ರಾಜ್ಯದಲ್ಲಿ ಹೆಚ್ಚಿದ ದಡಾರ ರೋಗ: ಜನರಲ್ಲಿ ಆತಂಕ ಮೂಡಿಸಿದ ಆರೋಗ್ಯ ಇಲಾಖೆ ವರದಿ

ರಾಜ್ಯ ಆರೋಗ್ಯ ಇಲಾಖೆ ಅಂಕಿ ಅಂಶಗಳ ಪ್ರಕಾರ 2021ರಲ್ಲಿ 10 ಲಕ್ಷ ಜನರಲ್ಲಿ ಶೇ 4.8 ರಷ್ಟು ಜನರಲ್ಲಿ ದಡಾರ ರೋಗ ಕಾಣಿಸಿಕೊಂಡಿತ್ತು. 2022ರಲ್ಲಿ ಈ ಸಂಖ್ಯೆ ದ್ವಿಗುಣವಾಗಿದ್ದು, 10 ಲಕ್ಷ ಜನರಲ್ಲಿ ಶೇ 8.52ರಷ್ಟು ಜನರಿಗೆ ದಡಾರ ರೋಗ ಬಾಧಿಸಿತ್ತು.

ರಾಜ್ಯದಲ್ಲಿ ಹೆಚ್ಚಿದ ದಡಾರ ರೋಗ: ಜನರಲ್ಲಿ ಆತಂಕ ಮೂಡಿಸಿದ ಆರೋಗ್ಯ ಇಲಾಖೆ ವರದಿ
ಸಾಂದರ್ಭಿಕ ಚಿತ್ರ
Follow us
|

Updated on:Mar 20, 2023 | 12:55 PM

ಬೆಂಗಳೂರು: ಇತ್ತೀಚಿಗೆ ವಿಜಯಪುರ (Vijaypura) ಜಿಲ್ಲೆಯ ಆಲಮೇಲ ತಾಲೂಕು ಕೇಂದ್ರದಲ್ಲಿ ನೂರಾರು ಮಕ್ಕಳಲ್ಲಿ ಏಕಕಾಲಕ್ಕೆ ದಡಾರ ರೋಗ (Measles) ಕಾಣಿಸಿಕೊಂಡು ಆಂತಕ ಮೂಡಿಸಿತ್ತು. ರಾಜ್ಯ ಆರೋಗ್ಯ ಇಲಾಖೆ (Karnataka Health Department) ಅಂಕಿ ಅಂಶಗಳ ಪ್ರಕಾರ  2021ರಲ್ಲಿ 10 ಲಕ್ಷ ಜನರಲ್ಲಿ ಶೇ 4.8 ರಷ್ಟು ಜನರಲ್ಲಿ ದಡಾರ ರೋಗ ಕಾಣಿಸಿಕೊಂಡಿತ್ತು. 2022ರಲ್ಲಿ ಈ ಸಂಖ್ಯೆ ದ್ವಿಗುಣವಾಗಿದ್ದು, 10 ಲಕ್ಷ ಜನರಲ್ಲಿ ಶೇ 8.52ರಷ್ಟು ಜನರಿಗೆ ದಡಾರ ರೋಗ ಬಾಧಿಸಿತ್ತು. ಈ ಹಿನ್ನೆಲೆ ಕರ್ನಾಟಕದಲ್ಲಿ ರೋಗ ಹೆಚ್ಚಳವಾಗದಂತೆ ತೆಡಗಟ್ಟಲು ಮತ್ತು 2023ರ ಅಂತ್ಯದ ವೇಳೆಗೆ ದಡಾರ ಮುಕ್ತ ರಾಜ್ಯವನ್ನಾಗಿ ಮಾಡಲು ಕರ್ನಾಟಕ ಆರೋಗ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ.

ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಆಘಾತಕಾರಿ ಅಂಶವೊಂದು ಬಹಿರಂಗಗೊಂಡಿದೆ. 2021ರಲ್ಲಿ ದೇಶದ 10 ಲಕ್ಷ ಜನರಲ್ಲಿ ಶೇ 4.6 ರಷ್ಟು ಜನರಲ್ಲಿ ದಡಾರ ರೋಗ ಕಾಣಿಸಿಕೊಂಡಿತ್ತು. ಇದು 2022ರಲ್ಲಿ ಏರಿಕೆಯಾಗಿದ್ದು, ಶೇ 22.36 ರಷ್ಟು ಜನರಿಗೆ ರೋಗ ಬಾಧಿಸಿತ್ತು.

ಸೆಂಟರ್​ ಫಾರ್​ ಡಿಸೀಸ್​ ಕಂಟ್ರೋಲ್​ ಅಂಡ್​ ಪ್ರಿವೆನ್ಷನ್​ (Centers for Disease Control and Prevention CDC) ವರದಿ ಪ್ರಕಾರ ಜಗತ್ತಿನ 10 ದೇಶಗಳಲ್ಲಿ ದಡಾರ ರೋಗ ಕಾಣಿಸಿಕೊಂಡಿದ್ದು, ಈ ದೇಶಗಳ ಪಟ್ಟಿಯಲ್ಲಿ ಭಾರತ ಕೂಡ ಸೇರಿದೆ ಎಂದು ಹೇಳಿದೆ. ಕಳೆದ ವರ್ಷ ಡಿಸೆಂಬರ್​ 17 ರಂದು ನಡೆದ ಸಂಸತ್​ ಅಧಿವೇಶನಕ್ಕೆ ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ 10,416 ದಡಾರ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 40 ಜನ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಆ್ಯಸಿಡಿಟಿ ಇರುವವರು ಹಾಲು ಕುಡಿಯಬಹುದೇ? ಯಾರ್ಯಾರಿಗೆ ಅಪಾಯ ಇಲ್ಲಿದೆ ಮಾಹಿತಿ

ದೇಶದ ಒಟ್ಟಾರೆ ಪ್ರಕರಣಗಳಲ್ಲಿ ಮಹಾರಾಷ್ಟ್ರದ್ದೇ ಹೆಚ್ಚಿನ ಪಾಲಿದೆ. ಮಹಾರಾಷ್ಟ್ರದಲ್ಲಿ 3,075 ದಡಾರ ಪ್ರಕರಣಗಳು ಪತ್ತೆಯಾಗಿದ್ದು, 13 ಜನ ಸಾವನ್ನಪ್ಪಿದ್ದಾರೆ. ಎರಡನೇ ಸ್ಥಾನದಲ್ಲಿ ಜಾರಖಂಡ ಇದ್ದು 2,683 ಜನರಲ್ಲಿ ರೋಗ ಕಾಣಿಸಿಕೊಂಡಿದ್ದು, 8 ಜನ ಸಾವನ್ನಪ್ಪಿದ್ದಾರೆ. ಈ ಎರಡು ರಾಜ್ಯಗಳು ಸೇರಿದಂತೆ ದೇಶದ (ಮಹಾರಾಷ್ಟ್ರ, ಜಾರಖಂಡ, ಬಿಹಾರ, ಗುಜಾರಾತ, ಹರಿಯಾಣ ಮತ್ತು ಕೇರಳ) 6 ರಾಜ್ಯಗಳಲ್ಲಿ ದಡಾರ ರೋಗಕ್ಕೆ ಜನರು ತುತ್ತಾಗಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಅಂಕಿ ಅಂಶಗಳ ಪ್ರಕಾರ 2022 ನವೆಂಬರ್​​ ವೇಳೆಗೆ ಭಾರದಲ್ಲಿ 12,773 ದಡಾರ ಪ್ರಕರಣಗಳು ಪತ್ತೆಯಾಗಿದ್ದವು ಎಂದು ಹೇಳಿತ್ತು. ಪ್ರಕರಣಗಳು 2022ರಲ್ಲಿ ಹೆಚ್ಚುತ್ತವೆ ಎಂದೂ ಹೇಳಿತ್ತು. ಇನ್ನು ಜಗತ್ತಿನಾದ್ಯಂತ 2022ರಲ್ಲಿ 40 ಮಿಲಿಯನ್​ ದಡಾರ ರೋಗಕ್ಕೆ ತುತ್ತಾಗುತ್ತಾರೆ ಎಂದು ಹೇಳಿತ್ತು.

2022 ರ ಆರಂಭದಿಂದಲೂ ಭಾರತದಲ್ಲಿ ದಡಾರ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಅನೇಕ ರಾಜ್ಯಗಳಲ್ಲಿ ಏಕಾಏಕಿ ರೋಗದ ಸಂಖ್ಯೆ ಏರಿಕೆಯಾಗಿದೆ. ಇದು ಮಿತಿಮೀರದಂತೆ ತಡೆಗಟ್ಟಲು, ಆರೋಗ್ಯ ತುರ್ತು ಪರಿಸ್ಥಿತಿಗೆ  ಬದಲಾಗದಂತೆ ನೋಡಿಕೊಳ್ಳಲು ರಾಜ್ಯ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ.

ರಾಜ್ಯದಲ್ಲಿ ದಡಾರ ಮತ್ತು ರುಬೆಲ್ಲಾ ಪ್ರಕರಣಗಳನ್ನು ಶೂನ್ಯಕ್ಕೆ ತರಲು ಎಲ್ಲಾ ಇಲಾಖೆಗಳು, ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಈ ತಿಂಗಳ ಆರಂಭದಲ್ಲಿ ನಡೆದ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೂಚಿಸಿದರು. ದಡಾರ ಮತ್ತು ರುಬೆಲ್ಲಾ ನಿರ್ಮೂಲನೆ ಕುರಿತು ನಡೆದ ಸಭೆಯಲ್ಲಿ, ಏಕಾಏಕಿ ತಡೆಗಟ್ಟಲು 15 ವರ್ಷದೊಳಗಿನ ಮಕ್ಕಳಿಗೆ ಎರಡು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಶರ್ಮಾ ಸಲಹೆ ನೀಡಿದರು.

ದಡಾರದ ಲಕ್ಷಣಗಳೇನು?

ದಡಾರ ಚಿಕ್ಕ ಮಕ್ಕಳಿಗೆ ತಗುಲುವ ತುಂಬಾ ಅಪಾಯಕಾರಿ ರೋಗ ಆಗಿದೆ. ಈ ರೋಗ ತಗುಲಿದ ನಂತರ 7 ರಿಂದ 14 ದಿನಗಳಲ್ಲಿ ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ 104 ಡಿಗ್ರಿಯವರೆಗೆ ಅಧಿಕ ಜ್ವರ, ಕೆಮ್ಮು, ಶೀತ, ಕೆಂಪು ಕಣ್ಣು, ಅಥವಾ ನೀರು ತುಂಬಿದ ಕಣ್ಣುಗಳು ಮುಖ್ಯವಾದುವು. ದಡಾರದ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡ ನಂತರ ರೋಗಕ್ಕೆ ತುತ್ತಾದ ಮಗುವಿನಲ್ಲಿ 2ರಿಂದ 3 ದಿನಗಳ ನಂತರ ಬಾಯಿಯೊಳಗೆ ಸಣ್ಣ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಕೆಂಪು-ಫ್ಲಾಟ್ ರಾಶ್ 3ರಿಂದ 5 ದಿನಗಳಲ್ಲಿ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ಮಗುವಿನ ಮುಖ, ಕುತ್ತಿಗೆ, ತೋಳು, ಕಾಲುಗಳು ಮತ್ತು ಅಡಿಭಾಗದ ಮೇಲೆ ದಡಾರದ ಗುಳ್ಳೆಗಳು ಉಂಟಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:15 pm, Mon, 20 March 23