Kantara Irkigedde Falls: ‘ಕಾಂತರಾ’ ಚಿತ್ರದಲ್ಲಿರುವ ಜಲಪಾತಕ್ಕೆ ಜೀವಕಳೆ, ಧುಮ್ಮಿಕ್ಕಿ ಹರಿಯುತ್ತಿರುವ ಇರ್ಕಿಗದ್ದೆ ಫಾಲ್ಸ್!

Monsoon 2023: ಬಂಡೆಯಿಂದ ಬಂಡೆಗೆ ಧುಮ್ಮಿಕ್ಕಿ ಹರಿಯುವ ಜಲಪಾತದ ಮೋಹಕ ನೋಟ ಅನುಪಮ. ಇದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದ, ಹೊಸಂಗಡಿ ತೊಂಬಟ್ಟು ಸಮೀಪದ ಇರ್ಕಿಗದ್ದೆ ಜಲಪಾತದ ದೃಶ್ಯ.

Kantara Irkigedde Falls: ‘ಕಾಂತರಾ’ ಚಿತ್ರದಲ್ಲಿರುವ ಜಲಪಾತಕ್ಕೆ ಜೀವಕಳೆ, ಧುಮ್ಮಿಕ್ಕಿ ಹರಿಯುತ್ತಿರುವ ಇರ್ಕಿಗದ್ದೆ ಫಾಲ್ಸ್!
‘ಕಾಂತರಾ’ ಚಿತ್ರದಲ್ಲಿರುವ ಜಲಪಾತಕ್ಕೆ ಜೀವಕಳೆ
Follow us
| Updated By: ಸಾಧು ಶ್ರೀನಾಥ್​

Updated on:Jul 24, 2023 | 9:51 AM

ದಟ್ಟ ಹಸಿರು ಕಾನನದ ಮಧ್ಯದಲ್ಲಿ ಭೋರ್ಗರೆಯುತ್ತಾ ಮೇಲಿಂದ ಕೆಳಗೆ ಧುಮುಕುವ ಹಾಲಿನ ತೊರೆ. ನಿಶ್ಶಬ್ದ, ನೀರವ ವಾತಾವರಣದ ನಡುವೆ ಬಂಡೆಯಿಂದ ಧುಮ್ಮಿಕ್ಕುವ ಜಲಧಾರೆ ಕಿವಿಗೆ ಇಂಪು ನೀಡುವ ಸದ್ದಿನೊಂದಿಗೆ ನರ್ತಿಸುತ್ತಾ ಬಂಡೆಯಿಂದ ತಗ್ಗಿನ ಬಂಡೆಗೆ ಧುಮ್ಮಿಕ್ಕಿ ಮುಂದುವರಿಯುವ ಮೋಹಕ ನೋಟ ಅನುಪಮ. ಇದು ಹೊಸಂಗಡಿ ಸಮೀಪದ ಜಲಪಾತವೊಂದರ ಸೊಬಗು. ಹೌದು ಉಡುಪಿ (Udupi) ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದ ತೊಂಬಟ್ಟು ಸಮೀಪದ ಇರ್ಕಿಗದ್ದೆ ಜಲಪಾತದ ದೃಶ್ಯವಿದು (Kantara Irkigedde Water Falls).

ಈ ಬಾರಿ ಮಳೆಗಾಲ (Monsoon 2023) ವಿಳಂಬವಾಗಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಲಪಾತ ಮೈದುಂಬಿ ಕೊಂಡು ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ. ಕುದುರೆಮುಖ ವನ್ಯಜೀವಿ ವಿಭಾಗದ ಆಗುಂಬೆ ವಲಯ ವ್ಯಾಪ್ತಿಯ ಈ ಜಲಪಾತ ಹೊಸಂಗಡಿಗೆ ಅತಿ ನಿಕಟ. ಹೊಸಂಗಡಿ ಭಾಗೆಮನೆ ಸೇತುವೆ ದಾಟಿ ಕಾಡಿನಲ್ಲಿ 1-2 ಕಿ.ಮೀ. ಪಯಣಿಸಿದರೆ ಕಾಡಿನ ಹಾದಿಗೆ ಹೊಂದಿಕೊಂಡಿದೆ. ಬಹಳ ವರ್ಷ ಅಜ್ಞಾತವಾಗಿದ್ದ ಈ ಜಲಪಾತದ ಇತ್ತೀಚಿನ ದಿನಗಳಲ್ಲಿ ಬ್ಲಾಗರ್ಸ್ಗಳು ಮತ್ತು ಯೂಟ್ಯೂಬರ್ಸ್ ಗಳಿಗೆ ಸ್ವರ್ಗವಾಗಿದೆ. ಅದರಲ್ಲೂ ದೇಶ ವಿದೇಶಗಳಲ್ಲಿ ಮನ್ನಣೆ ಗಳಿಸಿದ ಕಾಂತಾರ ಸಿನಿಮಾದ ಒಂದು ದೃಶ್ಯ ಇಲ್ಲಿ ಚಿತ್ರೀಕರಣವಾದ ಬಳಿಕವಂತು ನಿಮಗೆ ಪ್ರವಾಸಿಗರ (Tourism) ದಂಡೆ ಹರಿದು ಬರುತ್ತಿದೆ.

ಹೊಸಂಗಡಿ ದಾಸಿಕಾನು ಎಂಬಲ್ಲಿ ವಾರಾಹಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿದ ಬಳಿಕ ಜಲಪಾತ ಆಕರ್ಷಣೇಯ ಕೇಂದ್ರಬಿಂದುವಾಗಿದೆ. ಆಗುಂಬೆ, ಸೋಮೇಶ್ವರ ಅಭಯಾರಣ್ಯ ತಪ್ಪಲಿನಿಂದ ಹರಿದು ಬರುವ ಪ್ರಕೃತಿದತ್ತ ನೀರು ವಾರಾಹಿ ನದಿಗೆ ಸೇರಿ ಅಲ್ಲಿಂದ ದಟ್ಟಾರಣ್ಯದ ಮೂಲಕ ಹೊಸಂಗಡಿಯಲ್ಲಿ ಮತ್ತೆ ವಾರಾಹಿ ನದಿಗೆ ಸೇರುತ್ತದೆ. ನದಿ ನೀರಿನ ತೊರೆ ಇರ್ಕಿಗದ್ದೆಯಲ್ಲಿ ಸೃಷ್ಟಿಸಿರುವ ಮೋಹಕತೆ ಮಾತ್ರ ಅವರ್ಣನೀಯ.

ಕಾಡಿನ ಸಂಧಿನಿಂದ ಬೋರ್ಗೆಯುತ್ತಾ ಮುನ್ನುಗ್ಗುವ ನೀರು ಇರ್ಕಿಗದ್ದೆ ಹಳ್ಳದ ಸಮೀಪ ತಗ್ಗಿನಲ್ಲಿ ವಿಸ್ತರಿಸಿರುವ ಕಲ್ಲುಬಂಡೆಯ ಮೂಲಕ ಕೆಳಗಿಳಿದು ಮುನ್ನುಗ್ಗುವಿಕೆಯಲ್ಲಿ ಜಲಪಾತ ಸೃಷ್ಟಿಯಾಗಿದೆ. ಬಂಡೆಯಲ್ಲಿ ಹಾಲಿನಂತೆ ಇಳಿಯುವ ನೀರು ಮೈಮನ ಪುಳಕಿತಗೊಳ್ಳುವಂತೆ ಮಾಡುತ್ತಿದೆ. ಆದರೆ ಇತ್ತಿಚೀಗಿನ ದಿನಗಳಲ್ಲಿ ಇಲ್ಲಿಗೆ ಬರುತ್ತಿರುವ ಪ್ರವಾಸಿಗರು ಇಲ್ಲಿ ಸ್ವೇಚ್ಛೆಯನ್ನು ಮೆರೆಯುತ್ತಿರುವುದು ಅರಣ್ಯ‌ ಇಲಾಖೆಗೆ ದೊಡ್ಡ ತಲೆ ನೋವಾಗಿದೆ ದಿನಗಳಲ್ಲಿ.

ಒಟ್ಟಾರೆಯಾಗಿ ಮಳೆಗಾಲದ ಮೂರು ತಿಂಗಳು ಮೂಲಕ ಕಾಲ ಮಾತ್ರ ನೋಡಲು ಸಿಗುವ ಈ ಜಲಪಾತಕ್ಕೆ ಸಾಗುವ ಹಾದಿ ಕೆಸರುಮಯವಾಗಿದೆ. ಮಳೆ ಅಬ್ಬರಕ್ಕೆ ಮಣ್ಣಿನ ಹಾದಿ ನಲುಗಿದ್ದು, ವಾಹನಗಳು ಜಾರುತ್ತಿವೆ. ಆದಷ್ಟು ಜಾಗರೂಕತೆಯಿಂದ ಬಂದು ಪ್ರಕೃತಿಗೆ ಯಾವುದೇ ರೀತಿಯ ಹಾನಿ ಉಂಟು ಮಾಡದಂತೆ ಜಲಪಾತದ ನೋಟ ಸವಿಯಬಹುದಾಗಿದೆ

ಉಡುಪಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 9:18 am, Mon, 24 July 23