ದಶಕದ ನಂತರ ಕಲ್ಯಾಣ ಕರ್ನಾಟಕದಲ್ಲಿ ಸಂಪುಟ ಸಭೆ: ಈ ಹಿಂದಿನ​ ನಿರ್ಣಯಗಳಲ್ಲಿ ಜಾರಿಯಾಗಿದ್ದೆಷ್ಟು? ಇಲ್ಲಿದೆ ಸಮಗ್ರ ಮಾಹಿತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಮತ್ತೊಮ್ಮೆ ದಶಕದ ನಂತರ ಸಚಿವ ಸಂಪುಟ ಸಭೆಯನ್ನು ನಡೆಸಲು ಮುಂದಾಗಿದೆ. ಮಂಗಳವಾರ ಕಲಬುರಗಿ ನಗರದಲ್ಲಿ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಈ ಸಂದರ್ಭದಲ್ಲಿ, ಹಿಂದೆ ಯಾವಗೆಲ್ಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು? ಆಗ ಕೈಗೊಂಡಿದ್ದ ನಿರ್ಣಯಗಳಲ್ಲಿ ಏನೇನು ಅನುಷ್ಠಾನಗೊಂಡಿವೆ ಎಂಬುದರ ಇಣುಕುನೋಟ ಇಲ್ಲಿದೆ.

ದಶಕದ ನಂತರ ಕಲ್ಯಾಣ ಕರ್ನಾಟಕದಲ್ಲಿ ಸಂಪುಟ ಸಭೆ: ಈ ಹಿಂದಿನ​ ನಿರ್ಣಯಗಳಲ್ಲಿ ಜಾರಿಯಾಗಿದ್ದೆಷ್ಟು? ಇಲ್ಲಿದೆ ಸಮಗ್ರ ಮಾಹಿತಿ
ದಶಕದ ನಂತರ ಕಲ್ಯಾಣ ಕರ್ನಾಟಕದಲ್ಲಿ ಸಂಪುಟ ಸಭೆ
Follow us
| Updated By: ಗಣಪತಿ ಶರ್ಮ

Updated on:Sep 16, 2024 | 2:28 PM

ಕೊಪ್ಪಳ, ಸೆಪ್ಟೆಂಬರ್ 16: ದಶಕದ ನಂತರ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಕಲಬುರಗಿ ನಗರದಲ್ಲಿ ಮಂಗಳವಾರ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ಆದರೆ, ಕೇವಲ ಸಚಿವ ಸಂಪುಟ ಸಭೆಯಿಂದ ಆ ಭಾಗದ ಅಭಿವೃದ್ದಿಯಾಗುತ್ತದೆಯೇ ಎಂಬುದೇ ಸದ್ಯದ ಪ್ರಶ್ನೆ.

ಯಾಕೆಂದರೆ, ಈ ಹಿಂದೆ ಬಿಜೆಪಿ ಸರ್ಕಾರ ನಾಲ್ಕು ಬಾರಿ, ಸಿದ್ದರಾಮಯ್ಯ ಸರ್ಕಾರ ಒಂದು ಬಾರಿ ಸೇರಿದಂತೆ ಒಟ್ಟು ಆರು ಬಾರಿ ಸಚಿವ ಸಂಪುಟ ಸಭೆಗಳು ನಡೆದಿದ್ದವು. ಪ್ರತಿ ಸಚಿವ ಸಂಪುಟದಲ್ಲೂ ಕಲ್ಯಾಣ ಕರ್ನಾಟಕಕ್ಕೆ ಸಾವಿರಾರು ಕೋಟಿ ರೂಪಾಯಿ ಯೋಜನೆಗಳನ್ನು ಜಾರಿಗೊಳಿಸವುದಾಗಿ ನಿರ್ಣಯ ಕೈಗೊಳ್ಳಲಾಗಿತ್ತು. ಘೋಷಣೆಗಳನ್ನೂ ಮಾಡಲಾಗಿತ್ತು. ಖಾಲಿಯಿರುವ ಹುದ್ದೆಗಳ ಭರ್ತಿ ಮಾಡುವ ಆಶ್ವಾಸನೆ ನೀಡಲಾಗಿತ್ತು. ಆದರೆ, ಆಶ್ವಾಸನೆಗಳಲ್ಲಿ ಈಡೇರಿದ್ದು ಮಾತ್ರ ಅಲ್ಪಸ್ವಲ್ಪ. ಹೀಗಾಗಿ ಕಾಟಾಚಾರಕ್ಕೆ ಮಾತ್ರ ಸಚಿವ ಸಂಪುಟ ಸಭೆ ನಡೆಸಬಾರದು, ಸಭೆಯ ನಿರ್ಣಯಗಳು ಜಾರಿಯಾಗಬೇಕು ಎಂಬುದು ಕಲ್ಯಾಣ ಕರ್ನಾಟಕ ಭಾಗದ ಜನರ ಆಗ್ರಹವಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ಇತಿಹಾಸ

1947 ರಲ್ಲಿ ಬಾರತಕ್ಕೆ ಸ್ವಾಂತಂತ್ರ ಬಂದರೂ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮಾತ್ರ ಸ್ವಾತಂತ್ರ ಸಿಕ್ಕಿರಲಿಲ್ಲ. ಇದಕ್ಕೆ ಕಾರಣ ಈ ಭಾಗ ಹೈದ್ರಾಬಾದಿನ ನಿಜಾಮನ ಆಳ್ವಿಕೆಗೆ ಒಳಪಟ್ಟಿತ್ತು. ಆದರೆ 1948 ರ ಸಪ್ಟೆಂಬರ್ 17 ರಂದು ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್​ರ ಪ್ರಯತ್ನದ ಪಲವಾಗಿ ಹೈದ್ರಾಬಾದ್ ಕರ್ನಾಟಕ, ಅಂದರೆ ಇಂದಿನ ಕಲ್ಯಾಣ ಕರ್ನಾಟಕ ಭಾಗ ವಿಮೋಚನೆಯಾಯಿತು.

ನಂತರ ಭಾಷೆಯ ಆಧಾರದ ಮೇಲೆ ರಾಜ್ಯಗಳ ಸ್ಥಾಪನೆ ಮಾಡುವ ಉದ್ದೇಶದಿಂದ ಫಜಲ ಅಲಿ ನೇತೃತ್ವದಲ್ಲಿ 1953 ರಲ್ಲಿ ಆಯೋಗವೊಂದನ್ನು ರಚಿಸಲಾಯಿತು. ಅದು 1955 ರಲ್ಲಿ ತನ್ನ ವರದಿಯನ್ನು ಕೇಂದ್ರಸರ್ಕಾರಕ್ಕೆ ಸಲ್ಲಿಸಿತ್ತು. ವರದಿಯ ಶಿಫಾರಸ್ಸಿನ ಪ್ರಕಾರ 1956 ನವೆಂಬರ್ ಒಂದರಂದು, ದೇಶದಲ್ಲಿ 16 ರಾಜ್ಯಗಳು ಸ್ಥಾಪನೆಯಾದವು. ಅದರಲ್ಲಿ ಹೊಸ ಮೈಸೂರು ರಾಜ್ಯ ಕೂಡ ಒಂದು. ಆವಾಗ ಕನ್ನಡ ಮಾತನಾಡುವ ಮುಂಬೈ ವಿಭಾಗದ ಬಿಜಾಪುರ, ಬೆಳಗಾವಿ, ಧಾರವಾಡ, ಕಾರವಾರ, ಹಾಗೂ ಹೈದ್ರಾಬಾದ ವಿಭಾಗದಿಂದ ಕಲಬುರಗಿ, ಬೀದರ, ರಾಯಚೂರ, ಇಂದಿನ ಬಳ್ಳಾರಿ, ಕೊಪ್ಪಳ, ಹಾಗೂ ಯಾದಗೀರ ಜಿಲ್ಲೆಗಳನ್ನು ಸೇರಿಸಲಾಯಿತು.

Karnataka Cabinet meeting in Kalaburagi after a decade: How much implemented previous resolutions, Here is full details in Kannada

ಈ ಜಿಲ್ಲೆಗಳು ಮೈಸೂರು ರಾಜ್ಯದಲ್ಲಿ ಸೇರಿದರೂ ಸಮಸ್ಯೆಗಳ ಗಂಟು ಮಾತ್ರ ಕರಗಲಿಲ್ಲ. ಪ್ರತಿನಿತ್ಯ ಒಂದಿಲ್ಲೊಂದು ಸಮಸ್ಯೆಯಲ್ಲಿಯೇ ಮುಳುಗಿತು. ಮೊದಲೇ ಹೈದ್ರಾಬಾದ್ ನಿಜಾಮನ ಆಳ್ವಿಕೆಯಲ್ಲಿ ಹಿಂದುಳಿದಿದ್ದ ಈ ಬಾಗ ಸ್ವಾತಂತ್ರ್ಯ ನಂತರದಲ್ಲಿಯಾದರೂ ಅಭಿವೃದ್ದಿಯಾಗುತ್ತದೆ ಎನ್ನುವ ಇಲ್ಲಿನ ಜನರ ಕನಸು, ಕನಸಾಗಿಯೇ ಉಳಿಯಿತು. ಆಡಳಿತಕ್ಕೆ ಬಂದ ಪ್ರತಿಯೊಂದು ಸರ್ಕಾರಗಳು ಕೂಡಾ ಈ ಭಾಗದ ಅಭಿವೃದ್ದಿಗೆ ಒತ್ತು ಕೂಡುವ ಬದಲು ಉದಾಸೀನತೆ ತಾಳಿದ್ದೇ ಹೆಚ್ಚು. ಹೀಗಾಗಿ ಇಂದಿಗೂ ಈ ಬಾಗದ ಅನೇಕ ಕಡೆ ಮೂಲಭೂತ ಸೌಲಭ್ಯಗಳೆಂದರೆ ಎನು ಎಂಬ ಪ್ರಶ್ನೆಯನ್ನು ಜನ ಕೇಳುವಂತಹ ಸ್ಥಿತಿಯಿದೆ. ಜೊತೆಗೆ ಶಿಕ್ಷಣದಲ್ಲಿ ಕೂಡಾ ಈ ಭಾಗದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಹೀಗಾಗಿ ಇಂದಿಗೂ ಈ ಭಾಗ ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿಯುವಂತಾಯಿತು. ತೀರಾ ಇತ್ತಿಚೆಗೂ ಎಸ್​​ಎಸ್​ಎಲ್​ಸಿ ಹಾಗೂ ಪಿಯುಸಿ ಪಲಿತಾಂಶ ಬಂದಾಗ ಕೊನೆಯ ಸ್ಥಾನದಲ್ಲಿರುವ ಜಿಲ್ಲೆಗಳೆಂದರೆ ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳು.

ಉದ್ಯೋಗದಲ್ಲಿ ಕಡೆಗಣನೆ

ಉದ್ಯೋಗದಲ್ಲಿ ಮೀಸಲಾತಿ ಇರಲಿಲ್ಲ. ಹೀಗಾಗಿ ಬೇರೆ ಬಾಗದ ಜನರೇ ಸರ್ಕಾರಿ ನೌಕರಿಯಲ್ಲಿ ಸಿಂಹಪಾಲು ಪಡೆಯುತ್ತಿದ್ದರು. ಕೈಗಾರಿಕೆಗಳು ಬರಲಿಲ್ಲ. ಬಂದರೂ ಅವು ಈ ಭಾಗದ ಜನರ ನೆರವಿಗೆ ಬರಲಿಲ್ಲ. ರಾಜ್ಯದ ಉಳಿದ ಬಾಗಗಳಿಗೆ ಹೋಲಿಸಿದರೆ ಈ ಭಾಗದ ಜಿಲ್ಲೆಗಳು ಮಾತ್ರ ಅಭಿವೃದ್ದಿಯಿಂದ ಹಿನ್ನಡೆ ಅನುಭವಿಸಿದವು. ದಶಕಗಳಿಂದ ಈ ಭಾಗದ ಜನ ಅನುಭವಿಸುತ್ತಿದ್ದ ಸಂಕೋಲೆಯನ್ನು ಕಳೆಚಲು, ಈ ಭಾಗದ ಅಭಿವೃದ್ದಿಗೆ ಒತ್ತು ನೀಡಲು ರಾಜ್ಯ ಸರ್ಕಾರ ಕೈಗೊಂಡು ಕ್ರಮವೇ ಈ ಭಾಗದಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸುತ್ತಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಚಿವ ಸಂಪುಟ ಸಭೆ ಯಾಕೆ?

Karnataka Cabinet meeting in Kalaburagi after a decade: How much implemented previous resolutions, Here is full details in Kannada

ಯಾಕಾದರೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು? ಇಂಥದ್ದೊಂದು ಪ್ರಶ್ನೆ ಸಹಜವಾಗಿ ಎಲ್ಲರಲ್ಲಿ ಮೂಡುವುದು ಸಹಜ. ಯಾಕೆಂದರೆ ರಾಜ್ಯದ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸುವುದು ವಾಡಿಕೆ. ಆದರೆ, ಕಲ್ಯಾಣ ಕರ್ನಾಟಕದಲ್ಲೇಕೆ ಸಚಿವ ಸಂಪುಟ ಸಭೆಯನ್ನು ನಡಸಬೇಕು? ವಿಧಾನಸೌಧದಲ್ಲಿಯೇ ಸಚಿವ ಸಂಪುಟ ಸಭೆಯನ್ನು ನಡೆಸಿ, ಈಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಸಾದ್ಯವಿಲ್ಲವೇ ಎಂಬ ಪ್ರಶ್ನೆಗಳು ಮೂಡುವುದು ಸಹಜವೇ. ಆದರೆ ಈ ಭಾಗದಲ್ಲಿ ಸಚಿವ ಸಂಪುಟವನ್ನು ನಡೆಸಲಿಕ್ಕೆ ಹಲವು ಕಾರಣಗಳಿವೆ.

ಕಲ್ಯಾಣ ಕರ್ನಾಟಕದಲ್ಲಿ ಸಚಿವ ಸಂಪುಟ ಸಭೆಗೆ ಕಾರಣಗಳಿವು

  • ಕಲ್ಯಾಣ ಕರ್ನಾಟಕ ಭಾಗ ದಶಕಗಳಿಂದ ಅಭಿವೃದ್ದಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು.
  • ನಂಜುಂಡಪ್ಪ ವರದಿಯ ಪ್ರಕಾರ ರಾಜ್ಯದಲ್ಲಿ ಅತಿ ಹಿಂದುಳಿದ 39 ತಾಲೂಕುಗಳಲ್ಲಿ 21 ತಾಲೂಕುಗಳಿರುವುದು ಇದೇ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ.
  • ಇಂದಿಗೂ ಕೂಡಾ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಪ್ರದೇಶ ಕಲ್ಯಾಣ ಕರ್ನಾಟಕ. ಶೈಕ್ಷಣಿಕವಾಗಿ,ಆರ್ಥಿಕವಾಗಿ ರಾಜ್ಯದಲ್ಲಿ ಹಿಂದುಳಿದ ಪ್ರದೇಶ ಕಲ್ಯಾಣ ಕರ್ನಾಟಕ ಪ್ರದೇಶ.

ಹೀಗಾಗಿ ಹಿಂದುಳಿದ ಭಾಗದ ಆಡಳಿತಾತ್ಮಕ ಕೇಂದ್ರಸ್ಥಾನವಾಗಿರುವ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ಮಾಡಬೇಕೆನ್ನುವುದು ಸರ್ಕಾರದ ಒತ್ತಾಸೆ. ಜೊತೆಗೆ ವಿಧಾನಸೌಧದಲ್ಲಿ ಕುಳಿತು ಸಚಿವ ಸಂಪುಟ ಸಭೆಯನ್ನು ಮಾಡುವುದಕ್ಕಿಂತ ಹೆಚ್ಚಾಗಿ ಕಲ್ಯಾಣ ಕರ್ನಾಟಕದ ಕೇಂದ್ರಸ್ಥಾನವಾದ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆಯನ್ನು ಮಾಡುವದರಿಂದ ಆ ಬಾಗಕ್ಕೆ ಆಡಳಿತ ಯಂತ್ರವನ್ನು ಒಯ್ದಂತೆ ಆಗುತ್ತೆ ಎಂಬ ಲೆಕ್ಕಾಚಾರವೂ ಇದೆ. ಸಚಿವರೆಲ್ಲರು ಆ ಭಾಗಕ್ಕೆ ಹೋಗುವುದರಿಂದ ಸರ್ಕಾರದ ಎಲ್ಲಾ ಹಿರಿಯ ಅಧಿಕಾರಿಗಳು ಬರುತ್ತಾರೆ. ಹೀಗಾಗಿ ಈ ಭಾಗದ ಸಮಸ್ಯಗಳನ್ನು ಅರ್ಥಮಾಡಿಕೊಳ್ಳಲಿಕ್ಕೆ ಆಗುತ್ತದೆ ಎಂಬ ಆಶಯವಿದೆ. ಜೊತೆಗೆ ಇಲ್ಲಿರುವ ಸಮಸ್ಯೆಗಳು, ಅವುಗಳಿಗೆ ಪರಿಹಾರವನ್ನು ಹೇಗೆ ಕಂಡುಕೊಳ್ಳಬಹುದು ಎಂಬುದನ್ನು ತಿಳಿಯಲು ನೆರವಾಗಬಹುದು.

ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆಯ ಇತಿಹಾಸ, ಕೈಗೊಂಡ ನಿರ್ಣಯಗಳು

1982 ರಲ್ಲಿ ಆರ್ ಗುಂಡುರಾವ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಈ ಭಾಗದ ಅಭಿವೃದ್ದಿಗೆ ಒತ್ತು ಕೊಡಲು ನಿರ್ಧರಿಸಿದರು. ಅದಕ್ಕಾಗಿಯೇ 1982 ರಲ್ಲಿ ಕಲಬುರಗಿಯಲ್ಲಿ ಸಚಿವ ಸಂಪುಟದ ಸಭೆಯನ್ನು ನಡೆಸುವ ಮೂಲಕ ರಾಜ್ಯದ ಹೊರಗಡೆ ಸಚಿವ ಸಂಪುಟದ ಸಭೆ ನಡೆಸುವ ಹೊಸ ಇತಿಹಾಸಕ್ಕೆ ರಾಜ್ಯದಲ್ಲಿ ನಾಂದಿ ಹಾಡಿದರು. ಆ ಮೂಲಕ ಈ ಭಾಗದ ಅಭಿವೃದ್ದಿಗೆ ಹೆಚ್ಚಿನ ಒತ್ತು ಕೊಡುವುದು ಗುಂಡುರಾವ್ ಅವರ ಒತ್ತಾಸೆಯಾಗಿತ್ತು. ಅಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಗ ಕಲಬುರಗಿ ಜಿಲ್ಲೆಗೆ ಕುಡಿಯುವ ನೀರಿನ ಪೂರೈಕೆ ಹಾಗೂ ‘ಹೈದ್ರಾಬಾದ್ ಕರ್ನಾಟಕ ಡೆವಲಪಮೆಂಟ್ ಬೋರ್ಡ್’ ರಚನೆ ಮಾಡಲು ನಿರ್ಧರಿಸಿದ್ದರು. ಅದಕ್ಕಾಗಿಯೇ ಧರ್ಮಸಿಂಗ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಆದರೆ ದಶಕಗಳ ನಂತರವಷ್ಟೇ ‘ಹೈದ್ರಾಬಾದ್ ಕರ್ನಾಟಕ ಡೆವಲಪಮೆಂಟ್ ಬೋರ್ಡ್’ ರಚನೆಯಾಯಿತು. ಗುಂಡುರಾವ್ ನಂತರ ಅಧಿಕಾರಕ್ಕೆ ಬಂದ ಬೇರೆ ಮುಖ್ಯಮಂತ್ರಿಗಳು ಈ ಭಾಗದಲ್ಲಿ ಸಚಿವ ಸಂಪುಟ ಸಭೆ ಮಾಡುವ ಪ್ರಯತ್ನಕ್ಕೆ ಮುಂದಾಗಲಿಲ್ಲ. ಹೀಗಾಗಿ ಗುಂಡುರಾವ್ ಸಂಪ್ರದಾಯ ಅವರೊಂದಿಗೇ ಮಾಯವಾಗಿತ್ತು.

ಮತ್ತೆ ಸಂಪುಟ ಸಭೆ ಆರಂಭಿಸಿದ ಯಡಿಯೂರಪ್ಪ

ಇನ್ನು ಮುರಿದು ಹೋಗಿದ್ದ ಸಂಪ್ರದಾಯವನ್ನು ಮತ್ತೆ ಆರಂಭ ಮಾಡಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. 2008ರಲ್ಲಿ ಪ್ರಥಮ ಭಾರಿಗೆ ಕಲಬುರಗಿ ನಗರದ ಮಿನಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದರು. ಅದರಲ್ಲಿ ಯಾದಗಿರಿ ನೂತನ ಜಿಲ್ಲಾ ಸ್ಥಾನಮಾನ ನೀಡುವುದು ಸೇರಿದಂತೆ, ಈ ಭಾಗದ ಹೆಚ್ಚಿನ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಸೇರಿದಂತೆ, ಮೂಲಭೂತ ಸೌಲಭ್ಯಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಯಿತು. ಜೊತೆಗೆ ಹುಬ್ಬಳ್ಳಿ ಧಾರವಾಡದಲ್ಲಿ ಕಾನೂನು ವಿಶ್ವವಿದ್ಯಾಲಯ, ಬಾಗಲಕೋಟಿ ತೋಟಗಾರಿಕೆ ವಿಶ್ವವಿದ್ಯಾಲಯ, ರಾಯಚೂರು ಕೃಷಿ ವಿಶ್ವವಿದ್ಯಾಲಯಗಳ ರಚನೆಗೆ ಅಂತಿಮ ಅನುಮೋದನೆ ನೀಡಿದ್ದು ಕೂಡಾ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿಯೇ.

2008 ರಲ್ಲಿ ಸಚಿವ ಸಂಪುಟ ಸಭೆ ಮಾಡಿದ್ದರಿಂದ ಮತ್ತಷ್ಟು ಉಲ್ಲಸಿತಗೊಂಡಿದ್ದ ಯಡಿಯೂರಪ್ಪ, ತಾವು ಕೊಟ್ಟ ಮಾತಿನಂತೆ 2009 ಹಾಗೂ 2010 ರಲ್ಲಿಯೂ ಕೂಡಾ ಕಲಬುರಗಿಯಲ್ಲಿ ಸಚಿವ ಸಂಪುಟದ ಸಭೆ ನಡೆಸಿದರು. ಈ ಭಾಗದ ಬಹುತೇಕ ಯೋಜನೆಗಳನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ, ತ್ವರಿತ ಅನುಮೋಧನೆಯ ಜೊತೆಗೆ ಈ ಭಾಗದ ಅಭಿವೃದ್ದಿಗೆ ಹೆಚ್ಚಿನ ನೆರವನ್ನು ನೀಡುವ ನಿರ್ಧಾರಗಳನ್ನು ತೆಗದುಕೊಂಡಿದ್ದರು.

ಆದರೆ ಯಡಿಯೂರಪ್ಪನಂತರ ಅಧಿಕಾರಕ್ಕೆ ಬಂದ ಸಧಾನಂದ ಗೌಡರು ಈ ಭಾಗದಲ್ಲಿ ಮತ್ತೆ ಸಂಪುಟ ಸಭೆ ಮಾಡುವ ಗೊಡುವಗೆ ಹೋಗಲಿಲ್ಲ. ಅನೇಕರಿಂದ ಈ ಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಅಂತ ಒತ್ತಡ ಬಂದರೂ, ಉದಾಸಿನತೆಯಿಂದ ವರ್ತಿಸಿದ್ದರು. ಹೀಗಾಗಿ ಸಧಾನಂದ ಗೌಡರ ವರ್ತನೆ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಉತ್ತರ ಕರ್ನಾಟಕರವರೇ ಆಗಿದ್ದ ಜಗದೀಶ ಶೆಟ್ಟರ ಮುಖ್ಯಮಂತ್ರಿಯಾದ ಮೇಲೆ 2012 ರ ಅಕ್ಟೋಬರ್​​ನಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಿದ್ದರು.

Karnataka Cabinet meeting in Kalaburagi after a decade: How much implemented previous resolutions, Here is full details in Kannada

ಇನ್ನು 2014ರ ನವಂಬರ್ ತಿಂಗಳಲ್ಲಿ ಸಿದ್ದರಾಮಯ್ಯ ತಮ್ಮ ಮೊದಲ ಸಚಿವ ಸಂಪುಟ ಸಭೆಯನ್ನು ಕಲಬುರಗಿ ನಗರದಲ್ಲಿ ನಡೆಸಿದ್ದರು. ಅಂದು ಪ್ರಮುಖ 51 ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು. ನಂತರ ಮತ್ತೆ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವ ಸಂಪ್ರದಾಯ ನಿಂತುಹೋಗಿತ್ತು. ಇದೀಗ ಮತ್ತೆ ಸಿದ್ದರಾಮಯ್ಯನವರು ಎರಡನೇ ಬಾರಿಗೆ ಕಲಬುರಗಿಯಲ್ಲಿ ಕ್ಯಾಬಿನೆಟ್ ನಡೆಸಲು ಮುಂದಾಗಿದ್ದಾರೆ.

ಹಿಂದಿನ ಸಂಪುಟ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳು ಯಾವುವು?

2014ರ ಕ್ಯಾಬಿನೇಟ್ ಮೀಟಿಂಗ್​​ನಲ್ಲಿ ಕೈಗೊಂಡಿದ್ದ ಕೆಲ ನಿರ್ಧಾರಗಳ ಮಾಹಿತಿ ಇಲ್ಲಿದೆ;

  • ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಗೆ ಇಗಾಗಲೇ ಆರು ನೂರು ಕೋಟಿ ರೂಪಾಯಿ ನೀಡಲಾಗಿದ್ದು, ಅದಕ್ಕೆ ಹೆಚ್ಚುವರಿಯಾಗಿ ನಾಲ್ಕು ನೂರು ಕೋಟಿ ರೂಪಾಯಿ ಅನುದಾನ.
  • ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿರುವ ಹುದ್ದೆಗಳು ಭರ್ತಿಗಾಗಿ ಕ್ರಮ. ಈ ಭಾಗದಲ್ಲಿ ನಲವತ್ತರಿಂದ ಐವತ್ತು ಸಾವಿರ ಹುದ್ದೆಗಳು ಖಾಲಿಯಿದ್ದು. ಅವುಗಳನ್ನು ಮುಂದಿನ ಜೂನ್ ಅಂತ್ಯದೊಳಗಾಗಿ ಭರ್ತಿ ಮಾಡಲು ಎಲ್ಲಾ ಇಲಾಖೆಗಳಿಗೆ ಆದೇಶ.
  • ಹೈದ್ರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿನ 250 ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿನ ಶಾಲೆಗಳಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಒಪ್ಪಿಗೆ.
  • ಬೀದರ್​ನ ಕಾರಂಜಾ ನೀರಾವರಿ ಯೋಜನೆಯ ಪೂರ್ಣಗೊಳಿಸಲು 600 ಕೋಟಿ ರೂಪಾಯಿ ಅನುದಾನ ಬಿಡುಗಡೆ.
  • ಕಲಬುರಗಿಯ ಬೆಣ್ಣೆತೋರಾ ಜಲಾಶಯಕ್ಕೆ ಅಪ್ಪಾರಾವ ಪಾಟೀಲ ಜಲಾಶಯ ಅಂತ ಮರುನಾಮಕರಣ. ಮತ್ತು ಕಾಲುವೆಗಳ ಆಧುನಿಕರಣಕ್ಕೆ 150 ಕೋಟಿ ರೂಪಾಯಿ ಬಿಡುಗಡೆ.
  • ಹಟ್ಟಿ ಚಿನ್ನದ ಗಣಿಗೆ ದೇವದುರ್ಗ ತಾಲೂಕಿನ ಊಟಿ ಗ್ರಾಮದ ಬಳಿ ಹದಿನೈದು ಎಕರೆ ಮೂವತ್ತೊಂದು ಗುಂಟೆ ಭೂಮಿಯನ್ನು ಗಣಿ ಅನ್ವೇಷಣೆಗೆ ನೀಡಲು ಸಮ್ಮತಿ.
  • ಬೀದರ್​​ನಲ್ಲಿ ಜಿಲ್ಲಾಡಳಿತ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಇಪ್ಪತ್ತೆರಡು ಎಕರೆ ಭೂಮಿ ಮಂಜೂರು ಮತ್ತು ಕಟ್ಟಡ ನಿರ್ಮಾಣಕ್ಕೆ 48 ಕೋಟಿ ರೂಪಾಯಿ ಬಿಡುಗಡೆ.
  • ಕಲಬುರಗಿಯಲ್ಲಿ ಪೊಲೀಸ ಕಮೀಷನರೆಟ್ ಸ್ಥಾಪಿಸಲು ಒಪ್ಪಿಗೆ.

ಹೀಗೆ ಅನೇಕ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿತ್ತು. ವಿಶೇಷವೆಂದರೆ, ಇಲ್ಲಿವರಗೆ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ಆರು ಸಚಿವ ಸಂಪುಟ ಸಭೆಗಳನ್ನು ನಡೆಸಲಾಗಿದೆ. ಪ್ರತಿ ಸಚಿವ ಸಂಪುಟ ಸಭೆಯಲ್ಲೂ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನೂರಾರು ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಆದರೆ ಅವೆಲ್ಲ ಅನುಷ್ಠಾನಕ್ಕೆ ಮಾತ್ರ ಬಂದಿಲ್ಲ. ಇನ್ನು ಕಳೆದ ಐದು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿದ ಬಹುತೇಕ ನಿರ್ಣಯಗಳು, ನಿರ್ಣಯಗಳಾಗಿಯೇ ಉಳಿದಿವೆಯೇ ವಿನಃ ಅನಷ್ಠಾನಗೊಂಡಿಲ್ಲ ಎಂಬ ಕೂಗು ಇದೆ.

ಕೈಗೊಂಡ ನಿರ್ಣಯಗಳಲ್ಲಿ ಜಾರಿಯಾಗಿದ್ದೆಷ್ಟು?

ಈ ಹಿಂದೆ ಸಿದ್ದರಾಮಯ್ಯ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ಈ ಬಾಗದಲ್ಲಿ ಖಾಲಿಯಿರುವ ಹುದ್ದೆಗಳನ್ನು ಕೆಲವೇ ದಿನಗಳಲ್ಲಿ ಭರ್ತಿ ಮಾಡೋದಾಗಿ ಹೇಳಿದ್ದರು. ಆದರೆ ಇಲ್ಲಿಯವರೆಗೆ ಅದು ಈಡೇರಿಲ್ಲ. ಇಂದಿಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾವಿರಾರು ಹುದ್ದೆಗಳು ಖಾಲಿಯಿವೆ. ಇನ್ನು ಈ ಭಾಗದ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಲಾಗುವುದು ಅಂತ ಹೇಳಲಾಗಿತ್ತು. ಆದ್ರೆ ಇಂದಿಗೂ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಬಲ ಬಂದಿಲ್ಲಾ. ಲಕ್ಷಾಂತರ ರೈತರು ನೀರಾವರಿಯಿಂದ ವಂಚಿತರಾಗಿದ್ದಾರೆ. ಪ್ರತಿವರ್ಷ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ಹೋದರೂ ನೀರಿನ ಸದ್ಭಳಕೆಯಾಗುತ್ತಿಲ್ಲ.

ಇನ್ನು 2009 ರಲ್ಲಿ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಜಲ್ಲೆಗಳಲ್ಲಿ ಶುದ್ಧ ಕುಡಿಯುವ ನೀರಿಗಾಗಿ 166 ಕೋಟಿ ಒದಗಿಸಲಾಗುವುದು ಅಂತ ಹೇಳಲಾಗಿತ್ತು. ಕಲ್ಯಾಣ ಕರ್ನಾಟಕ ಜಿಲ್ಲೆಯ 242 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವದಾಗಿ ಹೇಳಿತ್ತು. ಆದರೆ ಇಲ್ಲಿವರಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಕೆಲಸ ಮಾತ್ರ ಸಮರ್ಪಕವಾಗಿ ಆಗಿಲ್ಲ. ದುರ್ದೈವದ ಸಂಗತಿಯೆಂದರೆ ಇಂದಿಗೂ ಅನೇಕ ಹಳ್ಳಿಗಳಲ್ಲಿ ಪ್ಲೋರೈಡ್ ಮೀಶ್ರಿತ, ಕಲುಷಿತ ನೀರು ಕುಡಿದು ಜನ ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ.

2010 ರಲ್ಲಿ ನಡೆದ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕದ ಭಾಗದ ವಿವಿಧ ಯೋಜನೆಗಳಿಗಾಗಿ 4,632 ಕೋಟಿ ರೂಪಾಯಿ ನೀಡುವುದಾಗಿ ಹೇಳಲಾಗಿತ್ತು. ಆದರೆ ಬಂದಿದ್ದು, ಮತ್ತು ಅನುಷ್ಠಾನಗೊಂಡಿದ್ದು ಮಾತ್ರ ಅಲ್ಪ. ಇನ್ನು 2012 ರಲ್ಲಿ 86 ವಿಷಯಗಳ ಬಗ್ಗ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, 7875 ಕೋಟಿ ರೂಪಾಯಿಗಳ ಅನುದಾನ ನೀಡಲು ಒಪ್ಪಿಗೆ ನೀಡಲಾಗಿತ್ತು. 7875 ಕೋಟಿ ರೂಪಾಯಿಗಳಲ್ಲಿ 5400 ಕೋಟಿ ರೂಪಾಯಿ ಹಣವನ್ನು ಕಲ್ಯಾಣ ಕರ್ನಾಟಕದ ಬಾಗದಲ್ಲಿ ಖರ್ಚು ಮಾಡಲಾಗುತ್ತದೆ ಎನ್ನಲಾಗಿತ್ತು. ಇನ್ನು ರೈತರು ಹಾಗೂ ಚಳುವಳಿಗಾರರ ಮೇಲೆ ಹೇರಲಾಗಿರುವ ಸುಮಾರು ಇಪ್ಪತ್ತು ಮೊಕದ್ದಮೆಗಳನ್ನು ಹಿಂಪಡೆಯುತ್ತೇವೆ ಎಂದಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆ, ನಾರಾಯಣಪುರ ಎಡದಂಡೆ ಕಾಲುವೆಗಳ ನವೀಕರಣ ಹಾಗೂ ಆದುನಿಕರಣಕ್ಕೆ 4085 ಕೋಟಿ ರೂಪಾಯಿ, ಕಲಬುರಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ಶರಣಬಸವೇಶ್ವರ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸಲು ಒಪ್ಪಿಗೆ, ರಾಯಚೂರು ನಗರದಲ್ಲಿ ಐಐಟಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡುವ ನಿರ್ಣಯ, ಕಲಬುರಗಿ ಕಂದಾಯ ವಿಭಾಗದ ಎಂಟು ಕೈಗಾರಿಕಾ ಪ್ರದೇಶಗಳ ಅಭಿವೃದ್ದಿಗೆ 408 ಕೋಟಿ ರೂಪಾಯಿ, ಹಾಗೂ ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕೆ ಕಾರ್ಯಕ್ರಮದಡಿ ಹದಿಮೂರು ಪಟ್ಟಣಗಳಿಗೆ ನಿರಂತರ ನೀರು ಸರಬರಾಜು ಯೋಜನಗೆ 197.71 ಕೋಟಿ ರೂಪಾಯಿಗಳ ಬಿಡುಗಡೆಗೆ ಒಪ್ಪಿಗೆ ಸೂಚಿಸಲಾಗಿತ್ತು. ಆದ್ರೆ ಇದರಲ್ಲಿ ಅನುಷ್ಠಾನಗೊಂಡಿದ್ದು ಕೂಡಾ ಅಲ್ಪಸ್ವಲ್ಪ.

ಇದನ್ನೂ ಓದಿ: ಕೊಪ್ಪಳದಲ್ಲಿ ಹೆಡ್​ ಕಾನ್ಸ್​ಟೇಬಲ್​ನಿಂದಲೇ ಗೌಪ್ಯ ಮಾಹಿತಿ ಸೋರಿಕೆ: ಹಣ ಕೊಟ್ಟರೇ ಸಿಗುತ್ತೆ ಮೊಬೈಲ್ ನಂಬರ್​, ಟವರ್ ಲೋಕೇಶನ್

ಈ ಭಾಗದ ಅಭಿವೃದ್ದಿಗೆ ಹೆಚ್ಚಿನ ಒತ್ತನ್ನು ಕೊಡುವ ಉದ್ದೇಶದಿಂದ ನಡೆಸುತ್ತಿರುವ ಸಚಿವ ಸಂಪುಟದಲ್ಲಿ, ಕೇವಲ ಜನಪ್ರಿಯತೆಗಾಗಿ ಯೋಜನೆಗಳನ್ನು ಘೋಷಿಸುವದನ್ನು ಬಿಟ್ಟು, ಈ ಭಾಗದ ಸಮಸ್ಯಗಳಿಗೆ ಶಾಶ್ವತ ಪರಿಹಾರವನ್ನು ಕಲ್ಪಿಸುವ ಕಾರ್ಯಗಳಿಗೆ ಹೆಚ್ಚಿ ಒತ್ತನ್ನು ನೀಡಬೇಕಾಗಿದೆ. ಜೊತೆಗೆ ಈ ಹಿಂದಿನ ಸಚಿವ ಸಂಪುಟದಲ್ಲಿ ತಗೆದುಕೊಂಡು ಬಹುತೇಕ ನಿರ್ಣಯಗಳು ಜಾರಿಯಾಗಿಲ್ಲ. ಹೀಗಾಗಿ ಅವುಗಳ ಅನುಷ್ಠಾನಕ್ಕೆ ಮುಂದಾಗಬೇಕಿದೆ. ಅಂದಾಗ ಮಾತ್ರ ಕಲ್ಯಾಣ ಕರ್ನಾಟಕ ಅಭಿವೃದ್ದಿಯಿಂದ ಕಂಗೊಳಿಸಲಿಕ್ಕೆ ಸಾಧ್ಯವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:23 pm, Mon, 16 September 24