New Poetry Collection : ಎಚ್. ಎಸ್. ಶಿವಪ್ರಕಾಶರ ನಾಲ್ಕು ದಶಕದ ಕವಿತೆಗಳು ‘ಹೋಗಿಬನ್ನಿ ಋತುಗಳೇ’ ಇಂದು ಬಿಡುಗಡೆ

H.S. Shivaprakash : ‘ಜೀವನದಲ್ಲಿ ನನಗೆ ಮೂರು ಯೋಗಿಕ ಅನುಭವಗಳಾಗಿವೆ. ಒಂದು ವೈಚಾರಿಕ ಪ್ರಯಾಣ, ಎರಡು ಕಾವ್ಯ ಹಾಗೂ ನಾಟಕದ ಪ್ರಯಾಣ, ಹಾಗೂ ಮೂರನೆಯ ಯೋಗಿಕ ಪ್ರಯಾಣ, ಈ ಕಾವ್ಯವೂ ಒಂದು ಯೋಗವೇ... ಗುರಿಯಲ್ಲ. ಗುರಿ ಇನ್ನೂ ಮುಂದಿದೆ.’ ಡಾ. ಎಚ್. ಎಸ್. ಶಿವಪ್ರಕಾಶ

New Poetry Collection : ಎಚ್. ಎಸ್. ಶಿವಪ್ರಕಾಶರ ನಾಲ್ಕು ದಶಕದ ಕವಿತೆಗಳು ‘ಹೋಗಿಬನ್ನಿ ಋತುಗಳೇ’ ಇಂದು ಬಿಡುಗಡೆ
ಹಿರಿಯ ಕವಿ, ಅನುವಾದಕ ಡಾ. ಎಚ್. ಎಸ್. ಶಿವಪ್ರಕಾಶ
Follow us
|

Updated on:Nov 14, 2021 | 11:56 AM

H.S. Shivaprakash : ಡಾ. ಎಚ್. ಎಸ್. ಶಿವಪ್ರಕಾಶ್ (ಹುಲಕುಂಟೆಮಠ ಶಿವಮೂರ್ತಿ ಶಾಸ್ತ್ರೀ ಶಿವಪ್ರಕಾಶ್) ಕನ್ನಡದ ಪ್ರಮುಖ ಕವಿ, ನಾಟಕಕಾರರು. ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕಲಾ ಮತ್ತು ಸೌಂದರ್ಯಶಾಸ್ತ್ರ ಶಾಲೆಯಲ್ಲಿ ಪ್ರಾಧ್ಯಾಪಕರಾಗಿದ್ದರು. ಬರ್ಲಿನ್ ನಲ್ಲಿರುವ ಟ್ಯಾಗೋರ್ ಸೆಂಟರ್​ನ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾಗಿದ್ದರು. ಒಟ್ಟು ಏಳು ಕವನ ಸಂಕಲನಗಳು, ಹನ್ನೆರಡು ನಾಟಕಗಳನ್ನು ರಚಿಸಿದ್ದಾರೆ. ಅವರ ಕೃತಿಗಳು ಇಂಗ್ಲಿಷ್, ಫ್ರೆಂಚ್, ಇಟ್ಯಾಲಿಯನ್, ಸ್ಪ್ಯಾನಿಶ್, ಜರ್ಮನ್, ಪೋಲಿಷ್, ಹಿಂದಿ, ಮಲಯಾಳಂ, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಿಗೂ ಅನುವಾದಗೊಂಡಿದೆ. ಕನ್ನಡ, ಹಿಂದಿ, ಮೈತಿ, ರಭಾ, ಅಸ್ಸಾಮಿ, ಬೋಡೋ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅವರ ನಾಟಕಗಳು ಪ್ರದರ್ಶನಗೊಂಡಿವೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ಧಾರೆ. ಶ್ರೀ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ ಇಂದು ಅವರ ನಾಲ್ಕು ದಶಕಗಳ ಕವಿತೆಗಳು ‘ಹೋಗಿಬನ್ನಿ ಋತುಗಳೇ’ ಕೃತಿಯನ್ನು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವ ಸಿಂಗ್ ಈಗಷ್ಟೇ ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಿದ್ದಾರೆ. ಇದು ಏಳುನೂರು ಪುಟಕ್ಕೂ ಮೀರಿದ ಸಮಗ್ರ. ಈ ಹೊತ್ತಿನಲ್ಲಿ ಲೇಖಕಿ ಎಚ್. ಆರ್. ಸುಜಾತಾ, ಶಿವಪ್ರಕಾಶರು ಹಾದುಬಂದ ಕಾವ್ಯದ ಹಾದಿಯನ್ನು ಅವರದೇ ಮಾತುಗಳಲ್ಲಿ ಸಂಕ್ಷಿಪ್ತವಾಗಿ ಹಿಡಿದಿಟ್ಟಿದ್ದಾರೆ.  

*

ಬರವಣಿಗೆಯ ಶುರುವಿನಲ್ಲಿ ನಾನೂ ನವ್ಯದ ಆಕರ್ಷಣೆಗೆ ಒಳಗಾಗಿ ಅದನ್ನು ಅನುಕರಿಸುತ್ತಿದ್ದೆ. ಗೋಪಾಲಕೃಷ್ಣ ಅಡಿಗರು ಹಾಗೂ ಟಿ. ಎಸ್. ಎಲಿಯೆಟ್​ರ ಪ್ರಭಾವ ನನ್ನ ಮೇಲಿತ್ತು. ಆದರೆ ಆ ಕಾಲದಲ್ಲಿ ಬೌದ್ಧ ಧರ್ಮದ ಹಿಂದೆ ಬಿದ್ದಿದ್ದ ನನ್ನ ಕಾವ್ಯದ ವಸ್ತು, ವಿಚಾರಗಳು ನವ್ಯ ಕಾವ್ಯಕ್ಕಿಂತ ಭಿನ್ನವಾಗಿದ್ದವು. ನನ್ನ ಭಾಷೆ ಕೆ. ಎಸ್. ನರಸಿಂಹಸ್ವಾಮಿ ಭಾಷೆಯನ್ನು ಹೋಲುತಿತ್ತು.

ನವ್ಯ ಶೈಲಿಯನ್ನು ನಾನು ಅನುಸರಿಸಿದರೂ ಚಿಂತನೆ, ಭಾವನೆಗಳು ನವ್ಯದ ಬಂಧಕ್ಕಿಂತ ಭಿನ್ನವಾಗಿದ್ದವು. ಒಂದು ಕಡೆ ಆಧ್ಯಾತ್ಮ ನನ್ನನ್ನು ಸೆಳೆದರೆ, ಲೋಕ ಕಾರುಣ್ಯ ಮತ್ತೊಂದು ಕಡೆ ಸೆಳೆಯುತಿತ್ತು. ಕುವೆಂಪುರವರನ್ನು ಮೊದಲು ನಾನು ಹೆಚ್ಚು ಓದಿಕೊಂಡಿರಲಿಲ್ಲ. ನಂತರದಲ್ಲಿ ಓದಿಕೊಂಡೆ. ಕುವೆಂಪುರವರು ದಾರ್ಶನಿಕ ಕವಿ. ಕುವೆಂಪುರವರ ಆಧ್ಯಾತ್ಮ ಲೋಕ ನನಗೂ ಹತ್ತಿರವಾಗಿತ್ತು. ಇದರಿಂದಾಗಿ ಮುಂದೆ ನನ್ನ ‘ಮಳೆ ಬಿದ್ದ ನೆಲದಲ್ಲಿ’ ಸಂಕಲನ ಬರುವ ಹೊತ್ತಿಗೆ ನವ್ಯದ ಬಂಧ ನನ್ನಿಂದ ಬಿಡುಗಡೆಗೊಳ್ಳುತ್ತ ಸಡಿಲವಾಗಿತ್ತು. ಆಕೃತಿಯ ಹೊರತಾಗಿಯೂ ನಾನು ಸಂವಹನದ ಕಡೆ ಗಮನ ಕೊಟ್ಟಿದ್ದರಿಂದ ‘ಸಮಗಾರ ಭೀಮವ್ವ’ದಂತಹ ಕಾವ್ಯ ಸಾಧ್ಯವಾಯಿತು. ಇದು ಮತ್ಯಾರೊಂದಿಗೋ ಸಂವಹನವನ್ನು ಮಾಡಿದಂತೆ, ವಚನಗಳ ಶೈಲಿಯಲ್ಲಿ ವಸ್ತುಗಳ ಜೊತೆ, ದೇವರ ಜೊತೆ, ಹಾಗೇ ಸಮಾಜದ ಜೊತೆ ಮಾತಾಡಿದಂತೆ ಚಿತ್ರಿತವಾಯ್ತು.

ನವ್ಯ ಕಾವ್ಯ ಹೆಚ್ಚು ಸ್ವಗತ ಶೈಲಿಯಲ್ಲಿರುತ್ತವೆ. ಹೆಣ್ಣುಗಂಡಿನ ದೇಹವನ್ನು, ಲೈಂಗಿಕತೆಯನ್ನು ನವ್ಯ ಕವಿತೆಗಳು ವೈಭವೀಕರಿಸುತ್ತವೆ. ನವೋದಯದಲ್ಲಿ ಕೂಡಾ ಹೆಣ್ಣನ್ನು ವಾಹಕವಾಗಿ ನೋಡುವುದಿದೆ. ಉದಾಹರಣೆ; ಬೇಂದ್ರೆಯವರ ಸಖೀಗೀತ.

ಚಿಕ್ಕಂದಿನಿಂದ ನನ್ನ ಮೇಲೆ ತಂದೆಗಿಂತ ತಾಯಿಯ ಪ್ರಭಾವ ಆಗಿದ್ದು ಹೆಚ್ಚು. ಆದ್ದರಿಂದಲೇ ಅನ್ನಿಸುತ್ತೆ ನನ್ನ ಕವಿತೆಯನ್ನು ಹೆಂಗರುಳಿನ ಕವಿತೆ ಅಂತ ಗುರುತಿಸುವವರಿದ್ದಾರೆ. ಹೀಗೆ ಮಾರ್ಗ ಪರಂಪರೆ, ಭಕ್ತಿ ಪರಂಪರೆ, ಸಿದ್ಧ ಪರಂಪರೆ ಹಾಗೂ ನಾಥ ಪರಂಪರೆಯನ್ನು ಒಳಗೊಳ್ಳುತ್ತ ಕಾವ್ಯ ಮಾರ್ಗದ ಮಾರ್ಪಾಡನ್ನು ಮಾಡಿಕೊಳ್ಳತೊಡಗಿದೆ. ಪರಂಪರೆ ಅಂದ್ರೆ ಕೇವಲ ರಾಮಾಯಣ, ಮಹಾಭಾರತ ಹಾಗೂ ವೈದಿಕ ಪರಂಪರೆಯಲ್ಲ, ಇವೂ ಕೂಡಾ ಪರಂಪರೆಯ ಒಂದು ಭಾಗವಷ್ಟೇ! ಜೊತೆಯಲ್ಲಿ ಜನಪದ ಹಾಗೂ ಜನಪರ ದನಿಯನ್ನೂ ಕೇಳಿಸಿಕೊಳ್ಳತೊಡಗಿದೆ.

H S Shivaprakash hogi banni ruthugale

ಶಿವಪ್ರಕಾಶರ ಪುಸ್ತಕಗಳು

ಆಗ ನನ್ನ ಕಾವ್ಯದಲ್ಲಿ ಬಿಗಿ ಹೋಗ್ತಿದೆ ಅಂತ ಕೆಲವರು ಹೇಳತೊಡಗಿದರು. ಉಸಿರುಕಟ್ಟಿಸುವ ಆ ಬಿಗಿ ನನಗೆ ನಿಜವಾಗಿಯೂ ಬೇಕಿರಲಿಲ್ಲ. ‘ಅಣುಕ್ಷಣ ಚರಿತ್ರೆ’ಯಲ್ಲಿ ಇನ್ನೂ ಮುಂದಕ್ಕೆ ಹೋಗಿ ಲಯಕ್ಕೆ ಒತ್ತು ಕೊಟ್ಟೆ, ಕವಿತೆ ಕೇವಲ ಶಾಬ್ದಿಕ ರಚನೆಯಲ್ಲ, ಅದು ಒಂದು ಲಯಾತ್ಮಕ ರಚನೆ. ನಾನು ಹೆಚ್ಚು ಹೆಚ್ಚು ಜನಮುಖಿಯಾಗುತ್ತ ಹೋದ ಹಾಗೆ ಬೇರೆ ಬೇರೆ ಭಾಷೆಯ ಕವಿತೆಗಳ ಪ್ರಭಾವಕ್ಕೆ ಬಿದ್ದೆ. ಆಗ ಮುಖ್ಯವಾಗಿ ಹಿಂದಿಯ ಶ್ರೇಷ್ಠ ಕವಿ ‘ಗಜಾನನ ಮುಕ್ತಿಮಾರ್ಗ’ ರವರನ್ನು ಓದಿಕೊಂಡೆ.

‘ಮಳೆ ಬಿದ್ದ ನೆಲದಲ್ಲಿ’ ಸಂಕಲನದಲ್ಲಿ ಕಥನ ಅಂಶವೂ ಸೇರಿತ್ತು. ಹೀಗೆ ಬದಲಾವಣೆಯನ್ನು ತರುವಾಗ, ಭಿನ್ನ ಹಾದಿ ಹೊಳೆಯುವವರೆಗೂ ನಾನು ಇನ್ನೊಂದು ಕವನ ಸಂಕಲನವನ್ನು ತರಲು ಹೊರಡುವುದಿಲ್ಲ. ನನ್ನನ್ನು ನಾನು ನವೀಕರಿಸಿಕೊಳ್ಳುವತ್ತ ಯಾವಾಗಲೂ ಗಮನ ಕೊಡ್ತೀನಿ. ‘ಸೂರ್ಯಜಲ’ ‘ಮಳೆಮಂಟಪ’ ‘ಮತ್ತೆ ಆ ಕಣಿವೆಯಲ್ಲಿ’ ಸಂಕಲನಗಳಲ್ಲಿ ಬೇರೆಯದೆ ಹಾದಿ ಸಿಕ್ತು.

ಮತ್ತೂ ಏಕತಾನತೆ ಕಾಡುವಂತಾದಾಗ ಅನುವಾದಗಳನ್ನು ಮಾಡುತ್ತ ನನ್ನ ಭಾಷೆಯನ್ನು ಸಾಣೆ ಹಿಡಿಯುವಂಥ ಪ್ರಯೋಗಶೀಲತೆಗೆ ಇಳಿಯುತ್ತೇನೆ. ಉದಾಹರಣೆಗೆ ಜಪಾನಿಗೆ ಹೋದಾಗ ಚಿಕ್ಕದರಲ್ಲಿ ದೊಡ್ಡದನ್ನು ಹೇಳುವ ಹಾಯ್ಕುಗಳನ್ನು ಪ್ರಯೋಗಿಸಿದೆ. ಆ ನಂತರದಲ್ಲೂ ಕವಿತೆ ಸ್ವಚ್ಚಂದವಾಗಬೇಕು ಅನ್ನಿಸುತಿತ್ತು.

ಯಾವಾಗಲೂ ಜಗತ್ತನ್ನೆಲ್ಲ ಆ ತುದಿಯಿಂದ ಈ ತುದಿಯವರೆಗೆ ಸುತ್ತುತ್ತಿದ್ದ ನಾನು ನನ್ನ ಕೊನೆಯ ಸಂಕಲನ ಹೊರತರುವ ಹೊತ್ತಿಗೆ ಕರೋನಾ ದೆಸೆಯಿಂದ ಭಯದ ವಾತಾವರಣದಲ್ಲಿ, ಏಕಾಂತದಲ್ಲಿ, ಎರಡುಮೂರು ಜನರ ನಡುವೆ ವಯಸ್ಸಿನ ಭಾರದ ಜೊತೆಗೆ ಮನೆಯ ಒಳಗೆ ಕಳೆಯುವಂತಾಯ್ತು. ಈ ಸಮಯದಲ್ಲಿ ದೆಹಲಿಯಿಂದ ಆಗತಾನೆ ಬೆಂಗಳೂರಿಗೆ ಶಿಫ್ಟ್ ಆಗಿದ್ದೆ.

ಆ ಸಂದರ್ಭದಲ್ಲಿ ಪ್ರಪಂಚ ಮನೆಯ ಅಳತೆಗೆ ಅನುಸಾರವಾಗಿ ಚಿಕ್ಕದಾದ ಹಾಗೆ, ಎಲ್ಲ ಕಾಲವೂ ಕುಗ್ಗಿ, ಇಲ್ಲೇ ನಿಂತು ಹೋದ ಹಾಗೆ ಅನ್ನಿಸುತ್ತಿತ್ತು. ಅದೇ ಸಮಯದಲ್ಲಿ ನನಗೆ ಹರ್ಪಿಸ್ ಆಗಿ ಅದರ ಉರಿಯನ್ನು ತಡೆದುಕೊಳ್ಳುವುದಕ್ಕೆ ಆಗದೆ ಹೋದಾಗ ಮನೆಯೊಳಗೆ ನಾಕು ಗೋಡೆಯ ನಡುವೆ ಇದ್ದಲ್ಲೇ ಜಪ ಹಾಗೂ ಕಾವ್ಯದ ಮೊರೆ ಹೋದೆ.

ಕಾವ್ಯ ಎಂದರೆ ಎಂದೂ ಚರಿತ್ರೆಯಲ್ಲ, ಚರಿತ್ರೆ ಕಾವ್ಯವೂ ಅಲ್ಲ. ವಿಚಾರವೂ ಕಾವ್ಯವಲ್ಲ, ಕಾವ್ಯವೂ ವಿಚಾರವಲ್ಲ. ಅಲ್ಲಮ ಹೇಳಿದಂತೆ ‘ಹಿಂದಣ ಅನಂತವನು ಮುಂದಣ ಅನಂತವನು ಈ ಒಂದು ಗಳಿಗೆ ಒಳಗೊಂಡಿತ್ತು ನೋಡಾ’ ಎನ್ನುವಂತೆ ಧ್ಯಾನದಲ್ಲಿ ಕೊಲಾಪ್ಸ್ ಆಗುವಾಗ ಕಾವ್ಯದ ರಸಸಿದ್ಧಿ ಆಗುವುದು. ಶಬ್ದಗಳಿಗೆ ವಾಚಿಕಾರ್ಥ, ಧ್ವನಿಯಾರ್ಥ ಎರಡು ಅರ್ಥಗಳಿರುತ್ತವೆ, ಧ್ವನಿಯಾರ್ಥದಲ್ಲಿ ಸೂಚಿಸುವುದೇ ಕಾವ್ಯಪ್ರಾಪ್ತಿ. ಸಂಗೀತದ ರಾಗಗಳಂತೆ, ಕಲಾವಿದನ ಬಣ್ಣದಂತೆ ಶಬ್ದವನ್ನು ಕವಿಯಾದವನು ಪಳಗಿಸಿಕೊಳ್ಳಬೇಕು.

ಕಾವ್ಯ ಎಂಬುದು ಸನಾತನವಾದದ್ದು. ಉದಾಹರಣೆಗೆ ನೋಡಿ… ಜಪಾನಿನ ಒಬ್ಬ ಕವಿ ಹೇಳ್ತಾನೆ. ಒಬ್ಬ ರೈತ ನಾಟಿ ಹಾಕುತ್ತಿರುವಾಗ ಅವನಷ್ಟಕ್ಕೆ ಅವನೇ ಏನೋ ಗುನುಗುತ್ತಿರುತ್ತಾನೆ. ಹೀಗೆ ಹುಟ್ಟುವ ಗುನುಗು ಎಲ್ಲ ಕಲೆಗಳ ತಾಯಿ. ಶ್ರಮ, ಹಾಗೂ ಸಂತ್ರುಪ್ತಿಯ ನಡುವೆ ಹುಟ್ಟುವ ಆ ಗುನುಗುವ ಕಲೆ, ಲಯ, ಉಸಿರ ಹಿಡಿತದಲ್ಲಿ ಲಯಬದ್ಧವಾಗಿ ಶ್ರಮವೂ ಹಗುರಾಗುವಂತೆ, ಕಾವ್ಯಕಲೆ ಅಥವಾ ಕಾವ್ಯಯೋಗವೂ ಆಗುವುದು. ಇಂಥದ್ದನ್ನು ಮಧುರಚೆನ್ನ ಹಾಗೂ ಕುವೆಂಪುರವರಲ್ಲಿ ನೀವು ಕಾಣಬಹುದು.

ಜೀವನದಲ್ಲಿ ನನಗೆ ಮೂರು ಯೋಗಿಕ ಅನುಭವಗಳಾಗಿವೆ. ಒಂದು ವೈಚಾರಿಕ ಪ್ರಯಾಣ, ಎರಡು ಕಾವ್ಯ ಹಾಗೂ ನಾಟಕದ ಪ್ರಯಾಣ, ಹಾಗೂ ಮೂರನೆಯ ಯೋಗಿಕ ಪ್ರಯಾಣ, ಈ ಕಾವ್ಯವೂ ಒಂದು ಯೋಗವೇ… ಗುರಿಯಲ್ಲ. ಗುರಿ ಇನ್ನೂ ಮುಂದಿದೆ.

H R Sujatha H S Shivaprakash

ಲೇಖಕಿ ಎಚ್. ಆರ್. ಸುಜಾತಾ

ಇದನ್ನೂ ಓದಿ : Poetry : ಅವಿತಕವಿತೆ ; ತೀರಾ ಖಾಸಾ ಗೆಳೆಯ, ಗೆಳತಿಗೂ ಹೇಳಲು ಬಾರದವು

Published On - 11:53 am, Sun, 14 November 21