New Book : ಅಚ್ಚಿಗೂ ಮೊದಲು ; ನಾಳೆ ಅರಳಲಿದೆ ದಾದಾಪೀರ್ ಜೈಮನ್ ಕಥಾ ಸಂಕಲನ ’ನೀಲಕುರಿಂಜಿ’

Story Writing : ‘ಕಥೆಗಳು ಇಷ್ಟಿಷ್ಟೇ ತಮ್ಮನ್ನು ಬಿಟ್ಟುಕೊಡುವ ಹಾಗೂ ನಿತ್ಯ ಹೊಸತೆನಿಸುವ ಶುದ್ಧ ಪ್ರೇಮದ ಹಾಗೆ. ನಮಗೆ ಯಾವತ್ತು ನನಗೆ ಕಥೆ ಬರೆಯುವುದು ಗೊತ್ತು ಎಂಬ ಗರ್ವ ಬರುತ್ತದೋ ಬಹುಶಃ ಅಂದಿನಿಂದ ನಾವು ಯಾವ ಕಥೆಯನ್ನೂ ಕೂಡ ಬರೆಯಲಾಗುವುದಿಲ್ಲ.’ ದಾದಾಪೀರ್ ಜೈಮನ್

New Book : ಅಚ್ಚಿಗೂ ಮೊದಲು ; ನಾಳೆ ಅರಳಲಿದೆ ದಾದಾಪೀರ್ ಜೈಮನ್ ಕಥಾ ಸಂಕಲನ ’ನೀಲಕುರಿಂಜಿ’
ಲೇಖಕ ದಾದಾಪೀರ ಜೈಮನ್
Follow us
|

Updated on:Oct 12, 2021 | 12:26 PM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ನೀಲಕುರಿಂಜಿ (ಕಥಾ ಸಂಕಲನ) ಲೇಖಕರು : ದಾದಾಪೀರ್ ಜೈಮನ್  ಪುಟ : 102 ಬೆಲೆ : ರೂ. 120 ಮುಖಪುಟ ವಿನ್ಯಾಸ : ಎಂ. ಎಸ್. ಪ್ರಕಾಶ ಬಾಬು ಪ್ರಕಾಶನ : ವೈಷ್ಣವಿ ಪ್ರಕಾಶನ, ಕೆ. ಗುಡದಿನ್ನಿ, ರಾಯಚೂರು

ಈ ಕಥಾ ಸಂಕಲನವು ಇದೇ ಬುಧವಾರ (ಅ.13) ಸಂಜೆ 6ಕ್ಕೆ ‘ಗಲಾಟೆ ಗಂಧರ್ವರು’ ಫೇಸ್​ಬುಕ್​ ಪುಟದಲ್ಲಿ ಹಿರಿಯ ಕವಿ ಮಮತಾ ಸಾಗರ ಅವರಿಂದ ಬಿಡುಗಡೆಗೊಳ್ಳಲಿದೆ. ಈ ಸಂದರ್ಭದಲ್ಲಿ ಕಥೆಗಾರ ದಾದಾಪೀರ್ ಜೈಮನ್, ಕಥೆಯು ಕಥೆಗಾರನ ಕೈ ಹಿಡಿಯುವ ಪರಿಯನ್ನು ಇಲ್ಲಿ ಹಂಚಿಕೊಳ್ಳಲು ಪ್ರಯತ್ನಿಸಿದ್ದಾರೆ ಮತ್ತು ಅವರ ಕಥೆಗಳ ಬಗ್ಗೆ ವಿಮರ್ಶಕ ಕೇಶವ ಮಳಗಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

*

ಹೊಸ ತಾರುಣ್ಯವು ಪ್ರೇರಣೆ ಪಡೆಯುತ್ತಿರುವುದು ಸಮಕಾಲೀನ ಸಮಾಜದ ವಾಸ್ತವಗಳ ಜತೆಜತೆಗೆ, ಸಾಹಿತ್ಯ ಇತಿಹಾಸದ, ಪರಂಪರೆಯ ಭಾಗವೇ ಆದ ಕಳೆದ ಮೂರುನಾಲ್ಕು ದಶಕಗಳ ಸಾಹಿತ್ಯದಿಂದಲೇ. ಅಂದರೆ, ನವ ಲೇಖಕರ ಅಭಿವ್ಯಕ್ತಿ ತನ್ನೆಲ್ಲ ಹೊಸ ಕಸುವಿನೊಂದಿಗೆ ಪ್ರಕಟಗೊಳ್ಳುತ್ತಿದ್ದರೂ ಅದರ ಬೇರಿನ ಒಂದು ಭಾಗ ಸಿದ್ಧಮಾದರಿ, ನೈಜವಲ್ಲದ, ತಾರ್ಕಿಕ ಅಂತ್ಯ, ಈಗಲಷ್ಟೇ ನ್ಯಾಯಪಡೆದು ಸಿದ್ಧ ಎಂಬ ಜಿಗುಟುತನಗಳಲ್ಲಿ ಕೊಂಚ ಮಾತ್ರ ಬೇರು ಬಿಟ್ಟಿರುವುದು ಕೂಡ ಕಾಣಿಸುವ ಸತ್ಯವೇ ಆಗಿದೆ. ಸಂತಸದ ಸಂಗತಿಯೆಂದರೆ, ಹೊಸ ಲೇಖಕರು ಅಂತಹ ಕಟ್ಟುಗಳನ್ನು ಕಳಚುತ್ತ ನಿಜವಾದ ವರ್ತಮಾನದ ಇತಿಹಾಸಕಾರರಾಗುವತ್ತ ಆಸಕ್ತರಾಗಿರುವುದು. ಅವರು ಕಳಚಿಕೊಳ್ಳುತ್ತಿರುವುದು ತಮ್ಮ ಬೆನ್ನೇರಿದ ಕೃತಕ ಭಾರದ ಸರಳುಗಳನ್ನೇ ಹೊರತು ಇನ್ನೇನಲ್ಲ! ಅಂಶವೇ ಹೊಸ ಮತ್ತು ಮುಕ್ತಛಂದಸ್ಸನ್ನು ನಿರ್ಮಿಸುತ್ತಿರುವ ಮುಖ್ಯ ಅಂಶವಾಗಿದೆ. ಈ ನಿಟ್ಟಿನಲ್ಲಿ ದಾದಾಪೀರ್ ಜೈಮನ್ ಮತ್ತು ಅವರಂಥ ಒಬ್ಬಿಬ್ಬರು ಲೇಖಕರನ್ನು ಈ ಹೊಸ ಕಥನಮಾರ್ಗದ ಭರವಸೆಯ ಲೇಖಕರು ಎಂದು ನಾನು ತಿಳಿದಿದ್ದೇನೆ. ಕಥಾವಸ್ತು, ಒಟ್ಟಾರೆ ಕಟ್ಟೋಣದಲ್ಲಿ ಇವರು ಸಾಧಿಸುತ್ತಿರುವ ಪರಿಣತಿ, ಬದುಕಿನ ಕುರಿತು ರೂಢಿಸಿಕೊಳ್ಳುತ್ತಿರುವ ಹದವಾದ ದೃಷ್ಟಿಕೋನವನ್ನು ಆಯಾ ಕಥೆಗಳಲ್ಲಿ ಸಾಧಿಸುತ್ತಿರುವ ಕೊಂಚ ಮಾತ್ರದ ಪಕ್ವತೆಗಳು ಇಂತಹ ಮಾತುಗಳನ್ನು ಬರೆಯಲು ಪ್ರೇರೇಪಿಸುತ್ತಿವೆ. ಇಂಥ ಲೇಖಕರ ಈವರೆಗಿನ ಬೆರಳೆಣಿಕೆಯ ಕಥೆಗಳು ಕಥನಮಾರ್ಗ ಮುಂದೆ ಪಡೆದುಕೊಳ್ಳಬಹುದಾದ ನಡಿಗೆಯನ್ನೂ ಸೂಚಿಸುತ್ತಿರುವಂತಿದೆ. ಕೇಶವ ಮಳಗಿ, ಹಿರಿಯ ವಿಮರ್ಶಕ 

*

‘ಕಥೆ ಬಂದು ಬಾಗಿಲು ತಟ್ಟುವ ಆ ವೇಳೆ’

ನನ್ನ ಪ್ರಕಾರ ಕಥೆ ಎಂದರೆ ಚೌಕಟ್ಟಿನೊಳಗೆ ಹಿಡಿದಿಟ್ಟ ಬದುಕಿನ ಭಾಗ. ಆದರೆ ಕಥೆ ಅದರಾಚೆಗೂ ಮುಂದುವರೆಯುತ್ತದೆ ಹಾಗೂ ಕಥೆ ಯಾರಿಗಾಗಿಯೂ ಕಾಯುವುದಿಲ್ಲ. ಕಥೆಗಾರ ಕೇವಲ ನಿಮಿತ್ತವಷ್ಟೆ. ಕಥೆಗಾರರು ಸುಮ್ಮನೆ ತನಗೊದಗಿ ಬಂದ ಕಥೆಗಳನ್ನು ಹೇಳುವ ಕೆಲಸವನ್ನು ಮಾಡುತ್ತಾ ಹೋಗಬೇಕು. ಕಥೆ ಬರೆಯುತ್ತಾ ಬರೆಯುತ್ತಾ ತಿಳಿವನ್ನು ಹಿಗ್ಗಿಸಿಕೊಳ್ಳುವ, ಬದುಕನ್ನು ಹಲವು ಆಯಾಮಗಳಿಂದ ನೋಡುವ, ಈವರೆಗೂ ಗೊತ್ತಿರದ ಯಾವುದೋ ಒಂದು ಅವ್ಯಕ್ತವಾದೊಂದು ದಕ್ಕುವ ಘಳಿಗೆಗೆ ಒಡ್ಡಿಕೊಳ್ಳುವುದೇ ಒಂದು ಅಪೂರ್ವ ಕ್ಷಣ. ಕಥೆಗಾರರಿಗೆ ಅದಷ್ಟೇ ಆ ಕ್ಷಣದ ಸತ್ಯ ಎಂದು ನನಗನಿಸುತ್ತದೆ.

ಅಷ್ಟಕ್ಕೂ ಕಥೆ ಹೇಗೆ ಹುಟ್ಟುತ್ತದೆ ಎಂಬ ಪ್ರಶ್ನೆ ಹಾಕಿಕೊಂಡರೆ ಒಂದು ಸಿದ್ಧ ಉತ್ತರ ಸಿಗುವುದಿಲ್ಲ. ಒಮ್ಮೊಮ್ಮೆ ಇದನ್ನು ಹೇಳಬೇಕು ಎಂದು ಹೊರಟು ಅದು ಮತ್ತೇನೋ ಆಗಿರುತ್ತದೆ. ಮತ್ತೊಮ್ಮೆ ನಮ್ಮೊಳಗಿದ್ದ ಯಾವುದೋ ಎಳೆ ಕಥೆಯೊಂದನ್ನು ಬರೆಸಿಕೊಳ್ಳುತ್ತದೆ. ಮತ್ತೂ ಕೆಲವು ಸಲ ನಾವು ಇಲ್ಲಿಯವರೆಗೂ ಕಂಡ ಯಾವುದೋ ಘಟನೆ, ವ್ಯಕ್ತಿಗಳು ಇಲ್ಲೇನೋ ಕಥೆ ಇದೆ ಮತ್ತು ಬರೆಯಲು ಕೂತರೆ ಮಾತ್ರ ಅದು ಗೊತ್ತಾಗುತ್ತದೆ ಎನಿಸುತ್ತದೆ. ಹೀಗೆ ಒಂದೊಂದು ಸಲ ಒಂದೊಂದು ತರಹ. ಇದನ್ನು ಯಾಕೆ ಕೇಳುತ್ತಿದ್ದೇನೆ ಎಂದರೆ ಕಥೆ ಹೀಗೆಯೇ ಹುಟ್ಟುತ್ತದೆ  ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಅದು ಪ್ರತಿಬಾರಿಯು ದೇಶ, ಕಾಲ ಹಾಗೂ ಪಾತ್ರಕ್ಕೆ ತಕ್ಕಂತೆ ಭಿನ್ನವಾಗಿ ಅವತಾರವೆತ್ತುವ ಶಕ್ತಿಕೇಂದ್ರದ ಹಾಗೆ. ಒಮ್ಮೊಮ್ಮೆ ಹೀಗೂ ಆಗಿದ್ದಿದೆ. ಕಥೆಯಲ್ಲಿ ಕೊಟ್ಟ ಕಾಲ್ಪನಿಕ ನಾಟಕೀಯ ಅಂತ್ಯ ನಿಜಜೀವನದಲ್ಲೂ ಯಥಾವತ್ ಘಟಿಸಿ ಬೆರಗುಗೊಳಿಸಿದ್ದಿದೆ. ಆಗೆಲ್ಲಾ ಯಾವುದು ಕಥೆ ಯಾವುದು ಬದುಕು ಎಂಬ ಗೊಂದಲಕ್ಕೊಳಗಾಗಿದ್ದೇನೆ. ಹೀಗೆ ಕಥೆ ತನ್ನ ಸಾಧ್ಯತೆಗಳನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತಲೇ ಇರುತ್ತದೆ. ಕಥೆಗಳು ಇಷ್ಟಿಷ್ಟೇ ತಮ್ಮನ್ನು ಬಿಟ್ಟುಕೊಡುವ ಹಾಗೂ ನಿತ್ಯ ಹೊಸತೆನಿಸುವ ಶುದ್ಧ ಪ್ರೇಮದ ಹಾಗೆ. ನಮಗೆ ಯಾವತ್ತು ನನಗೆ ಕಥೆ ಬರೆಯುವುದು ಗೊತ್ತು ಎಂಬ ಗರ್ವ ಬರುತ್ತದೋ ಬಹುಶಃ ಅಂದಿನಿಂದ ನಾವು ಯಾವ ಕಥೆಯನ್ನೂ ಕೂಡ ಬರೆಯಲಾಗುವುದಿಲ್ಲ.

Acchigoo Modhalu DadaPeer Jaiman Neelakurinji kannada Short stories

ದಾದಾಪೀರ್ ಅವರ ಅನುವಾದಿತ ಕೃತಿ

ನನ್ನ ಮೊದಲ ಕಥಾಸಂಕಲನ ‘ನೀಲಕುರಿಂಜಿ’ ಬಿಡುಗಡೆಗೋಳ್ಳುತ್ತಿರುವ ಈ ಹೊತ್ತಿಗೆ ನಾನು ಕಥೆಗಳ ‘ಬಗ್ಗೆ’ ಯೋಚಿಸಿದಾಗ ಹೊಳೆದದ್ದಿಷ್ಟು. ಇನ್ನೂ ಸಾಗಬೇಕಾದ ಹಾದಿ ಬಹಳಷ್ಟಿದೆ. ಪ್ರತಿಯೊಂದು ಕಥೆಗೂ ತನ್ನದೇ ಆದ ಅಭಿವ್ಯಕ್ತಿ ಮಾರ್ಗವಿರುತ್ತದೆ. ಅದು ತನಗೆ ಸೂಕ್ತವಾದ ಭಾಷೆ, ತಂತ್ರ, ನಿರೂಪಣಾ ವಿಧಾನದೊಂದಿಗೆ ಹೊರಬರಲು ತವಕಿಸುತ್ತದೆ. ಅದರ ನಾಡಿಮಿಡಿತವನ್ನು ಹಿಡಿದಾಗ ಒಂದು ಒಳ್ಳೆಯ ಕಥೆ ರೂಪುಗೊಳ್ಳುತ್ತದೆ. ಆ ಅಭ್ಯಾಸ ಒಂದು ರಿಯಾಜ್ ಇದ್ದ ಹಾಗೆ. ನಿರಂತರ ಓದುವುದು ಮತ್ತು ಮುಖ್ಯವಾಗಿ ತೆರೆದ ಮನಸ್ಸಿನಿಂದ ಬದುಕುವುದು ಸಹಾಯ ಮಾಡುತ್ತದೆ. ನಾವೆಲ್ಲರೂ ಮತ್ತೆ ಮತ್ತೆ ಮನುಷ್ಯತ್ವಕ್ಕೆ, ಕರುಣೆಗೆ, ಪ್ರಾಮಾಣಿಕತೆಗೆ ಹಾಗೂ ಪ್ರೀತಿಗೇ ಆತುಕೊಳ್ಳುವಂತಾಗಲಿ. ಕಥೆಗಳೇ ಕೈಹಿಡಿದು ನಡೆಸಲಿ.

*

ಪರಿಚಯ : ದಾದಾಪೀರ್ ಜೈಮನ್ ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯವರು. ಸಾಹಿತ್ಯ, ರಂಗಭೂಮಿ ಮತ್ತು ಸಿನಿಮಾ ಇವರ ಆಸಕ್ತಿಯ ಕ್ಷೇತ್ರಗಳು. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿನಲ್ಲಿ ಅಧ್ಯಾಪಕ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯಮಟ್ಟದ ಹಲವಾರು ಕಥಾಸ್ಪರ್ಧೆಗಳಲ್ಲಿ ಇವರ ಕಥೆಗಳು ಬಹುಮಾನ ಪಡೆದುಕೊಂಡಿವೆ. ಇತ್ತೀಚಿಗೆ ಇಕ್ಬಾಲುನ್ನೀಸಾ ಹುಸೇನ್ ಅವರ ‘ಪರ್ದಾ & ಪಾಲಿಗಮಿ’ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. Dmitrij Gawrisch ಅವರ ‘ಬ್ಯಾರೆನ್ ಲ್ಯಾಂಡ್’ ಎನ್ನುವ ಜರ್ಮನ್ ನಾಟಕವನ್ನು ಅನುವಾದ ಮಾಡಿದ್ದಾರೆ. ‘ನೀಲಕುರಿಂಜಿ’ ಇವರ ಮೊದಲ ಕಥಾಸಂಕಲನ.

(ಈ ಸಂಕಲನದ ಖರೀದಿಗೆ ಸಂಪರ್ಕಿಸಿ : 9620170027)

ಈ ಕಥಾ ಸಂಕಲನದೊಂದಿಗೆ ಬಿಡುಗಡೆಯಾಗಲಿರುವ ಇನ್ನೊಂದು ಕಥಾ ಸಂಕಲನದ ಆಯ್ದ ಭಾಗ ಇಲ್ಲಿದೆ : New Book : ಅಚ್ಚಿಗೂ ಮೊದಲು ; ಅನಿಲ್ ಗುನ್ನಾಪೂರ ಅವರ ‘ಕಲ್ಲು ಹೂವಿನ ನೆರಳು’ ಕಥಾ ಸಂಕಲನ ನಾಳೆ ಬಿಡುಗಡೆ

Published On - 12:16 pm, Tue, 12 October 21

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್