Writer : ‘ಇಂಗ್ಲಿಷ್​ನಲ್ಲಿ ಬರೆದಿದ್ದರೆ ಇಷ್ಟು ಹೊತ್ತಿಗೆ ನನಗೆ ಕೆಲವು ಪ್ರಶಸ್ತಿಗಳು ಬರುತ್ತಿದ್ದವು!’ ಲೇಖಕ ಮಹಾಬಲೇಶ್ವರ ರಾವ್ ಬೇಸರ

ಶ್ರೀದೇವಿ ಕಳಸದ

|

Updated on:Dec 03, 2021 | 5:24 PM

Award : ‘ಪ್ರಶಸ್ತಿ ಬಲಪಂಥ, ಎಡಪಂಥ ಅಥವಾ ಪ್ರಭುತ್ವವನ್ನು ಓಲೈಸಿಯೇ ಬರುತ್ತದೆ ಎನ್ನುವುದು ಸುಳ್ಳು. ಅದಕ್ಕೆ ಬೇರೆಯೇ ನಮೂನೆಯ ವ್ಯವಸ್ಥೆಗಳಿರುತ್ತವೆ. ಪ್ರಭುತ್ವ ಯಾವುದೇ ಆದರೂ ಕೆಲವು ಜನರಿಗೆ ಪ್ರಶಸ್ತಿ ಬರುತ್ತಾನೇ ಇರುತ್ತದೆ. ಪ್ರಭುತ್ವ ತನ್ನ ಕಡೆಯದ್ದೇ ಆಗಿದ್ದರೂ ಕೆಲವರಿಗೆ ಪ್ರಶಸ್ತಿಯನ್ನು ಪಡೆಯುವ ಭಾಗ್ಯ ಇರುವುದಿಲ್ಲ. ಅದು ಫಂಕ್ಷನಿಂಗ್ ಆಗುವ ರೀತಿಯೇ ಬೇರೆಯದು.’ ಅರವಿಂದ ಚೊಕ್ಕಾಡಿ

Writer : ‘ಇಂಗ್ಲಿಷ್​ನಲ್ಲಿ ಬರೆದಿದ್ದರೆ ಇಷ್ಟು ಹೊತ್ತಿಗೆ ನನಗೆ ಕೆಲವು ಪ್ರಶಸ್ತಿಗಳು ಬರುತ್ತಿದ್ದವು!’ ಲೇಖಕ ಮಹಾಬಲೇಶ್ವರ ರಾವ್ ಬೇಸರ
ಲೇಖಕ ಅನುವಾದಕ ಪ್ರೊ. ಮಹಾಬಲೇಶ್ವರ ರಾವ್

Award : ‘ಜಿಡ್ಡು ಕೃಷ್ಣಮೂರ್ತಿಯವರ ಅತ್ಯಂತ ಕಠಿಣವಾದ ತತ್ವಶಾಸ್ತ್ರೀಯ ವಿಷಯವನ್ನು ಇಂಗ್ಲಿಷ್​ನಿಂದ ಕನ್ನಡಕ್ಕೆ ನಾನು, ಕಳೆದ ಹಲವು ವರ್ಷಗಳಿಂದ ಅನುವಾದ ಮಾಡುತ್ತಾ ಬಂದಿದ್ದೇನೆ. ಸುಮಾರು 9,000 ಪುಟಗಳಷ್ಟು ಕಂಟೆಂಟ್ ಕನ್ನಡಕ್ಕೆ ಕೊಟ್ಟಿರುವೆ. ಎ.ಕೆ. ರಾಮಾನುಜನ್ ಅವರನ್ನು ಅನುವಾದಿಸಿರುವೆ. ಆದರೂ ಗೌರವ ಪ್ರಶಸ್ತಿ ಕೊಟ್ಟಿಲ್ಲ. ಒಟ್ಟು 145 ಪುಸ್ತಕ ಬರೆದಿದ್ದೇನೆ. ನಾನು ಇಂಗ್ಲಿಷ್​ನಲ್ಲಿ ಬರೆದಿದ್ದರೆ ಇಷ್ಟು ಹೊತ್ತಿಗೆ ನನಗೆ ಕೆಲವು ಪ್ರಶಸ್ತಿಗಳು ಬರುತ್ತಿದ್ದವು!’ ಪ್ರೊ. ಮಹಾಬಲೇಶ್ವರ ರಾವ್, ಲೇಖಕ, ಅನುವಾದಕ 

ಕನ್ನಡದ ಹಿರಿಯ ಲೇಖಕ, ಅನುವಾದಕ ಪ್ರೊ. ಮಹಾಬಲೇಶ್ವರ ರಾವ್ ಅವರು ಹೀಗೆಂದು ಇತ್ತೀಚೆಗೆ ಫೇಸ್​ಬುಕ್​ನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ಕನ್ನಡ ಸಾಹಿತ್ಯಪ್ರಿಯರ ಗಮನ ಸೆಳೆದಿದೆ. ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ, ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಹಾಬಲೇಶ್ವರ ಅವರು ಕಾರಂತರ ದೃಷ್ಟಿ-ಸೃಷ್ಟಿ, ಭಾರತೀಯ ಜನಪದ ಕತೆಗಳು, ಮನೆ-ಶಾಲೆ, ಸಂಶೋಧನ ಮಾರ್ಗ, ಶಿಕ್ಷಣದಲ್ಲಿ ಮನೋವಿಜ್ಞಾನ, ಪ್ರೌಢಶಾಲೆಗಳಲ್ಲಿ ಕನ್ನಡ ಬೋಧನೆ, ಸ್ಥಿತ್ಯಂತರ, ಉದಯೋನ್ಮುಖ ಭಾರತದಲ್ಲಿ ಶಿಕ್ಷಣ, ಬಾಳಿಗೊಂದು ಭಾಷ್ಯ (3 ಸಂಪುಟಗಳಲ್ಲಿ ಜೆ.ಕೆ.), ಪರಿಸರ ಶಿಕ್ಷಣ, ಮಹಿಳಾ ಶಿಕ್ಷಣ, ಪ್ರಾಥಮಿಕ ಶಿಕ್ಷಣ: ಸಮಸ್ಯೆಗಳು ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

‘ಡಾ: ಹಾ.ಮಾ. ನಾಯಕ ದತ್ತಿನಿಧಿ ಪುರಸ್ಕಾರ’, ‘ಗೊರೂರು ಸಾಹಿತ್ಯ ಪುರಸ್ಕಾರ’, ‘ವಸುದೇವ ಭೂಪಾಲಂ ದತ್ತಿನಿಧಿ ಪುರಸ್ಕಾರ’, ‘ಉಪಾಧ್ಯಾಯ ಸಮ್ಮಾನ್ ರಾಜ್ಯ ಪುರಸ್ಕಾರ’. ‘ಅಂತಾರಾಷ್ಟ್ರೀಯ ರೋಟರಿ ವೃತ್ತಿ ಶ್ರೇಷ್ಠತಾ ಪುರಸ್ಕಾರ’ ಮುಂತಾದ ಗೌರವ ಪುರಸ್ಕಾರಗಳು ಲಭಿಸಿವೆ. ಇವರ ‘ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು’ (ಮಾನವಿಕ) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ.

Reaction for Kannada Writer Mahabaleshwara Rao facebook comment regarding award

ಮಹಾಬಲೇಶ್ವರ ಅವರ ಫೇಸ್​ಬುಕ್​ ಪ್ರತಿಕ್ರಿಯೆ

ಹಿರಿಯ ಲೇಖಕರೊಬ್ಬರು ಸಾರ್ವಜನಿಕವಾಗಿ ಹೀಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕನ್ನಡದ ಲೇಖಕರಿಬ್ಬರು ಸ್ಪಂದಿಸಿದ್ದು ಇಲ್ಲಿದೆ.

ಲೇಖಕ, ಪ್ರಾಧ್ಯಾಪಕ ಪ್ರಸನ್ನ ಸಂತೇಕಡೂರು, ‘ಇತ್ತೀಚೆಗೆ ಸಾಹಿತ್ಯ ಪ್ರಶಸ್ತಿಗಳು, ಸನ್ಮಾನಗಳು ನಿಜವಾದ ಸಾಧಕರಿಗೆ ಸಿಗುತ್ತಿಲ್ಲ. ಇವುಗಳು ಯಾರದೋ ಶಿಫಾರಸ್ಸಿನ ಮೇಲೋ, ಅಥವಾ ಸ್ವಜಾತಿ ಪ್ರೇಮದ ಮೇಲೋ ಅಥವಾ ಸಿದ್ಧಾಂತದ ಆಧಾರದ ಮೇಲೋ ಸಿಗುತ್ತಿವೆ. ಇನ್ನು ಕೆಲವು ಸಂಘ ಸಂಸ್ಥೆಗಳು ಲೇಖಕರಿಂದಲೇ ಇಷ್ಟು ಹಣ ಅಂತ ಮೊದಲೇ ಪಡೆದು ಆ ಹಣದ ಆಧಾರದ ಮೇಲೆ ಪ್ರಶಸ್ತಿ ನೀಡಿ ಆ ಲೇಖಕರಿಗೆ ಸನ್ಮಾನ ಮಾಡುತ್ತಿವೆ. ಕೆಲವು ಖಾಸಗಿ ಸಂಸ್ಥೆಗಳು ತಮ್ಮ ತಂದೆ ತಾಯಿಗಳ ಹೆಸರಿನಲ್ಲಿ ಇರುವ ಪ್ರಶಸ್ತಿಗೆ ಪುಸ್ತಕಗಳನ್ನ ಆಹ್ವಾನಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಆ ಪುಸ್ತಕಗಳನ್ನ ಓದದೇ ತಾವೇ ಕೆಲವು ವ್ಯಕ್ತಿಗಳನ್ನು ನೇರವಾಗಿ ಆಯ್ಕೆಮಾಡಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿವೆ. ಹಿರಿಯ ಲೇಖಕರಾದ ಪ್ರೊ. ಮಹಾಬಲೇಶ್ವರ ರಾವ್ ಅವರು ಕನ್ನಡ ಸಾಹಿತ್ಯಕ್ಕೆ ತಾವು ನೀಡಿರುವ ಕೊಡುಗೆಯನ್ನ ಸರ್ಕಾರ ಮತ್ತು ಕನ್ನಡ ಸಾಹಿತ್ಯ ವಲಯ ಗುರುತಿಸದಿರುವುದನ್ನ ತಾವೇ ನೊಂದುಕೊಂಡು ಬರೆದಿದ್ದರು. ಇಲ್ಲಿ ಹಲವಾರು ಹಿರಿಯ ಲೇಖಕ ಲೇಖಕಿಯರ ಕೊಡುಗೆಯನ್ನು ಯಾರು ಗುರುತಿಸದೆ ಒಂದು ಎರಡು ಕೃತಿಗಳನ್ನು ಬರೆದಿರುವವರನ್ನೇ ದೊಡ್ಡ ಸಾಧಕರ ಹಾಗೆ ಬಿಂಬಿಸುತ್ತಿದ್ದಾರೆ ಕೂಡ. ಇದರಿಂದ ಕನ್ನಡ ಭಾಷೆಯ ಮತ್ತು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಮಾರಕವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ’ ಎನ್ನುತ್ತಾರೆ.

ಬರಹಗಾರ ಮತ್ತು ಅಧ್ಯಾಪಕ ಅರವಿಂದ ಚೊಕ್ಕಾಡಿ, ‘ತಾನು ಬರೆದಷ್ಟನ್ನು ಬೇರೆ ಭಾಷೆಯಲ್ಲಿ ಬರೆದಿದ್ದರೆ ಪ್ರಶಸ್ತಿ ಬರುತ್ತಿತ್ತು’ ಎನ್ನುವುದನ್ನು ಕೇಂದ್ರೀಕರಿಸಿ ತಮ್ಮ ಅನಿಸಿಕೆಯನ್ನು ಹೀಗೆ ವ್ಯಕ್ತಪಡಿಸಿದ್ದಾರೆ ;

ಲೇಖಕನಿಗೆ ಲೇಖಕನಾಗಿ ಪ್ರತ್ಯೇಕ ಅಸ್ತಿತ್ವ ಇದೆ ಎಂದು ನಾನು ಭಾವಿಸಿಲ್ಲ. ಒಂದು ವ್ಯಕ್ತಿಯಾಗಿ ಲೇಖಕನಿಗೆ ಒಂದು ಅಸ್ತಿತ್ವವಿದೆ. ಎರಡನೆಯದು ಪೌರನಾಗಿ ಒಂದು ಅಸ್ತಿತ್ವವಿದೆ. ಡಾ. ಮಹಾಬಲೇಶ್ವರ ರಾವ್ ಈಗ ಅವರಿಗೆ ಬಂದಿರುವ ಪ್ರಶಸ್ತಿ ಮತ್ತು ಗೌರವಗಳಿಗಿಂತ ಹೆಚ್ಚಿನದಕ್ಕೆ ಅರ್ಹರು ಎಂಬ ವಿಚಾರದಲ್ಲಿ ಪೌರನಾಗಿ ಅವರನ್ನು ನಾನು ಸಮರ್ಥಿಸುತ್ತೇನೆ. ತನ್ನ ಕೊಡುಗೆ ಹಲವು ಗೌರವಕ್ಕೆ ತನ್ನನ್ನು ಅರ್ಹನನ್ನಾಗಿ ಇರಿಸಿವೆ ಎಂದು ಹೇಳಬೇಕಾದರೆ ಒಂದು ಛಾತಿ ಇರಬೇಕು ನೋಡಿ. ಆ ಛಾತಿ ಮಹಾಬಲೇಶ್ವರ ರಾವ್ ಅವರಿಗಿದೆ. ಅವರಿಗೆ ಪ್ರಶಸ್ತಿ ಬಾರದಿರುವುದೂ ಈ ಕಾರಣಕ್ಕೇನೆ. ಸಿಟ್ಟಿರುವ ಮನುಷ್ಯ ಪ್ರಾಮಾಣಿಕನಿರುತ್ತಾನೆ. ಹೇಳಲು ನಾವೆಲ್ಲರೂ,”ನೇರವಾಗಿ ಮಾತನಾಡಬೇಕು. ಪ್ರಾಮಾಣಿಕನಾಗಿರಬೇಕು” ಎಂದರೂ ಪ್ರಾಮಾಣಿಕನಾಗಿ ನೇರವಾಗಿ ಮಾತಾಡಿದಾಗ ನಿಜವಾಗಿ ಯಾರಿಗೂ ಆಗುವುದಿಲ್ಲ. “ನನಗೇ ಹಾಗೆ ಹೇಳ್ತಾ ಇದ್ದಾನೆ” ಎನಿಸುತ್ತದೆ. ಹೀಗಿರುವವರಿಗೆ ಪ್ರಶಸ್ತಿ ಪಡೆಯಲು ಬೇಕಾದ ಕೌಶಲಗಳು ಇರುವುದಿಲ್ಲ.

Arvind Chokkadi Prasanna Santhekaduru Mahabaleshwar rao

ಲೇಖಕರಾದ ಅರವಿಂದ ಚೊಕ್ಕಾಡಿ ಮತ್ತು ಪ್ರಸನ್ನ ಸಂತೇಕಡೂರು

ಪ್ರಶಸ್ತಿ ಬಲಪಂಥ, ಎಡಪಂಥ ಅಥವಾ ಪ್ರಭುತ್ವವನ್ನು ಓಲೈಸಿಯೇ ಬರುತ್ತದೆ ಎನ್ನುವುದು ಸುಳ್ಳು. ಅದಕ್ಕೆ ಬೇರೆಯೇ ನಮೂನೆಯ ವ್ಯವಸ್ಥೆಗಳಿರುತ್ತವೆ. ಪ್ರಭುತ್ವ ಯಾವುದೇ ಆದರೂ ಕೆಲವು ಜನರಿಗೆ ಪ್ರಶಸ್ತಿ ಬರುತ್ತಾನೇ ಇರುತ್ತದೆ. ಪ್ರಭುತ್ವ ತನ್ನ ಕಡೆಯದ್ದೇ ಆಗಿದ್ದರೂ ಕೆಲವರಿಗೆ ಪ್ರಶಸ್ತಿಯನ್ನು ಪಡೆಯುವ ಭಾಗ್ಯ ಇರುವುದಿಲ್ಲ. ಅದು ಫಂಕ್ಷನಿಂಗ್ ಆಗುವ ರೀತಿಯೇ ಬೇರೆಯದು. ಮತ್ತು ಕೆಲವು ಪ್ರಶಸ್ತಿಗಳು ಸ್ಥಾಪನೆಯಾದ ಕೂಡಲೆ ಕಾಪಿರೈಟಿಗಾಗಿ ಅದು ಇಂತಹವರಿಗೇ ಮೊದಲು ಕೊಡಬೇಕು ಎಂಬ ಅಲಿಖಿತ ಸಂಪ್ರದಾಯಗಳೆಲ್ಲ ಇರುತ್ತವೆ. ಇವೆಲ್ಲದರ ನಡುವೆ ನಿಜವಾದ ಪ್ರತಿಭಾವಂತರಿಗೆ ಪ್ರತಿಭೆಗಾಗಿಯೆ ಪ್ರಶಸ್ತಿ ಬರುವುದು ಎಂದೂ ಇದೆ. ಬರುವುದೇ ಇಲ್ಲ ಎಂದಲ್ಲ.

ನೋಡಿ, ಲೇಖಕ ಒಬ್ಬ ಸಾಮಾನ್ಯ ಮನುಷ್ಯ. ಅವನು ನಿಜವಾಗಿ ದೊಡ್ಡ ಮನುಷ್ಯ ಆಗಿಯೇ ಇರುವುದಿಲ್ಲ. “ನೀನು ಯಕ್ಕಶ್ಚಿತ್” ಎನ್ನುವುದನ್ನು ಲೇಖಕನಿಗೆ ವ್ಯವಸ್ಥೆ ಪದೇ ಪದೇ ಗೊತ್ತು ಮಾಡುತ್ತಲೇ ಇರುತ್ತದೆ. ಅದರಿಂದ ನಾವು ಪಾಠ ಕಲಿಯಬೇಕು. ನಾವು ಪುಸ್ತಕ ಬರೆಯಬೇಕೆಂದು ಪ್ರಶಸ್ತಿ ಪೀಠದವರು ಹೇಳಿದ್ದಾರಾ? ಇಲ್ಲ. ಹಾಗಾದರೆ ಮಾಡುತ್ತಿರುವುದು ಸರಿಯಾ? ಅಲ್ಲ.‌ ಆದರೆ ಅದನ್ನು ಪ್ರಶಸ್ತಿ ಪೀಠದವರು ಯೋಚಿಸಬೇಕು. ಲೇಖಕ ಅಲ್ಲ.

ನನ್ನ ಮಟ್ಟಿಗೆ ಪ್ರಶಸ್ತಿಗಿಂತ ಮಹತ್ವದ್ದು ಮತ್ತೊಂದಿದೆ. ನನಗೆ ಸರಿಯಾಗದಿದ್ದರೆ ಯಾರಿಗಾದರೂ ಝಾಡಿಸ್ತೇನೆ. ಕ್ಯಾರೇ ಮಾಡುವುದಿಲ್ಲ. ನನ್ನ ಟ್ರ್ಯಾಕ್ ರೆಕಾರ್ಡ್ ಹಾಗೆ ಇದೆ. ನೀನು ಈ ಪ್ರಶಸ್ತಿಗಾಗಿ ಅದನ್ನು ಮಾಡಲಿಲ್ಲವೆ ಎಂದು ಯಾರೂ ಕೇಳಲು ಸಾಧ್ಯವಿಲ್ಲ. ಪ್ರಶಸ್ತಿಗಿಂತ ಬೆಲೆಬಾಳುವ ಈ ಶಕ್ತಿಯನ್ನು ಸದಾ ನಮ್ಮದಾಗಿ ಉಳಿಸಿಕೊಳ್ಳಬೇಕು.

ನಾಳೆ ನಿರೀಕ್ಷಿಸಿ : ಹಿರಿಯ ವಿಮರ್ಶಕ ಎಚ್. ಎಸ್. ರಾಘವೇಂದ್ರ ರಾವ್ ಅವರ ಅಭಿಪ್ರಾಯ 

ಇದನ್ನೂ ಓದಿ : Award : ಲೇಖಕಿ ಕಾವ್ಯಾ ಕಡಮೆಗೆ ‘ಛಂದ ಪುಸ್ತಕ ಹಸ್ತಪ್ರತಿ ಪ್ರಶಸ್ತಿ’

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada