AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vaidehi‘s Birthday: ‘ಈ ಗೌರವ ಗೀರವ ಎಲ್ಲ ಪುರುಷಲೋಕದ್ದು, ನಂಗ್ಯಾಕೆ? ಬೇಕಾ ಇದೆಲ್ಲಾ, ಯೋಚಿಸು’ ಎಂದರು ವೈದೇಹಿ

Kannada Writer Vaidehi : ‘ಇವರ ಕಥಾನಾಯಿಕೆಯರು ಅಡಿಗೆಮನೆಯ ಕಿಟಕಿಯಿಂದಲೇ ಚಂದ್ರನನ್ನು ನೋಡುವರು. ಬೆರಣಿ ತಟ್ಟುತ್ತಲೇ ಚಂದ್ರಾಮದೇವರನ್ನು ಮಾತನಾಡಿಸುವರು, ಅಡಿಗೆಮನೆಯ ಕಿಟಕಿಯಿಂದಲೇ ವಿಮಾನ ನೋಡಿ ಬೆರಗಾಗಿ ವಿಮಾನ ಹತ್ತಿ ಹೋದಂತೆಯೇ ಕನಸು ಕಾಣುವರು. ಈ ಕನಸನ್ನು ಬಿತ್ತಿ ಪೊರೆದ ಹಿರಿಯ ಜೀವ ವೈದೇಹಿಗೆ- ಈ ಹೊತ್ತಿಗೆ ‘ಇರುವಂತಿಗೆ' ಸವಿತಾ ನಾಗಭೂಷಣ

Vaidehi‘s Birthday: ‘ಈ ಗೌರವ ಗೀರವ ಎಲ್ಲ ಪುರುಷಲೋಕದ್ದು, ನಂಗ್ಯಾಕೆ? ಬೇಕಾ ಇದೆಲ್ಲಾ, ಯೋಚಿಸು’ ಎಂದರು ವೈದೇಹಿ
ವೈದೇಹಿಯವರೊಂದಿಗೆ ಪತಿ ಕೆ. ಎಲ್. ಶ್ರೀನಿವಾಸಮೂರ್ತಿ
ಶ್ರೀದೇವಿ ಕಳಸದ
|

Updated on:Feb 12, 2022 | 2:41 PM

Share

ವೈದೇಹಿ | Vaidehi : ನಾನು ಸಾಹಿತ್ಯ ಸಂವಾದದ ಸಂಪಾದಕಿಯಾಗಿ ಕೆಲಕಾಲ ಕೆಲಸ ಮಾಡುತ್ತಿದ್ದಾಗ ಸಂವಾದದ ಮಹಿಳಾ ವಿಶೇಷಾಂಕ ಹೊರತರುವ ಸಂದರ್ಭದಲ್ಲಿ ಒಮ್ಮೆ ಅವರಿಗೆ ಕರೆ ಮಾಡಿ ‘ಮೇಡಂ, ನೀವು ಈ ತನಕ ನಿಮ್ಮ ಜೀವನದಲ್ಲಿ ಯಾರಿಗೂ ಹೇಳದೇ, ಎದೆಯೊಳಗೆ ಮುಚ್ಚಿಟ್ಟಿರುವ ಸಂಗತಿಗಳ ಬಗ್ಗೆ  ‘ಹೇಳದೇ ಉಳಿದಿದ್ದು’ ಶೀರ್ಷಿಕೆಯಡಿ ಒಂದೆರಡು ಪುಟ ಬರೆದುಕೊಡುವಿರಾ’ ಎಂದು ಕೇಳಿದ್ದೆ. ಅವರು ಖಡಕ್ಕಾಗಿ, ‘ಅಲ್ಲವೇ- ಕೆಲವು ಸಂಗತಿಗಳು ಸಾಯುವ ತನಕ ನಮ್ಮೊಂದಿಗೇ ಇದ್ದು ಸುಟ್ಟು ಬೂದಿಯಾಗುತ್ತವೆ. ಅದನ್ನು ನಾವೇಕೆ ಬಹಿರಂಗಪಡಿಸಬೇಕು? ಅವು ತೀರಾ ವೈಯಕ್ತಿಕ, ನೀನು ಕೇಳಲೂ ಬಾರದು ನಾನು ಹೇಳಲೂ ಬಾರದು’ ಎಂದು ಮುಖದ ಮೇಲೆ ಹೊಡೆದ ಹಾಗೆ ಹೇಳಿದ್ದರು. ತೀರಾ ಎಳಸಾಗಿದ್ದ ನಾನು ಅರೆ ಹೌದಲ್ಲ ಎಂದು ತಲೆದೂಗಿ ತೆಪ್ಪಗಾಗಿದ್ದೆ. ಆದರೆ ಇದು ಹಳೆಯ ಕಥೆ.

ಸವಿತಾ ನಾಗಭೂಷಣ, ಕವಿ, ಲೇಖಕಿ (Savitha Nagabhushana)

*

(ಭಾಗ 2)

ಈಗ ಅವರ ಕಥಾ ಪಾತ್ರಗಳಾದ ವಿಜಿ, ಅಂಜು, ಸುಮ, ವನಜ, ಉಮಾ ದೇಶಪಾಂಡೆ, ನೋರಾ, ಬಾಬಿ, ರಂಗಜ್ಜಿ, ಶಾರದೆ, ಯಶಿ, ಶಾಂತಿ, ಮಂದಕ್ಕ, ಇಂದಿ, ಚಂದು, ದುಗ್ಗು, ಸಣ್ಣಿ, ಮೀರಾ, ಬಚ್ಚಮ್ಮ ಅಕ್ಕು, ಪುಟ್ಟಮ್ಮತ್ತೆ, ಸಿರಿ, ಮೀನಾಕ್ಷತ್ತೆ, ವಾಗತ್ತೆ, ವಾರಿಜ, ಸೌಗಂಧಿ, ಸುಬ್ಬಕ್ಕ, ಸುಬ್ಬಿ, ಮಾಕಾಳಿ, ಲಿಲ್ಲಿಬಾಯಿ, ಮಂಜಮ್ಮತ್ತೆ, ವಿಶಾಖಾ ಬೆನ್, ಮೂಕತ್ತೆ, ನರ್ಮದಾ, ಬಾಬುಲಿ, ಸೀತತ್ತೆ, ರುಕ್ಮಿಣಿ, ರತ್ನ, ಸಬಿತಾ ಇವರೆಲ್ಲರೂ ನನಗೆ ಪರಿಚಿತರು. ಅಂತೆಯೇ ಆ ಪಾತ್ರಗಳೊಡನೆ ಬಂಧ -ಅನುಬಂಧ ಬೆಳೆಸಿಕೊಂಡವಳಾಗಿ ನಾನು ಧೈರ್ಯದಿಂದ, ‘ಮೇಡಂ ನೀವು ಶಿವಮೊಗ್ಗೆಯಲ್ಲೇ ನಿಮ್ಮ ಕಥೆಗಾರಿಕೆಯ ದಿಕ್ಕು ಕಂಡುಕೊಂಡವರು. ನಾವು ಶಿವಮೊಗ್ಗೆಯ ಐದಾರು ಜನ ಗೆಳೆಯ ಗೆಳತಿಯರು ಸೇರಿಕೊಂಡು ನಿಮಗೊಂದು ಗೌರವ ಗ್ರಂಥ ನೀಡುವ ಬಯಕೆ ಹೊಂದಿದ್ದೇವೆ ಒಪ್ಪಿಕೊಳ್ಳಿ’ ಎಂದು ವೈದೇಹಿಯವರನ್ನು ಕೇಳಿದೆ.

ಅವರು ಒಂದೇ ಮಾತಿನಲ್ಲಿ ‘ಬೇಡ ಕಣೆ’ ಎಂದರು. ನಾನು ಬಿಡದೇ ಯಾಕೆ ಎಂದಾದರೂ ಹೇಳಿ ಎಂದೆ. ‘ಈ ಗೌರವ –ಗೀರವ ಎಲ್ಲ ಪುರುಷಲೋಕದ್ದು, ನಂಗ್ಯಾಕೆ? ಆದರೆ ಹಾಗೆ ಮಾಡಬೇಕು ಅಂತ ನಿಮಗೆ ಅನಿಸಿತಲ್ಲ ಅದು ದೊಡ್ಡದು, ಅಷ್ಟೇ ಸಾಕು, ಅದೇ ಗೌರವ’ ಎಂದರು. ನಾನು ಬಿಡದೇ ಅದೆಲ್ಲಾ ನಮಗೆ ಬಿಡಿ, ಒಪ್ಪಿಕೊಳ್ಳಿ, ಈ ಗೌರವ ಗ್ರಂಥಕ್ಕೆ ನೀವು ಒಂದು ನೆಪ ಅಷ್ಟೇ. ನಿಮ್ಮನ್ನು ಗೌರವಿಸುವ ಮೂಲಕ ಅಕ್ಷರಮಾಲೆಯನ್ನು ತೊಟ್ಟು ಸಂಭ್ರಮಿಸಿದ ಆ ನಿಮ್ಮ ತಲೆಮಾರನ್ನು ಗೌರವಿಸುತ್ತಿದ್ದೇವೆ ಎಂದುಕೊಳ್ಳಿ ಎಂದು ಭಿನ್ನವಿಸಿದೆ. ಏನನ್ನಿಸಿತೋ ಯೋಚಿಸಿ ಹೇಳುವೆ ಎಂದು ಹೇಳಿದವರು ಎರಡು ದಿನ ಬಿಟ್ಟು ಕರೆ ಮಾಡಿ, ‘ಇದೆಲ್ಲಾ ಬೇಕಾ? ಯೋಚಿಸು’ ಎಂದು ನನಗೇ ತಿರುಗುಬಾಣ ಬಿಟ್ಟರು.

‘ಕವಿತೆ, ಕಥೆ, ಕಾದಂಬರಿ, ಪ್ರಬಂಧಗಳು, ಮಕ್ಕಳ ನಾಟಕಗಳು, ಅನುವಾದ, ವ್ಯಕ್ತಿನಿರೂಪಣೆಗಳು, ಅಂಕಣ ಬರಹಗಳು, ಸಂಪಾದನೆ ಇಷ್ಟೆಲ್ಲಾ ಬರೆದಿರುವಿರಲ್ಲಾ? ಬರೋಬ್ಬರಿ 100 ಕಥೆಗಳನ್ನು ಬರೆದಿರುವಿರಿ ಸಾಕಾ?’ ಎಂದು ನಗೆಯಾಡಿ, ‘ನಿಮ್ಮ ಒಪ್ಪಿಗೆ ಕೊಡಿ ಮಿಕ್ಕದ್ದು ನನಗೆ ಬಿಡಿ’ ಎಂದೆ. ಅದರ ಫಲವೇ ಈ ಹೊತ್ತಿಗೆ ಇರುವಂತಿಗೆ.

ಇದನ್ನೂ ಓದಿ : Odinangala : ವರ್ಷಾಂತ್ಯ ವಿಶೇಷ ; ‘ಓದಿನಗಂಗಳ’ದಲ್ಲಿ ತಾರಿಣಿ ಶುಭದಾಯಿನಿ ಕಾಣಿಸಿದ ‘ಕೌಬಾಯ್ಸ್​ ಮತ್ತು ಕಾಮ ಪುರಾಣ’

Indian Writer Vaidehi Birtdhay special write up by Poet Savita Nagabhushan

ವೈದೇಹಿಯವರೊಂದಿಗೆ  ಲೇಖಕಿಯರಾದ ಪದ್ಮಾಕ್ಷಿ, ಸವಿತಾ ನಾಗಭೂಷಣ, ತಾರಿಣಿ ಶುಭದಾಯಿನಿ ಮತ್ತು ರೇಖಾಂಬಾ

ವೈದೇಹಿಯವರ ಸಮಗ್ರ ಬರವಣಿಗೆಯ ಮೇಲೆ ಕಣ್ಣಾಡಿಸಿದ ನಂತರ ಅನಿಸಿದ್ದು ಅರೆ ಇದೇನಿದು? ಇವರು ಮಹಿಳಾ ಮಾನಸ ಲೋಕವನ್ನರಿಯಲು-ಬರೆಯಲು ಹುಟ್ಟಿಬಂದ ಇತಿಹಾಸಕಾರ್ತಿಯೇ? ಸಂಶೋಧಕಿಯೇ? ಅಥವಾ ಕೇವಲ ಸಾಕ್ಷಿಪ್ರಜ್ಞೆಯೇ? ಹನಿಯನ್ನೇ ಹಳ್ಳವಾಗಿಸಿ ನದಿಯಾಗಿಸಿ ಕಡಲಿನತ್ತ ಹರಿಸಿದ ಪರಿಶ್ರಮಿಯೇ? ಒಂದು ಹೆಂಗೂಸಿನ ದೇಹದ ಚಲನೆ, ಮನಸ್ಸಿನ ಆಲೋಚನೆ ಅದರ ಅಷ್ಟೂ ಆಯಾಮಗಳಲ್ಲಿ ಇವರು ಸೆರೆ ಹಿಡಿಯುವ ಪರಿ ಸೋಜಿಗವನ್ನು ಉಂಟುಮಾಡುತ್ತದೆ. ಹೆಣ್ಣಿನ ಯಾತನೆ ಮತ್ತು ಯೋಚನೆಯನ್ನು ಒಂದು ಹದದಲ್ಲಿ ಬೆರೆಸಿ ಪ್ರಸ್ತುತಪಡಿಸುವ ಇವರ ಕಥೆಗಾರಿಕೆ ಬೆರಗು ಹುಟ್ಟಿಸುತ್ತದೆ. ಇದನ್ನೆಲ್ಲ ವಿವರವಾಗಿ ನಮ್ಮ ಲೇಖಕ-ಲೇಖಕಿಯರು, ವಿಮರ್ಶಕರು ಈ ಹೊತ್ತಿಗೆಯಲ್ಲಿ ಚರ್ಚಿಸಿರುವರು. ಕುಂದಾಪುರದಂತಹ ಸಣ್ಣ ಊರಿನಲ್ಲಿ ಹುಟ್ಟಿ ಬೆಳೆದು ತನ್ನ ಪ್ರತಿಭೆ- ಪರಿಶ್ರಮದಿಂದ ಕನ್ನಡ ಸಾಹಿತ್ಯ ಪ್ರಪಂಚವನ್ನು ಬೆಳಗಿದ ವೈದೇಹಿಯ ಕಥಾಪ್ರಪಂಚವನ್ನು ನನ್ನ ಕಾವ್ಯದ ಕಣ್ಣಿಂದ ನೋಡಿದ ಬಗೆಯನ್ನು ಎರಡೇ ಮಾತಿನಲ್ಲಿ ಹೇಳುವುದಾದರೆ-

ಬಿಡುಗಡೆ

ಎಲ್ಲಿ ಎಡವಿ ಬೀಳುವಳೋ
ಅಪ್ಪನಿಗೆ ಆತಂಕ
ಅಂಕೆಯಲ್ಲಿ ಇಡಲು
ಗಂಡನಿಗೆ ಆನಂದ

ಮಂಕಾಗಿರುವಳು
ಮಗನಿಗೆ ಅನುಮಾನ

ನಾಕು ಗೋಡೆಯ ನಡುವೆ
ಕಾಲ ನೂಕಿದವಳು

ಕಾದು ನಿಂತಳು
ಏರಿ ಕುಳಿತಳು

ತಿಳಿಯದೂರಿಗೆ
ಹಾರಿ ಹೋಯಿತು ವಿಮಾನ

*

ಇದನ್ನೂ ಓದಿ : Women Empowerment; ನಾನೆಂಬ ಪರಿಮಳದ ಹಾದಿಯಲಿ: ಅದ್ಯಾವ್ದೋ ನಾಟಕ್ ಸಾಲಿಗೆ ಸೇರ್ಕೊಂಡಾಳಂತs ಗಂಡಸರ ಜೊತಿ ಕುಣ್ಯಾಕ

Indian Writer Vaidehi Birtdhay special write up by Poet Savita Nagabhushan

ತಮ್ಮ ಮಕ್ಕಳೊಂದಿಗೆ ವೈದೇಹಿ

ಇವರ ಕಥಾನಾಯಿಕೆಯರು ಅಡಿಗೆಮನೆಯ ಕಿಟಕಿಯಿಂದಲೇ ಚಂದ್ರನನ್ನು ನೋಡುವರು. ಇವರ ಕಥಾನಾಯಿಕೆಯರು ಬೆರಣಿ ತಟ್ಟುತ್ತಲೇ ಚಂದ್ರಾಮದೇವರನ್ನು ಮಾತನಾಡಿಸುವರು, ಅಡಿಗೆಮನೆಯ ಕಿಟಕಿಯಿಂದಲೇ ವಿಮಾನ ಹಾರುವುದನ್ನು ನೋಡಿ ಬೆರಗಾಗಿ ವಿಮಾನ ಹತ್ತಿ ಹೋದಂತೆಯೇ ಕನಸು ಕಾಣುವರು. ಈ ಕನಸನ್ನು ಬಿತ್ತಿ ಪೊರೆದ ಹಿರಿಯ ಜೀವ ವೈದೇಹಿಗೆ- ಈ ಹೊತ್ತಿಗೆ ‘ಇರುವಂತಿಗೆ’.

(ಮುಗಿಯಿತು)

ಭಾಗ 1 : Vaidehi‘s Birthday : ವೈದೇಹಿ ಎಂಬ ‘ಇರುವಂತಿಗೆ’ ಅರಳಿದ ಕಥೆ ಇಲ್ಲಿದೆ, ಓದಿ ಸವಿತಾ ನಾಗಭೂಷಣ ಬರಹ

Published On - 2:30 pm, Sat, 12 February 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ