ಭಾರಿ ಮುಂಗಾರು ಮಳೆ ಮಧ್ಯೆಯೂ ಕರ್ನಾಟಕದಲ್ಲಿ ತಾಪಮಾನ ಹೆಚ್ಚಳ!

Karnataka Weather Update: ಮಳೆ ಬಂದು ಬಿಡುತ್ತಿದ್ದಂತೆಯೇ ಸೆಕೆಯ ಅನುಭವವಾಗುತ್ತದೆ. ಮಳೆಗಾಲವಾದರೂ ಬೆಂಗಳೂರಿನಲ್ಲಿ ತಣ್ಣಗಿನ ವಾತಾವರಣವೇ ಇಲ್ಲ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಬೆಂಗಳೂರೆಂದಲ್ಲ, ಕರ್ನಾಟಕದ ಅನೇಕ ಪ್ರದೇಶಗಳಲ್ಲಿಯೂ ಇಂಥ ಪರಿಸ್ಥಿತಿ ಇದೆ. ಭರ್ಜರಿ ಮುಂಗಾರು ಮಳೆಯ ನಡುವೆಯೂ ಸೆಕೆಯ ಅನುಭವವಾಗುತ್ತಿದೆ. ಇದಕ್ಕೆ ಕಾರಣವೇನು ಎಂಬುದನ್ನು ಹವಾಮಾನ ಇಲಾಖೆ ವಿವರಿಸಿದೆ.

ಭಾರಿ ಮುಂಗಾರು ಮಳೆ ಮಧ್ಯೆಯೂ ಕರ್ನಾಟಕದಲ್ಲಿ ತಾಪಮಾನ ಹೆಚ್ಚಳ!
ಸಾಂದರ್ಭಿಕ ಚಿತ್ರ
Follow us
|

Updated on: Aug 16, 2024 | 9:51 AM

ಬೆಂಗಳೂರು, ಆಗಸ್ಟ್ 16: ಪ್ರಸಕ್ತ ಋತುವಿನಲ್ಲಿ ಮುಂಗಾರು ಮಳೆ ಜೋರಾಗಿಯೇ ಸುರಿಯುತ್ತಿದೆ. ಕರ್ನಾಟಕದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಆದರೂ, ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆ ನಿಲ್ಲುತ್ತಿದ್ದಂತೆಯೇ ಸೆಕೆಯ ಅನುಭವವಾಗುತ್ತಿದೆ. ರಾಜ್ಯದಲ್ಲಿ ಮುಂಗಾರು ಮಳೆಯ ಮಧ್ಯೆಯೇ ತಾಪಮಾನವು ಗಗನಕ್ಕೇರುತ್ತಿರುವುದೇ ಇದಕ್ಕೆ ಕಾರಣ.

ಬೆಂಗಳೂರಿನಲ್ಲಿ ಆಗಸ್ಟ್ 15 ರಂದು ಗರಿಷ್ಠ ತಾಪಮಾನ 29.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಸಾಮಾನ್ಯವಾಗಿ ಇರುವ ತಾಪಮಾನಕ್ಕಿಂತ 1.4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಆಗಸ್ಟ್ 14 ರಂದು, ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇತ್ತು. ಇದು ಸಾಮಾನ್ಯಕ್ಕಿಂತ 2.8 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಬುಧವಾರ ಮತ್ತು ಗುರುವಾರ ಕನಿಷ್ಠ ತಾಪಮಾನ 22.5 ಡಿಗ್ರಿ ಸೆಲ್ಸಿಯಸ್ ಇತ್ತು. ಇದು, ಸಾಮಾನ್ಯಕ್ಕಿಂತ 2.4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ.

ಆಗಸ್ಟ್​​ನಲ್ಲಿಯೂ ಮೇ ತಿಂಗಳ ವಾತಾವರಣ!

ಈ ತಿಂಗಳಿನ (ಆಗಸ್ಟ್) ಹವಾಮಾನ ಪರಿಸ್ಥಿತಿ ಬೆಂಗಳೂರಿನಲ್ಲಿ ಹಾಗೂ ರಾಜ್ಯ ಅನೇಕ ಕಡೆಗಳಲ್ಲಿ ಮೇ ತಿಂಗಳಿನಂತೆಯೇ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ನಿರ್ದೇಶಕ ಎನ್ ಪುವಿಯರಸನ್ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಸೂರ್ಯನ ಪ್ರಖರ ಶಾಖವನ್ನು ಈ ತಿಂಗಳು ನಾವು ಗಮನಿಸಬಹುದು. ಗಾಳಿ, ಮೋಡ ಕಡಿಮೆಯಾಗಿದ್ದು ಆಕಾಶವು ಶುಭ್ರವಾಗಿ ಕಾಣಿಸುತ್ತಿದೆ. ತೇವಾಂಶ ಕೂಡ ಹೆಚ್ಚಾಗಿದೆ. ಆಗಸ್ಟ್​​ನಲ್ಲಿ ಮಳೆಯ ಪ್ರಮಾಣವೂ ಇಳಿಮುಖವಾಗಿದ್ದು, ರಾಜ್ಯದಾದ್ಯಂತ ತಾಪಮಾನ ಏರಿಕೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಮೂರು ದಿನ ಇದೇ ಗತಿ

ಇನ್ನೂ ಮೂರು ದಿನಗಳ ಕಾಲ ಇದೇ ರೀತಿಯ ತಾಪಮಾನ ಇರಲಿದೆ. ನಂತರ ಮುಂಗಾರು ಮಳೆ ಮತ್ತೆ ಚುರುಕಾಗಲಿದ್ದು ತಾಪಮಾನದಲ್ಲಿ ತುಸು ಇಳಿಕೆ ನಿರೀಕ್ಷಿಸಬಹುದು ಎಂದು ಪುವಿಯರಸನ್ ತಿಳಿಸಿದ್ದಾರೆ.

ಹಾವೇರಿಯಲ್ಲಿ ಕನಿಷ್ಠ ಮತ್ತು ಗರಿಷ್ಠ ತಾಪಮಾನದಲ್ಲಿ 6.6 ಡಿಗ್ರಿ ಸೆಲ್ಸಿಯಸ್‌ನಷ್ಟು ವ್ಯತ್ಯಾಸ ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದು ರಾಜ್ಯದಲ್ಲೇ ಕಂಡುಬಂದ ಅತಿ ಹೆಚ್ಚು ವ್ಯತ್ಯಾಸವಾಗಿತ್ತು. ಹಾವೇರಿಯಲ್ಲಿ ಗರಿಷ್ಠ ತಾಪಮಾನ 33.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಇದನ್ನೂ ಓದಿ: ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್, ಎರಡು ದಿನ ಭಾರಿ ಮಳೆ​

ಹವಾಮಾನ ಇಲಾಖೆ ಅಂಕಿಅಂಶಗಳ ಪ್ರಕಾರ, ಜೂನ್ 1 ರಿಂದ (ಮಾನ್ಸೂನ್ ಆರಂಭ) ಆಗಸ್ಟ್ 15 ರವರೆಗೆ, ಕರ್ನಾಟಕವು ಮಳೆಯಲ್ಲಿ ಶೇ 22 ರ ಏರಿಕೆ ದಾಖಲಿಸಿದೆ. ರಾಜ್ಯದಲ್ಲಿ 573.4 ಮಿಮೀ ವಾಡಿಕೆಯ ಮಳೆಯ ಮುನ್ಸೂಚನೆಗೆ ವಿರುದ್ಧವಾಗಿ, 697.3 ಮಿಮೀ ಮಳೆಯಾಗಿದೆ. ಜೂನ್ ಮತ್ತು ಜುಲೈನಲ್ಲಿ ಗರಿಷ್ಠ ಪ್ರಮಾಣದ ಮಳೆ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಮಳೆ ಪ್ರಮಾಣ ಶೇ 37ರಷ್ಟು ಏರಿಕೆಯಾಗಿದೆ. ಜೂನ್ 1 ರಿಂದ ಆಗಸ್ಟ್ 15 ರವರೆಗೆ ನಗರದಲ್ಲಿ 287.8 ಮಿಮೀ ಮಳೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ