ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ಒಂದು ವರ್ಷ; ಅಂದೇನಾಗಿತ್ತು? ಈಗ ಹೇಗಿದೆ?

Kozhikode Plane Crash: ಕೊವಿಡ್ ಕಾಲ, ವಿಶೇಷವಾಗಿ ಗಲ್ಫ್​​ನಿಂದ ಬಂದವರ ಜತೆ ಕಟ್ಟುನಿಟ್ಟಾಗಿ ಅಂತರ ಕಾಪಾಡುತ್ತಿದ್ದ ಸಮಯ. ಜನರು ಪರಸ್ಪರ ಮುಟ್ಟುವಂತಿಲ್ಲ. ಆದರೆ ಆ ಹೊತ್ತಲ್ಲಿ, ಸ್ಥಳೀಯರು ಇದ್ಯಾವುದನ್ನೂ ಲೆಕ್ಕಿಸದೆ ಪ್ರಯಾಣಿಕರ ಪ್ರಾಣ ಉಳಿಸುವ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದರು.

ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ ಒಂದು ವರ್ಷ; ಅಂದೇನಾಗಿತ್ತು? ಈಗ ಹೇಗಿದೆ?
ಕೋಯಿಕ್ಕೋಡ್ ವಿಮಾನ ಅಪಘಾತದ ಚಿತ್ರ (ಸಂಗ್ರಹ)
Follow us
| Updated By: Skanda

Updated on: Aug 07, 2021 | 7:58 AM

ಕರಿಪ್ಪೂರ್:  2021 ಆಗಸ್ಟ್ 7, ಸಂಜೆ 7.41 ಕ್ಕೆ ಕೋಯಿಕ್ಕೋಡ್ ವಿಮಾನ ನಿಲ್ದಾಣವು (Kozhikode International Airport) ರನ್ ವೇಯ ಪೂರ್ವ ತುದಿ. ದುಬೈನಿಂದ ಕೋಯಿಕ್ಕೋಡ್​​ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ರನ್ ವೇಯಿಂದ ಜಾರಿ  35 ಮೀಟರ್ ಆಳಕ್ಕೆ ಬಿದ್ದಿತ್ತು.  33 ವರ್ಷಗಳ ಇತಿಹಾಸದಲ್ಲಿ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಮೊದಲ ದೊಡ್ಡ ಅಪಘಾತ. ವಂದೇ ಭಾರತ್ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ 184 ಪ್ರಯಾಣಿಕರು ಮತ್ತು 6 ಸಿಬ್ಬಂದಿಯೊಂದಿಗೆ ದುಬೈನಿಂದ ಕರಿಪ್ಪೂರ್​​ನಲ್ಲಿರುವ ಕೋಯಿಕ್ಕೋಡ್  ವಿಮಾನ  ನಿಲ್ದಾಣಕ್ಕೆ ಆಗಮಿಸಿತ್ತು.

ಕೊವಿಡ್ ಕಾಲದಲ್ಲಿ ತಾಯ್ನಾಡಿಗೆ ಆಗಮಿಸುತ್ತಿರುವ ಗಲ್ಫ್ ನಿವಾಸಿಗಳು ಲಗೇಜುಗಳಿಗಿಂತ ಹೆಚ್ಚು ಕನಸು ಮತ್ತು ಭರವಸೆಯ ಮೂಟೆಗಳನ್ನು ಹೊತ್ತು ತಂದಿದ್ದ ಘಳಿಗೆ . ಅದೆಂತ ದುರಂತದ ಪಯಣ. ಆ ದಿನ 19 ಪ್ರಯಾಣಿಕರು ಪ್ರಾಣ ಕಳೆದುಕೊಂಡರು. ಅನುಭವಿ ಪೈಲಟ್ ಡಿವಿ ಸಾಠೆ  ಸೇರಿದಂತೆ ಇನ್ನೂ ಇಬ್ಬರು ಸಾವನ್ನಪ್ಪಿದರು. ಅಂದು ವಿಮಾನ ಟೇಬಲ್ ಟಾಪ್ ರನ್ ವೇ ದಾಟಿ ಕ್ರಾಸ್ ರಸ್ತೆಯಲ್ಲಿರುವ ಏರ್ ಪೋರ್ಟ್ ಭದ್ರತಾ ಗೋಡೆಗೆ ಅಪ್ಪಳಿಸಿತ್ತು. ಜೋರಾದ ಸದ್ದು ಕೇಳಿ ಗಾಬರಿಗೊಂಡ ಜನರಿಗೆ ಅಲ್ಲಿ ಏನಾಗುತ್ತಿದೆ ಎಂದು ತಿಳಿದಿಲ್ಲ.

ಅಪಾಯದ ಗಂಟೆ ಮೊಳಗುತ್ತಿದ್ದಂತೆ ಸಿಐಎಸ್ಎಫ್ ಯೋಧರು, ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು, ಪೊಲೀಸರು ಮತ್ತು ಸಾರ್ವಜನಿಕರು ಓಡಿ ಬಂದರು. ಕೊವಿಡ್ ಕಾಲ, ವಿಶೇಷವಾಗಿ ಗಲ್ಫ್​​ನಿಂದ ಬಂದವರ ಜತೆ ಕಟ್ಟುನಿಟ್ಟಾಗಿ ಅಂತರ ಕಾಪಾಡುತ್ತಿದ್ದ ಸಮಯ. ಜನರು ಪರಸ್ಪರ ಮುಟ್ಟುವಂತಿಲ್ಲ. ಆದರೆ ಆ ಹೊತ್ತಲ್ಲಿ, ಸ್ಥಳೀಯರು ಇದ್ಯಾವುದನ್ನೂ ಲೆಕ್ಕಿಸದೆ ಪ್ರಯಾಣಿಕರ ಪ್ರಾಣ ಉಳಿಸುವ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದರು.

ಆಂಬುಲೆನ್ಸ್ ಜೊತೆಗೆ ಸ್ಥಳೀಯರು ಗಾಯಗೊಂಡವರನ್ನು ದ್ವಿಚಕ್ರ ವಾಹನಗಳು, ಕಾರುಗಳು ಮತ್ತು ಲಾರಿಗಳಲ್ಲಿ ಆಸ್ಪತ್ರೆಗೆ ಸೇರಿಸಿದರು. ಕೊವಿಡ್ ಮತ್ತು ಕಂಟೋನ್ಮೆಂಟ್ ವಲಯದ ಬಗ್ಗೆ ಯಾರೂ ತಲೆಕೆಡಿಕೊಂಡಿಲ್ಲ. ತುಂಡಾಗಿ ಬಿದ್ದ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಅಪಘಾತ ಉಂಟುಮಾಡುವ ಸಾಧ್ಯತೆಯನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಅಪಘಾತಕ್ಕೀಡಾದ ವಿಮಾನದ ಪ್ರಯಾಣಿಕರನ್ನು ಉಳಿಸಬೇಕೆಂಬ ಒಂದೇ ಒಂದು ಉದ್ದೇಶ ಮಾತ್ರ ಅಲ್ಲಿತ್ತು.

ಈ ದುರಂತದಲ್ಲಿ ರೇಸಾ (Runway End Safety Areas ) ಪಕ್ಕದಲ್ಲಿರುವ ಇನ್ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಮ್ (ಐಎಲ್ಎಸ್) ನ ಪ್ರಮುಖ ಭಾಗಗಳು ವಿಮಾನ ಅಪಘಾತದಲ್ಲಿ ಹಾನಿಗೊಳಗಾಗಿವೆ. ಇದರ ಪರಿಣಾಮ ಎರಡು ಐಎಸ್ಎಲ್ (Instrument Landing System) ಗಳಲ್ಲಿ ಒಂದು ನಿಷ್ಕ್ರಿಯವಾಯಿತು. ಐಎಲ್ ಎಸ್ ವಿಮಾನವು ರನ್ ವೇನಲ್ಲಿ ಇಳಿಯಲು ಮಾರ್ಗದರ್ಶನ ನೀಡುವ ವ್ಯವಸ್ಥೆಯಾಗಿದೆ. ನಂತರ ಅದನ್ನು  ಪುನಃಸ್ಥಾಪಿಸಲಾಯಿತು. ಮರುದಿನ ಮುಂಜಾನೆ 4 ಗಂಟೆಯವರೆಗೆ ರನ್ ವೇಯನ್ನು ಮುಚ್ಚಲಾಯಿತು. ರಾತ್ರಿ ಇಳಿಯಬೇಕಿದ್ದ ವಿಮಾನಗಳನ್ನು ಹತ್ತಿರದ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಯಿತು. ಇದಿಷ್ಟು ಅಂದು ರಾತ್ರಿ ನಡೆದ ಘಟನಾವಳಿಗಳು.

ಈ ದುರಂತ ನಡೆದು ಇದೀಗ ಒಂದು ವರ್ಷವಾಗಿದೆ. ಆದರೆ ಬಾಕಿ ಉಳಿದಿರುವ ಪ್ರಶ್ನೆ ಕರಿಪ್ಪೂರ್ ವಿಮಾನ ಅಪಘಾತದ  ತನಿಖಾ ವರದಿ ಎಲ್ಲಿ? ಈ ವರದಿಯು ಕರಿಪ್ಪೂರ್ ಮೂಲಕ ವಿಮಾನ ಯಾತ್ರೆ ಕೈಗೊಳ್ಳುವ ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಆ ಪ್ರಶ್ನೆಯ ಪ್ರಸ್ತುತತೆಯನ್ನು ಹೆಚ್ಚಿಸುತ್ತದೆ. ಅಪಘಾತದ ನಂತರ ದೊಡ್ಡ ವಿಮಾನಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಅಪಘಾತದ ನಂತರ, ವಿವಿಧ ತನಿಖಾ ಸಂಸ್ಥೆಗಳು ತನಿಖೆಗಾಗಿ ಕರಿಪ್ಪೂರ್​​ಗೆ ಬಂದವು. ವಿಮಾನ ಅಪಘಾತ ತನಿಖಾ ಬ್ಯೂರೋ, ವಿಮಾನ ನಿಲ್ದಾಣ ಪ್ರಾಧಿಕಾರ, ಏರ್ ಇಂಡಿಯಾ, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ತನಿಖಾ ತಂಡ, ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು. ಪೊಲೀಸರ ಎಫ್ಐಆರ್ ವರದಿಯ ಹೊರತಾಗಿಯೂ ಒಂದೇ ಒಂದು ಸಂಸ್ಥೆ ಅಪಘಾತದ ಕಾರಣದ ಬಗ್ಗೆ ವರದಿಯನ್ನು ಬಿಡುಗಡೆ ಮಾಡಿಲ್ಲ.

ಅಂದ ಹಾಗೆ ಅಪಘಾತದ ನಂತರ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ಅವು   ಸ್ಟ್ಯಾಂಡರ್ಡ್ ಆಫ್ ಆಪರೇಷನ್ ಪ್ರೊಸೀಜರ್ (SOP) ಪ್ರಕಾರ ಭದ್ರತಾ ಮೌಲ್ಯಮಾಪನ ವಿಮಾನಯಾನ ಸಂಸ್ಥೆಗಳು ಸುರಕ್ಷತಾ ಅಪಾಯದ ಮೌಲ್ಯಮಾಪನ ಎಸ್‌ಆರ್‌ಎ (SRA) ವರದಿಯನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ತಪಾಸಣೆ, ರನ್ ವೇ   ದಕ್ಷತೆ ಪರೀಕ್ಷೆ ಪಾಲಕ್ಕಾಡ್ ಐಐಟಿಯಿಂದ ಮೇಲ್ವಿಚಾರಣೆ. ವಿಮಾನ ನಿಲ್ದಾಣದ ರನ್ ವೇ ಪಕ್ಕದ ಎರಡೂ ಕಡೆಗಳಲ್ಲಿ ಮಣ್ಣು ಕುಸಿತಕ್ಕೆ ಕಡೆ ವಿಮಾನವು ರನ್ ವೇಯಿಂದ ಜಾರಿಬೀಳುವ ಅಪಾಯವನ್ನು ತಪ್ಪಿಸಲು ರನ್ ವೇಯ ಎರಡೂ ಬದಿಗಳಲ್ಲಿ ಮಣ್ಣನ್ನು ಸಮತಟ್ಟು ಮಾಡಲಾಗಿದೆ.

ಇದನ್ನೂ ಓದಿ: INS Vikrant: ಮೊದಲ ದೇಶೀ ವಿಮಾನವಾಹಕ ಯುದ್ಧನೌಕೆಯ ಹಿಂದಿದೆ 21 ವರ್ಷಗಳ ಪರಿಶ್ರಮ

(Kozhikode plane crash One year after Air India Express crash at Karipur no investigation report yet)