ಹುಬ್ಬಳ್ಳಿ: ಹೆಚ್.ವಿಶ್ವನಾಥ್ಗೆ ಸಿಗಬೇಕಾದ ಮಿಠಾಯಿ ಸಿಗುತ್ತಿಲ್ಲ. ಹೀಗಾಗಿ, ಶಾಲೆ ಆರಂಭ ಕುರಿತ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ ಎಂದು ಜ.1ರಿಂದ ಶಾಲಾ-ಕಾಲೇಜು ಆರಂಭಕ್ಕೆ ವಿಶ್ವನಾಥ್ ವಿರೋಧಿಸಿರುವ ಕುರಿತು ಎಂಎಲ್ಸಿ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದಾರೆ.
ಶಾಲೆಗಳನ್ನ ಆರಂಭ ಮಾಡಬೇಕಿದೆ. ಇಲ್ಲದಿದ್ದರೆ ಮಕ್ಕಳಿಗೆ ಶಾಲೆಗಳ ಸಂಪರ್ಕ ತಪ್ಪುತ್ತದೆ. ಸರ್ಕಾರ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು ಶಾಲೆಗಳನ್ನ ಆರಂಭಿಸಬೇಕು. ಒಂದು ವಾರ ಶಾಲೆ ನಡೆದರೆ ಪರಿಸ್ಥಿತಿ ಏನೂ ಅನ್ನೋದು ತಿಳಿಯಲಿದೆ ಎಂದು ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹೇಳಿದರು.
ರಾತ್ರಿ 10ಕ್ಕೆ ಕರ್ಫ್ಯೂ ಜಾರಿ ಮಾಡಿದ್ದು ಸರಿ ಇತ್ತು. ಆದರೆ, ಸರ್ಕಾರ ಪದೇಪದೇ ಆದೇಶಗಳನ್ನು ಬದಲಿಸಬಾರದು. ಸಿಎಂ ಒಂದು ಸಾರಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ ನಂತರ ನಿರ್ಧಾರ ಬದಲಿಸಬಾರದು. ಸರ್ಕಾರ ನೈಟ್ ಕರ್ಫ್ಯೂವನ್ನು 15 ದಿನಗಳ ಮುಂಚಿತವಾಗಿಯೇ ನಿರ್ಧರಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಕ್ರಿಸ್ಮಸ್ ವೇಳೆ ನೈಟ್ ಕರ್ಫ್ಯೂ ಜಾರಿ ಮಾಡಿದ್ದು ಸರಿಯಿಲ್ಲ. ಸರ್ಕಾರ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ವಿರೋಧ ಪಕ್ಷದ ನಾಯಕರ ಸಲಹೆ ಸಹ ಪಡೆಯುತ್ತಿಲ್ಲ. ವಿರೋಧ ಪಕ್ಷಗಳು ಸಹ ಸರ್ಕಾರದ ಒಂದು ಭಾಗ. ಅದ್ರೆ ಸರ್ಕಾರ ಸಲಹೆ ಸಹ ಕೇಳುತ್ತಿಲ್ಲ. ಸರ್ಕಾರ ಯಾವ ಒತ್ತಡಕ್ಕೆ ಮಣಿದು ನೈಟ್ ಕರ್ಫ್ಯೂ ನಿರ್ಧಾರವನ್ನು ಬದಲಾವಣೆ ಮಾಡಿತು ಗೊತ್ತಾಗುತ್ತಿಲ್ಲ ಎಂದು ಬಸವರಾಜ ಹೊರಟ್ಟಿ ಹೇಳಿದರು.
ನಮ್ಮದೇನೂ ವೈಯಕ್ತಿಕ ಪ್ರತಿಷ್ಠೆ ಅಲ್ಲ.. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ ಆರಂಭ ಮಾಡ್ತಿದ್ದೇವೆ -ಸುರೇಶ್ ಕುಮಾರ್