Corona Warriors: ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ನಮ್ಮವರನ್ನು ಕಳೆದುಕೊಂಡರೂ ಕರ್ತವ್ಯಕ್ಕೆ ಚ್ಯುತಿ ಬಾರದಂತಿರುವುದು ಅನಿವಾರ್ಯ

"ಸರ್, ನಮ್ಮ  ಸಿಬ್ಬಂದಿಗಳಲ್ಲಿ ಇಂತಿಂತಹವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ನರ್ಸ್ ಆಗಿ ಹಗಲು ಇರುಳೂ ಕೆಲಸ ಮಾಡ್ತಿರುವ ನಾನು ಸ್ವತಃ  ನನ್ನ ತಾಯಿಗೇ ಕೊರೋನಾ ಬಂದು ಒದ್ದಾಡ್ತಿರುವಾಗ ಒಂದು ಆಕ್ಸಿಜನ್ ಬೆಡ್ ಕೊಡಿಸಲಾಗದೇ ಮನೆಯಲ್ಲೇ ಟ್ರೀಟ್ಮೆಂಟ್ ಕೊಡಿಸಿ ಅವರನ್ನು ಕಳೆದುಕೊಂಡೆ" ಅಂತ ನನ್ನ ಸಹೋದ್ಯೋಗಿ ಅತ್ತಾಗ ಅಸಹಾಯಕನಾದ ನಾನೂ ಹನಿಗಣ್ಣಾಗಿದ್ದೆ. ಡಾ. ಆನಂದ ಋಗ್ವೇದಿ

Corona Warriors: ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ನಮ್ಮವರನ್ನು ಕಳೆದುಕೊಂಡರೂ ಕರ್ತವ್ಯಕ್ಕೆ ಚ್ಯುತಿ ಬಾರದಂತಿರುವುದು ಅನಿವಾರ್ಯ
ಡಾ. ಆನಂದ ಋಗ್ವೇದಿ
Follow us
| Updated By: Digi Tech Desk

Updated on:May 14, 2021 | 1:21 PM

ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಹೀಗೆ ಆರೋಗ್ಯ ಸೇವಾಕ್ಷೇತ್ರಗಳಲ್ಲಿರುವವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.

ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಸಾರ್ವಜನಿಕ ಸೇವಾಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರ ಆಂತರ್ಯಕ್ಕೆ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶವೂ ಇಲ್ಲಿದೆ. ಇ ಮೇಲ್ : tv9kannadadigital@gmail.com

ದಾವಣಗೆರೆಯ ನಿಗದಿತ ಕೋವಿಡ್ ಆಸ್ಪತ್ರೆ ಮತ್ತು ಸರ್ಕಾರಿ ಜಿಲ್ಲಾ (ಚಿಗಟೇರಿ) ಆಸ್ಪತ್ರೆಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿರುವ ಡಾ. ಆನಂದ್ ಋಗ್ವೇದಿ ಅವರು, ‘ನಾವು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲರೂ ಸಂವಿಧಾನಬದ್ಧ ಕರ್ತವ್ಯ ಹೊಂದಿರುವವರು. ನಮ್ಮ ಒಟ್ಟು ಆಡಳಿತವೇ ಜನರಿಗೋಸ್ಕರವಾಗಿರುವಾಗ ನಾವು ಆ ಜನಾರೋಗ್ಯಕ್ಕಾಗಿ ಸ್ಪಂದಿಸಲೇಬೇಕು, ಅಹರ್ನಿಶಿ ದುಡಿಯಲೇಬೇಕು ಎನ್ನುತ್ತಿದ್ದಾರೆ.’

*

ಳೆದ ಬಾರಿ ಅಂದರೆ ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ವಾರಿಯರ್ ಎಂದರೆ ಬಹುತೇಕ ಎಲ್ಲರಿಗೂ ನೆನಪಿಗೆ ಬರ್ತಿದ್ದದ್ದೇ ಡಾಕ್ಟರ್, ನರ್ಸ್ ಮತ್ತು ಆಶಾ ವರ್ಕರ್​ಗಳು. ಎಲ್ಲರ ಗಮನ, ವರದಿ, ಪ್ರಶಂಸೆ ಮತ್ತು ಪುರಸ್ಕಾರಗಳು ಅಷ್ಟೇ ಜನರತ್ತ ಕೇಂದ್ರೀಕರಿಸಿದ್ದಾಗ ನನ್ನ ಇಲಾಖೆಯಲ್ಲಿ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಯಾಗಿರುವ ಸಹೋದ್ಯೋಗಿ ಸ್ನೇಹಿತರೊಬ್ಬರು “ನಾವೇನು ಪಾಪ ಮಾಡಿದ್ದೀವಿ ಸರ್, ನಾವೂ ಮನೆ ಮಕ್ಕಳನ್ನು ಬಿಟ್ಟು ಬಂದು ಕೊರೋನಾ ಕೆಲಸ ಮಾಡಿಲ್ವಾ, ಪಿಪಿಇ ಕಿಟ್ ಹಾಕಿಕೊಂಡು ಆರ್ಟಿಪಿಸಿಆರ್ ಲ್ಯಾಬ್ ನಲ್ಲಿ ಗಂಟೆಗಟ್ಟಲೇ ಕೆಲಸ ಮಾಡಿಲ್ವಾ?” ಎಂದು ಅಲವತ್ತುಕೊಂಡಿದ್ದರು.

“ಸರ್, ನಮ್ಮ  ಸಿಬ್ಬಂದಿಗಳಲ್ಲಿ ಇಂತಿಂತಹವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ನರ್ಸ್ ಆಗಿ ಹಗಲು ಇರುಳೂ ಕೆಲಸ ಮಾಡ್ತಿರುವ ನಾನು ಸ್ವತಃ  ನನ್ನ ತಾಯಿಗೇ ಕೊರೋನಾ ಬಂದು ಒದ್ದಾಡ್ತಿರುವಾಗ ಒಂದು ಆಕ್ಸಿಜನ್ ಬೆಡ್ ಕೊಡಿಸಲಾಗದೇ ಮನೆಯಲ್ಲೇ ಟ್ರೀಟ್ಮೆಂಟ್ ಕೊಡಿಸಿ ಅವರನ್ನು ಕಳೆದುಕೊಂಡೆ” ಅಂತ ನನ್ನ ಸಹೋದ್ಯೋಗಿ ಅತ್ತಾಗ ಅಸಹಾಯಕನಾದ ನಾನೂ ಹನಿಗಣ್ಣಾಗಿದ್ದೆ.

ನಿಜ. ನಮ್ಮ ಆರೋಗ್ಯ ಇಲಾಖೆಯಲ್ಲಿ ಸರಿಸುಮಾರು 270 ಕ್ಕೂ ಹೆಚ್ಚು ಹುದ್ದೆಗಳಿವೆ. ಇದರಲ್ಲಿ ಡಾಕ್ಟರ್, ಶುಶ್ರೂಷಕರು ಆದಿಯಾಗಿ ಪ್ರಯೋಗಶಾಲೆ, ಎಕ್ಸ್ ರೇ, ಸಿಟಿ ಸ್ಕ್ಯಾನ್, ವೈದ್ಯಕೀಯ ದಾಖಲೆ ಮೊದಲಾದ ವಿಭಾಗಗಳ ತಂತ್ರಜ್ಞರು, ಔಷಧ ಮತ್ತು ವೈದ್ಯಕೀಯ ಪರಿಕರಗಳ ದಾಸ್ತಾನು ನಿರ್ವಹಿಸುವ ಫಾರ್ಮಸಿ ಅಧಿಕಾರಿಗಳು, ಎಲೆಕ್ಟ್ರೀಷಿಯನ್, ಆಕ್ಸಿಜನ್ ನಿರ್ವಹಣೆ ಮೊದಲಾದ ತಾಂತ್ರಿಕ ಪರಿಣತರು, ಆಡಳಿತ ವಿಭಾಗದ ಸಹಾಯಕರು, ಸ್ವಚ್ಚತಾ ಸಿಬ್ಬಂದಿ, ಶವಾಗಾರದ ನೌಕರರು… ಹೀಗೆ ಹಲವು ಹಂತದ, ಶ್ರೇಣಿಯ ಅಧಿಕಾರಿ ನೌಕರರು ಸೇರಿಯೇ ಆರೋಗ್ಯ ಇಲಾಖೆ.

ಎಲ್ಲಾ ಇಲಾಖೆಗಳಲ್ಲಿಯಂತೆ ಇಲ್ಲೂ ಮಾನವ ಸಂಪನ್ಮೂಲದ ಕೊರತೆ. ಲಭ್ಯ ಇರುವವರಲ್ಲಿ ಕೆಲವರು ನಿವೃತ್ತಿ ಸಮೀಪದವರು, ಕೆಲವರು ಅನಾರೋಗ್ಯ ಪೀಡಿತರು, ಉಳಿದವರಲ್ಲಿ ಹಲವರು ವಯೋಸಹಜ ಆರೋಗ್ಯ ಏರುಪೇರಿನವರು. ಮಹಿಳೆಯರೇ ಹೆಚ್ಚಾಗಿ ಇರುವ ಹುದ್ದೆಗಳಲ್ಲಿ ಬಸಿರು ಬಾಣಂತನ ಸಂಬಂಧಿಕರ ಅನಾರೋಗ್ಯ ಮತ್ತು ಸಾಂಸಾರಿಕ ಒತ್ತಡದ ಕಾರಣಕ್ಕಾಗಿ ರಜೆ ಅಥವಾ ಗೈರು ಕೂಡಾ ಸಹಜವಷ್ಟೇ. ಹಾಗೆ ಕೊರತೆಯಾಗುವ ಸಿಬ್ಬಂದಿಗಳ ವ್ಯತ್ಯಯದ ನಡುವೆಯೂ ಯಾವುದೇ ಲೋಪವಾಗದಂತೆ ಒಂದು ವೈದ್ಯಕೀಯ ಸಂಸ್ಥೆಯನ್ನು ನಿರ್ವಹಿಸುವುದು ಪವಾಡವೇ ಸರಿ.

ಈ ಕೊರೋನಾ ಎಂಬ ಸಾಂಕ್ರಾಮಿಕ ರೋಗ ಬರುವ ಮುಂಚೆಯೂ ಹಲವು ಸಾಂಕ್ರಾಮಿಕ ರೋಗಗಳ ನಿಯಂತ್ರಣ, ರಾಷ್ಟ್ರೀಯ ಆರೋಗ್ಯ ಯೋಜನೆಗಳ ಸಮರ್ಪಕ ಅನುಷ್ಠಾನ, ಎಂದೂ ಬಿಡುವು ಕೊಡದ ಸಹಜ ಅನಾರೋಗ್ಯಗಳ ಶುಶ್ರೂಷೆ ಇವುಗಳಲ್ಲಿ ಸದಾ ನಿರತವಾಗಿರುವ ನಮ್ಮ ಇಲಾಖಾ ಸಿಬ್ಬಂದಿಗಳಿಗೆ ಹಗಲು ಇರುಳು ಎಂಬುದು ದಿನ ನಿತ್ಯದ ಪಾಳಿ. ಹಬ್ಬ ಹರಿದಿನ ಎಂಬುವವು ಬಿಡುವಿದ್ದರೆ ಮಾತ್ರ ಆಚರಿಸುವ ಆಚರಣೆ. ಕುಟುಂಬದ ಸಮಯ ಎಂಬುದು ಕರ್ತವ್ಯ ಮತ್ತು ನಿದ್ದೆಗಳ ಮಧ್ಯೆ ಬಿಡುವು ಸಿಕ್ಕರಷ್ಟೇ ಎಂಬಷ್ಟು ಪರಿಚಿತ ಆಗಂತುಕ!

nimma dhwanige namma dhwaniyu

ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಕೊರೋನಾ ಯೋಧರು

ಆಸ್ಪತ್ರೆಯೊಂದರ ಆಡಳಿತ ಕಚೇರಿ ಮತ್ತು ಔಷಧ ಪರಿಕರಗಳ ಉಗ್ರಾಣಗಳು ಸದಾ ಯುದ್ಧ ಸನ್ನದ್ಧ ಪರಿಸರದ ಬಿಡಾರಗಳು. ಮಾನವ ಮತ್ತಿತರ ಸಂಪನ್ಮೂಲಗಳ ಕೊರತೆ ಮತ್ತು ಅನುದಾನದ ಅಲಭ್ಯತೆಯ ನಡುವೆಯೂ ಎಲ್ಲಾ ಸರಿತೂಗಿಸಿಕೊಂಡು ಹೋಗುವ ಕೌಶಲದ ಈ ತಂತಿ ಮೇಲಿನ ನಡಿಗೆಯನ್ನು ಬಲ್ಲವರೇ ಬಲ್ಲರು. ವೈದ್ಯ ಮತ್ತು ವೈದ್ಯಕೀಯ ತಜ್ಞರ ಸೇವೆಯನ್ನು ಪಾಳಿಯಲ್ಲಿ ಪಡೆಯುವಂತೆ ನಿರ್ವಹಿಸುವ ಆಡಳಿತಾಧಿಕಾರಿಗಳು, ಶುಶ್ರೂಷಕರ ನೈರ್ಮಲ್ಯ ಸಿಬ್ಬಂದಿಗಳ ಪಾಳಿ ನಿರ್ವಹಿಸುವ ಶುಶ್ರೂಷಾಧೀಕ್ಷಕರು ನಿಜಕ್ಕೂ ಅಭಿನಂದನೀಯರು. ಆದರೆ ಉಂಟಾಗಬಹುದಾದ ಅಲ್ಪ ಪ್ರಮಾದ, ಮಾನವ ಸಹಜ ನಡೆಗೂ ಅವರೇ ಮೊದಲು ನಿಂದಿಸಲ್ಪಡುವವರು!

‘ಆಕ್ಸಿಜನ್ ಸಿಲೆಂಡರ್ ಖಾಲಿ ಆಗ್ತಿವೆ’, ‘ಆಸ್ಪತ್ರೆಯ ಅಡುಗೆ ಮನೆಯ ಗ್ಯಾಸ್ ಸಿಲೆಂಡರ್ ಇನ್ನೊಂದು ಎರಡು ದಿನ ಬರಬಹುದು’, ‘ಆಪರೇಷನ್ ಥಿಯೇಟರಿನ ಬಲ್ಬ್ ಬರ್ನ್ ಆಗಿದೆ’, ‘ಜನರೇಟರ್ ರಿಪೇರಿಗೆ ಬಂದಿದೆ’, ‘ಕರೆಂಟ್ ಬಿಲ್ ಲಕ್ಷಗಟ್ಟಲೆ ಬಂದಿದೆ’, ‘ಈ ಔಷಧ ಈಗಲೇ ತುರ್ತಾಗಿ ಬೇಕು’, ‘ ಪ್ರಯೋಗಶಾಲೆಗೆ ಇಂತಿಂತಹ ರಾಸಾಯನಿಕಗಳನ್ನು ತುರ್ತಾಗಿ ಸರಬರಾಜು ಮಾಡಿ’,  ಹೀಗೆ ತುರ್ತು ಅಗತ್ಯಗಳ, ಕೊರತೆಗಳ ಪಟ್ಟಿಗೆ ಕೊನೆ ಮೊದಲು ಎಂಬುದಿಲ್ಲ. ಅತ್ಯಗತ್ಯ ಎಂದು ಅವಸರಿಸುವಂತೆಯೂ ಇಲ್ಲ. ಎಲ್ಲದಕ್ಕೂ ನಿಯಮ, ಕಾನೂನು, ಕ್ರಮಬದ್ಧತೆ ಇರುವಾಗ ಅವುಗಳನ್ನು ಪಾಲಿಸುತ್ತಲೇ ವ್ಯತ್ಯಯ ಆಗದಂತೆ ಸಮಸ್ಥಿತಿಯನ್ನು ಸರಿದೂಗಿಸುವ ಕೌಶಲ ಇದೆಯಲ್ಲ ಅದು ಮಾನವ ಸಹಜ ಸಂವೇದನೆಗಳನ್ನೂ ಮರೆಸಿಬಿಡ್ತದೆ.

ಹಾಗಾಗಬಾರದು. ನಾವು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲರೂ ಸಂವಿಧಾನಬದ್ಧ ಕರ್ತವ್ಯ ಹೊಂದಿರುವವರು. ನಮ್ಮ ಒಟ್ಟು ಆಡಳಿತವೇ ಜನರಿಗೋಸ್ಕರವಾಗಿರುವಾಗ ನಾವು ಆ ಜನಾರೋಗ್ಯಕ್ಕಾಗಿ ಸ್ಪಂದಿಸಲೇಬೇಕು, ಅಹರ್ನಿಶಿ ದುಡಿಯಲೇಬೇಕು.‌ ಸಮಯದ ಮಿತಿ ಹಾಕಲಾಗದ ಈ ಕರ್ತವ್ಯ ಪ್ರಜ್ಞೆಗೆ ಅಡಿಯಾಳಾಗಿ ದುಡಿಯುತ್ತಿರುವ ಎಲ್ಲರೂ ವಾರಿಯರ್​ಗಳೇ. ಅಂತಹ ವಾರಿಯರ್​ಗಳೂ ಈ ಕೊರೋನಾ ಕಾಲದ ಅವಿರತ ಕೆಲಸದಲ್ಲಿ ಬಸವಳಿದು ಹೋಗಿದ್ದಾರೆ. ರೋಗಿಗಳಿಗೆ ಅವರದೇ ಸಹಾಯಕರು ಇಲ್ಲದ ಈ ಸಂದರ್ಭದಲ್ಲಿ ತಾವೇ ಪ್ರತಿ ರೋಗಿಯ ಸಹಾಯಕರೂ ಆಗಿ ಸೇವೆ ಸಲ್ಲಿಸಿ, ನಿಂದಿಸಿಕೊಂಡವರೂ ಇದ್ದಾರೆ! ಯಾವುದೇ ಅವಘಡಗಳಾಗದೇ ಎಲ್ಲವೂ ಸುಸೂತ್ರವಾಗಿ ನಡೆದು ಈ ವಿಷಮ ಪರಿಸ್ಥಿತಿ ಮುಕ್ತಾಯವಾಗಲಿ ಎಂದು ಸಂಕಲ್ಪಿಸಿ ದುಡಿಯುತ್ತಾ, ತಾವು ತಮ್ಮವರೂ ಕೊರೋನಾ ಸೋಂಕಿಗೆ ಬಲಿಯಾದವರು, ಬಲಿಯಾಗದೇ ಬಳಲಿ ಉಳಿದವರು ಮತ್ತೆ ಕೊಡವಿ ಎದ್ದು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

ಇದನ್ನೂ ಓದಿ : Health Workers : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ‘ನನ್ನ ಕೆನ್ನೆಗೆ ಬ್ಲೀಚ್ ಹಾಕಿ ತೊಳೆದುಬಿಟ್ಟೆ’

Published On - 12:05 pm, Tue, 11 May 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ