ಮಳೆ ಕೈಕೊಟ್ಟರೂ ಕೈಹಿಡಿದಿದೆ ನೇರಳೆ ಗೋಧಿ! ಇದ್ಯಾವ ಸೀಮೆ ಗೋಧಿ?

| Updated By: ಸಾಧು ಶ್ರೀನಾಥ್​

Updated on: Mar 12, 2024 | 4:58 PM

Dharwad Purple Wheat: ನೋಡಲು ಇದು ಸಾಮಾನ್ಯ ಗೋಧಿ ಅನ್ನಿಸಿದರೂ ಕೈಯಲ್ಲಿ ಹಿಡಿದು ನೋಡಿದರೆ ವಿಚಿತ್ರವೆನಿಸುತ್ತದೆ. ಇದು ಪೂರ್ವ ಆಫ್ರಿಕಾದಲ್ಲಿ ಬೆಳೆಯೋ ಗೋಧಿ. ನೋಡಲು ನೇರಳೆ ಬಣ್ಣದಿಂದ ಕೂಡಿರೋ ಈ ಗೋಧಿಯನ್ನು ಇಲ್ಲಿನ ಮಣ್ಣಲ್ಲಿ ಬೆಳೆಯೋದು ಕಷ್ಟ. ಆದರೂ ಇಂಥದ್ದೊಂದು ಪ್ರಯತ್ನವನ್ನು ಮಾಡಿರೋ ಶಂಕರಗೌಡ ಪಾಟೀಲ್, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಆದರೆ ಅಚ್ಚರಿಯ ಸಂಗತಿ ಅಂದರೆ ಈ ಯಶಸ್ಸಿನ ಹಿಂದೆ ಇರೋದು ವೃತ್ತಿಯಲ್ಲಿ ವಕೀಲ ಹಾಗೂ ಉಪನ್ಯಾಸಕನಾಗಿರೋ ಮೃತ್ಯುಂಜಯ ವಸ್ತ್ರದ್ ಅನ್ನೋ ವ್ಯಕ್ತಿ.

ಮಳೆ  ಕೈಕೊಟ್ಟರೂ ಕೈಹಿಡಿದಿದೆ ನೇರಳೆ ಗೋಧಿ! ಇದ್ಯಾವ ಸೀಮೆ ಗೋಧಿ?
ಮಳೆ ಇಲ್ಲದೇ ಬಹುತೇಕ ಬೆಳೆಗಳೆಲ್ಲ ಕೈಕೊಟ್ಟಿವೆ, ಆದರೆ ನೇರಳೆ ಗೋಧಿ ಕೈಹಿಡಿದಿದೆ
Follow us on

ಇದೀಗ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಮುಂಗಾರು ಮತ್ತು ಹಿಂಗಾರು ಮಳೆ ಇಲ್ಲದೇ ಇರೋ ಕಾರಣಕ್ಕೆ ಬಹುತೇಕ ಬೆಳೆಗಳೆಲ್ಲ ಕೈಕೊಟ್ಟಿವೆ. ಇಂಥದ್ದರ ನಡುವೆಯೇ ಧಾರವಾಡದ ರೈತನೊಬ್ಬ ವಿದೇಶದ ಗೋಧಿಯೊಂದನ್ನು ಬೆಳೆದು ಅಚ್ಚರಿ ಮೂಡಿಸಿದ್ದಾರೆ. ಅಷ್ಟೇ ಅಲ್ಲ, ಎಲ್ಲರೂ ಅಚ್ಚರಿಪಡುವಂಥ ಇಳುವರಿ ಕೂಡ ಬಂದಿದೆ. ಅಂಥ ವಿಭಿನ್ನ ಬಗೆಯ ಹಾಗೂ ವಿದೇಶಿ ಗೋಧಿ ಬೆಳೆದ ರೈತನಾರು? ಇಲ್ಲಿದೆ ನೋಡಿ… ಇದೀಗ ರಾಜ್ಯದಲ್ಲಿ ಎಲ್ಲಿಯೇ ಹೋದರೂ ಕಾಣೋದು ಬೆಳೆಯೇ ಇಲ್ಲದ ಭಣಗುಟ್ಟುವ ಒಣ ಭೂಮಿ. ಇಂಥ ಪರಿಸ್ಥಿತಿ ನಡುವೆಯೇ ಇಲ್ಲಿರುವ ಬೆಳೆಯನ್ನು ಒಮ್ಮೆ ನೋಡಿ. ಆಕಾಶದತ್ತ ನೋಡುತ್ತಿರೋ ದಟ್ಟವಾದ ಗೋಧಿ ಬೆಳೆ ಇದು. ಇಂಥ ಬಿರುಬೇಸಿಗೆಯಲ್ಲಿಯೂ ಇಂಥ ಬೆಳೆ ಬೆಳೆದಿರುವುದು ಧಾರವಾಡ ತಾಲೂಕಿನ ಕಣವಿ ಹೊನ್ನಾಪುರ ಗ್ರಾಮದ ಶಂಕರಗೌಡ ಪಾಟೀಲ್.

ನೋಡಲು ಇದು ಸಾಮಾನ್ಯ ಗೋಧಿ ಅನ್ನಿಸಿದರೂ ಕೈಯಲ್ಲಿ ಹಿಡಿದು ನೋಡಿದರೆ ವಿಚಿತ್ರವೆನಿಸುತ್ತದೆ. ಹೌದು; ಇದು ಈ ದೇಶದಲ್ಲಿ ಬೆಳೆಯೋ ಗೋಧಿಯಲ್ಲ. ಬದಲಿಗೆ ಪೂರ್ವ ಆಫ್ರಿಕಾದಲ್ಲಿ ಬೆಳೆಯೋ ಗೋಧಿ. ನೋಡಲು ನೇರಳೆ ಬಣ್ಣದಿಂದ ಕೂಡಿರೋ ಈ ಗೋಧಿಯನ್ನು ಇಲ್ಲಿನ ಮಣ್ಣಲ್ಲಿ ಬೆಳೆಯೋದು ಕಷ್ಟ. ಆದರೂ ಇಂಥದ್ದೊಂದು ಪ್ರಯತ್ನವನ್ನು ಮಾಡಿರೋ ಶಂಕರಗೌಡ ಪಾಟೀಲ್, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

Also Read: Black Wheat Flour – ಕಪ್ಪು ಗೋಧಿ ಹಿಟ್ಟಿನಿಂದ ಈ ಸಮಸ್ಯೆಗಳಿಗೆ ಬೈ ಬೈ ಹೇಳಿ!

ಆದರೆ ಅಚ್ಚರಿಯ ಸಂಗತಿ ಅಂದರೆ ಈ ಯಶಸ್ಸಿನ ಹಿಂದೆ ಇರೋದು ವೃತ್ತಿಯಲ್ಲಿ ವಕೀಲ ಹಾಗೂ ಉಪನ್ಯಾಸಕನಾಗಿರೋ ಮೃತ್ಯುಂಜಯ ವಸ್ತ್ರದ್ ಅನ್ನೋ ವ್ಯಕ್ತಿ. ಧಾರವಾಡದ ಜೆ ಎಸ್ ಎಸ್ ಕಾಲೇಜಿನಲ್ಲಿ ಕಾನೂನು ಪಾಠ ಮಾಡುವ ಇವರು ಮೂಲತಃ ಕೃಷಿಕರು. ಗದಗ್ ಜಿಲ್ಲೆಯ ಮೂಲದವರಾಗಿರೋ ವಸ್ತ್ರದ್ ಅವರಿಗೆ ಇಂಥ ಹೊಸ ಬಗೆಯ ತಳಿಯ ಬೆಳೆಯನ್ನು ಬೆಳೆಯೋದು ಹವ್ಯಾಸ.

ಈ ಬಾರಿ ತಮ್ಮ ಹೊಲದಲ್ಲಿ ನೀರಿನ ಸಮಸ್ಯೆ ಇರೋದ್ರಿಂದ ಅವರು ಇಲ್ಲಿಯೇ ಇರೋ ಶಂಕರಗೌಡ ಅವರ ಹೊಲವನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿನ 20 ಗುಂಟೆ ಜಮೀನಿನಲ್ಲಿ ಈ ಬೆಳೆಯನ್ನು ಬೆಳೆದು ಯಶಸ್ವಿಯಾಗಿದ್ದಾರೆ. ಈ ಸಲ ಮಳೆಯಾಗದೇ ಇರೋದ್ರಿಂದ ಬೋರ್​​ವೆಲ್​ ನಲ್ಲಿ ಹೆಚ್ಚಿಗೆ ನೀರು ಕೂಡ ಇಲ್ಲ. ಆದರೆ ಅತ್ಯಂತ ಕಡಿಮೆ ನೀರಿನಲ್ಲೇ ಈ ಗೋಧಿ ಬೆಳೆಯಲಾಗಿದ್ದು, ಉತ್ತಮ ಫಸಲು ಕೂಡ ಬಂದಿದೆ ಎಂದು ಮೃತ್ಯುಂಜಯ ವಸ್ತ್ರದ, ಹವ್ಯಾಸಿ ತಳಿ ತಜ್ಞ ಹೇಳುತ್ತಾರೆ.

ಇಂಥ ಅನೇಕ ಪ್ರಯೋಗಗಳನ್ನು ಮಾಡುತ್ತಿರೋ ಮೃತ್ಯುಂಜಯ ಅವರಿಗೆ ಶಂಕರಗೌಡ ಸಾಥ್ ನೀಡಿದ್ದಾರೆ. ಈ ತಳಿಗೆ ಪರ್ಪಲ್ ವ್ಹೀಟ್ ಅಂತಾ ಕರೆಯಲಾಗುತ್ತದೆ. ಈ ಗೋಧಿಯ ಬೀಜಗಳನ್ನು ಚಂಡೀಗಢದ ಮೊಹಾಲಿಯಿಂದ ತರಿಸಿರೋ ಮೃತ್ಯುಂಜಯ ವಸ್ತ್ರದ್ ಅದನ್ನು ಶಂಕರಗೌಡ ಅವರಿಗೆ ನೀಡಿ, ಬೆಳೆಯನ್ನು ಸಂರಕ್ಷಿಸೋದರ ಬಗ್ಗೆಯೂ ಮಾಹಿತಿ ನೀಡದ್ದಾರೆ.

ಸುಮಾರು ಐದು ಕೆಜಿ ಗೋಧಿ ಬೀಜವನ್ನು ಬಿತ್ತಿದ ಬಳಿಕ ನಿತ್ಯ ತೆಗೆದುಕೊಳ್ಳಬೇಕಾಗಿದ್ದ ಕಾಳಜಿಯನ್ನು ಕೂಡ ತೆಗೆದುಕೊಳ್ಳಲಾಯಿತು. ಹಿಂಗಾರು ಹಂಗಾಮಿನಲ್ಲಿ ಸ್ವಲ್ಪ ತಡವಾಗಿಯೇ ಬಿತ್ತನೆ ಮಾಡಲಾಯಿತು. ಬಿತ್ತನೆ ಮಾಡಿದ ಬಳಿಕ ಮಳೆ ಕೈಕೊಟ್ಟಿದ್ದರಿಂದ ಈ ಗೋಧಿ ಬೆಳೆಯುತ್ತೋ ಇಲ್ಲವೋ ಅನ್ನೋ ಆತಂಕವೂ ಇತ್ತು. ಜೊತೆಗೆ ಬೋರ್​​ವೆಲ್ ನಲ್ಲಿ ನೀರು ಕೂಡ ಕಡಿಮೆಯಾಗಿತ್ತು. ಅಚ್ಚರಿ ಎಂದರೆ ಅತಿ ಕಡಿಮೆ ನೀರಿನಲ್ಲಿಯೇ ಈ ಪರ್ಪಲ್ ಗೋಧಿ ಅದ್ಭುತ ಇಳುವರಿ ಬಂದಿರೋದು ರೈತನಿಗೂ ಖುಷಿ ತಂದಿದೆ.

ಇನ್ನು ಆರೋಗ್ಯಕ್ಕೆ ಕೂಡ ತುಂಬಾನೇ ಒಳ್ಳೆಯದು ಎನ್ನಲಾದ ಈ ಗೋಧಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೂ ಇದೆಯಂತೆ. ಹೀಗಾಗಿಯೇ ಇದನ್ನು ಈ ಭಾಗದಲ್ಲಿ ಬೆಳೆಯುವ ಸಾಹಸಕ್ಕೆ ಕೈ ಹಾಕಿರೋ ಈ ಇಬ್ಬರ ಪ್ರಯತ್ನಕ್ಕೆ ಈಗ ಒಳ್ಳೆ ಯಶಸ್ಸು ಸಿಕ್ಕಿದೆ. ಬರಗಾಲದಲ್ಲಿಯೂ ಬೆಳೆಯಬಲ್ಲ ಇಂಥ ಗೋಧಿಯನ್ನು ಮುಂದಿನ ದಿನಗಳಲ್ಲಿ ಅನೇಕ ರೈತರು ಬೆಳೆಯಲು ಮುಂದೆ ಬಂದಿರೋದು ಇವರ ಯಶಸ್ಸಿನಿಂದ ಆಗಿರೋ ಲಾಭ. ಒಟ್ಟಿನಲ್ಲಿ ಬರಗಾಲದಲ್ಲಿಯೂ ಇಂಥದ್ದೊಂದು ಗೋಧಿ ಬೆಳೆಯಲು ರೈತರಲ್ಲಿ ಭರವಸೆ ಮೂಡಿಸುವಲ್ಲಿ ಇವರು ಯಶಸ್ವಿಯಾಗಿದ್ದಂತೂ ಸತ್ಯ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ