ಮಾವು ಕ್ಷೇತ್ರೋತ್ಸವ: ಆತಂಕಗೊಂಡ ರೈತರ ನೆರವಿಗೆ ಬಂದ ವಿಜ್ಞಾನಿಗಳ ತಂಡ

ಒಂದಲ್ಲಾ ಒಂದು ಸಮಸ್ಯೆಯಿಂದ ಬಳಲಿ, ಕೈ ಸುಟ್ಟುಕೊಳ್ಳುತ್ತಿರುವ ಮಾವು ಬೆಳೆಗಾರರಿಗೆ ಈ ಕ್ಷೇತ್ರೋತ್ಸವ ಕಾರ್ಯಕ್ರಮದಿಂದ ತುಂಬಾನೇ ಅನುಕೂಲವಾಯಿತು. ಈ ಬಗ್ಗೆ ಟಿವಿ9 ಡಿಜಿಟಲ್ ಜೊತೆಗೆ ಮಾತನಾಡಿದ ಮಾವು ಬೆಳೆಗಾರ ಪ್ರಮೋದ ಗಾಂವ್ಕರ್, ನಾವು ಕಳೆದ ಹಲವಾರು ವರ್ಷಗಳಿಂದ ಲಾಭವಿಲ್ಲದೇ ಪರದಾಡುತ್ತಿದ್ದೇವೆ.

ಮಾವು ಕ್ಷೇತ್ರೋತ್ಸವ: ಆತಂಕಗೊಂಡ ರೈತರ ನೆರವಿಗೆ ಬಂದ ವಿಜ್ಞಾನಿಗಳ ತಂಡ
ಮಾವಿನ ಬೆಳೆಗಾರರಿಗೆ ಮಾಹಿತಿ ನೀಡುತ್ತಿರುವ ವಿಜ್ಞಾನಿಗಳು
Follow us
|

Updated on: Mar 25, 2021 | 11:11 AM

ಧಾರವಾಡ: ಮಾವು ಹಣ್ಣುಗಳ ರಾಜ. ಹಣ್ಣಿನ ಲೋಕದಲ್ಲಿ ಮಾವಿಗೆ ಯಾವಾಗಲೂ ಅಗ್ರಸ್ಥಾನವೇ. ಅದರಲ್ಲೂ ಧಾರವಾಡದ ಆಪೂಸು ಹಣ್ಣಿಗೆ ವಿಶೇಷ ಬೇಡಿಕೆ ಇದೆ. ಇಂಥ ಹಣ್ಣಿನ ರಾಜ ಕೂಡ ಇತ್ತೀಚಿನ ದಿನಗಳಲ್ಲಿ ಅನೇಕ ಸವಾಲು ಮತ್ತು ಸಮರಗಳನ್ನು ಎದುರಿಸಿ ಎದ್ದು ನಿಲ್ಲಬೇಕಾಗುತ್ತದೆ. ಈ ಬಾರಿಯಂತೂ ಹವಾಮಾನ ವೈಪರೀತ್ಯದಿಂದಾಗಿ ಮಾವು ಬೆಳೆಗಾರರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂಥವರ ನೆರವಿಗೆ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಬಂದಿದ್ದಾರೆ.

ಆತ್ಮನಿರ್ಭರ ಯೋಜನೆಯಡಿ ಧಾರವಾಡದ ಮಾವು ಕೇಂದ್ರ ಸರ್ಕಾರದ ಆತ್ಮನಿರ್ಭರದ ‘ಒಂದು ಜಿಲ್ಲೆ, ಒಂದು ಬೆಳೆ’ ಯೋಜನೆಯಡಿಯಲ್ಲಿ ಧಾರವಾಡ ಜಿಲ್ಲೆ ಮಾವಿನ ಹಣ್ಣಿನ ವಿಭಾಗದಲ್ಲಿ ಆಯ್ಕೆಯಾಗಿದೆ. ಈ ಆಯ್ಕೆ ಘೋಷಣೆಯಾದಾಗ ಧಾರವಾಡ ಜಿಲ್ಲೆಯ ರೈತರು ತುಂಬಾನೇ ಖುಷಿ ಪಟ್ಟಿದ್ದರು. ಏಕೆಂದರೆ ಕಳೆದ ಬಾರಿ ಉತ್ತಮ ಇಳುವರಿ ಸಿಕ್ಕಿತ್ತು. ಇನ್ನೇನು ಕಾಯಿ ಕಟಾವು ಆಗಿ ಮಾರುಕಟ್ಟೆಗೆ ಹೋಗಬೇಕೆನ್ನುವಾಗಲೆ ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಆದ ಕಾರಣ ಮಾವಿನ ಕಾಯಿ ಮತ್ತು ಹಣ್ಣು ಮಾರುಕಟ್ಟೆಯನ್ನೇ ನೋಡಲಿಲ್ಲ. ಮುಖ್ಯವಾಗಿ ಧಾರವಾಡದ ಆಪೂಸು ಹಣ್ಣಿಗೆ ಭಾರಿ ಬೇಡಿಕೆ ಇದೆ. ದುಬೈ ಸೇರಿದಂತೆ ಅನೇಕ ದೇಶಗಳಿಗೆ ಈ ಹಣ್ಣು ರಫ್ತಾಗುತ್ತದೆ. ಆದರೆ ಕಳೆದ ಬಾರಿ ಕೊರೊನಾದ ಹಿನ್ನೆಲೆಯಲ್ಲಿ ಗಿಡದಲ್ಲೇ ಮಾವು ಕೊಳೆತು ಹೋಗುವಂತಹ ಸ್ಥಿತಿ ಬಂದಿತ್ತು. ಇದಾದ ಬಳಿಕ ಕಳೆದ ಆಗಸ್ಟ್ನಲ್ಲಿ ಬಿದ್ದ ಮಳೆಯಿಂದಾಗಿ ನೀರಿನ ಕೊರತೆಯಿಂದ ರೈತರು ಪಾರಾಗಿದ್ದರು. ಜೊತೆಗೆ ಈ ಸಲ ಮಾವು ಹೂವು ಬಿಡುವ ವೇಳೆಯಲ್ಲೇ ಒಳ್ಳೆ ಲಕ್ಷಣವೆಂಬಂತೆ ಮಾವಿನ ಮರಗಳೆಲ್ಲ ಹೂವಿನಿಂದ ಮೈ ತುಂಬಿಕೊಂಡು ನಿಂತಿದ್ದವು. ಧಾರವಾಡ ಜಿಲ್ಲೆಯಲ್ಲಿ ಒಟ್ಟು 8,445 ಹೆಕ್ಟೇರ್ ಪ್ರದೇಶದಲ್ಲಿ ಮಾವು ಇದೆ. ಹೀಗಾಗಿ ಆರಂಭದ ಹೂವು ನೋಡಿ ಈ ಬಾರಿ ಸುಮಾರು 77 ಸಾವಿರ ಮೆಟ್ರಿಕ್ ಟನ್ ಮಾವಿನ ಉತ್ಪಾದನೆಯನ್ನು ನಿರೀಕ್ಷೆ ಮಾಡಲಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಹೂವುಗಳೆಲ್ಲ ಉದುರಿ ರೈತರ ನಿರೀಕ್ಷೆಗಳೆಲ್ಲವೂ ಹುಸಿಯಾಗಿ ಹೋಯಿತು. ಇದೀಗ ಅರ್ಧದಷ್ಟು ಮಾವು ಸಿಗುವುದೇ ಹೆಚ್ಚು ಎನ್ನುವ ಹಾಗೆ ಆಗಿದೆ.

ಮಾವಿನ ಬೆಳೆಯ ಬಗ್ಗೆ ಮಾಹಿತಿ ಕಾರ್ಯಗಾರ

ಮಾವಿನ ತೋಟ

ರೈತರ ನೆರವಿಗೆ ಬಂದ ವಿಜ್ಞಾನಿಗಳು: ರೈತರ ಜಮೀನಿಗೆ ತೆರಳಿ ಪ್ರಾತ್ಯಕ್ಷಿಕೆ ನಿರಂತರವಾಗಿ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದನ್ನು ಗಮನಿಸಿದ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾವು ಬೆಳೆಗಾರರ ಕ್ಷೇತ್ರೋತ್ಸವವನ್ನು ಮಾಡಲು ನಿರ್ಧರಿಸಿದರು. ಇದರ ಅಂಗವಾಗಿ ಧಾರವಾಡ ತಾಲೂಕಿನ ಕಲಿಕೇರಿ ಗ್ರಾಮದ ಬಳಿ ಇರುವ ಪ್ರಮೋದ ಗಾಂವ್ಕರ್ ಅವರ ಮಾವಿನ ತೋಟದಲ್ಲಿ ಒಂದು ದಿನದ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆ ಹಿರಿಯ ಅಧಿಕಾರಗಳು, ವಿಜ್ಞಾನಿಗಳು, ಪರಿಣಿತರೆಲ್ಲಾ ಸೇರಿ ರೈತರೊಂದಿಗೆ ಸಂವಾದ ಮಾಡುವ ಮೂಲಕ ರೈತರ ಅನೇಕ ಆತಂಕ, ಅನುಮಾನಗಳನ್ನು ನಿವಾರಿಸಿದರು.

ವಿಜ್ಞಾನಿಗಳು, ಅಧಿಕಾರಿಗಳಿಂದ ವಿವಿಧ ಬಗೆಯ ಪ್ರಾತ್ಯಕ್ಷಿಕೆ ಮಾವಿನ ಮರಗಳನ್ನು ನಿರ್ವಹಣೆ ಮಾಡುವುದು ಕೂಡ ಒಂದು ಸವಾಲಿನ ಕೆಲಸ. ಚೆನ್ನಾಗಿ ನಿರ್ವಹಣೆ ಮಾಡಿದರೆ ಉತ್ತಮ ಫಸಲು ಖಚಿತ. ಹೀಗಾಗಿ ಈ ಬಗ್ಗೆಯೂ ರೈತರಿಗೆ ಮಾಹಿತಿ ನೀಡಿದ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಕೊಂಬೆಯನ್ನು ಕತ್ತರಿಸುವುದು, ಫ್ರೂಟ್ ಫ್ಲೈಗಳ ಸೆಳೆಯಲು ಮೋಹಕ ಬಲೆಯನ್ನು ಅಳವಡಿಸುವುದು, ಕಾಲಕಾಲಕ್ಕೆ ಔಷಧಿ ಸಿಂಪಡಿಸುವುದರ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಈ ರೀತಿ ಮಾಡುವುದರಿಂದ ಮಾವಿನ ಫಸಲು ಉತ್ತಮವಾಗಿ ಬರುತ್ತದೆ ಎನ್ನುವುದು ವಿಜ್ಞಾನಿಗಳು ರೈತರಿಗೆ ತಿಳಿಸಿಕೊಟ್ಟರು. ಅಲ್ಲದೇ ಈ ನಿರ್ವಹಣೆಯನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಬಹುದು ಎನ್ನುವುದು ಕೂಡ ತಿಳಿಸಿಕೊಟ್ಟರು.

ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಕೊಂಬೆಯನ್ನು ಕತ್ತರಿಸುವುದು ಹೇಗೆ ಎಂದು ಬೆಳೆಗಾರರಿಗೆ ತಿಳಿಸಿಕೊಟ್ಟಿದ್ದಾರೆ

ವಿಜ್ಞಾಬಿಗಳು ಕಾಲಕಾಲಕ್ಕೆ ಔಷಧಿ ಸಿಂಪಡಿಸುವುದರ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು

ಕಾರ್ಯಾಗಾರದಿಂದ ಖುಷಿಯಾದ ಮಾವು ಬೆಳೆಗಾರರು ಇತ್ತೀಚಿನ ದಿನಗಳಲ್ಲಿ ಒಂದಲ್ಲಾ ಒಂದು ಸಮಸ್ಯೆಯಿಂದ ಬಳಲಿ, ಕೈ ಸುಟ್ಟುಕೊಳ್ಳುತ್ತಿರುವ ಮಾವು ಬೆಳೆಗಾರರಿಗೆ ಈ ಕ್ಷೇತ್ರೋತ್ಸವ ಕಾರ್ಯಕ್ರಮದಿಂದ ತುಂಬಾನೇ ಅನುಕೂಲವಾಯಿತು. ಈ ಬಗ್ಗೆ ಟಿವಿ9 ಡಿಜಿಟಲ್ ಜೊತೆಗೆ ಮಾತನಾಡಿದ ಮಾವು ಬೆಳೆಗಾರ ಪ್ರಮೋದ ಗಾಂವ್ಕರ್, ನಾವು ಕಳೆದ ಹಲವಾರು ವರ್ಷಗಳಿಂದ ಲಾಭವಿಲ್ಲದೇ ಪರದಾಡುತ್ತಿದ್ದೇವೆ. ಫಸಲು ಬಂದಾಗ ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಗದೇ ಇದ್ದರೆ, ಮಾರುಕಟ್ಟೆಯಲ್ಲಿ ಉತ್ತಮ ದರ ಸಿಕ್ಕಾಗ ನಮ್ಮಲ್ಲಿ ಉತ್ತಮ ಫಸಲು ಇರುವುದೇ ಇಲ್ಲ. ಇದೆಲ್ಲದರ ನಡುವೆ ಹವಾಮಾನ ವೈಪರೀತ್ಯದಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮಾವು ಬೆಳೆ ಕೈಗೆ ಸಿಗುತ್ತಿಲ್ಲ. ಇಂಥಹ ಸಂದಿಗ್ಧ ಸಂದರ್ಭದಲ್ಲಿ ಹಿರಿಯ ವಿಜ್ಞಾನಿಗಳು ರೈತರ ಹೊಲಗಳಿಗೆ ಬಂದು ಈ ರೀತಿಯಾಗಿ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡುತ್ತಿರುವುದು ಸಂತಸದ ಸಂಗತಿ. ಇದರಿಂದಾಗಿ ರೈತರ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗುವುದಲ್ಲದೇ ಆತ್ಮವಿಶ್ವಾಸವೂ ಹೆಚ್ಚುತ್ತದೆ ಅನ್ನುತ್ತಾರೆ.

ಇದನ್ನೂ ಓದಿ

ಕೊರೊನಾ ಎರಡನೇ ಅಲೆ ಭೀತಿಗೆ ಜನ ಡೋಂಟ್‌ಕೇರ್.. ಕಠಿಣ ರೂಲ್ಸ್ ಜಾರಿಯಾದ್ರೂ ನಿರ್ಲಕ್ಷ್ಯ, ಮತ್ತೆ ಹಳೆದಿನಗಳು ಮರುಕಳಿಸುತ್ತಾ?

ವಿಜಯಪುರಲ್ಲಿ ಕೊರೊನಾ ಉಲ್ಬಣ: ಹೋಳಿ ಹಬ್ಬಕ್ಕೆ ಬ್ರೇಕ್