AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತಕ್ಕೆ ಅರಿಘಾತ್​​ ಬಲ: ಸಮುದ್ರದಾಳದಿಂದಲೂ ಚಿಮ್ಮಬಲ್ಲದು ಖಂಡಾಂತರ ಕ್ಷಿಪಣಿ

ಮೊದಲು ಅಣುಬಾಂಬ್​ ಪ್ರಯೋಗಿಸುವುದಿಲ್ಲ ಎಂಬ ಸೂತ್ರಕ್ಕೆ ಭಾರತ ಬದ್ಧವಾಗಿರುವುದರಿಂದ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಖಡಾಂತರ ಕ್ಷಿಪಣಿಯನ್ನು ಜಲಾಂತರ್ಗಾಮಿಯಿಂದಲೂ ಉಡಾವಣೆ ಮಾಡುವ ಸಾಮರ್ಥ್ಯದ ಅಗತ್ಯ ಕಂಡು ಬಂದಿತ್ತು.

ಭಾರತಕ್ಕೆ ಅರಿಘಾತ್​​ ಬಲ: ಸಮುದ್ರದಾಳದಿಂದಲೂ ಚಿಮ್ಮಬಲ್ಲದು ಖಂಡಾಂತರ ಕ್ಷಿಪಣಿ
ಜಲಾಂತರ್ಗಾಮಿ
Follow us
ರಾಜೇಶ್ ದುಗ್ಗುಮನೆ
|

Updated on: Dec 27, 2020 | 10:04 PM

ನವದೆಹಲಿ: ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ಅರಿಘಾತ್​ನ ಅಂತಿಮ ಹಂತದ ಪರೀಕ್ಷೆಗಳನ್ನು ನೌಕಾದಳ ಸದ್ದಿಲ್ಲದೆ ನಡೆಸುತ್ತಿದೆ. ಈ ಬಗ್ಗೆ ಕೆಲ ರಾಷ್ಟ್ರೀಯ ಮಾಧ್ಯಮಗಳ ವರದಿ ಮಾಡಿದ್ದು, ಅರಿಘಾತ್​ನ ಸಾಮರ್ಥ್ಯದ ಬಗ್ಗೆ ದೇಶದ ರಕ್ಷಣಾ ತಂತ್ರಜ್ಞರಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

750 ಕಿ.ಮೀ. ದೂರದ ಗುರಿಗಳನ್ನು ನಾಶಪಡಿಸಬಲ್ಲ ಖಂಡಾಂತರ ಕ್ಷಿಪಣಿಗಳನ್ನು ಅರಿಘಾತ್​ ಉಡಾವಣೆ ಮಾಡಬಲ್ಲದು. ಮೊದಲು ಅಣುಬಾಂಬ್​ ಪ್ರಯೋಗಿಸುವುದಿಲ್ಲ ಎಂಬ ಸೂತ್ರಕ್ಕೆ ಭಾರತ ಬದ್ಧವಾಗಿರುವುದರಿಂದ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಖಡಾಂತರ ಕ್ಷಿಪಣಿಯನ್ನು ಜಲಾಂತರ್ಗಾಮಿಯಿಂದಲೂ ಉಡಾವಣೆ ಮಾಡುವ ಸಾಮರ್ಥ್ಯದ ಅಗತ್ಯ ಕಂಡು ಬಂದಿತ್ತು. ಅರಿಘಾತ್ ಸೇವೆಗೆ ನಿಯೋಜನೆ ಆದರೆ ಈ ಆಶಯಕ್ಕೆ ಮತ್ತಷ್ಟು ಬಲ ಸಿಕ್ಕಂತೆ ಆಗುತ್ತದೆ.

ಮುಂದಿನ ವರ್ಷದ ಆರಂಭದಲ್ಲಿ ಅರಿಘಾತ್​ ನೌಕಾದಳಕ್ಕೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ಪರೀಕ್ಷೆಯ ವೇಳೆ ಅರಿಘಾತ್​ನ ಕಾರ್ಯವೈಖರಿ ಚೆನ್ನಾಗಿತ್ತು. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಈ ಜಲಾಂತರ್ಗಾಮಿ ಭಾರತದ ರಕ್ಷಣಾ ಪಡೆಗೆ ಸೇರ್ಪಡೆ ಆಗಿರಬೇಕಿತ್ತು. ಆದರೆ, ಕೊರೊನಾ ವೈರಸ್​ ಹಿನ್ನೆಲೆಯಲ್ಲಿ ನೌಕಾಪಡೆಗೆ ಸೇರ್ಪಡೆ ಆಗುವುದು ವಿಳಂಬವಾಗಿದೆ.

2017ರ ನವೆಂಬರ್‌ನಲ್ಲಿ ಅಂದಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸದ್ದಿಲ್ಲದೆ ಅರಿಘಾತ್​ನ ಕಾರ್ಯಾಚರಣೆ ಸನ್ನದ್ಧತೆಯ ಪರಿಶೀಲನೆಗೆ ಅನುಮತಿ ನೀಡಿದ್ದರು. ಸಮುದ್ರದಾಳದಿಂದಲೇ ಖಡಾಂತರ ಕ್ಷಿಪಣಿಯನ್ನು ಉಡಾವಣೆ ಮಾಡಬಲ್ಲ ಸಾಮರ್ಥ್ಯ ಇದೆ ಎನ್ನುವ ಕಾರಣಕ್ಕೆ ನೌಕಾಪಡೆಯ ಕಾರ್ಯತಂತ್ರದಲ್ಲಿ ಇದು ಮಹತ್ವದ ಬದಲಾವಣೆಗಳನ್ನು ತರಬಲ್ಲದು ಎಂಬ ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ. ಈ ಜಲಾಂತರ್ಗಾಮಿ ಸೇವೆಗೆ ನಿಯೋಜನೆಯಾದರೆ ಚೀನಾದ ಬಹುತೇಕ ನಗರಗಳನ್ನು ಸಮುದ್ರದ ಆಳದಿಂದಲೇ ಗುರಿಯಾಗಿಸಬಲ್ಲ ಸಾಮರ್ಥ್ಯ ಭಾರತಕ್ಕೆ ಬಂದಂತೆ ಆಗುತ್ತದೆ.

ಈಗಾಗಲೇ ಸೇವೆಯಲ್ಲಿರುವ ಅರಿಹಂತ್​ ಹಾಗೂ 2021ರ ಆರಂಭದಲ್ಲಿ ಭಾರತದ ರಕ್ಷಣಾ ವ್ಯವಸ್ಥೆಗೆ ಸೇರ್ಪಡೆ ಆಗುವ ನಿರೀಕ್ಷೆಯಿರುವ ಅರಿಘಾತ್ ಜಲಾಂತರ್ಗಾಮಿಗಳು ತಲಾ ನಾಲ್ಕು ಖಡಾಂತರ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ.  ಅರಿಹಂತ್​ ಕ್ಲಾಸ್​ನ ನಾಲ್ಕು ಜಲಾಂತರ್ಗಾಮಿಯನ್ನು ಹೊಂದುವುದು ಭಾರತದ ಉದ್ದೇಶವಾಗಿತ್ತು. ಆದರೆ, ಇದನ್ನು ಅಂದಿನ ಯುಪಿಎ ಸರ್ಕಾರ ಬದಲಾವಣೆ ಮಾಡಿತ್ತು ಎನ್ನಲಾಗಿದೆ.

2016ರಲ್ಲಿ ಅಂದಿನ ರಕ್ಷಣಾ ಸಚಿವ ಮನೋಹರ್​ ಪರಿಕ್ಕರ್​ ಅರಿಹಂತ್​ ಅನ್ನು  ಸೇವೆಗೆ ನಿಯೋಜನೆ ಮಾಡಿದ್ದರು. ಈ ಬಗ್ಗೆ ಅಧಿಕೃತ ಘೋಷಣೆ ಆಗಿದ್ದು ಎರಡು ವರ್ಷಗಳ ನಂತರವೇ. ಅರಿಘಾತ್ ವಿಚಾರದಲ್ಲಿಯೂ ಭಾರತ ಗೌಪ್ಯತೆ ಕಾಪಾಡಿಕೊಳ್ಳುತ್ತಿದೆ.

ಭಾರತೀಯ ಸೇನೆಗೆ ಸೇರ್ಪಡೆ ಆಗಲಿರುವ ಕ್ಷಿಪಣಿ ಅಸ್ತ್ರ ಹೇಗಿದೆ ಗೊತ್ತಾ?