Dr. Veena Shanteshwar‘s Birthday: ‘ನನ್ನ ಬದುಕಿನ ಅನುಭವ ಸಾಂದ್ರಗೊಳಿಸಿ ಬರೆಯುವ ಉದ್ದೇಶ ಖಂಡಿತ ಇದೆ’

Dr. Chennaveera Kanavi : ‘ಚೆನ್ನವೀರ ಕಣವಿಯವರು ತಮ್ಮ ಹೆಂಡತಿಗೆ ಅಪಾರವಾದ ಸ್ಥಾನ ಮಾನ ನೀಡಿ, ಅವರೊಂದಿಗೆ ಪ್ರೀತಿ-ವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದರು. ಅವರ ಸ್ವಭಾವದ ನೂರನೇ ಒಂದು ಭಾಗವನ್ನಾದರೂ ಎಲ್ಲ ಯಜಮಾನ್ಯ ಸಂಸ್ಕೃತಿಯ ವಕ್ತಾರರು ಹೊಂದಿದರೆ ಸ್ತ್ರೀ ಸಮುದಾಯದ ಸಮಸ್ಯೆಗಳು ಮುಕ್ತಾಯಗೊಳ್ಳುತ್ತವೆ.’ ಡಾ. ವೀಣಾ ಶಾಂತೇಶ್ವರ

Dr. Veena Shanteshwar‘s Birthday: ‘ನನ್ನ ಬದುಕಿನ ಅನುಭವ ಸಾಂದ್ರಗೊಳಿಸಿ ಬರೆಯುವ ಉದ್ದೇಶ ಖಂಡಿತ ಇದೆ’
ಪ್ರಜ್ಞಾ ಮತ್ತಿಹಳ್ಳಿ ಮತ್ತು ಡಾ. ವೀಣಾ ಶಾಂತೇಶ್ವರ
Follow us
|

Updated on: Feb 22, 2022 | 3:23 PM

ಡಾ. ವೀಣಾ ಶಾಂತೇಶ್ವರ | Dr. Veena Shanteshwar : ‘ಮಹಿಳೆಯರ ವಿದ್ಯೆ, ಉದ್ಯೋಗ, ಸಂಚಾರ, ಸಂಪರ್ಕ ಮುಂತಾಗಿ ಅಭಿವೃದ್ಧಿಶೀಲವಾದ ಬದಲಾವಣೆಯಾಗಿದೆ. ಆದರೆ ಹೆಣ್ಣನ್ನು ನೋಡುವ ಮೂಲಭೂತ ದೃಷ್ಟಿ ಮಾತ್ರ ಹಾಗೆಯೇ ಉಳಿದಿದೆ. ಅವಳಿಗೆ ಸಮಾನ ಅವಕಾಶ, ಸ್ವಾತಂತ್ರ್ಯ ಎಂದು ಬಾಹ್ಯ ಪ್ರಪಂಚದಲ್ಲಿ ಅರಚುವವರೂ ಕೂಡ ಮನೆಯಲ್ಲಿ ತಮ್ಮ ಹೆಂಡತಿಯನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದು ಅವರ ನಿಜವಾದ ಸ್ವಭಾವ ಬದಲಾಗದಿರುವುದನ್ನು ಸೂಚಿಸುತ್ತದೆ. ಈ ವಿಷಯದಲ್ಲಿ ನನಗೆ ಬಹಳ ಗೌರವ ಹುಟ್ಟಿಸುವುದು ಡಾ.ಚೆನ್ನವೀರ ಕಣವಿಯವರ ವರ್ತನೆ. ಅವರು ತಮ್ಮ ಪತ್ನಿ ಶಾಂತಾದೇವಿಯವರಿಗೆ ಅಪಾರವಾದ ಗೌರವದ ಸ್ಥಾನವನ್ನು ನೀಡಿದ್ದರು. ಹೆಂಡತಿಯೊಂದಿಗೆ ಅತ್ಯಂತ ಮೃದುವಾಗಿ ಪ್ರೀತಿ-ವಿಶ್ವಾಸದೊಂದಿಗೆ ನಡೆದುಕೊಳ್ಳುತ್ತಿದ್ದರು. ಅವರ ಸ್ವಭಾವದ ನೂರನೇ ಒಂದು ಭಾಗವನ್ನಾದರೂ ಎಲ್ಲ ಯಜಮಾನ್ಯ ಸಂಸ್ಕೃತಿಯ ವಕ್ತಾರರು ಹೊಂದಿದರೆ ಸ್ತ್ರೀ ಸಮುದಾಯದ ಸಮಸ್ಯೆಗಳು ಮುಕ್ತಾಯಗೊಳ್ಳುತ್ತವೆ ಎನ್ನುತ್ತಾರೆ ವೀಣಾ. ಪ್ರಜ್ಞಾ ಮತ್ತೀಹಳ್ಳಿ, ಲೇಖಕಿ

*

(ಭಾಗ 2)

ಇಂತಹ ಸನ್ನಿವೇಶದಲ್ಲಿ ಸಾಹಿತ್ಯದ ಪಾತ್ರವೇನು? ಯಾವುದೇ ಕಾಲಘಟ್ಟದಲ್ಲಿ ತನ್ನ ಸಮಕಾಲೀನ ಮನುಷ್ಯ ಪ್ರಪಂಚವನ್ನು ಬದುಕಿಗೆ ಸಜ್ಜುಗೊಳಿಸುವಲ್ಲಿ ಸಾಹಿತ್ಯ ಮಹತ್ವದ ಪಾತ್ರವನ್ನು ವಹಿಸುತ್ತದೆ. ರಾಜಕಾರಣಿಗೆ ತನ್ನ ಪಕ್ಷದ ಚೌಕಟ್ಟಿರುತ್ತದೆ, ಧಾರ್ಮಿಕ  ಗುರುವಿಗೂ ಒಂದು ಮಿತಿಯ ಬಂಧವಿರುತ್ತದೆ. ಆದರೆ ಸಾಹಿತಿ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಸ್ವತಂತ್ರನಿರುತ್ತಾನೆ. ಆತನಿಗೆ ಯಾವುದರ ಭೀತಿಯೂ ಇರುವುದಿಲ್ಲ. ಅವನು ತನ್ನ ಕೃತಿಗಳಲ್ಲಿ ಮೌಲ್ಯವನ್ನು ಉನ್ನತೀಕರಿಸಬೇಕು. ಸಮಾಜಕ್ಕೆ, ಬದುಕಿನ ಪಾಠಗಳನ್ನು ಕಲಾತ್ಮಕವಾಗಿಯೇ ಹೇಳಬೇಕು.

ನಿಮ್ಮ ತಾರುಣ್ಯದ ದಿನಗಳಲ್ಲಿ ಇಡೀ ಸಮಾಜವೇ ಬೆಚ್ಚಿ ಬೀಳುವಂತಹ ಮುಳ್ಳುಗಳು ಇತ್ಯಾದಿ ಕತೆಗಳನ್ನು ಬರೆದಿರಿ. ಅವುಗಳಿಗೆ ಹೋಲಿಸಿದರೆ ಈಗಿನ ಲೇಖಕಿಯರ ಕತೆಗಳ ಕುರಿತು ನಿಮ್ಮ ಅನಿಸಿಕೆಯೇನು?

ಈಗಿನ ಕತೆಗಳನ್ನು ನೋಡಿದಾಗ ಬಹಳ ಸಂತೋಷವಾಗುತ್ತದೆ. ಆಗ ಇಂತಹ ಕತೆಗಳು ಅಪರೂಪವಾಗಿದ್ದವು. ಈಗ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಬರವಣಿಗೆ ಹರಿದು ಬರುತ್ತಿದೆ. ಲೇಖಕಿಯರು ತುಂಬಾ ದಿಟ್ಟವಾಗಿ ಬರೆಯುತ್ತಿದ್ದಾರೆ. ಆದರೆ ವಸ್ತುವನ್ನು ಅಕ್ಷರವಾಗಿಸುವಾಗ ಕಲಾತ್ಮಕತೆಯ ಕೊರತೆಯಾಗಿಬಿಟ್ಟರೆ ಅಲ್ಲಿ ಘೋಷಣೆ ಅಥವಾ ಭಾಷಣದ ನೆರಳು ಗೋಚರವಾಗುತ್ತದೆ. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನ ನಡೆಯಬೇಕು ಎಂದು ಭಾಸವಾಗುತ್ತದೆ. ಆದರೆ ನನ್ನ ಕತೆಗಳನ್ನು ಬರೆದಾಗ ಸಮಾಜದಲ್ಲಿ ಯಾವುದರ ಕುರಿತು ಹೆಣ್ಣಿನ ಆರೋಪವಿತ್ತೋ ಇವತ್ತಿಗೂ ಆ ಎಲ್ಲ ಶೋಷಣೆಯ ಅಂಶಗಳು ಹಾಗೆಯೇ ಉಳಿದಿದ್ದಾವೆ ಎನ್ನುವುದು ನೋವಿನ ಸಂಗತಿ. ನನ್ನ ಕತೆಗಳು ಇವತ್ತಿಗೂ ಪ್ರಸ್ತುತವಾಗಬಲ್ಲವು ಎನ್ನುವುದೇ ನಮ್ಮ ಜಡ್ಡುಗಟ್ಟಿರುವ ವ್ಯವಸ್ಥೆಯನ್ನು ತೋರಿಸುತ್ತಿದೆ.

ಇದನ್ನೂ ಓದಿ : Chennaveera Kanavi Death: ‘ಅರಿವೇ ಗುರು, ನುಡಿ ಜ್ಯೋತಿರ್ಲಿಂಗ, ದಯವೇ ಧರ್ಮದ ಮೂಲತರಂಗ’

ಈ ವಿಷಯದಲ್ಲಿ ಸಾಮಾಜಿಕ ಬದಲಾವಣೆ ಆಗದಿರುವ ಕಾರಣವೇನು? ಮಹಿಳೆಯರ ವಿದ್ಯೆ, ಉದ್ಯೋಗ, ಸಂಚಾರ, ಸಂಪರ್ಕ ಮುಂತಾಗಿ ಅಭಿವೃದ್ಧಿಶೀಲವಾದ ಬದಲಾವಣೆಯಾಗಿದೆ. ಆದರೆ ಹೆಣ್ಣನ್ನು ನೋಡುವ ಮೂಲಭೂತ ದೃಷ್ಟಿ ಮಾತ್ರ ಹಾಗೆಯೇ ಉಳಿದಿದೆ. ಅವಳಿಗೆ ಸಮಾನ ಅವಕಾಶ, ಸ್ವಾತಂತ್ರ್ಯ ಎಂದು ಬಾಹ್ಯ ಪ್ರಪಂಚದಲ್ಲಿ ಅರಚುವವರೂ ಕೂಡ ಮನೆಯಲ್ಲಿ ತಮ್ಮ ಹೆಂಡತಿಯನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದು ಅವರ ನಿಜವಾದ ಸ್ವಭಾವ ಬದಲಾಗದಿರುವುದನ್ನು ಸೂಚಿಸುತ್ತದೆ. ಈ ವಿಷಯದಲ್ಲಿ ನನಗೆ ಬಹಳ ಗೌರವ ಹುಟ್ಟಿಸುವುದು ಡಾ.ಚೆನ್ನವೀರ ಕಣವಿಯವರ ವರ್ತನೆ. ಅವರು ತಮ್ಮ ಪತ್ನಿ ಶಾಂತಾದೇವಿಯವರಿಗೆ ಅಪಾರವಾದ ಗೌರವದ ಸ್ಥಾನವನ್ನು ನೀಡಿದ್ದರು. ಹೆಂಡತಿಯೊಂದಿಗೆ ಅತ್ಯಂತ ಮೃದುವಾಗಿ ಪ್ರೀತಿ-ವಿಶ್ವಾಸದೊಂದಿಗೆ ನಡೆದುಕೊಳ್ಳುತ್ತಿದ್ದರು. ಅವರ ಸ್ವಭಾವದ ನೂರನೇ ಒಂದು ಭಾಗವನ್ನಾದರೂ ಎಲ್ಲ ಯಜಮಾನ್ಯ ಸಂಸ್ಕೃತಿಯ ವಕ್ತಾರರು ಹೊಂದಿದರೆ ಸ್ತ್ರೀ ಸಮುದಾಯದ ಸಮಸ್ಯೆಗಳು ಮುಕ್ತಾಯಗೊಳ್ಳುತ್ತವೆ.

ಅನೇಕ ದಶಕಗಳಿಂದ ಓದುಗರು ನಿಮ್ಮ ಕತೆಗಳ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ಏನು ಹೇಳಬಯಸುತ್ತೀರಿ? ಒಂದು ಕಾಲದಲ್ಲಿ ನನ್ನ ಮನಸ್ಸಿನ ಭಾವನೆಗಳನ್ನು ಪಾತ್ರಗಳ, ಘಟನೆಗಳ ಮೂಲಕ ಅಭಿವ್ಯಕ್ತಿಸುತ್ತ, ಕತೆ ಕಟ್ಟುವ ಪ್ರಕ್ರಿಯೆ ನನಗೆ ಸಂತೋಷವನ್ನು ಕೊಡುತ್ತಿತ್ತು. ಆದರೆ ಕಾಲಕ್ರಮೇಣ ಬದುಕಿನ ಅನುಭವಗಳು ನನ್ನನ್ನು ಮಾಗಿಸಿದಂತೆಲ್ಲ ಈಗಿನ ಮನೋಸ್ಥಿತಿಗೆ ಕತೆಗಳ ಬದಲಾಗಿ ಲೇಖನದ ಮೂಲಕ ಸಶಕ್ತವಾಗಿ ಹೇಳಬಹುದು ಎಂದು  ತೋರುತ್ತಿದೆ, ಆದ್ದರಿಂದ ಇತ್ತೀಚೆಗೆ ಅನೇಕ ಲೇಖನಗಳನ್ನು ಬರೆದಿದ್ದೇನೆ. ಸಾಹಿತಿಗಳ ಅಭಿನಂದನಾ ಲೇಖನಗಳನ್ನು ಬರೆದಿದ್ದೇನೆ. ವೈಯಕ್ತಿಕ ಒಡನಾಟಗಳನ್ನು ಹಂಬಲಿಸಿಕೊಂಡು ಬರೆದಿದ್ದೇನೆ.

ನಿಮಗೆ ಪ್ರಚಂಡ ಸ್ಮರಣ ಶಕ್ತಿಯಿದೆ. ಸೂಕ್ಷ್ಮ ಗ್ರಹಿಕೆಯೂ ಇದೆ. ಉತ್ತಮವಾದ ಅಭಿವ್ಯಕ್ತಿ ಸಾಮರ್ಥ್ಯವೂ ಇದೆ. ಆದ್ದರಿಂದ ನಿಮ್ಮ ಬದುಕಿನ ಒಟ್ಟೂ ಅನುಭವವನ್ನು ಸೇರಿಸಿಕೊಂಡು ಬರೆದರೆ ಅದು ಹೇಗಿರಬಹುದೆಂದು ನಿಮ್ಮ ಅನಿಸಿಕೆ? ನನ್ನ ಶಕ್ತಿ-ಸಾಮರ್ಥ್ಯ ಅಂತೆಲ್ಲ ಏನೇನೋ ಹೇಳ್ತಾ ಇದ್ದೀರಿ ಅದು ನನಗಷ್ಟೇ ಇರುವ ವಿಶೇಷತೆಯೇನಲ್ಲ. ಎಲ್ಲರಲ್ಲಿಯೂ ಇರುವ ಸಮಾನ ಸಂಗತಿ ಮಾತ್ರ. ಆದರೆ ನನ್ನ ಎಲ್ಲ ಅನುಭವಗಳನ್ನು ಸಾಂದ್ರಗೊಳಿಸಿ ಬರೆಯುವ ಉದ್ಧೇಶ ಖಂಡಿತ ಇದೆ.

(ಮುಗಿಯಿತು)

ಭಾಗ 1 : Dr. Veena Shanteshwar‘s Birthday: ‘ವೀಣಾ ಕನ್ನಡದ ಮುಖ್ಯ ಲೇಖಕಿ ಮಾತ್ರವಲ್ಲ ಭಾರತದ ಮುಖ್ಯ ಲೇಖಕಿ’ ಎಂಎಸ್ ಆಶಾದೇವಿ