ಬೆಳಗಾವಿ:ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರಿಗೆ ಸಂಬಳ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಸಾರಿಗೆ ನೌಕರರ ಸಂಬಳ ನೀಡಲು ಸರ್ಕಾರದ ಬೊಕ್ಕಸದಲ್ಲಿ ದುಡ್ಡೇ ಇಲ್ಲವಂತೆ. ಹೀಗಾಗಿ ಮೂರು ತಿಂಗಳಿಂದ ಸಾರಿಗೆ ಇಲಾಖೆ ಮನವಿ ಮಾಡಿದ್ರೂ ಸರ್ಕಾರ ಹಣ ನೀಡುತ್ತಿಲ್ಲ. ಅಲ್ಲದೆ ಹಣದ ಸಮಸ್ಯೆಯಿಂದಾಗಿ ಸಾರಿಗೆ ನೌಕರರ ಸಂಬಳಕ್ಕೆ ಕತ್ತರಿ ಹಾಕಲಾಗಿದೆ ಎಂದು ವರದಿಯಾಗಿದೆ.
ಬರುತ್ತಿರುವ ಆದಾಯ ಬರೀ ಡೀಸೆಲ್ಗೆ ಸಾಕಾಗುತ್ತಿದೆ..
ಸಾರಿಗೆ ನೌಕರರ ಸಂಬಳದ ಬಗ್ಗೆ ಬೆಳಗಾವಿಯಲ್ಲಿ ಟಿವಿ9 ಜೊತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡಿದ್ದು, ಸಾರಿಗೆ ನೌಕರರು ಅಳಲನ್ನು ನಾನು ಒಪ್ಪಿಕೊಳ್ಳುತ್ತೇನೆ. ದುರ್ದೈವದಿಂದ ಸಂಬಳ ನೀಡಲು ಆಗಿಲ್ಲ. ಎಂಟು ತಿಂಗಳಿಂದ ಕೊರೊನಾ ಬಂದಿದ್ದು, ಮೊದಲ ಎರಡು ತಿಂಗಳು ಸರ್ಕಾರದಿಂದ ಸಂಬಳ ನೀಡಿದ್ದೇವೆ. ಆದರೆ ಬಸ್ನಲ್ಲಿ ಯಾರು ಜನ ಬರ್ತಾಯಿಲ್ಲ. ಹೀಗಾಗಿ ಬರ್ತಾಯಿರುವ ಆದಾಯ ಬರೀ ಡೀಸೆಲ್ಗೆ ಸಾಕಾಗುತ್ತಿದೆ.
ಈ ಕಾರಣಕ್ಕೆ ಸರ್ಕಾರಕ್ಕೆ ಸಂಬಳ ನೀಡುವಂತೆ ಪ್ರಸ್ತಾವನೆ ಕಳುಹಿಸಿದ್ದೆವು. ಪ್ರತಿ ತಿಂಗಳು 325 ಕೋಟಿ ಸಂಬಳಕ್ಕೆ ಹಣ ಬೇಕು. ಇನ್ನೂ ಮೂರು ತಿಂಗಳು ಸರ್ಕಾರವೇ ಹಣ ಕೊಡಬೇಕು ಅಂತಾ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅಲ್ಲದೆ ಮೂರ್ನಾಲ್ಕು ದಿನಗಳಲ್ಲಿ ಸಿಎಂಗೆ ಮನವರಿಕೆ ಮಾಡಿಕೊಟ್ಟು ಸಂಬಳ ನೀಡಲು ಮನವಿ ಮಾಡುತ್ತೇನೆ ಎಂದು ಸವದಿ ಹೇಳಿದ್ದಾರೆ.
ನಾವು ಕಳಿಸಿದ್ದ ಪ್ರಸ್ತಾವನೆ ವಾಪಸ್ ಬಂದಿದೆ..
ಮೂರು ತಿಂಗಳಿಂದ ಸಂಬಳಕ್ಕಾಗಿ ಎರಡು ಬಾರಿ ಪ್ರಸ್ತಾವನೆ ಕಳುಹಿಸಿದ್ದೆವು. ಅದರಲ್ಲಿ ಎರಡು ಬಾರಿ ನಾವು ಕಳಿಸಿದ್ದ ಪ್ರಸ್ತಾವನೆ ವಾಪಸ್ ಬಂದಿದೆ. ಮತ್ತೇ ಈಗ ಪ್ರಸ್ತಾವನೆ ಕಳ್ಸಿದ್ದೇವೆ. ಶೇಕಡಾ 70ರಷ್ಟಾದ್ರೂ ಸರ್ಕಾರ ಹಣ ಕೊಟ್ರೇ ಉಳಿದಿದ್ದನ್ನ ಸಾಲ ಪಡೆದುಕೊಂಡಾದ್ರೂ ಸಂಬಳ ನೀಡುತ್ತೇವೆ. ಸರ್ಕಾರದಲ್ಲಿ ಆದಾಯದ ಕೊರತೆ ಇರುವುದಕ್ಕೆ ಮುಂದಕ್ಕೆ ಹಾಕುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ.
ಪ್ರತಿ ತಿಂಗಳು ಸಂಬಳ ಬಂದ್ರೇ ನೌಕರರು ಖುಷಿಯಾಗುತ್ತಾರೆ. ಸಂಬಳ ನೀಡದಿದ್ದಾಗ ಸಹಜವಾಗಿ ಅಸಮಾಧಾನ ಪಡುತ್ತಾರೆ. ಹೀಗಾಗಿ ಮೂರ್ನಾಲ್ಕ ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದ್ರೂ ಸಂಬಳ ಕೊಡಿಸುತ್ತೇನೆ ಎಂದು ಬೆಳಗಾವಿಯಲ್ಲಿ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದಾರೆ.