ಬೆಂಗಳೂರು: ರಾಜ್ಯಾದ್ಯಂತ ಮಸೀದಿಗಳಲ್ಲಿರುವ ಧ್ವನಿವರ್ಧಕ ತೆರವುಗೊಳಿಸುವ ಕುರಿತಾಗಿ ಸುತ್ತೋಲೆ ಹೊರಡಿಸಿರುವ ಪೊಲೀಸ್ ಮಹಾನಿರ್ದೇಶಕರು, ಕಾನೂನಿನ ಪ್ರಕಾರ ಕಾರ್ಯಪ್ರವೃತ್ತರಾಗಲು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಆದೇಶಿಸಿದ್ದಾರೆ.
ಧ್ವನಿವರ್ಧಕಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ವಕೀಲರೊಬ್ಬರು ಇತ್ತೀಚೆಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಡಿಜಿ & ಐಜಿಪಿ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ. ವಕೀಲ ಹರ್ಷ ಮುತಾಲಿಕ್ ಸಲ್ಲಿಸಿದ್ದ ಆಕ್ಷೇಪಣೆ ಮೇರೆಗೆ ಪೊಲೀಸ್ ಆಯುಕ್ತರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ಹೊರಡಿಸಿದ್ದಾರೆ.
ಸುಪ್ರೀಂ ಕೋರ್ಟ್ ಸೂಚನೆಯಂತೆ ಕ್ರಮ ಕೈಗೊಳ್ಳಿ
ಈ ಹಿಂದೆ ಸರ್ವೋಚ್ಛ ನ್ಯಾಯಾಲಯ ಈ ಕುರಿತು ವಿವರವಾದ ಮಾರ್ಗಸೂಚಿ ಹೊರಡಿಸಿದೆ. ಆ ಪ್ರಕಾರ ಹೋದರೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಧ್ವನಿವರ್ಧಕ ಬಳಸಲು ನಿರ್ಬಂಧ ಇದೆ. ಮತ್ತು ಧ್ವನಿವರ್ಧಕ ಬಳಸುವಾಗ 75 ಡೆಸಿಬಲ್ ಗಿಂತ ಜಾಸ್ತಿ ಶಬ್ದವಿರಬಾರದು ಎಂದು 2005 ರ ಮಾರ್ಗಸೂಚಿ ಹೇಳುತ್ತದೆ.