Agnipath Entry: ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಅಗ್ನಿಪಥ್​ ಯೋಜನೆ ಘೋಷಣೆ; ದೇಶಸೇವೆಯ ಬಯಕೆ ಇರುವವರಿಗೆ ಸುವರ್ಣಾವಕಾಶ !

ಕೊವಿಡ್​ 19 ನ ಬಹುತೇಕ ಎಲ್ಲ ಕ್ಷೇತ್ರಗಳ ಮೇಲೂ ದುಷ್ಪರಿಣಾಮ ಬೀರಿದೆ. ಅದಕ್ಕೆ ಸೇನಾ ಕ್ಷೇತ್ರವೂ ಹೊರತಲ್ಲ. ಕಳೆದ ಎರಡು ವರ್ಷಗಳಿಂದಲೂ ಕೊರೊನಾದ ಕಾರಣಕ್ಕೆ ಭಾರತೀಯ ಸೇನೆಯ ಮೂರು ವಿಭಾಗಗಳಲ್ಲಿ ನೇಮಕಾತಿ ಪ್ರಕ್ರಿಯೆಯೂ ಹಿಂದೆ ಬಿದ್ದಿದೆ.

Agnipath Entry: ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಅಗ್ನಿಪಥ್​ ಯೋಜನೆ ಘೋಷಣೆ; ದೇಶಸೇವೆಯ ಬಯಕೆ ಇರುವವರಿಗೆ ಸುವರ್ಣಾವಕಾಶ !
ಸಾಂದರ್ಭಿಕ ಚಿತ್ರ
Follow us
| Updated By: Lakshmi Hegde

Updated on: Apr 07, 2022 | 8:47 AM

‘ಅಗ್ನಿಪಥ​​ ಪ್ರವೇಶ’ (Agnipath Entry)ಎಂಬ ಯೋಜನೆಯನ್ನು ಇನ್ನು ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಲಿದೆ. ಯೋಜನೆಯ ಅನುಷ್ಠಾನಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದ್ದು, ಅತಿಶೀಘ್ರದಲ್ಲಿಯೇ ಇದರ ಸದುಪಯೋಗವನ್ನು ಯುವಜನರು ಪಡೆದುಕೊಳ್ಳಬಹುದು. ಅಂದಹಾಗೇ, ಇದು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆ. ಸೇನೆಗೆ ಸೇರಿ ದೇಶಸೇವೆ ಮಾಡುವ ಇಚ್ಛೆ ಅದೆಷ್ಟೋ ಯುವಜನರಿಗೆ ಇದ್ದರೂ, ಸದ್ಯ ಇರುವ ಕೆಲವು ಕಟ್ಟುನಿಟ್ಟಿನ ಕ್ರಮಗಳು, ವಯಸ್ಸಿನ ಮಿತಿ, ಮತ್ತಿತರ ಕಾರಣಕ್ಕೆ ಹಲವರು ತಿರಸ್ಕೃತಗೊಳ್ಳುತ್ತಾರೆ. ಅಥವಾ ವಯಸ್ಸು ಮೀರಿ ಹೋಗಿ ಸೇನೆ ಸೇರಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗೊಂದು ಪರಿಹಾರವೆಂಬಂತೆ ಅಗ್ನಿಪಥ್​ ಜಾರಿಗೆ ಬರಲಿದೆ. ಪ್ರಸ್ತುತ ಯೋಜನೆಯಡಿ ಯುವಜನರು ಸೇನೆ ಸೇರಬಹುದು. ಆದರೆ ಅವಧಿ ಮೂರು ವರ್ಷ ಮಾತ್ರ. ಅಂದರೆ ಅಗ್ನಿಪಥ್​ ಸ್ಕೀಮ್​ನಡಿ ಯುವಕರು ಮೂರು ವರ್ಷಗಳ ಅವಧಿಗೆ  ಸೇನೆ ಸೇರಿಕೊಂಡು, ತಮ್ಮ ದೇಶ ಸೇವೆ ಮಾಡುವ ಬಯಕೆಯನ್ನು ಪೂರೈಸಿಕೊಳ್ಳಬಹುದು. ಅಷ್ಟೇ ಅಲ್ಲ, ಹೀಗೆ ಸೇರ್ಪಡೆಯಾಗುವವರನ್ನು ಅಗ್ನಿವೀರರು ಎಂದು ಕರೆಯಲಾಗುತ್ತದೆ.

ಮೂರುವರ್ಷದ ಬಳಿಕ ಏನು?

ಅಗ್ನಿಪಥ್​​ ಮೂಲಕ 3ವರ್ಷದ ಕಾಲಾವಧಿಗಾಗಿ ಸೇನೆ ಸೇರ್ಪಡೆಯಾದವರು ಬಳಿಕ ಏನು ಮಾಡುತ್ತಾರೆ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.  ಇಂಥವರಿಗೆ 3 ವರ್ಷಗಳ ಬಳಿಕ ಮಿಲಿಟರಿ ಕ್ಷೇತ್ರದಲ್ಲಿಯೇ ಬೇರೆ ಉದ್ಯೋಗ ಪಡೆಯಲೂ ಸಹಾಯ ಮಾಡಲಾಗುತ್ತದೆ. ಈಗಾಗಲೇ ಹಲವು ಕಾರ್ಪೋರೇಟ್ ಕಂಪನಿಗಳು  ಈ ಅಗ್ನಿವೀರರಿಗೆ ಉದ್ಯೋಗ ನೀಡಲು ಆಸಕ್ತಿ ತೋರಿಸುತ್ತಿವೆ ಎಂದೂ ಮೂಲಗಳಿಂದ ತಿಳಿದು ಬಂದಿದೆ. ಹಾಗೇ ಮೂರುವರ್ಷದ ಬಳಿಕವೂ ಮತ್ತೆ ಅಗ್ನಿವೀರರಾಗಿ ಮತ್ತೊಂದು ಅವಧಿಗೆ ಸೇವೆ ಮುಂದುವರಿಸುವ ಅವಕಾಶವೂ ಇರುತ್ತದೆ.

ಭಾರತೀಯ ಸೇನೆಯನ್ನು ಸೇರಲು ಬಯಸುವವರು ಸಾಮಾನ್ಯವಾಗಿ ದೈಹಿಕ ಕ್ಷಮತೆಯ ವಿವಿಧ ಟೆಸ್ಟ್​ಗಳಿಗೆ ಒಳಪಡಬೇಕಾಗುತ್ತದೆ. ಹಲವು ವಿಧದ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಇಷ್ಟೆಲ್ಲ ಆದ ಮೇಲೆ ಅವರಿಗೆ ತರಬೇತಿ ಅವಧಿ ಇರುತ್ತದೆ. ಹಾಗೇ ಒಂದುವರ್ಷವಾದರೂ ಟ್ರೇನಿಂಗ್​ ಪಡೆದ ಮೇಲೆ ಸೇನೆಯಲ್ಲಿ ಅಧಿಕೃತವಾಗಿ ಪೋಸ್ಟಿಂಗ್​ ಆಗುತ್ತದೆ. ಆದರೆ ಅಗ್ನಿಪಥ್​ ಯೋಜನೆಯ ಮೂಲಕ ಸೇರ್ಪಡೆಗೊಳ್ಳುವವರಿಗೆ ಯಾವುದೇ ಪ್ರವೇಶ ಪರೀಕ್ಷೆ ಇರುವುದಿಲ್ಲ. ಸುದೀರ್ಘ ಸಮಯದ ತರಬೇತಿಯೂ ಇರಲಾರದು. ಹಾಗಿದ್ದಾಗ್ಯೂ ಈ ಯೋಜನೆಯಿಂದಾಗಿ ಭಾರತೀಯ ಸೇನೆಗೆ ಇನ್ನಷ್ಟು ಬಲ ಬರುತ್ತದೆ. ಅಗ್ನಿವೀರರು ಸೇವೆಯಿಂದ ಬಿಡುಗಡೆ ಹೊಂದಿದ ಮೇಲೆ ಯಾವುದೇ ರೀತಿಯ ಪಿಂಚಣಿಯನ್ನು ಪಡೆಯಲಾರರು. ಹಾಗಾಗಿ ಇದು ಆರ್ಥಿಕ ಹೊರೆಯೂ ಖಂಡಿತ ಅಲ್ಲ.

ಕೊವಿಡ್​ 19 ನ ಬಹುತೇಕ ಎಲ್ಲ ಕ್ಷೇತ್ರಗಳ ಮೇಲೂ ದುಷ್ಪರಿಣಾಮ ಬೀರಿದೆ. ಅದಕ್ಕೆ ಸೇನಾ ಕ್ಷೇತ್ರವೂ ಹೊರತಲ್ಲ. ಕಳೆದ ಎರಡು ವರ್ಷಗಳಿಂದಲೂ ಕೊರೊನಾದ ಕಾರಣಕ್ಕೆ ಭಾರತೀಯ ಸೇನೆಯ ಮೂರು ವಿಭಾಗಗಳಲ್ಲಿ ನೇಮಕಾತಿ ಪ್ರಕ್ರಿಯೆಯೂ ಹಿಂದೆ ಬಿದ್ದಿದೆ. ಭೂ, ವಾಯು ಮತ್ತು ನೌಕಾ ಸೇನೆಗಳಿಂದ ಬರೋಬ್ಬರಿ 1.2 ಲಕ್ಷ ಖಾಲಿ ಹುದ್ದೆಗಳಿವೆ ಎಂದು ಹೇಳಲಾಗಿದೆ. ಅದಷ್ಟೂ ಹುದ್ದೆಯನ್ನು ತುಂಬುವುದೂ ಅಷ್ಟು ಸುಲಭವಲ್ಲ.

ಇದನ್ನೂ ಓದಿ: ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ; ಚೆಲುವನಾರಾಯಣಸ್ವಾಮಿಗೆ ದೀವಟಿಗೆ ಸಲಾಂ ಬದಲು ಸಂಧ್ಯಾರತಿಗೆ ನಿರ್ಧಾರ