ಶಕ್ತಿ ಯೋಜನೆ ಕೆಲವೇ ತಿಂಗಳು ಅಷ್ಟೇ -ಮಹಿಳೆಯರಿಗೆ ಉಚಿತ ಬಸ್​ ಸೇವೆ ಕೊಡುವುದು ಸರ್ಕಾರಕ್ಕೆ ಸವಾಲಿನದ್ದಾಗಿದೆ

| Updated By: ಸಾಧು ಶ್ರೀನಾಥ್​

Updated on: Feb 12, 2024 | 4:33 PM

ಶಕ್ತಿ ಯೋಜನೆ - ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಜಾರಿಯಾದ ಮೊದಲ ಗ್ಯಾರಂಟಿ ಯೋಜನೆ. ಆದರೆ ಈ ಯೋಜನೆ ಯಶಸ್ವಿಯಾಗಿದೆ ಅಂತಾ ಸರಕಾರವೇನೋ ಹೇಳುತ್ತೆ. ಆದರೆ ಅದನ್ನು ಮುಂದಿನ ಬಹಳ ತಿಂಗಳುಗಳವರೆಗೆ ತೆಗೆದುಕೊಂಡು ಹೋಗೋದೇ ಸವಾಲಾಗಿದೆ. ಏಕೆಂದರೆ ಕೆಎಸ್ಸಾರ್ಟಿಸಿ ಹಲವಾರು ವರ್ಷಗಳಿಂದ ಹತ್ತಾರು ಸಮಸ್ಯೆಗಳಿಂದ ಕಂಗೆಟ್ಟುಹೋಗಿದೆ.

ಶಕ್ತಿ ಯೋಜನೆ ಕೆಲವೇ ತಿಂಗಳು ಅಷ್ಟೇ -ಮಹಿಳೆಯರಿಗೆ ಉಚಿತ ಬಸ್​ ಸೇವೆ ಕೊಡುವುದು ಸರ್ಕಾರಕ್ಕೆ ಸವಾಲಿನದ್ದಾಗಿದೆ
ಶಕ್ತಿ ಯೋಜನೆ ಫಲದಿಂದಾಗಿ ಏದುಸಿರು ಬಿಡುತ್ತಿವೆ ಸಾರಿಗೆ ಸಂಸ್ಥೆಗಳು
Follow us on

ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಶುರುವಾದ ಶಕ್ತಿ ಯೋಜನೆಯಿಂದ ಮಹಿಳೆಯರ ಓಡಾಟದ ಸಂಖ್ಯೆ ಹೆಚ್ಚಾಗಿದೆ. ಆದರೆ ಈ ಯೋಜನೆಯಿಂದಾಗಿ ಸುರಕ್ಷತೆ, ಸಮಯೋಚಿತ ಸಂಚಾರ ವ್ಯವಸ್ಥೆ ಸಂಕುಚಿತಗೊಂಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ನಿಶಕ್ತಗೊಳ್ಳುತ್ತಿವೆ. ಅಗತ್ಯ ಸಿಬ್ಬಂದಿ, ವಾಹನಗಳ ಅಲಭ್ಯತೆಯಿಂದ ಅದೆಷ್ಟೋ ಹಳ್ಳಿಗಳಿಗೆ ಬಸ್ ಸಂಚಾರವೇ ನಿಂತು ಹೋಗಿದೆ. ಹೀಗೆ ಬಲ ಕಳೆದುಕೊಂಡ ಸಾರಿಗೆ ಸಂಸ್ಥೆಗಳಿಗೆ ಈಗ ಶಕ್ತಿ ಯೋಜನೆ ಅನುಷ್ಠಾನವೇ ಸವಾಲಾಗಿ ಪರಿಣಮಿಸಿದೆ.

ಶಕ್ತಿ ಯೋಜನೆ – ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಜಾರಿಯಾದ ಮೊದಲ ಗ್ಯಾರಂಟಿ ಯೋಜನೆ. ಆದರೆ ಈ ಯೋಜನೆ ಯಶಸ್ವಿಯಾಗಿದೆ ಅಂತಾ ಸರಕಾರವೇನೋ ಹೇಳುತ್ತೆ. ಆದರೆ ಅದನ್ನು ಮುಂದಿನ ಬಹಳ ತಿಂಗಳುಗಳವರೆಗೆ ತೆಗೆದುಕೊಂಡು ಹೋಗೋದೇ ಸವಾಲಾಗಿದೆ. ಏಕೆಂದರೆ ಕೆಎಸ್ಸಾರ್ಟಿಸಿ ಹಲವಾರು ವರ್ಷಗಳಿಂದ ಹತ್ತಾರು ಸಮಸ್ಯೆಗಳಿಂದ ಕಂಗೆಟ್ಟುಹೋಗಿದೆ.

ರಾಜ್ಯದಲ್ಲಿರೋ ನಾಲ್ಕೂ ಸಾರಿಗೆ ಸಂಸ್ಥೆಗಳಲ್ಲಿ ಕಳೆದ 7 ವರ್ಷಗಳಿಂದ ಸಿಬ್ಬಂದಿ ನೇಮಕಾತಿಯೇ ನಡೆದಿಲ್ಲ. ಇನ್ನು ನಾಲ್ಕು ವರ್ಷಗಳಿಂದ ಬಿಎಂಟಿಸಿ ಕೆಲ ಬಸ್ ಖರೀದಿಸಿದ್ದು ಬಿಟ್ಟರೆ ಉಳಿದೆಡೆ ಒಂದೇ ಒಂದು ವಾಹನ ಖರೀದಿಸಿಲ್ಲ. ಆದರೆ, ಶಕ್ತಿ ಯೋಜನೆ ಅನುಷ್ಠಾನದ ನಂತರ ಪ್ರತಿದಿನ ಸಂಚರಿಸುವ ಪ್ರಯಾಣಿಕರ ಸಂಖ್ಯೆ 92 ಲಕ್ಷದಿಂದ 1.14 ಕೋಟಿ ದಾಟಿದೆ. ಹೀಗಾಗಿ ಇರುವ 23 ಸಾವಿರ ಬಸ್‌ಗಳಲ್ಲಿ ಪ್ರತಿ ದಿನ 500 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದು, ಡಕೋಟಾ ಬಸ್‌ಗಳು ಪ್ರಯಾಣಿಕರನ್ನು ಹೊತ್ತು ಸಾಗುತ್ತಿವೆ.

ಇದು ಜನರಿಗೆ ವಿಶೇಷವಾಗಿ ವಿದ್ಯಾರ್ಥಿಗಳ ಸಂಚಾರಕ್ಕೆ ಸಂಚಕಾರ ತಂದಿಟ್ಟಿದೆ. ಸಾಮರ್ಥ್ಯ ಮೀರಿ ಡಕೋಟಾ ಬಸ್‌ಗಳನ್ನು ಓಡಿಸುತ್ತಿರುವುದು ಸುರಕ್ಷಿತವೇ ಎಂಬ ಪ್ರಶ್ನೆ ಮೂಡಿದೆ. ಇನ್ನು ಶಾಲೆ ಆರಂಭ ಹಾಗೂ ಮುಕ್ತಾಯದ ಸಮಯದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ಹೆಚ್ಚುವರಿ ಬಸ್ ನೀಡಲು ವಾಹನಗಳೇ ಇಲ್ಲದ್ದರಿಂದ ದೊಡ್ಡಿಯಲ್ಲಿ ನಿಂತ ಕುರಿಗಳಂತೆ ಮಕ್ಕಳು, ವೃದ್ಧರು ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ ಎಂದು ಅಮೃತ ದೇಸಾಯಿ, ಮಾಜಿ ಶಾಸಕ ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: ಕೆರಗೋಡು ಹನುಮ ಧ್ವಜ ತೆರವು ಖಂಡಿಸಿ ನಾಳೆ ಮಂಡ್ಯ ಬಂದ್; ಇಂದು ಬಿಜೆಪಿ ನಿಲುವು ಪ್ರಕಟ, ಅಂತರ ಕಾಯ್ದುಕೊಂಡ ಜೆಡಿಎಸ್

ಇನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 124 ಅಂತರ ರಾಜ್ಯ ಸಾರಿಗೆಗಳನ್ನು ಸ್ಥಗಿತಗೊಳಿಸಿ ಜಿಲ್ಲಾ, ರಾಜ್ಯದೊಳಗಿನ ಕಾರ್ಯಾಚರಣೆಗೆ ಬಳಸಿಕೊಳ್ಳುವ ಅನಿವಾರ್ಯತೆ ಬಂದಿದೆ. ಹಬ್ಬದ ಸಂದರ್ಭ ಪ್ರಯಾಣಿಕರ ಸ್ಥಿತಿ ಹೇಳತೀರದು. ಕೊವಿಡ್ ಪೂರ್ವದಲ್ಲಿ ಓಡುತ್ತಿದ್ದ ಎಲ್ಲ ಷಡ್ಯೂಲ್ ಗಳಲ್ಲಿ ಈಗ ಬಸ್‌ಗಳು ಸಂಚರಿಸುತ್ತಿಲ್ಲ.

ಬಸ್, ಸಿಬ್ಬಂದಿ ಕೊರತೆ 2020ರಿಂದ 1,248 ಷಡ್ಯೂಲ್ ಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಅಂಥ ಊರುಗಳಿಗೆ ಪಕ್ಕದ ಊರಿನಿಂದ ತಿಳಿದಾಗಲೊಂದು ಬಸ್ ಓಡಿಸಲಾಗುತ್ತಿದೆ. ಬೆಳಗ್ಗೆ9 ರಿಂದ 10 ಹಾಗೂ ಸಂಜೆ 4.30ರಿಂದ 5.30ರವರೆಗೆ ಬಸ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಜನ ಪ್ರತಿಭಟನೆಗಳಿಯುತ್ತಿದ್ದಾರೆ. ಕೆಲ ಊರುಗಳಿಂದ 60 ಜನ ಪ್ರಯಾಣಿಸಬೇಕಿದ್ದ ಬಸ್‌ಗಳಲ್ಲಿ 140 ರಿಂದ 160 ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಎಂಬಂತೆ ಈಗ ಸಾರಿಗೆ ಇಲಾಖೆ 4,657 ಬಸ್‌ಗಳ ಖರೀದಿ ಹಾಗೂ 9,544 ಸಿಬ್ಬಂದಿ ನೇಮಕಕ್ಕೆ ಮುಂದಾಗಿದೆ. ಆದರೆ, ಇಲ್ಲಿ ಖರೀದಿಸುವ ಬಸ್‌ಗಳಿಗೆ ತಕ್ಕಂತೆ ಸಿಬ್ಬಂದಿ ನೇಮಕ ಆಗುತ್ತಿಲ್ಲ ಎಂಬ ಆಕ್ಷೇಪಗಳು ವ್ಯಕ್ತವಾಗಿವೆ.

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ 17 ಜಿಲ್ಲೆಗಳ 2,139 ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 6 ಜಿಲ್ಲೆಗಳ 45 ಗ್ರಾಮಗಳಿಗೆ ಈವರೆಗೆ ಬಸ್ ಸಾರಿಗೆ ಸೌಲಭ್ಯವನ್ನೇ ನೀಡಲಾಗಿಲ್ಲ. ಈ ಹಳ್ಳಿಗಳು ಖಾಸಗಿ ವಲಯದಲ್ಲಿವೆ, ಯೋಗ್ಯ ರಸ್ತೆಗಳಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಕಾರಣ ನೀಡಿದ್ದಾರೆ. ಹಾಗೆ ನೋಡಿದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಷ್ಟೊಂದು ಬಸ್‌ಗಳ ಕೊರತೆ ಇದ್ದಂತಿಲ್ಲ. ಆದರೆ ವಾಯುವ್ಯ ಕರ್ನಾಟಕ ರಸ್ತೆ ವಲಯದಲ್ಲಿ ಮಾತ್ರ ಸಮಸ್ಯೆ ಬಗೆಹರಿಯೋ ಯಾವ ಲಕ್ಷಣಗಳು ಕಂಡು ಬಾರದೇ ಇರೋದು ವಿಪರ್ಯಾಸವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:32 pm, Mon, 12 February 24