉಗ್ರ ದೇವರು. ಭಕ್ತರಲ್ಲಿ ಯಾವುದೇ ತಪ್ಪಾದರೂ ಶಿಕ್ಷೆ ಖಚಿತ ಎಂಬ ನಂಬಿಕೆ ಇಲ್ಲಿನ ಭಕ್ತರದ್ದು. ಹೀಗಾಗಿ ಸುತ್ತಲಿನ ಗ್ರಾಮಗಳ ಜನರು ಇಲ್ಲಿ ಕಟ್ಟು ನಿಟ್ಟಾಗಿ ಬಂದು ಜಾತ್ರೆಯ ದಿನ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿಯೇ ಹೋಗುತ್ತಾರೆ. ಇದು ಸುಮಾರು 400 ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಇಲ್ಲಿನ ವಿಶೇಷವೆಂದರೆ ಪುರುಷರಿಗೆ ಮಾತ್ರ ಈ ಕ್ಷೇತ್ರದಲ್ಲಿ ಪ್ರವೇಶ. ಅಪ್ಪಿತಪ್ಪಿಯೂ ಕೂಡಾ ಮಹಿಳೆಯರು ಅಥವಾ ಸಣ್ಣ ಹೆಣ್ಣು ಮಗು ಕೂಡಾ ಇಲ್ಲಿ ಕಾಲಿಡುವಂತಿಲ್ಲ. ಇದೇ ಮಹೇಶ್ವರ ಸ್ವಾಮೀಯ ಕಟ್ಟಾಜ್ಞೆಯಂತೆ. ಹೀಗಾಗಿ ಎಲ್ಲಿ ನೋಡಿದರಲ್ಲಿ ಗಂಡಸರೇ ಕಾಣುತ್ತಾರೆ. ಈ ಬಸಾಪೂರದ ಪ್ರತಿಯೊಂದು ಮನೆಯ ಹಿರಿಮಗ ಅಂತು ಕಡ್ಡಾಯವಾಗಿ ಜಾತ್ರೆಗೆ ಹಾಜರಾಗಿರಲೇ ಬೇಕು.

ಎಷ್ಟೇ ಜನ ಭಕ್ತರು ಬಂದರೂ ಸಹ ಅವರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ವಿಶೇಷವಾಗಿ ಅನ್ನ ಸಾರು ಹಾಗೂ ಬಾಳೆ ಹಣ್ಣು ಇಲ್ಲಿನ ಪ್ರಸಾದ. ಬಾಳೆ ಎಂದರೆ ಮಹೇಶ್ವರ ಸ್ವಾಮೀಯ ಪ್ರತೀಕ ಎಂಬ ನಂಬಿಕೆ ಇದೆ. ಪ್ರತಿಯೊಬ್ಬರು ಬಂದು ಇಲ್ಲಿ ಬಾಳೆ ಹಣ್ಣು ಪ್ರಸಾದ ಸ್ವೀಕರಿಸುವುದು ಕಡ್ಡಾಯ. ಮೇಲಾಗಿ ದೇವರಿಗೆ ನಮಸ್ಕರಿಸಿದರೆ ವಿಭೂತಿ ಧರಿಸುವುದು ಕಡ್ಡಾಯಂತೆ.

ಇನ್ನೊಂದು ವಿಶೇಷವೆಂದರೆ, ದೇಗುಲದ ಬಳಿ ಒಂದು ಬಾವಿ ಇದೆ. ಈ ಬಾವಿಗೆ ಬಾಳೆಹಣ್ಣಗಳನ್ನು ಬಿಡಲಾಗುತ್ತದೆ. ಇದರಲ್ಲಿ ಹಾಕಿದ ಎಲ್ಲ ಬಾಳೆ ಹಣ್ಣುಗಳು ಮುಳುಗಲ್ಲ ಎನ್ನುತ್ತಾರೆ ಭಕ್ತರು. ಒಂದು ವೇಳೆ ಅದು ಮುಳುಗಿದರೆ ಆಪತ್ತು ಕಾದಿದೆ ಎಂಬುದು ಭಕ್ತರ ಗ್ರಹಿಕೆ.

ಇದನ್ನೂ ಓದಿ: ದಾವಣಗೆರೆಯಲ್ಲಿದೆ ಅಯೋಧ್ಯೆ ರಾಮ ಮಂದಿರದ ಮೂಲ ಮೂರ್ತಿಗಳು; ಈ ಆಶ್ರಮದಲ್ಲಿರುವ ಶಾಸನ ಹೇಳುತ್ತೆ ಸತ್ಯ ಕಥೆ

ಇಷ್ಟೆಲ್ಲಾ ಅದ್ಧೂರಿಯಾಗಿ ನಡೆಯುವ ಈ ಜಾತ್ರೆಗೆ ಸ್ತ್ರೀ ಪ್ರವೇಶ ಯಾಕೆ ಇಲ್ಲಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಭಕ್ತರ ಬಳಿ ಇಲ್ಲ. ಇದು ಪೂರ್ವಜರ ಪಾಲದಿಂದ ನಡೆದುಕೊಂಡು ಬಂದಿದೆ. ಅದೇ ರೀತಿ ನಾವು ಕೂಡಾ ಆ ಸಂಪ್ರದಾಯವನ್ನ ಮುಂದುವರಿಸಿಕೊಂಡು ಬಂದಿದ್ದೇವೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೆ, ಈವರೆಗೆ ಯಾವುದೇ ಮಹಿಳೆ ಕೂಡಾ ದೇವರ ದರ್ಶನ ಮಾಡುತ್ತೇನೆ ಎಂದು ಬಂದಿಲ್ಲವಂತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Basavaraj Doddamani

ಬಸವರಾಜ ದೊಡ್ಡಮನಿ ಟಿವಿ9 ಕನ್ನಡ ವರದಿಗಾರರಾಗಿದ್ದು, ವಿಶೇಷವಾಗಿ ದಾವಣಗೆರೆ ಜಿಲ್ಲಾ ಪ್ರಾದೇಶಿಕ ಸುದ್ದಿಗಳ ಮೇಲೆ ಕೇಂದ್ರೀಕರಿಸುತ್ತಾರೆ.

Read More
Follow Us