ದೇಶದಲ್ಲಿ ವಾಕ್ ಸ್ವಾತಂತ್ರ್ಯವನ್ನು ಕಾನೂನಿನ ಮೂಲಕ ಕಟ್ಟಿಹಾಕಲಾಗ್ತಿದೆ -ಎಡಿಟರ್ಸ್​ ಗಿಲ್ಡ್​ ಕಳವಳ

| Updated By: KUSHAL V

Updated on: Nov 24, 2020 | 7:08 PM

ಶಿಲ್ಲಾಂಗ್ ಟೈಮ್ಸ್ ಪತ್ರಿಕೆ ಸಂಪಾದಕಿ ಮತ್ತು ಪದ್ಮಶ್ರೀ ಪುರಸ್ಕೃತೆ ಪೆಟ್ರೀಷಿಯಾ ಮುಖಿಮ್ ವಿರುದ್ಧ ದಾಖಲಾದ ಎಫ್ಐಆರ್​ ಅಸಿಂಧುಗೊಳಿಸಲು ಮೇಘಾಲಯ ಹೈಕೋರ್ಟ್ ನಿರಾಕರಿಸಿದೆ.

ದೇಶದಲ್ಲಿ ವಾಕ್ ಸ್ವಾತಂತ್ರ್ಯವನ್ನು ಕಾನೂನಿನ ಮೂಲಕ ಕಟ್ಟಿಹಾಕಲಾಗ್ತಿದೆ -ಎಡಿಟರ್ಸ್​ ಗಿಲ್ಡ್​ ಕಳವಳ
Follow us on

ಶಿಲ್ಲಾಂಗ್​: ಮೇಘಾಲಯ ರಾಜ್ಯದಲ್ಲಿ ಬುಡಕಟ್ಟೇತರ ಜನಾಂಗದ ವಿರುದ್ಧ ನಡೆಯುತ್ತಿರುವ ಸತತ ದಾಳಿಗಳನ್ನು ಖಂಡಿಸಿ ಫೇಸ್​ಬುಕ್​ ಪೋಸ್ಟ್​ಗಳನ್ನು ಹಾಕಿದ್ದ ಹಿನ್ನೆಲೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಶಿಲ್ಲಾಂಗ್ ಟೈಮ್ಸ್ ಪತ್ರಿಕೆ ಸಂಪಾದಕಿ ಮತ್ತು ಪದ್ಮಶ್ರೀ ಪುರಸ್ಕೃತೆ ಪೆಟ್ರೀಷಿಯಾ ಮುಖಿಮ್ ವಿರುದ್ಧ ದಾಖಲಾದ ಎಫ್ಐಆರ್​ ಅಸಿಂಧುಗೊಳಿಸಲು ಮೇಘಾಲಯ ಹೈಕೋರ್ಟ್ ನಿರಾಕರಿಸಿದೆ.

ಈ ಬೆಳವಣಿಗೆಗಳ ಬಗ್ಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತೀವ್ರ ಆತಂಕ ವ್ಯಕ್ತಪಡಿಸಿದೆ. ದೇಶದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಎಷ್ಟು ಧಕ್ಕೆ ಆಗುತ್ತಿದೆ ಎಂಬುದಕ್ಕೆ ಪೆಟ್ರೀಷಿಯಾ ಮುಖಿಮ್ ಪ್ರಕರಣ ಸಾಕ್ಷಿ. ಪತ್ರಿಕಾ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯವನ್ನು ಕಾನೂನಿನ ಮೂಲಕ ಹೇಗೆಲ್ಲ ಕಟ್ಟಿಹಾಕಲಾಗುತ್ತಿದೆ ಎಂಬುಕ್ಕೆ ಇದೊಂದು ನಿದರ್ಶನ ಎಂದು ಹೇಳಿಕೆ ಬಿಡುಗಡೆ ಮಾಡಿದೆ.

ಕ್ರಿಮಿನಲ್ ಮೊಕದ್ದಮೆ ಹೂಡಿದ್ದರೂ ಎಡಿಟರ್ಸ್ ಗಿಲ್ಡ್ ನನ್ನ ಪರ ನಿಂತಿಲ್ಲ. ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದ್ದರೂ ಅದರ ಬಗ್ಗೆ ಚಕಾರ ಎತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಪೆಟ್ರೀಷಿಯಾ ಎಡಿಟರ್ಸ್ ಗಿಲ್ಡ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇವರ ರಾಜೀನಾಮೆ ಬಳಿಕ ಎಡಿಟರ್ಸ್ ಗಿಲ್ಡ್ ಎಚ್ಚೆತ್ತುಕೊಂಡಿದೆ. ವಾಕ್ ಸ್ವಾತಂತ್ರ್ಯ ಹತ್ತಿಕ್ಕುವುದು ಸರಿಯಲ್ಲ ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

ಸರ್ಕಾರದ ಕೆಲಸಗಳನ್ನು ಪ್ರಶ್ನಿಸುವುದು, ಜನರಿಗೆ ಸರಿಯಾದ ಮಾಹಿತಿಯನ್ನು ತಲುಪಿಸುವುದು ಮಾಧ್ಯಮಗಳ ಪ್ರಮುಖ ಜವಾಬ್ದಾರಿ. ಕೆಲವೊಮ್ಮೆ ತುಂಬ ಕಠಿಣ ಪರಿಸ್ಥಿತಿಯಲ್ಲೂ ಅದನ್ನು ಮಾಡಬೇಕಾಗುತ್ತದೆ. ಇದರಿಂದ ಸರ್ಕಾರಕ್ಕೆ ಕಿರಿಕಿರಿ ಉಂಟಾಗಬಹುದು. ಹಾಗಂತ ಸಮಾಜದೊಳಗಿನ ತಪ್ಪುಗಳ ಬಗ್ಗೆ ವಿವರವಾಗಿ ವರದಿ ಮಾಡಿದಾಗ, ಸರ್ಕಾರದೊಳಗಿನ ಭ್ರಷ್ಟಾಚಾರ, ಅಸಮರ್ಪಕ ನಿರ್ವಹಣೆಯನ್ನು ಎತ್ತಿ ತೋರಿಸಿದಾಗ ಮಾಧ್ಯಮಗಳ ಮುಖ್ಯಸ್ಥರನ್ನು ದೂಷಿಸಬಾರದು.

ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲಾದ ಈ ಪ್ರಕರಣವನ್ನು ಉನ್ನತ ನ್ಯಾಯಾಂಗ ವ್ಯವಸ್ಥೆ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು. ಕಾನೂನು ನಿಷ್ಕಾರಣವಾಗಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಿಲ್ಲ ಎಂಬ ಭರವಸೆಯುಳ್ಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಬೇಕು ಎಂದು ಗಿಲ್ಡ್ ಒತ್ತಾಯಿಸಿದೆ.

ಏನಿದು ಪ್ರಕರಣ?
ಬಾಸ್ಕೆಟ್ ಬಾಲ್ ಆಡುತ್ತಿದ್ದ ಕೆಲ ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಅವರೆಲ್ಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಯುವಕರು ಬುಡಕಟ್ಟು ಜನಾಂಗಕ್ಕೆ ಸೇರಿದವರಲ್ಲ. ಇಂಥವರ ಮೇಲೆ ಪದೇ ಪದೆ ಹಲ್ಲೆ ನಡೆಯುತ್ತಿರುವುದರಿಂದ ರಾಜ್ಯ ಸರ್ಕಾರ ಮತ್ತು ಪೊಲೀಸರ ಕಾರ್ಯವೈಖರಿಯನ್ನೇ ಅನುಮಾನಿಸುವಂತಿದೆ ಎಂದು ಪೆಟ್ರೀಷಿಯಾ ಮುಖಿಮ್ ಫೇಸ್​ ಬುಕ್​​ನಲ್ಲಿ ಕಳೆದ ವಾರ ಪೋಸ್ಟ್ ಹಾಕಿದ್ದರು.

ಇವರು ಮೂಲತಃ ಮೇಘಾಲಯದ ಬುಡಕಟ್ಟು ಜನಾಂಗಕ್ಕೆ ಸೇರಿರದೆ ಇರಬಹುದು. ಆದರೆ ಅವರ ಪೂರ್ವಜರು ಅದೆಷ್ಟೋ ದಶಕಗಳ ಹಿಂದೆಯೇ ಇಲ್ಲಿಗೆ ಬಂದು ನೆಲೆಸಿದ್ದಾರೆ. ಕೆಲವರಂತೂ ಬ್ರಿಟಿಷ್ ಕಾಲದಲ್ಲೇ ಬಂದು ನೆಲೆಸಿದ್ದಾರೆ. ಆದರೂ ಇವರ ಮೇಲೆ ಹಲ್ಲೆ ನಡೆಯುತ್ತಲೇ ಇವೆ. ಹೀಗಿದ್ದರೂ ಸ್ಥಳೀಯ ಆಡಳಿತ ಏನು ಮಾಡುತ್ತಿವೆ.. ಅವರಿಗೆ ಕಣ್ಣು ಕಾಣುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದರು. ಅದಾದ ಬಳಿಕ ಹಲ್ಲೆ ನಡೆದ ಖಾಸಿ ಗ್ರಾಮದಲ್ಲಿನ ಸ್ಥಳೀಯ ಆಡಳಿತ ಸಂಪಾದಕಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು.