ಕಾವೇರಿ, ಕೃಷ್ಣಾ, ಮಹದಾಯಿ ನದಿ ವಿವಾದ: ವಕೀಲರಿಗೆ ಸರ್ಕಾರದಿಂದ ಈವರೆಗೆ ಬರೋಬ್ಬರಿ 122 ಕೋಟಿ ರೂ. ಶುಲ್ಕ ಪಾವತಿ

ಅಂತರಾಜ್ಯಗಳೊಂದಿಗೆ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಸುಪ್ರೀಂ ಕೋರ್ಟ್​ ಮತ್ತು ನ್ಯಾಯಾಮಂಡಳಿಗಳ ಮುಂದೆ ವಾದ ಮಂಡಿಸಲು ವಕೀಲರಿಗೆ ರಾಜ್ಯ ಸರ್ಕಾರವು ಎಷ್ಟು ಹಣ ನೀಡಿದೆ? ಇಲ್ಲಿದೆ ಮಾಹಿತಿ

ಕಾವೇರಿ, ಕೃಷ್ಣಾ, ಮಹದಾಯಿ ನದಿ ವಿವಾದ: ವಕೀಲರಿಗೆ ಸರ್ಕಾರದಿಂದ ಈವರೆಗೆ ಬರೋಬ್ಬರಿ 122 ಕೋಟಿ ರೂ. ಶುಲ್ಕ ಪಾವತಿ
ಕೆಆರ್​ಎಸ್​ ಡ್ಯಾಂ
Follow us
|

Updated on:Oct 01, 2023 | 2:08 PM

ಬೆಂಗಳೂರು ಅ.01: ಕಾವೇರಿ (Cauvery), ಕೃಷ್ಣಾ (Krishna), ಮಹದಾಯಿ (Mahadayi) ನದಿ ನೀರು ಹಂಚಿಕೆ ಸಂಬಂಧಿಸಿದ ಜಲ ವಿವಾದಗಳ ಕುರಿತು ಸುಪ್ರೀಂಕೋರ್ಟ್ (Supreme Court)​ ಮತ್ತು ನ್ಯಾಯಾಮಂಡಳಿಗಳ ಮುಂದೆ ವಾದ ಮಂಡಿಸಲು ವಕೀಲರಿಗೆ ರಾಜ್ಯ ಸರ್ಕಾರವು (Karnataka Government) 1990ರಿಂದ 122 ಕೋಟಿಗೂ ಹೆಚ್ಚು ಶುಲ್ಕವನ್ನು ಪಾವತಿಸಿದೆ. ಆರ್​ಟಿಐ ಕಾರ್ಯಕರ್ತ ಭೀಮಪ್ಪ ಗುಂಡಪ್ಪ ಗಡದ್​ ಅವರು ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಮಾಹಿತಿ ಕೇಳಿದ್ದರು. ರಾಜ್ಯ ಜಲಸಂಪನ್ಮೂಲ ಇಲಾಖೆ ಈ ಮಾಹಿತಿಯನ್ನು ಒದಗಿಸಿದೆ.

ಅಂತರಾಜ್ಯಗಳೊಂದಿಗೆ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ವಾದಿಸಲು ಹಿರಿಯ ವಕೀಲರಾದ ಅನಿಲ್​ ದಿವಾನ್​, ಫಾಲಿ ಎಸ್​​ ನಾರಿಮನ್​, ಎಸ್​ಎಸ್​ ಜವಳಿ, ಶ್ಯಾಮ್​ ​ದಿವಾನ್​ ಮತ್ತು ಮೋಹನ್​ ಕಾತರಕಿ ಅವರಿಗೆ ರಾಜ್ಯ ಸರ್ಕಾರ ಕಳೆದ ಮೂರು ದಶಕಗಳಲ್ಲಿ 87 ಕೋಟಿಗೂ ಹೆಚ್ಚು ಹಾಜರಾತಿ ಶುಲ್ಕವನ್ನು ನೀಡಿದೆ.

ಕಾವೇರಿ, ಕೃಷ್ಣಾ ಹಾಗೂ ಮಹದಾಯಿ ನದಿಗಳ ವಿವಾದ ಬಗೆಹರಿಸಲು ರಚಿಸಲಾದ ಕಾವೇರಿ ಜಲವಿವಾದ ನ್ಯಾಯಮಂಡಳಿ, ಕೃಷ್ಣಾ ಜಲವಿವಾದ ನ್ಯಾಯಮಂಡಳಿ ಹಾಗೂ ಮಹದಾಯಿ ಜಲವಿವಾದ ನ್ಯಾಯಮಂಡಳಿ ಮತ್ತು ಸುಪ್ರಿಂಕೋರ್ಟ್​ ಮುಂದೆ ವಾದ ಮಂಡಿಸಲು 41 ವಕೀಲರಿಗೆ ಒಟ್ಟು 122,75,95,882 ರೂ. ಪಾವತಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಕಾವೇರಿ ವಿವಾದ: ಸುಪ್ರಿಂಕೋರ್ಟ್​​​ನಲ್ಲಿ ಮರು ಪರಿಶೀಲನೆ ಅರ್ಜಿ ಸಲ್ಲಿಸಿದ ಕರ್ನಾಟಕ

ಹಿರಿಯ ವಕೀಲ ಅನಿಲ್​​ ದಿವಾನ್​ 29.78 ಕೋಟಿ ರೂ., ಫಾಲಿ ನಾರಿಮನ್​​ 27.45 ಕೋಟಿ, ಮಹೋನ್​ ಕಾತರಕಿ 13.39 ಕೋಟಿ, ಎಸ್​ಎಸ್​ ಜವಳಿ 12.61 ಕೋಟಿ, ಶ್ಯಾಮ್​ ದಿವಾನ್​ 4.63 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಮಾಜಿ ಅಡ್ವೊಕೇಟ್ ಜನರಲ್‌ಗಳ ಪೈಕಿ ರವಿವರ್ಮ ಕುಮಾರ್‌ ಅವರು 64.7 ಲಕ್ಷ ರೂ., ಎಸ್.ವಿಜಯ್ ಶಂಕರ್ 13 ಲಕ್ಷ ರೂ., ಅಶೋಕ್ ಹಾರನಹಳ್ಳಿ 2.1 ಲಕ್ಷ ರೂ. ಹಾಗೂ ಬಿ.ಟಿ.ಪಾರ್ಥಸಾರಥಿ 1.5 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ.

ಎಜಿಗಳಾಗಿಯೂ ಸೇವೆ ಸಲ್ಲಿಸಿದ ಮಧುಸೂದನ್ ಆರ್ ನಾಯ್ಕ್ ಮತ್ತು ಪ್ರಭುಲಿಂಗ ಕೆ ನಾವದಗಿ ಅವರಿಗೆ ಕ್ರಮವಾಗಿ 1,57,58,000 ಮತ್ತು 23,54,215 ರೂ. ಸರ್ಕಾರ ಪಾವತಿಸಿದೆ. ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಅವರಿಗೆ 6,51,35,544 ರೂ. ಮತ್ತು ಹಿರಿಯ ವಕೀಲ ಉದಯ್ ಹೊಳ್ಳ ಅವರಿಗೆ 1,56,60,000 ರೂ. ಶುಲ್ಕ ನೀಡಲಾಗಿದೆ.

ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪುದುಚೇರಿ ನಡುವಿನ ವಿವಾದಗಳ ತೀರ್ಪುಗಾಗಿ ಕೇಂದ್ರ ಸರ್ಕಾರವು ಜೂನ್ 2, 1990 ರಂದು ಕಾವೇರಿ ಜಲ ವಿವಾದಗಳ ನ್ಯಾಯಮಂಡಳಿಯನ್ನು (CWDT) ರಚಿಸಿತು. ಜೂನ್ 2, 1990 ರಿಂದ ಜುಲೈ 10, 2017 ರವರೆಗೆ ಒಟ್ಟು 580 ಸಿಟ್ಟಿಂಗ್​​ಗಳು ನಡೆದಿವೆ. ಈ ಪ್ರಕರಣದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದ ವಕೀಲರಿಗೆ 54.13 ಕೋಟಿ ರೂ. ಪಾವತಿಸಲಾಗಿದೆ.

ವಕೀಲರಿಗೆ ಪಾವತಿಸಲಾದ ಶುಲ್ಕ
ಹಿರಿಯ ವಕೀಲರು ಶುಲ್ಕ (ಕೋಟಿ ರೂ.) ಗಳಲ್ಲಿ
ಅನಿಲ್​ ದಿವಾನ್ 29.78
ಫಾಲಿ ಎಸ್​​ ನಾರಿಮನ್ 27.45
ಮೋಹನ್​ ಕಾತರಕಿ 13.39
ಎಸ್​ಎಸ್​ ಜವಳಿ 12.61
ಶ್ಯಾಮ್​ ದಿವಾನ್ 4.63
ಅಡ್ವೊಕೇಟ್​ ಜನರಲ್​ ಶುಲ್ಕ (ಲಕ್ಷ ರೂ.) ಗಳಲ್ಲಿ
ರವಿವರ್ಮಾ ಕುಮಾರ್​ 64.7
ಎಸ್​ ವಿಜಯಶಂಕರ್ 13
ಅಶೋಕ ಹಾರನಹಳ್ಳಿ 2.1
ಬಿಟಿ ಪಾರ್ಥಸಾರಥಿ 1.5

ಅದೇ ರೀತಿ, ಮಹಾರಾಷ್ಟ್ರ, ಕರ್ನಾಟಕ ಮತ್ತು ಹಿಂದಿನ ಆಂಧ್ರಪ್ರದೇಶಗಳ ನಡುವಿನ ಜಲವಿವಾದ ಇತ್ಯರ್ಥಕ್ಕೆ 2004 ರಲ್ಲಿ ಕೃಷ್ಣಾ ಜಲವಿವಾದ ನ್ಯಾಯಾಧಿಕರಣವನ್ನು (KWDT) ಸ್ಥಾಪಿಸಲಾಯಿತು. ಅಂದಿನಿಂದ ನವೆಂಬರ್ 29, 2013ರವರೆಗೆ 295 ವಿಚಾರಣೆಗಳು ನಡೆದಿದ್ದು, ವಕೀಲರಿಗೆ 43.24 ಕೋಟಿ ರೂ. ಪಾವತಿಸಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ.

ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಜಲವಿವಾದದ ಪರಿಹಾರಕ್ಕಾಗಿ 2010 ರಲ್ಲಿ ಮಹದಾಯಿ ಜಲ ವಿವಾದಗಳ ನ್ಯಾಯಮಂಡಳಿಯನ್ನು ರಚಿಸಲಾಯಿತು. 2017ರ ಡಿಸೆಂಬರ್ 1ರವರೆಗೆ 97 ವಿಚಾರಣೆ ನಡೆದಿದ್ದು, ವಕೀಲರಿಗೆ 25.38 ಕೋಟಿ ರೂ. ಪಾವತಿಸಲಾಗಿದೆ.

“ನಾಲ್ವಡಿ ಕೃಷ್ಣರಾಜ ಒಡೆಯರ್​ ಅವರು ತಮ್ಮ ಬಳಿಯ ಚಿನ್ನಾಭರಣಗಳನ್ನು ಮಾರಿ 10.50 ಕೋಟಿ ರೂ. ವೆಚ್ಚದಲ್ಲಿ ಕೆಆರ್​ಎಸ್​​​ ಜಲಾಶಯ ನಿರ್ಮಿಸಿದರು. ಆದರೆ ಅದರ ನೀರನ್ನು ಬಳಸಿಕೊಳ್ಳಲು ಸರ್ಕಾರ ಕೋಟ್ಯಂತರ ಹಣವನ್ನು ವಕೀಲರಿಗೆ ನೀಡಿದೆ.”

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:51 pm, Sun, 1 October 23