ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ (Mahesh Joshi) ಅವರಿಗೆ ರಾಜ್ಯ ಸಚಿವರ ದರ್ಜೆಯ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ (State Government) ಆದೇಶ ಹೊರಡಿಸಿದೆ.
ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರಿಗೂ ಸಚಿವರ ದರ್ಜೆ ಸ್ಥಾನಮಾನ
ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರಿಗೆ ತಮ್ಮ 111ನೇ ವರ್ಷದ ಹುಟ್ಟು ಹಬ್ಬದ ಸಂಭ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜೂನ್ 30 ರಂದು ಅವರಿಗೂ ಸಚಿವರ ದರ್ಜೆ ಸ್ಥಾನಮಾನ ನೀಡಿ ಗೌರವಿಸಿದ್ದರು. 111 ವರ್ಷ ಸಂಭ್ರಮದಲ್ಲಿರುವ ಸಾಲುಮರದ ತಿಮ್ಮಕ್ಕ ಅವರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ನೀಡಿ ‘ಗ್ರೀನ್ ಅಂಬಾಸಿಡರ್’ ಗೌರವ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು.
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಸಾಲುಮರದ ತಿಮ್ಮಕ್ಕ ಇಂಟರ ನ್ಯಾಷನಲ್ ಫೌಂಡೇಶನ್ ಸಂಸ್ಥೆ ಏರ್ಪಡಿಸಿದ್ದ ಸಾಲುಮರದ ತಿಮ್ಮಕ್ಕನವರ 111ರ ಜನ್ಮದಿನದ ಸಂಭ್ರಮ ಹಾಗೂ ಸಾಲುಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್ ಪ್ರದಾನ ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾಲುಮರದ ತಿಮ್ಮಕ್ಕ ಅವರಿಗೆ ಶಾಲು ಹಾಕಿ, ಕೈಗೆ ಕಡಗ ತೊಡಿಸಿ ಸನ್ನಾನಿಸಿದ್ದಾರೆ. ಇನ್ನು ಸಮಾರಂಭದಲ್ಲಿ ಮಾತನಾಡಿದ ಬೊಮ್ಮಾಯಿ ಅವರು, ‘ರಾಜ್ಯದ ಉದ್ದಕ್ಕೂ ಪರಿಸರ ರಕ್ಷಣೆಯ ಪ್ರಚಾರ ಮಾಡಲು ಈ ಸ್ಥಾನಮಾನ ನೀಡಲಾಗಿದೆ ಎಂದರು.
ಕರ್ಮದಿಂದ ಏನನ್ನೂ ಬೇಕಾದರೂ ಸಾಧಿಸಲು ಸಾಧ್ಯ. ಅದಕ್ಕೆ ವಿದ್ಯೆ, ನೆರವು, ಉದ್ದೇಶ ಎಂಬುದು ಬೇಕಿಲ್ಲ. ಒಂದು ಧ್ಯೇಯವನ್ನಿಟ್ಟುಕೊಂಡು, ಕಾಯಕನಿಷ್ಠೆಯಿಂದ, ಸರ್ವರಿಗೂ ಒಳಿತಾಗುವಂತೆ ಕೆಲಸ ಮಾಡಿದರೇ, ಬದಲಾವಣೆಯ ಪ್ರೇರಕ ಶಕ್ತಿಯಾಗಬಹುದು ಎಂಬುದನ್ನು ಸಾಲುಮರದ ತಿಮ್ಮಕ್ಕನವರು ಸಾಧಿಸಿ ತೋರಿದ್ದಾರೆ. ಸಾಲು ಮರದ ತಿಮ್ಮಕ್ಕನವರ ಕಾರ್ಯಗಳು ಸಮಾಜಕ್ಕೆ ಉಪಯೋಗವಾಗುವುದಲ್ಲದೇ, ಹಲವಾರು ಜನರಿಗೆ ಪ್ರೇರಕವಾಗಿವೆ. ಅವರಿಗೆ ಬಂದಿರುವ ಪ್ರಶಸ್ತಿಗಳು, ಆ ಪ್ರಶಸ್ತಿಗಳ ಮೌಲ್ಯ ಹೆಚ್ಚಿದೆ. ತಿಮ್ಮಕ್ಕನವರ ಸೇವೆಯನ್ನು ಈ ನಾಡು ಎಂದಿಗೂ ಮರೆಯಲಾರದು ಎಂದು ಪ್ರಶಂಸಿಸಿದ್ದರು.