Vaidehi’s Birthday: ‘ಬರಹಗಾರರು ವಿಷಯಗಳ ಸೂಕ್ಷ್ಮನಾಡಿ ಮುಟ್ಟಿ ಜೀವಕಲೆಯಾಗಿಸಬೇಕು’ ವೈದೇಹಿ

|

Updated on: Feb 12, 2022 | 8:50 PM

Kannada writer Vaidehi : ‘ಮಸೂರಕ್ಕೆ ಬಿದ್ದ ಬೆಳಕು ಕೇಂದ್ರೀಕೃತವಾಗಿ ಪ್ರಖರವಾಗುತ್ತೆ. ಹಾಗೆಯೇ ಸೂಕ್ಷ್ಮದರ್ಶಕದೊಳಗೆ ಒಂದು ಕಡೆ ತದೇಕ ದೃಷ್ಟಿಯಿಂದ ನೋಡಿದ್ರೆ ಅಲ್ಲಿ ಬೆಂಕಿ ಹುಟ್ಟುತ್ತೆ ಕಣೆ. ಬರವಣಿಗೆಯೆಂದರೂ ಹಾಗೆಯೇ. ಬೆಂಕಿ ಹುಟ್ಟಿಸಬೇಕು. ಅದು ಕಿಚ್ಚು, ಆ ಕಿಚ್ಚಿನಿಂದ ಬೆಳಕು ಪಸರಿಸಬೇಕು. ಧ್ಯಾನವೆಂದರೂ ಅದೇ ಅಲ್ವಾ?’ ವೈದೇಹಿ

Vaidehi’s Birthday: ‘ಬರಹಗಾರರು ವಿಷಯಗಳ ಸೂಕ್ಷ್ಮನಾಡಿ ಮುಟ್ಟಿ ಜೀವಕಲೆಯಾಗಿಸಬೇಕು’ ವೈದೇಹಿ
ವೈದೇಹಿಯವರೊಂದಿಗೆ ಪೂರ್ಣಿಮಾ ಸುರೇಶ್
Follow us on

ವೈದೇಹಿ | Vaidehi : ಒಂದು ಕಾಲದಲ್ಲಿ ಭಾರತದುದ್ದಕ್ಕೂ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ನನ್ನ ಪ್ರವಾಸದ ಬದುಕು, ನಮ್ಮಿಬ್ಬರ ನಡುವೆ ಮಾತಿನ ಮೃದು ಸೇತುವೆಯಾದ ಹಲವು ಪ್ರಸಂಗಗಳಿವೆ. ನನ್ನ ಅನುಭವಗಳನ್ನು ಬುಡುಬುಡು ಮಾತಿನಿಂದ ಉದುರಿಸುತ್ತಾ ಹೋದರೆ ಅವರು ಒಂದಿಷ್ಟೂ ಬೇಸರಿಸದೆ ತದೇಕ ಚಿತ್ತದಿಂದ ಕೇಳಿಸಿಕೊಂಡಿದ್ದಾರೆ. ಅರಿವಿನ ವಿಸ್ತಾರಕ್ಕೆ ತೆರೆದಮನದಿಂದ ಆಲಿಸುವುದೇ ಮುಖ್ಯ ಬಾಗಿಲು ಎಂಬಂತೆ. ಅವರ ಕಥೆ “ಗುಲಾಬಿ ಟಾಕೀಸ್” ಸಿನೆಮಾ ಆದಾಗ ಅದರಲ್ಲಿ ನಾನೊಂದು ಪಾತ್ರ ಮಾಡಿದ್ದೆ. ಆ ಚಿತ್ರೀಕರಣ ಸ್ಥಳಕ್ಕೆ ಬಂದ ಅವರನ್ನು ಬಹಳ ಕಾಳಜಿಯಿಂದ ಕಾಸರವಳ್ಳಿ ಸರ್ ಮಾತನಾಡಿಸುತ್ತಿದ್ದುದು, ಸಿನೇಮಾ ಕಥೆಯ ಬಗ್ಗೆ ಚರ್ಚೆ, ಉದ್ದಕ್ಕೂ ಮಗುವಿನ ಮುಗ್ದತೆ, ವಿಷಯದ ಬಗ್ಗೆ ಪ್ರೌಢಿಮೆ, ಇವುಗಳನ್ನು ಸೋಜಿಗತುಂಬಿ ದೂರದಿಂದ ದಿಟ್ಟಿಸುತ್ತಿದ್ದೆ.

ಪೂರ್ಣಿಮಾ ಸುರೇಶ್, ಕವಿ, ರಂಗ ಕಲಾವಿದೆ (Poornima Suresh)

*

(ಭಾಗ 1)

“ಪೂರ್ಣಿಮಾ ನೀನು ಮಸೂರ ನೋಡಿದ್ದಿ, ಅಲ್ವಾ?..”

“ಹೌದು ಅಮ್ಮಾ, ಸೂಕ್ಷ್ಮ ದರ್ಶಕದೊಳಗಿರುತ್ತಲ್ವಾ, ಅದೇ ತಾನೇ?” ನಾನಂದೆ.

“ಹಾ..ಹಾ.. ಅದೇ. ಮಸೂರಕ್ಕೆ ಬಿದ್ದ ಬೆಳಕು ಆಕಡೆ ಕೇಂದ್ರೀಕೃತವಾಗಿ ಪ್ರಖರವಾಗುತ್ತೆ. ಹಾಗೆಯೇ ಸೂಕ್ಷ್ಮದರ್ಶಕದೊಳಗೆ ಒಂದು ಕಡೆ ತದೇಕ ದೃಷ್ಟಿಯಿಂದ ನೋಡಿದ್ರೆ ಅಲ್ಲಿ ಬೆಂಕಿ ಹುಟ್ಟುತ್ತೆ ಕಣೆ. ಬರವಣಿಗೆಯೆಂದರೂ ಹಾಗೆಯೇ. ಬೆಂಕಿ ಹುಟ್ಟಿಸಬೇಕು. ಅದು ಕಿಚ್ಚು..ಆ ಕಿಚ್ಚಿನಿಂದ ಬೆಳಕು ಪಸರಿಸಬೇಕು. ಧ್ಯಾನ ಎಂದರೂ ಅದೇ ಅಲ್ವಾ. ಇದು ಪ್ರಸಂಗಗಳ ಮರುಹುಟ್ಟು. ಅದನ್ನು ಬರಹಗಾರ ಮಾಡಬೇಕು. ಈ ಸೂಕ್ಷ್ಮ ದೃಷ್ಟಿಯಿಂದಲೇ ಅವಳು(ಅವನು) ಉಳಿದವರಿಗಿಂತ ಭಿನ್ನವಾಗಿ ಕಾಣುತ್ತಾನೆ. ನಾವು ಆ ಕೆಲಸ ಮಾಡಬೇಕು. ವಿಷಯಗಳ ಜೀವ ನಾಡಿ ಮುಟ್ಟಿ ಅದನ್ನು ಜೀವಕಲೆಯಾಗಿಸಬೇಕು.”

ಸಂವೇದನಾ ಶೀಲ, ವಿಶಿಷ್ಟ ಬರಹಗಾರ್ತಿಯಾಗಿ ಗುರುತಿಸಲ್ಪಟ್ಟ ಹಿರಿಯ ಬರಹಗಾರ್ತಿ ವೈದೇಹಿಯವರ ಆತ್ಮೀಯ ತಿಳಿಮಾತುಗಳಿವು.

ನನ್ನ ಅವರ ಬಂಧ ಹಲವು ನಂಟಿನ ಗಂಟುಗಳಿಂದ ಜೋಡಣೆಯಾದದ್ದು. ಹತ್ತು ಹದಿನೈದು ವರ್ಷಗಳ ಹಿಂದೆ ಅದಾವುದೋ ಕಾರ್ಯಕ್ರಮ ಕ್ಕೆ ಆಹ್ವಾನ ನೀಡಲು ಹೋದಾಗ ಅವರ ಅಯಸ್ಕಾಂತೀಯತೆಯ ಪ್ರಭಾವಲಯದೊಳಗೆ ನಾನು ಪ್ರವೇಶ ಪಡೆದೆ. ಆದರೆ ಅವರ ಗಂಭೀರ ಮುಖಭಾವ ಕಂಡು ಸಣ್ಣ ಅಂತರ. ಅಲ್ಲಲ್ಲಿ ಸಿಕ್ಕಿದಾಗಲೂ ಮಿತ ಮಾತು. ಆದರೆ ಆ ಪ್ರತೀ ಭೇಟಿಯಲ್ಲೂ ಅವ್ಯಕ್ತ ಆಪ್ತತೆ ಜಿನುಗುವಂತೆ.

ಇನ್ನು ಅವರ ಮನೆಗೆ ಯಾರೇ ಬರಲಿ ಪ್ರೀತಿಯಿಂದ ತಿಂಡಿ ಚಾ ಕಾಫಿಯೆಂದು ಓಡಾಡಿ ಮಾಡಿಕೊಟ್ಟು ಇನ್ನೂ ಒಂದಷ್ಟು ಎಂದು ಪ್ರೀತಿ ತುಂಬಿ ಅಮ್ಮನೇ ಆಗಿ ಉಪಚರಿಸುವ ಮಾತೃಹೃದಯಿ.

ಇದನ್ನೂ ಓದಿ : Vaidehi’s Birthday: ‘ದೈನಿಕದ ದಾರದಲ್ಲಿ ಘಮಘಮಿಸುವ ಮಲ್ಲಿಗೆಯನ್ನೂ, ಪರಿಮಳವೇ ಇಲ್ಲದ ಅಬ್ಬಲಿಗೆಯನ್ನೂ ಕಟ್ಟುತ್ತಾರೆ’

“ದೋಸೆಗೆ ತುಪ್ಪ ಹಾಕಿ ತಿಂದರೇ ಚೆಂದ, ನೀವೆಲ್ಲ ಸಣ್ಣವರು ಅರಗಿಸಿಕೊಳ್ಳಬಹುದು”

ಕಣ್ಣುತುಟಿಯಲ್ಲಿ ನಗೆ ತುಳುಕಿಸಿ ಚಮಚದಲ್ಲಿ ತುಪ್ಪ ಎರೆದು ಖುಷಿ ಪಡುವ ಅಮ್ಮನಂತಹ ಅಮ್ಮ. ಇದು ನನ್ನ ಒಬ್ಬಳ ಅನುಭವವಲ್ಲ. ಹಲವಾರು ಮಂದಿ ಇಂತಹ ಅದೃಷ್ಟವಂತರಿದ್ದಾರೆ.

ಒಂದು ಕಾಲದಲ್ಲಿ ಭಾರತದುದ್ದಕ್ಕೂ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ನನ್ನ ಪ್ರವಾಸದ ಬದುಕು, ನಮ್ಮಿಬ್ಬರ ನಡುವೆ ಮಾತಿನ ಮೃದು ಸೇತುವೆಯಾದ ಹಲವು ಪ್ರಸಂಗಗಳಿವೆ. ನನ್ನ ಅನುಭವಗಳನ್ನು ಬುಡುಬುಡು ಮಾತಿನಿಂದ ಉದುರಿಸುತ್ತಾ ಹೋದರೆ ಅವರು ಒಂದಿಷ್ಟೂ ಬೇಸರಿಸದೆ ತದೇಕ ಚಿತ್ತದಿಂದ ಕೇಳಿಸಿಕೊಂಡಿದ್ದಾರೆ. ಅರಿವಿನ ವಿಸ್ತಾರಕ್ಕೆ ತೆರೆದಮನದಿಂದ ಆಲಿಸುವುದೇ ಮುಖ್ಯ ಬಾಗಿಲು ಎಂಬಂತೆ.

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)

ಇದನ್ನೂ ಓದಿ : Vaidehi’s Birthday: ‘ಕಾವ್ಯದ ಬಗ್ಗೆ ದೊಡ್ಡಕೆ ತಿಳಿದವರೇ ಹೇಳಿ, ಗೊತ್ತೇ ತಿಳಿಸಾರು ನಿಮಗೆ? ಕ್ಷಮಿಸಿ ಗೊತ್ತಿಲ್ಲ ಕಾವ್ಯ ನನಗೆ’

Published On - 8:32 pm, Sat, 12 February 22