ಚಾಮರಾಜನಗರ: ಜಿಲ್ಲೆಯ ಗಡಿಭಾಗದಲ್ಲಿ ತಮಿಳು ಭಾಷೆಯ ಸೂಚನಾಫಲಕಗಳ ವಿರುದ್ಧ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಎರಡನೇ ಬಾರಿ ದಾಳಿ ನಡೆಸಿದ್ದಾರೆ. ಒಂದೇ ವಾರದಲ್ಲಿ ಎರಡನೇ ಬಾರಿಗೆ ತಮಿಳು ಭಾಷೆಯ ಸೂಚನಾಫಲಕಗಳನ್ನು ವಾಟಾಳ್ ನಾಗರಾಜ್ ಮತ್ತು ಅವರ ಬೆಂಬಲಿಗರು ಕಿತ್ತೆಸೆದಿದ್ದಾರೆ.
ಕಳೆದ ಭಾನುವಾರ ಕೋಳಿಪಾಳ್ಯದ ಬಳಿ ತಮಿಳು ಭಾಷೆಯಲ್ಲಿದ್ದ ಸೂಚನಾಫಲಕಗಳನ್ನು ಕಿತ್ತು ಹಾಕಿದ್ದ ವಾಟಾಳ್ ಇಂದು ಎರಡನೇ ಬಾರಿಗೆ ದಾಳಿ ಮುಂದುವರಿಸಿದ್ದಾರೆ. ಕೊಂಗಳ್ಳಿ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋಗುವ ಎತ್ತಗಟ್ಟಿ ಬೆಟ್ಟದ ರಸ್ತೆಯ ಬಳಿಯಿರುವ ತಮಿಳು ಭಾಷೆಯ ಸೂಚನಾಫಲಕಗಳನ್ನು ವಾಟಾಳ್ ಹಾಗೂ ಅವರ ಬೆಂಬಲಿಗರು ತೆರವುಗೊಳಿಸಿದರು.
ತಮಿಳು ಸೂಚನಾಫಲಕಗಳನ್ನು ತೆರವುಗೊಳಿಸಿದ ವಾಟಾಳ್ ನಾಗರಾಜ್ ತಮ್ಮ ಆಕ್ರೋಶ ಹೊರಹಾಕಿದರು. ಇದು ಕರ್ನಾಟಕದ ಗಡಿ ಗ್ರಾಮವಾದರೂ ತಮಿಳು ಸೂಚನಾಫಲಕಗಳು ರಾರಾಜಿಸುತ್ತಿದೆ. ಹಾಗಾಗಿ, ಇವುಗಳನ್ನು ಸುತ್ತಿಗೆಯಿಂದ ಬಡಿದು ತೆರವುಗೊಳಿಸಿದ್ದೇನೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಅಂದ ಹಾಗೆ, ಎತ್ತಗಟ್ಟಿ ಬೆಟ್ಟ ತಮಿಳುನಾಡಿನ ತಾಳವಾಡಿ ತಾಲೂಕಿಗೆ ಸೇರುತ್ತದೆ. ಹೀಗಾಗಿ, ಕಳೆದ ಬಾರಿ ತಮಿಳು ಸೂಚನಾಫಲಕಗಳನ್ನು ತೆರವುಗೊಳಿಸಿದ್ದಕ್ಕೆ ತಾಳವಾಡಿ ಪೊಲೀಸರು ವಾಟಾಳ್ ನಾಗರಾಜ್ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಕರ್ನಾಟಕದಲ್ಲಿ ಸೂಚನಾ ಫಲಕ.. ತಮಿಳಿನಲ್ಲಿ ಅಲ್ಲ, ಕನ್ನಡದಲ್ಲಿ ಇರಬೇಕು -ಬೋರ್ಡ್ ಕಿತ್ತೊಗೆದ ವಾಟಾಳ್