ಶಿರೂರು ದುರಂತ; ಗುಡ್ಡ ಕುಸಿತದ ಬಗ್ಗೆ ಮೊದಲೇ ತಿಳಿದಿದ್ದ NHAI

ಶಿರೂರು ಘೋರ ದುರಂತ ಆದ ಬೆನ್ನಲ್ಲೆ ಹತ್ತು ಹಲವು ಸತ್ಯ ಘಟನೆಗಳು ಹೊರ ಬರುತ್ತಿವೆ. ಪ್ರಮುಖವಾಗಿ ಶಿರೂರು ನಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದೆ ಎಂದು ತಜ್ಞರ ತಂಡ ಖಚಿತವಾಗಿ ಹೇಳಲಾಗಿತ್ತು. ಈ ಹಿನ್ನಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು 2020 ರಲ್ಲಿ ಅರಣ್ಯ ಇಲಾಖೆಯಿಂದ ಹೆಚ್ಚುವರಿ ಭೂಮಿಯನ್ನು ಪಡೆದಿದ್ದರು. ಆದ್ರೆ, ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳದೆ ದಿವ್ಯ ನಿರ್ಲಕ್ಷ್ಯ ವಹಿಸಿರುವ ಆಘಾತಕಾರಿ ಮಾಹಿತಿಯೊಂದು ಹೊರ ಬಂದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ .

ಶಿರೂರು ದುರಂತ; ಗುಡ್ಡ ಕುಸಿತದ ಬಗ್ಗೆ ಮೊದಲೇ ತಿಳಿದಿದ್ದ NHAI
ಶಿರೂರು ಗುಡ್ಡ ಕುಸಿತದ ಬಗ್ಗೆ ಮೊದಲೇ ತಿಳಿದಿದ್ದ NHAI
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 20, 2024 | 10:43 PM

ಉತ್ತರ ಕನ್ನಡ, ಆ.20: ಒಂದೆಡೆ ಹೆದ್ದಾರಿಯಲ್ಲಿ ನಿರಂತರ ಭೂ ಕುಸಿತ, ಮತ್ತೊಂದೆಡೆ 11 ಸಾವುಗಳು. ಇನ್ನೂ ಮೂರು ಜನರಿಗಾಗಿ ನಿರಂತರವಾಗಿ ನಡೆಯುತ್ತಿರುವ ಶೋಧ ಕಾರ್ಯ. ಹೌದು, ಯಾರೋ ಮಾಡಿದ ತಪ್ಪಿಗೆ ಅಮಾಯಕ ಜೀವಗಳು ಬಲಿಯಾಗಿವೆ. ಉತ್ತರ ಕನ್ನಡ(Uttara kannada) ಜಿಲ್ಲೆಯಲ್ಲಿ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಗೆ ಕಳೆದ 11 ವರ್ಷದಿಂದ ಜನರ ಜೀವ ಹಾಗೂ ಜೀವನ ಬಲಿಯಾಗುತ್ತಲಿದೆ. ಹೀಗಿದ್ದರೂ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆ ಪಡೆದ ಕಂಪನಿಗಳು ಮಾತ್ರ ತಮಗೇನೂ ಸಂಬಂಧವಿಲ್ಲ ಎನ್ನುತ್ತಲೇ ಸಾಗಿದೆ.

ಗುಡ್ಡ ಕುಸಿತ ತಿಳಿದಿದ್ದರೂ ಅಗತ್ಯ ಕ್ರಮ ಕೈಗೊಳ್ಳದೇ IRB ನಿರ್ಲಕ್ಷ್ಯ

2017 ರ ಕುಮಟಾದ ತಂಡ್ರಕುಳಿ ಭೂ ಕುಸಿತವಾಗಿ ಮೂರು ಸಾವಿನ ಬಳಿಕ ಇದೀಗ ಶಿರೂರಿನಲ್ಲಿ 11 ಸಾವಾಗುವುದರ ಜೊತೆಗೆ ಮಳೆಯ ಸಂದರ್ಭದಲ್ಲಿ ಆಗುತ್ತಿರುವ ಅನಾಹುತಗಳಿಗೆ ಜೀವನ ನಡೆಸುವುದು ಕಷ್ಟ ಆಗುತ್ತಿದೆ. ಹೆದ್ದಾರಿ ಪ್ರಾಧಿಕಾರಕ್ಕೆ ಹಾಗೂ IRB ಕಂಪನಿಗೆ ಈ ಭಾಗದಲ್ಲಿ ಭೂ ಕುಸಿವಾಗುವ ಮಾಹಿತಿ ಇದ್ದರೂ ಅರಣ್ಯ ಇಲಾಖೆಯಿಂದ ಹೆಚ್ಚುವರಿ ಭೂಮಿ ಪಡೆದು, ಅಗತ್ಯ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿರುವ ಬಗ್ಗೆ ದಾಖಲೆಗಳು ಮಾಧ್ಯಮಕ್ಕೆ ದೊರೆತಿದೆ.

ಇದನ್ನೂ ಓದಿ:ಶಿರೂರು ಗುಡ್ಡ ಕುಸಿತ; ತಿಂಗಳು ಕಳೆದರೂ ಸಂತ್ರಸ್ಥರಿಗೆ ಸಿಕ್ಕಿಲ್ಲ ಇನ್ನೂ ಪರಿಹಾರ

ಈ ದಾಖಲೆ ಪ್ರಕಾರ ಅಂಕೋಲಾ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ಕರಾವಳಿ ಭಾಗದಲ್ಲಿ ಗುಡ್ಡ ಕುಸಿಯಲಿದೆ ಎಂದು 2020ರಲ್ಲೇ ಅರಣ್ಯ ಜಾಗಕ್ಕೆ NHAI ಬೇಡಿಕೆ ಇಟ್ಟಿದ್ದು, ಇದರಂತೆ ಅರಣ್ಯ ಇಲಾಖೆಯಿಂದ 28.218 ಹೆಕ್ಟೇರ್ ಜಾಗ ಹಾಗೂ ಖಾಸಗಿಯಿಂದ 3.411ಹೆಕ್ಟೇರ್ NHAIಗೆ ಪೂರೈಕೆಯೂ ಸಹ ಮಾಡಲಾಗಿದ್ದು, 2017 ರಲ್ಲಿ ತಂಡ್ರಕುಳಿ ಭೂ ಕುಸಿತವಾದ ನಂತರ ಬೆಂಗಳೂರಿನ ಐಐಎಸ್‌ಸಿ ಪ್ರೊ. ಟಿ.ಜಿ.ಸೀತಾರಾಮ್ ಸ್ಥಳಕ್ಕೆ ಭೇಟಿ ನೀಡಿ ಭವಿಷ್ಯದಲ್ಲಿ ಗುಡ್ಡ ಕುಸಿತವಾಗದಂತೆ ತಡೆಯಲು ಉದ್ದ ಹಾಗೂ ಅಡ್ಡಲಾಗಿ ಸ್ಟೆಪ್ ಮಾದರಿಯಲ್ಲಿ ತುಂಡರಿಸಲು ಸೂಚಿಸಿದ್ದು, ಈ ಬಗ್ಗೆ ಜಿಲ್ಲಾಡಳಿತದೊಂದಿಗೂ ಒಪ್ಪಂದವಾಗಿತ್ತು. ಆದರೆ, ಇದೀಗ ಈ ದಾಖಲೆ ಜಿಲ್ಲಾಡಳಿತದ ಬಳಿಯೂ ಮಾಯವಾಗಿದ್ದು, ಇದರ ದಾಖಲೆ ನೀಡುವಂತೆ ಜಿಲ್ಲಾಡಳಿತ MHAI ಗೆ ಸೂಚಿಸಿದೆ. ಹೀಗಿದ್ದರೂ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ NHAI ಹಾಗೂ IRB ಕಂಪನಿ ಸುರಕ್ಷತೆಯ ಒಪ್ಪಂದ ಪತ್ರ ಸಹ ನೀಡದೇ ವಂಚಿಸುತ್ತಿದೆ.

ಇನ್ನು ಐ.ಆರ್.ಬಿ ಕಂಪನಿ ಹಾಗೂ NHAI ನಿರ್ಲಕ್ಷ ಕುರಿತು ಅಂಕೋಲಾ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡಲಾಗಿದೆ. ಜೊತೆಗೆ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯೂ ಭೂ ಕುಸಿತಕ್ಕೆ ಕಾರಣ ಎಂದು ವರದಿ ನೀಡಿರುವುದನ್ನು ಆಧರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೇಂದ್ರ ಅರಣ್ಯ ಮತ್ತು ಸಚಿವಾಲಯ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತದಿಂದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ರಾಷ್ಟ್ರೀಯ ಹಸಿರು ಪೀಠ ವಿವರಣೆ ಕೇಳಿದೆ.

ಸದ್ಯ ಹಲವು ದಾಖಲೆಗಳಿಂದ ಅವೈಜ್ಞಾನಿಕ ಕಾಮಗಾರಿ ಹಾಗೂ ಸೂಕ್ತ ಅಧ್ಯಯನ ನಡೆಸದೇ ಕಾಮಗಾರಿ ನಡೆಸಿದ್ದು, ಪರಿಸರ ಸಂರಕ್ಷಣೆ ಕಾಯ್ದೆ ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿದೆ ಎಂದು ರಾಷ್ಟ್ರೀಯ ಹಸಿರು ಪೀಠ ಅಭಿಪ್ರಾಯ ಪಟ್ಟಿದ್ದು, ಈ ಪ್ರಕರಣದ ವಿಚಾರಣೆಯನ್ನು ದಕ್ಷಿಣ ವಲಯ ಪೀಠಕ್ಕೆ ವರ್ಗಾಯಿಸಿದೆ. ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ IRB ಕಂಪನಿ ನಿರ್ಲಕ್ಷ್ಯ ಹಲವು ಜೀವಗಳು ಬಲಿಯಾಗುವಂತೆ ಮಾಡಿದ್ದು, ಇನ್ನಾದರೂ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ