Explainer: ಭೂಸೇನೆ, ವಾಯುಪಡೆ, ನೌಕಾಪಡೆಗಳ ಏಕೀಕೃತ ಕಮಾಂಡ್ ರಚನೆ ಪ್ರಸ್ತಾವಕ್ಕೆ ಹೊಸವೇಗ, ದೇಶದ ಭದ್ರತೆಗೆ ಇದೇಕೆ ಅತ್ಯಗತ್ಯ?

ಸರಳವಾಗಿ ಹೇಳುವುದಾದರೆ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಮಗ್ರ ಸಂಪನ್ಮೂಲಗಳನ್ನು ಒಂದೆಡೆ ಕ್ರೋಡೀಕರಿಸಿ ಅಗತ್ಯಕ್ಕೆ ತಕ್ಕಂತೆ ಬಳಸುವ ತಂತ್ರವಿದು.

Explainer: ಭೂಸೇನೆ, ವಾಯುಪಡೆ, ನೌಕಾಪಡೆಗಳ ಏಕೀಕೃತ ಕಮಾಂಡ್ ರಚನೆ ಪ್ರಸ್ತಾವಕ್ಕೆ ಹೊಸವೇಗ, ದೇಶದ ಭದ್ರತೆಗೆ ಇದೇಕೆ ಅತ್ಯಗತ್ಯ?
ಭಾರತೀಯ ಸೇನೆ (ಪ್ರಾತಿನಿಧಿಕ ಚಿತ್ರ)
Follow us
| Updated By: Skanda

Updated on:Jun 28, 2021 | 7:55 AM

ಭಾರತದ ರಕ್ಷಣಾ ಪಡೆಗಳ ಸುಧಾರಣೆ ದೃಷ್ಟಿಯಿಂದ ಈ ವಾರ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ರಕ್ಷಣಾ ಪಡೆಗಳ ಮುಖ್ಯಸ್ಥ (Chief of Defence Staff – CDS) ಜನರಲ್ ಬಿಪಿನ್ ರಾವತ್ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆ ಮುಖ್ಯಸ್ಥರೊಂದಿಗೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಗೃಹ ಮತ್ತು ಹಣಕಾಸು ಇಲಾಖೆ, ರಾಷ್ಟ್ರೀಯ ಭದ್ರತಾ ಮಂಡಳಿ, ಏಕೀಕೃತ ರಕ್ಷಣಾ ವಿಭಾಗದ ಸಿಬ್ಬಂದಿ ಮತ್ತು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕಾರ್ಗಿಲ್ ಕದನದ ನಂತರ ಭಾರತದಲ್ಲಿ ಚರ್ಚೆಯಾಗುತ್ತಿರುವ ಭದ್ರತಾ ಪಡೆಗಳ ಏಕೀಕೃತ ಥಿಯೇಟರ್ ಕಮಾಂಡ್ (Integrated Theatre Commands) ಕುರಿತು ಈ ಸಭೆಯಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸುದೀರ್ಘ ಸಮಾಲೋಚನೆ ನಡೆಸಿದರು. ಅರೆಸೇನಾ ಪಡೆಗಳನ್ನೂ ಒಳಗೊಂಡಂತೆ ಭದ್ರತಾ ಪಡೆಗಳ ಸಮಗ್ರ ಪುನರ್​ ಸಂಘಟನೆಯ ಪ್ರಯತ್ನದ ವಿಚಾರದಲ್ಲಿ ತುಸು ಪ್ರಗತಿ ಸಾಧಿಸಿರುವ ಲಕ್ಷಣಗಳು ಗೋಚರಿಸಿವೆ.

ಏನಿದು ಏಕೀಕೃತ ಥಿಯೇಟರ್ ಕಮಾಂಡ್​? ಸರಳವಾಗಿ ಹೇಳುವುದಾದರೆ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಮಗ್ರ ಸಂಪನ್ಮೂಲಗಳನ್ನು ಒಂದೆಡೆ ಕ್ರೋಡೀಕರಿಸಿ ಅಗತ್ಯಕ್ಕೆ ತಕ್ಕಂತೆ ಬಳಸುವ ತಂತ್ರವಿದು. ಭದ್ರತೆಗೆ ಇರುವ ಆತಂಕಗಳನ್ನು ಅಂದಾಜಿಸಿ ಅದಕ್ಕೆ ತಕ್ಕಂತೆ ಸಿಬ್ಬಂದಿ ಮತ್ತು ಇತರ ಯುದ್ಧೋಪರಣಗಳನ್ನು ನಿಯೋಜಿಸಲಾಗುತ್ತದೆ. ಈ ಕಮಾಂಡ್​ಗಳನ್ನು ರೂಪಿಸುವಾಗ ಭೌಗೋಳಿಕವಾಗಿ ಅಥವಾ ನಿರ್ದಿಷ್ಟ ಉದ್ದೇಶಗಳನ್ನು ಗಮನದಲ್ಲಿರಿಸಿಕೊಳ್ಳುತ್ತಾರೆ. ಉದಾಹರಣೆಗೆ.. ಒಂದು ದೇಶದ ಗಡಿಯಲ್ಲಿ ಇರುವ ಆತಂಕಗಳನ್ನು ಗಮನದಲ್ಲಿರಿಸಿಕೊಂಡು ಒಂದು ಕಮಾಂಡ್ (ಜಿಯೊಗ್ರಾಫಿಕಲ್ ಕಮಾಂಡ್) ರೂಪಿಸಬಹುದು. ಸಾಗರದಿಂದ ಇರುವ ಆತಂಕಗಳನ್ನು ಗಮನದಲ್ಲಿರಿಸಿಕೊಂಡು ವಿಶೇಷ ಕಮಾಂಡ್ (ಥಿಮಾಟಿಕ್) ರೂಪಿಸಬಹುದು.

ಥಿಯೇಟರ್ ಕಮಾಂಡ್ ಎನ್ನುವುದು ಹೊಸ ಪರಿಕಲ್ಪನೆಯೇ? ಇದೇನು ಹೊಸ ಪರಿಕಲ್ಪನೆ ಅಲ್ಲ. ಅಮೆರಿಕ ಮತ್ತು ಚೀನಾ ಸೇರಿದಂತೆ ಹಲವು ಪ್ರಮುಖ ದೇಶಗಳಲ್ಲಿ ಈಗಾಗಲೇ ಥಿಯೇಟರ್ ಕಮಾಂಡ್ ಪರಿಕಲ್ಪನೆ ಕಾರ್ಯರೂಪಕ್ಕೆ ಬಂದಿದೆ. ಪಾಕಿಸ್ತಾನದಲ್ಲಿಯೂ ಇಂಥ ಪ್ರಯತ್ನಗಳು ಆರಂಭವಾಗಿವೆ. ಭಾರತದಲ್ಲಿಯೂ ಕಾರ್ಗಿಲ್ ಸಂಘರ್ಷದ ನಂತರ ಥಿಯೇಟರ್ ಕಮಾಂಡ್ ಮಾದರಿಯಲ್ಲಿ ಸಶಸ್ತ್ರಪಡೆಗಳ ಪುನರ್ ಸಂಘಟನೆ ಬಗ್ಗೆ ಚರ್ಚೆ ಆರಂಭವಾಯಿತು. ಹಲವು ಹಂತಗಳ ಸಮಿತಿಗಳು ಈ ಮಾದರಿಯ ಸೇನಾ ಸಂಘಟನೆಗೆ ಶಿಫಾರಸು ಮಾಡಿದ್ದವು.

ಜನವರಿ 2020ರಲ್ಲಿ ಜನರಲ್ ಬಿಪಿನ್ ರಾವತ್ ಅವರನ್ನು ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿ ನೇಮಿಸಿದ ನಂತರ ಅವರಿಗೆ ಈ ಸಂಬಂಧ ಮಹತ್ವದ ನಿರ್ದಿಷ್ಟ ಜವಾಬ್ದಾರಿಯೊಂದನ್ನು ನೀಡಲಾಗಿತ್ತು. ‘ಅಧಿಕಾರ ಸ್ವೀಕರಿಸಿದ ಮೂರು ವರ್ಷಗಳ ಒಳಗೆ ಇಂಥ ಕಮಾಂಡ್​ಗಳನ್ನು ರೂಪಿಸಬೇಕು’ ಎಂದು ಸೂಚಿಸುವ ಮೂಲಕ ಕೊನೆಗೂ ಈ ನಿಟ್ಟಿನಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡಿತು. ಅಧಿಕಾರ ಸ್ವೀಕರಿಸಿದ ನಂತರ ಥಿಯೇಟರ್ ಕಮಾಂಡ್ ರೂಪಿಸುವ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲು ಜನರಲ್ ರಾವತ್ ಹಲವು ಅಧ್ಯಯನಗಳಿಗೆ ಆದೇಶ ನೀಡಿದ್ದರು. ಕಮಾಂಡ್​ಗಳನ್ನು ಸಶಸ್ತ್ರಪಡೆಗಳ ಉಪಮುಖ್ಯಸ್ಥರು ಮುನ್ನಡೆಸಬೇಕು ಎನ್ನುವುದು ಅವರು ಆಶಯವಾಗಿತ್ತು.

ಥಿಯೇಟರ್​ ಕಮಾಂಡ್ ರೂಪಿಸುವ ಪ್ರಯತ್ನದ ಮೊದಲ ಭಾಗವಾಗಿ ಏರ್ ಡಿಫೆನ್ಸ್​ ಕಮಾಂಡ್ 2020ರ ವರ್ಷಾಂತ್ಯಕ್ಕೆ ಅಸ್ತಿತ್ವಕ್ಕೆ ಬರಲಿದೆ ಎಂದು ಜನರಲ್ ರಾವತ್ ಘೋಷಿಸಿದ್ದರು. ಆದರೆ ಕೊವಿಡ್-19 ಸೇರಿದಂತೆ ಹಲವು ಕಾರಣಗಳಿಂದಾಗಿ ಈ ಪ್ರತಿಕ್ರಿಯೆ ತಡವಾಗಿತ್ತು. ಈ ವರ್ಷಾಂತ್ಯಕ್ಕೆ ಅಂದರೆ 2021ರ ಡಿಸೆಂಬರ್ ಒಳಗೆ ಕೆಲವಾದರೂ ಹೊಸ ಕಮಾಂಡ್​ಗಳು ಕಾರ್ಯಾರಂಭ ಮಾಡಲಿವೆ ಎಂದು ಅಧಿಕಾರಿಗಳು ಇದೀಗ ಹೇಳುತ್ತಿದ್ದಾರೆ.

ಇದನ್ನೂ ಓದಿ: Explainer: ನಮ್ಮ ಮೂಲ ಯಾವುದು? ಚೀನಾದಲ್ಲಿ ಸಿಕ್ಕ ಹಳೇ ತಲೆಬುರುಡೆ ಹೇಳಿದ ಹೊಸ ಪಾಠಗಳಿವು

Airforce

ಭಾರತೀಯ ವಾಯುಪಡೆ ಯೋಧರು 

ಈಗ ಚರ್ಚೆ ನಡೆಯುತ್ತಿರುವ ಪ್ರಸ್ತಾವಗಳೇನು? ನಾಲ್ಕರಿಂದ ಐದು ಏಕೀಕೃತ, ಮೂರು ಸಶಸ್ತ್ರಪಡೆಗಳ (integrated tri-Services) ಥಿಯೇಟರ್ ಕಮಾಂಡ್​ ರೂಪಿಸುವ ವಿಚಾರ ಇದೀಗ ಅಂತಿಮ ಹಂತಕ್ಕೆ ಬಂದಿದೆ. ಪ್ರತಿ ಕಮಾಂಡ್​ ಒಬ್ಬೊಬ್ಬ ಉನ್ನತ ಅಧಿಕಾರಿಯ ನಿಗಾವಣೆಯಲ್ಲಿ ಇರುತ್ತದೆ. ಈ ಥಿಯೇಟರ್​ ಕಮಾಂಡರ್​ಗಳು ನೇರವಾಗಿ ಚೀಫ್ಸ್​ ಆಫ್ ಸ್ಟಾಫ್ ಕಮಿಟಿಗೆ (COSC) ವರದಿ ಮಾಡಿಕೊಳ್ಳುತ್ತಾರೆ. ಈ ಸಮಿತಿಯಲ್ಲಿ ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರು ಇರುತ್ತಾರೆ. ಈ ಸಮಿತಿಯ ಶಾಶ್ವತ ಅಧ್ಯಕ್ಷರಾಗಿ ಸಿಡಿಎಸ್ ಕಾರ್ಯನಿರ್ವಹಿಸುತ್ತಾರೆ.

ಇದು ಥಿಯೇಟರ್ ಕಮಾಂಡ್ ಪರಿಕಲ್ಪನೆಯಿಂದ ಆಗುವ ಪ್ರಮುಖ ಬದಲಾವಣೆ. ಪ್ರಸ್ತುತ ಮೂರೂ ಸಶಸ್ತ್ರಪಡೆಗಳ ಮುಖ್ಯಸ್ಥರಿಗೆ ತಮ್ಮ ಪಡೆಗಳ ಕಾರ್ಯಾಚರಣೆಯ ಮೇಲೆ ಸಂಪೂರ್ಣ ನಿಯಂತ್ರಣವಿದೆ. ಥಿಯೇಟರ್​ ಕಮಾಂಡ್ ಜಾರಿಗೆ ಬಂದ ನಂತರ ಈ ಅಧಿಕಾರವು ಸಿಒಎಸ್​ಸಿಗೆ ಸೇರುತ್ತದೆ. ಪ್ರತಿ ಕಮಾಂಡ್​ನಲ್ಲಿಯೂ ಅಗತ್ಯಕ್ಕೆ ತಕ್ಕಂತೆ ಮೂರೂ ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ಯುದ್ಧೋಪಕರಣಗಳು ಹಂಚಿಕೆಯಾಗುತ್ತವೆ. ಈ ಸಂಪನ್ಮೂಲಗಳ ಮೇಲಿನ ಕಾರ್ಯನಿರ್ವಹಣಾ ನಿಯಂತ್ರಣವು ಥಿಯೇಟರ್ ಕಮಾಂಡರ್​ ಅಧಿಕಾರ ವ್ಯಾಪ್ತಿಯಲ್ಲಿರುತ್ತದೆ.

ಪ್ರಸ್ತಾಪಿತ ಕಮಾಂಡ್​ಗಳು ನೌಕಾಪಡೆ ಥಿಯೇಟರ್ ಕಮಾಂಡ್: ದೇಶದ ಸಾಗರ ಸುರಕ್ಷೆಗೆ ಸಂಬಂಧಿಸಿದ ಜವಾಬ್ದಾರಿ ಈ ಕಮಾಂಡ್​ಗೆ ಸೇರಿರುತ್ತದೆ. ಪೂರ್ವ ಮತ್ತು ಪಶ್ಚಿಮ ಸಾಗರಗಳಲ್ಲಿ ಪ್ರಸ್ತುತ ಇರುವ ನೌಕಾಪಡೆಯ ಸಂಪನ್ಮೂಲಗಳ ಜೊತೆಗೆ ವಾಯದಾಳಿ ಮತ್ತು ಭೂಸೇನೆಯ ಸಂಪನ್ಮೂಲಗಳನ್ನೂ ಈ ಕಮಾಂಡ್​ಗೆ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ.

ಏರ್​ ಡಿಫೆನ್ಸ್​ ಕಮಾಂಡ್: ದೇಶದ ಉದ್ದಗಲದ ವಾಯುಗಡಿಯ ರಕ್ಷಣೆ ಏರ್​ ಡಿಫೆನ್ಸ್​ ಕಮಾಂಡ್​ನ ಜವಾಬ್ದಾರಿ. ಫೈಟರ್​ ಜೆಟ್​ ಮತ್ತು ಸರ್ವೇಕ್ಷಣಾ ವಿಮಾನಗಳ ನಿರ್ವಹಣೆ ಏರ್​ ಡಿಫೆನ್ಸ್​ ಕಮಾಂಡ್​ನ ಉಸ್ತುವಾರಿಯಲ್ಲಿರುತ್ತವೆ.

ಭೌಗೋಳಿಕ ಅಗತ್ಯಕ್ಕೆ ತಕ್ಕ ಕಮಾಂಡ್: ದೇಶದ ಭೂಗಡಿಯ ಕಾವಲು ಮತ್ತು ಭದ್ರತೆಗಾಗಿ ಎರಡು ಅಥವಾ ಮೂರು ಭೂ ಆಧರಿತ ಕಮಾಂಡ್​ ರೂಪಿಸಲು ಉದ್ದೇಶಿಸಲಾಗಿದೆ. ಚೀನಾ ಮತ್ತು ಪಾಕಿಸ್ತಾನದ ಗಡಿ ನಿರ್ವಹಣೆ ಈ ಕಮಾಂಡ್​ನ ಮುಖ್ಯ ಉದ್ದೇಶವಾಗಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​ನಲ್ಲಿ ಭದ್ರತಾ ಉಸ್ತುವಾರಿಗೆಂದೇ ಮತ್ತೊಂದು ವಿಶೇಷ ಕಮಾಂಡ್ ರೂಪಿಸುವ ಆಲೋಚನೆಯೂ ರಕ್ಷಣಾ ಇಲಾಖೆಗೆ ಇದೆ. ಈ ಸಂಬಂಧ ಅಂತಿಮ ನಿರ್ಧಾರವನ್ನು ಇನ್ನೂ ತೆಗೆದುಕೊಳ್ಳಬೇಕಿದೆ.

ಈ ಥಿಯೇಟರ್​ ಕಮಾಂಡ್​ಗಳ ಜೊತೆಗೆ ಮೂರೂ ಸಶಸ್ತ್ರ ಪಡೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂಥ ಎರಡು ಪ್ರತ್ಯೇಕ ಟ್ರೈ ಸರ್ವೀಸ್​ ಕಮಾಂಡ್​ ರೂಪಿಸುವ ಆಲೋಚನೆಯೂ ಇದೆ ಎಂದು ಜನರಲ್ ಬಿಪಿನ್ ರಾವತ್ ಕಳೆದ ವರ್ಷ ಹೇಳಿದ್ದರು. ಇದರ ಜೊತೆಗೆ ಅಗತ್ಯ ವಸ್ತುಗಳನ್ನು ಪೂರೈಸುವ ಲಾಜಿಸ್ಟಿಕ್ ಕಮಾಂಡ್, ತರಬೇತಿ ಕಮಾಂಡ್​ಗಳನ್ನೂ ರೂಪಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: Explainer: ಇರಾನ್ ನೂತನ ಅಧ್ಯಕ್ಷ ಇಬ್ರಾಹಿಂ ರೈಸಿ ಯಾರು? ಅಲ್ಲಿನ ಜನರೇಕೆ ಈ ಬಾರಿ ಮತದಾನಕ್ಕೆ ಹಿಂಜರಿದರು?

ಸಮರಾಭ್ಯಾಸದಲ್ಲಿ ಭಾರತೀಯ ನೌಕಾಪಡೆ

ಸಶಸ್ತ್ರಪಡೆಗಳ ಜವಾಬ್ದಾರಿ ಬದಲಾಗುತ್ತದೆಯೇ? ಒಂದು ನಿರ್ದಿಷ್ಟ ಕಾರ್ಯಾಚರಣೆ ನಡೆಸಬೇಕೆಂದಾಗ ಮೂರೂ ಸಶಸ್ತ್ರ ಪಡೆಗಳು ಪರಸ್ಪರ ಸಮಾಲೋಚಿಸಿ, ನಿರ್ದಿಷ್ಟ ಕಾರ್ಯಾಚರಣೆ ನಡೆಸಬೇಕಿದ್ದರೆ ಪರಸ್ಪರ ಸುಪರ್ದಿಯಲ್ಲಿರುವ ಸಂಪನ್ಮೂಲಗಳನ್ನು ಬಳಸಬೇಕಿದೆ. ಈಗಿರುವ ಪ್ರಸ್ತಾವದಂತೆ ಥಿಯೇಟರ್ ಕಮಾಂಡರ್​ ಎಂಬ ಹೊಸಹುದ್ದೆ ರಚನೆಯಾದರೆ ಕಮಾಂಡ್​ನ ಅಧೀನದಲ್ಲಿರುವ ಎಲ್ಲ ಸಂಪನ್ಮೂಲಗಳೂ ಈ ಅಧಿಕಾರಿಯ ಸುಪರ್ದಿಯಲ್ಲಿರುತ್ತದೆ. ಇದರಿಂದ ಕಾರ್ಯಾಚರಣೆಯಲ್ಲಿ ಸಮನ್ವಯ ಸಾಧಿಸುವುದು ಸುಲಭವಾಗುತ್ತದೆ. ಒಂದೇ ಕೆಲಸವನ್ನು ಹಲವರು ಮಾಡುವ ಗೋಜಲೂ ಪರಿಹಾರವಾಗುತ್ತದೆ.

ಆದರೆ ಇದರಿಂದ ಸಶಸ್ತ್ರ ಪಡೆಗಳ ಮುಖ್ಯಸ್ಥರಿಗೆ ತಮ್ಮ ಸಿಬ್ಬಂದಿ ಮತ್ತು ಸಂಪನ್ಮೂಲಗಳ ಮೇಲಿರುವ ನೇರ ನಿಯಂತ್ರಣ ಕೈತಪ್ಪುತ್ತದೆ. ಇದರರ್ಥ ಅವರ ಪಾತ್ರ ಅಪ್ರಸ್ತುತವಾಗುತ್ತದೆ ಎಂದಲ್ಲ. ಮುಂದಿನ ದಿನಗಳಲ್ಲಿ ಮುಖ್ಯಸ್ಥರು ಕಾರ್ಯಾಚರಣೆಗಳನ್ನು ರೂಪಿಸುವುದು, ಹೊಸಹೊಸ ಘಟಕಗಳನ್ನು ಬೆಳೆಸುವುದು, ಹೊಸ ಕಾಲದ ಅಗತ್ಯಗಳಿಗೆ ತಕ್ಕಂತೆ ತರಬೇತಿ ವ್ಯವಸ್ಥೆ ರೂಪಿಸುವುದು ಮತ್ತು ಯೋಧರ ಹೋರಾಟದ ಶಕ್ತಿ ಕುಂದದಂತೆ ನೋಡಿಕೊಳ್ಳುವುದು ಮುಖ್ಯ ಜವಾಬ್ದಾರಿಯಾಗುತ್ತದೆ. ಎಲ್ಲ ಮುಖ್ಯಸ್ಥರೂ ಸಶಸ್ತ್ರ ಪಡೆಗಳ ಮುಖ್ಯಸ್ಥರ ಸಮಿತಿಯ ಸದಸ್ಯರಾಗಿರುತ್ತಾರೆ. ತಮ್ಮ ವಿಭಾಗಗಳಲ್ಲಿ ಪರಿಣಿತರೂ ಆಗಿರುತ್ತಾರೆ. ಹೀಗಾಗಿ ಯಾವುದೇ ಮಹತ್ವದ ಕಾರ್ಯಾಚರಣೆಯಲ್ಲಿ ಇವರ ಪ್ರತಿಕ್ರಿಯೆ ಅತ್ಯಗತ್ಯ ಮತ್ತು ಮೌಲಿಕವಾಗಿರುತ್ತದೆ.

ಈ ಪ್ರಸ್ತಾಪಿತ ಚಿಂತನೆ ಬಗ್ಗೆ ಒಮ್ಮತ ಮೂಡಿದೆಯೇ? ಥಿಯೇಟರ್​ ಕಮಾಂಡ್ ರೂಪಿಸುವುದು ಸದ್ಯದ ಅಗತ್ಯ ಎನ್ನುವ ಬಗ್ಗೆ ಯಾರಿಗೂ ಅನುಮಾನವಿಲ್ಲ. ಆದರೆ ರಕ್ಷಣಾ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿರುವ ಪ್ರಕಾರ ಭೂಸೇನೆ ಮತ್ತು ನೌಕಾಪಡೆಗಳು ಈ ಚಿಂತನೆಯ ಬಗ್ಗೆ ಸಹಮತ ವ್ಯಕ್ತಪಡಿಸಿವೆ. ಆದರೆ ವಾಯುಪಡೆ ಕೆಲ ಪ್ರಶ್ನೆಗಳನ್ನು ಮುಂದಿಟ್ಟಿದೆ.

ವಾಯುಸೇನೆಯ ಸಂಪನ್ಮೂಲಗಳ ಮೇಲೆ ವಾಯುಪಡೆ ಮುಖ್ಯಸ್ಥರಿಗೆ ಇರುವ ಕಾರ್ಯಾಚರಣೆಯ ನಿಯಂತ್ರಣ ಕೈತಪ್ಪಿದಂತೆ ಆಗಬಾರದು ಎಂದು ವಾಯುಪಡೆ ಪ್ರತಿಪಾದಿಸುತ್ತಿದೆ. ಈ ಏಕೀಕೃತ ಥಿಯೇಟರ್ ಕಮಾಂಡ್​ಗಳಲ್ಲಿ ವಾಯುಪಡೆಯ ಎಲ್ಲ ಸಂಪನ್ಮೂಲಗಳೂ ಹಂಚಿಕೆಯಾಗಿಬಿಡಬಹುದು ಎಂದು ವಾಯುಸೇನೆ ಅನುಮಾನ ವ್ಯಕ್ತಪಡಿಸುತ್ತಿದೆ.

ಇಂಥ ಅಭಿಪ್ರಾಯಭೇದಗಳು ಮತ್ತು ಕಾಳಜಿಗಳ ಬಗ್ಗೆ ಚರ್ಚಿಸಿ ಸಹಮತ ಮೂಡಿಸಲೆಂದೇ ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರಿರುವ ಸಮಿತಿಯನ್ನು ಕಳೆದ ವಾರ ರೂಪಿಸಲಾಗಿದೆ. ರಕ್ಷಣಾ ಪಡೆಗಳ ಸಿಬ್ಬಂದಿ ಮುಖ್ಯಸ್ಥರು ಈ ಸಮಿತಿಯ ಸಭೆ ನಡೆಸಿದ್ದಾರೆ. ವಾಯುಪಡೆಯು ಪ್ರಸ್ತಾಪಿಸುತ್ತಿರುವ ಇಂಥ ಎಲ್ಲ ವಿಷಯಗಳನ್ನೂ ಮೊದಲು ಚರ್ಚಿಸಿ, ಅನುಮಾನಗಳನ್ನು ಪರಿಹರಿಸಿಕೊಳ್ಳಬೇಕು. ಅನಂತರವೇ ರಕ್ಷಣಾ ಸಂಪನ್ಮೂಲಗಳ ಸಮಗ್ರ ಸ್ಥಿತ್ಯಂತರ ಸುಸೂತ್ರವಾಗಿ ನಡೆಯಲು ಸಾಧ್ಯ ಎಂದು ವಾಯುಪಡೆಯ ಮೂಲಗಳು ಇಂಡಿಯನ್​ ಎಕ್ಸ್​ಪ್ರೆಸ್​ಗೆ ಹೇಳಿವೆ.

ಇದನ್ನೂ ಓದಿ: Explainer: ಎಂಜಿನಿಯರಿಂಗ್ ಅದ್ಭುತ ಕಾಳೇಶ್ವರಂ ಏತ ನೀರಾವರಿ ಯೋಜನೆ; ಏಕಿಷ್ಟು ಪ್ರಾಮುಖ್ಯತೆ? ಈಗೇಕೆ ಸುದ್ದಿಯಲ್ಲಿದೆ?

ಸಿಡಿಎಸ್ ಜನರಲ್ ಬಿಪಿನ್ ರಾವತ್

ಈಗ ಎಷ್ಟು ಕಮಾಂಡ್​ಗಳಿವೆ? ಈ ಪೈಕಿ ಟ್ರೈ ಸರ್ವೀಸ್ ಕಮಾಂಡ್​ ಇದೆಯೇ? ದೇಶದಲ್ಲಿ ಪ್ರಸ್ತುತ 17 ಕಮಾಂಡ್​ಗಳು ಕಾರ್ಯಾಚರಣೆ ನಡೆಸುತ್ತಿವೆ. ಇದರಲ್ಲಿ ಭೂಸೇನೆಯು ಉತ್ತರ, ಪೂರ್ವ, ದಕ್ಷಿಣ, ಪಶ್ಚಿಮ, ಮಧ್ಯಮ, ವಾಯವ್ಯ ಮತ್ತು ಸೇನಾ ತರಬೇತಿ ಕಮಾಂಡ್​ ಸೇರಿ ಏಳು ಕಮಾಂಡ್​ಗಳನ್ನು ನಿರ್ವಹಿಸುತ್ತಿದೆ. ವಾಯುಪಡೆಯು ಏಳು ಕಮಾಂಡ್​ಗಳನ್ನು ನಿರ್ವಹಿಸುತ್ತಿವೆ. ಪಶ್ಚಿಮ, ಪೂರ್ವ, ದಕ್ಷಿಣ, ವಾಯವ್ಯ, ಕೇಂದ್ರ, ತರಬೇತಿ ಮತ್ತು ನಿರ್ವಹಣಾ ಕಮಾಂಡ್​ಗಳು ಇದರಲ್ಲಿ ಸೇರಿವೆ. ನೌಕಾಪಡೆಯು ಮೂರು ಕಮಾಂಡ್​ಗಳನ್ನು ನಿರ್ವಹಿಸುತ್ತಿದೆ. ಪಶ್ಚಿಮ, ಪೂರ್ವ ಮತ್ತು ದಕ್ಷಿಣ ಕಮಾಂಡ್​ಗಳು ನೌಕಾಪಡೆಯ ಸುಪರ್ದಿಯಲ್ಲಿವೆ. ಈ ಕಮಾಂಡ್​ಗಳು ಒಂದೇ ಪ್ರದೇಶದಲ್ಲಿದ್ದರೂ ಅವು ಜೊತೆಜೊತೆಗೆ ಕೆಲಸ ಮಾಡುತ್ತಿಲ್ಲ. ಅವುಗಳ ಕಾರ್ಯಾಚರಣೆ ಜವಾಬ್ದಾರಿಯು ಸಮಾನವಾಗಿಲ್ಲ ಎನ್ನುವುದು ಉಲ್ಲೇಖಾರ್ಹ ಸಂಗತಿ.

ಪ್ರಸ್ತುತ ನಮ್ಮ ದೇಶದಲ್ಲಿ ಎರಡು ಟ್ರೈ-ಸರ್ವೀಸ್​ ಕಮಾಂಡ್​ಗಳಿವೆ. ಮೂರೂ ಸಶಸ್ತ್ರ ಪಡೆಗಳ ಅಧಿಕಾರಿಗಳು ಒಬ್ಬರ ನಂತರ ಒಬ್ಬರಂತೆ ಉಸ್ತುವಾರಿ ಜವಾಬ್ದಾರಿ ಹಂಚಿಕೊಳ್ಳುವ ಅಂಡಮಾನ್ ಮತ್ತು ನಿಕೋಬಾರ್​ ಕಮಾಂಡ್​ (ಎಎನ್​ಸಿ) ಟ್ರೈ-ಸರ್ವೀಸ್ ಕಮಾಂಡ್​ ಆಶಯದಂತೆ ರೂಪುಗೊಂಡಿದೆ. ಇದರ ಜೊತೆಗೆ ದೇಶದ ಅಣ್ವಸ್ತ್ರಗಳ ನಿರ್ವಹಣೆ ಜವಾಬ್ದಾರಿ ಹೊಂದಿರುವ ಸ್ಟ್ರಾಟಜಿಕ್ ಫೋರ್ಸ್​ ಕಮಾಂಡ್​ ಸಹ ಟ್ರೈ-ಸರ್ವೀಸ್ ಕಮಾಂಡ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ.

(Indian Defense Army Navy Air force to come under integrated theatre commands Developments so far)

ಇದನ್ನೂ ಓದಿ: ಗಾಲ್ವಾನ್ ಸಂಘರ್ಷದ ನಂತರ ಇನ್ನೂ ಸಿದ್ಧತೆ ಮತ್ತು ತರಬೇತಿ ಅಗತ್ಯವಿದೆ ಎಂದು ಚೀನಾ ಸೇನೆ ಅರಿತುಕೊಂಡಿದೆ: ಜನರಲ್ ಬಿಪಿನ್ ರಾವತ್

ಇದನ್ನೂ ಓದಿ: Indian Army: ಗಾಲ್ವಾನ್​ ಸಂಘರ್ಷದಲ್ಲಿ ಹುತಾತ್ಮರಾದ ಯೋಧರಿಗಾಗಿ ಭಾರತೀಯ ಸೇನೆಯಿಂದ ಗಾಯನ ನಮನ; ವಿಡಿಯೋ ವೈರಲ್​

Published On - 11:34 pm, Sun, 27 June 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ