Bharat Bandh: ನಾಳೆ ಗ್ರಾಮೀಣ ಭಾರತ್ ಬಂದ್, ರಾಷ್ಟ್ರವ್ಯಾಪಿ ಹೆದ್ದಾರಿ ತಡೆಗೆ ರೈತರ ಕರೆ

|

Updated on: Feb 15, 2024 | 1:02 PM

ಫೆಬ್ರವರಿ 16 ರಂದು ಕಾರ್ಮಿಕರು ಮತ್ತು ರೈತರು ವಲಯವಾರು ಕೈಗಾರಿಕಾ ಮುಷ್ಕರ ಮತ್ತು ಗ್ರಾಮೀಣ ಭಾರತ್ ಬಂದ್‌ಗೆ ಕರೆ ನೀಡಿದ್ದು, ಬೆಳಗ್ಗೆ 6ರಿಂದ ಸಂಜೆ 4ರವರೆಗೆ ಭಾರತ್ ಬಂದ್ ಇರಲಿದೆ.ರೈತರು ಶುಕ್ರವಾರ ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ರಾಷ್ಟ್ರವ್ಯಾಪಿ ಮುಖ್ಯ ರಸ್ತೆಗಳಲ್ಲಿ ಬೃಹತ್ ಚಕ್ಕಾ ಜಾಮ್‌ (ಹೆದ್ದಾರಿ ತಡೆ) ಮಾಡಲಿದ್ದಾರೆ.

Bharat Bandh: ನಾಳೆ ಗ್ರಾಮೀಣ ಭಾರತ್ ಬಂದ್, ರಾಷ್ಟ್ರವ್ಯಾಪಿ ಹೆದ್ದಾರಿ ತಡೆಗೆ ರೈತರ ಕರೆ
ರೈತರ ಪ್ರತಿಭಟನೆ
Follow us on

ದೆಹಲಿ ಫೆಬ್ರುವರಿ 15: ನಾಳೆ (ಫೆಬ್ರವರಿ 16)ಶುಕ್ರವಾರದಂದು ಕಾರ್ಮಿಕರು ಮತ್ತು ರೈತರು ವಲಯವಾರು ಕೈಗಾರಿಕಾ ಮುಷ್ಕರ ಮತ್ತು ಗ್ರಾಮೀಣ ಭಾರತ್ ಬಂದ್‌ಗೆ (Grameen Bharat Bandh) ಕರೆ ನೀಡಿದ್ದಾರೆ. ರೈತ ಸಂಘಟನೆಯಾದ  ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) (Samyukta Kisan Morcha) ಎಲ್ಲಾ ಸಮಾನ ಮನಸ್ಕ ರೈತ ಸಂಘಟನೆಗಳನ್ನು ಒಗ್ಗೂಡಿ ಫೆಬ್ರವರಿ 16 ರ ಭಾರತ್ ಬಂದ್‌ನಲ್ಲಿ ಭಾಗವಹಿಸುವಂತೆ ಒತ್ತಾಯಿಸಿದೆ. ಬೆಳಗ್ಗೆ 6ರಿಂದ ಸಂಜೆ 4ರವರೆಗೆ ಭಾರತ್ ಬಂದ್ ಇರಲಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ರೈತರು ಶುಕ್ರವಾರ ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ರಾಷ್ಟ್ರವ್ಯಾಪಿ ಮುಖ್ಯ ರಸ್ತೆಗಳಲ್ಲಿ ಬೃಹತ್ ಚಕ್ಕಾ ಜಾಮ್‌ (ಹೆದ್ದಾರಿ ತಡೆ) ಮಾಡಲಿದ್ದಾರೆ. ಶುಕ್ರವಾರ ಪಂಜಾಬ್‌ನಲ್ಲಿ ಹೆಚ್ಚಿನ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ನಾಲ್ಕು ಗಂಟೆಗಳ ಕಾಲ ಮುಚ್ಚಲ್ಪಡುತ್ತವೆ.

ಫೆಬ್ರವರಿ 16 ರಂದು ಕಾರ್ಮಿಕರು ಮತ್ತು ರೈತರು ವಲಯವಾರು ಕೈಗಾರಿಕಾ ಮುಷ್ಕರ ಮತ್ತು ಗ್ರಾಮೀಣ ಭಾರತ್ ಬಂದ್‌ಗೆ ಕರೆ ನೀಡಿರುವ ಜಂಟಿ ಕರೆಯನ್ನು ಬೆಂಬಲಿಸಿ ಹಲವಾರು ಸಾರ್ವಜನಿಕ ಬುದ್ಧಿಜೀವಿಗಳು ಮತ್ತು ಕಲಾವಿದರು ಬುಧವಾರ ಜಂಟಿ ಹೇಳಿಕೆ ನೀಡಿದರು. ಒಟ್ಟು 34 ಜನರು ಜಂಟಿ ಹೇಳಿಕೆಗೆ ಸಹಿ ಹಾಕಿದ್ದು ರೈತರು ಮತ್ತು ಕಾರ್ಮಿಕರ ಈ ಮಹತ್ವದ ಕಾರ್ಯಕ್ಕೆ ಎಲ್ಲಾ ಬೆಂಬಲವನ್ನು ನೀಡುವಂತೆ ಸಮಾಜದ ಎಲ್ಲಾ ವರ್ಗದ ಜನರಿಗೆ ಮನವಿ ಮಾಡಿದ್ದಾರೆ.

ಬ್ಯಾಂಕ್ ಮತ್ತು ಕಚೇರಿಗಳು ಕಾರ್ಯ ನಿರ್ವಹಿಸಲಿದೆಯೇ?

ಇಂಡಿಯಾ ಡಾಟ್ ಕಾಮ್ ವರದಿ ಪ್ರಕಾರ, ವಿವಿಧ ಖಾಸಗಿ ಮತ್ತು ಸರ್ಕಾರಿ ಕಚೇರಿಗಳು ಮತ್ತು ಹಳ್ಳಿಗಳ ಅಂಗಡಿಗಳು ಶುಕ್ರವಾರ ಮುಚ್ಚುವ ಸಾಧ್ಯತೆ ಇದೆ. ಸಾರಿಗೆ, ಕೃಷಿ ಚಟುವಟಿಕೆಗಳು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MNREGA) ಗ್ರಾಮೀಣ ಕೆಲಸಗಳು ಮತ್ತು ಗ್ರಾಮೀಣ ಕೈಗಾರಿಕಾ ಮತ್ತು ಸೇವಾ ವಲಯದ ಸಂಸ್ಥೆಗಳೂ ಕಾರ್ಯ ನಿರ್ವಹಿಸದೇ ಇರಬಹುದಾದ ಸಾಧ್ಯತೆ ಇದೆ. ಶುಕ್ರವಾರದ ಭಾರತ್ ಬಂದ್‌ನಲ್ಲಿ ತುರ್ತು ಸೇವೆಗಳಾದ ಆಂಬ್ಯುಲೆನ್ಸ್ ಕಾರ್ಯಾಚರಣೆ, ಮದುವೆ, ಮೆಡಿಕಲ್ ಶಾಪ್‌ಗಳು, ಶಾಲೆಗಳು ಇತ್ಯಾದಿಗಳಿಗೆ ಯಾವುದೇ ಪರಿಣಾಮ ಬೀರುವುದಿಲ್ಲ.

ರೈತರ ಬೇಡಿಕೆಗಳೇನು?

C2 50 (ಬಂಡವಾಳದ ಇನ್ಪುಟ್ ವೆಚ್ಚ 50%) ಸ್ವಾಮಿನಾಥನ್ ಸೂತ್ರದ ಆಧಾರದ ಮೇಲೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಖರೀದಿಗೆ ಕಾನೂನು ಖಾತರಿ, ಸಾಲ ಮನ್ನಾ, ವಿದ್ಯುತ್ ಹೆಚ್ಚಳ ಬೇಡ, ಸ್ಮಾರ್ಟ್ ಮೀಟರ್‌ ಬೇಡ ಎಂದು ಸಂಯುಕ್ತ ಕಿಸಾನ್ ಮೋರ್ಚಾ (SKM) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.  ಗೃಹ ಬಳಕೆ ಮತ್ತು ಅಂಗಡಿಗಳಿಗೆ ಕೃಷಿಗೆ ಉಚಿತ 300 ಯೂನಿಟ್ ವಿದ್ಯುತ್, ಸಮಗ್ರ ಬೆಳೆ ವಿಮೆ ಮತ್ತು ಪಿಂಚಣಿಯನ್ನು ತಿಂಗಳಿಗೆ ₹ 10,000 ಕ್ಕೆ ಹೆಚ್ಚಿಸುವಂತೆ ರೈತ ಸಂಘಟನೆ  ಒತ್ತಾಯಿಸಿದೆ.

ಏತನ್ಮಧ್ಯೆ, ಮೂವರು ಕೇಂದ್ರ ಸಚಿವರ ಸಮಿತಿಯು ಗುರುವಾರ ಚಂಡೀಗಢದಲ್ಲಿ ಪ್ರತಿಭಟನಾ ನಿರತ ರೈತ ಮುಖಂಡರೊಂದಿಗೆ ಸಭೆ ನಡೆಸಲಿದೆ. ಇಂದು ಸಂಜೆ 5 ಗಂಟೆಗೆ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ರೈತ ಮುಖಂಡರನ್ನು ಭೇಟಿ ಮಾಡಲಿದ್ದಾರೆ. ಇದು ಎರಡು ಕಡೆಯ ನಡುವಿನ ಮೂರನೇ ಸುತ್ತಿನ ಮಾತುಕತೆಯಾಗಿದೆ. ಫೆಬ್ರವರಿ 8 ಮತ್ತು 12 ರಂದು ಹಿಂದಿನ ಎರಡು ಸುತ್ತಿನ ಮಾತುಕತೆಗಳು ಅನಿರ್ದಿಷ್ಟವಾಗಿ ಉಳಿದಿವೆ.

ಇದನ್ನೂ ಓದಿ: Farmers Protest: ಮೂರನೇ ದಿನಕ್ಕೆ ಕಾಲಿಟ್ಟ ರೈತರ ಚಳವಳಿ, ಪಂಜಾಬ್​ನಲ್ಲಿ ಇಂದು ರೈಲು ತಡೆದು ಪ್ರತಿಭಟನೆ

‘ದಿಲ್ಲಿ ಚಲೋ’ ಪ್ರತಿಭಟನೆ

ಪಂಜಾಬ್‌ನ ರೈತರು ಪಂಜಾಬ್ ಮತ್ತು ಹರ್ಯಾಣದ ಶಂಭು ಮತ್ತು ಖಾನೌರಿ ಗಡಿಯಲ್ಲಿ ಮೊಕ್ಕಾಂ ಹೂಡಿದ್ದು, ತಮ್ಮ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ದೆಹಲಿಯತ್ತ ಮೆರವಣಿಗೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರು 30,000 ಕ್ಕೂ ಹೆಚ್ಚು ಅಶ್ರುವಾಯು ಶೆಲ್‌ಗಳಿಗೆ ಆದೇಶ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ದಿಲ್ಲಿ ಚಲೋ’ ಪ್ರತಿಭಟನೆಯಲ್ಲಿ ಪಂಜಾಬ್ ರೈತರನ್ನು ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವುದನ್ನು ತಡೆಯಲು ಪಡೆ ಸಿದ್ಧತೆ ನಡೆಸುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ