AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲಿ ಎಷ್ಟು ಜಡ್ಜ್ ಹುದ್ದೆಗಳು ಖಾಲಿ ಇವೆ, ಎಷ್ಟು ಕೋಟಿ ಕೇಸ್​ಗಳು ಕೋರ್ಟ್​ಗಳಲ್ಲಿ ಪೆಂಡಿಂಗ್ ಇವೆ? ವಿವರ ಇಲ್ಲಿದೆ

ನಮ್ಮ ದೇಶದಲ್ಲಿ ವಿಳಂಬ ನ್ಯಾಯದಾನಕ್ಕೆ ಕಾರಣವೇನು? ದೇಶದಲ್ಲಿ ಎಷ್ಟು ಜಡ್ಜ್ ಹುದ್ದೆಗಳು ಖಾಲಿ ಇವೆ, ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎನ್ನುವುದರ ವಿವರ ಇಲ್ಲಿದೆ.

ದೇಶದಲ್ಲಿ ಎಷ್ಟು ಜಡ್ಜ್ ಹುದ್ದೆಗಳು ಖಾಲಿ ಇವೆ, ಎಷ್ಟು ಕೋಟಿ ಕೇಸ್​ಗಳು ಕೋರ್ಟ್​ಗಳಲ್ಲಿ ಪೆಂಡಿಂಗ್ ಇವೆ? ವಿವರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
S Chandramohan
| Updated By: sandhya thejappa

Updated on: Jul 29, 2021 | 10:51 AM

ದೆಹಲಿ: ದೇಶದಲ್ಲಿ ವಿಳಂಬ ನ್ಯಾಯದಾನ ಆಗುತ್ತಿದೆ ಎಂದೆಲ್ಲಾ ಚರ್ಚೆಯಾಗುತ್ತದೆ. ವಿಳಂಬ ನ್ಯಾಯದಾನ, ನ್ಯಾಯವನ್ನು ನಿರಾಕರಿಸಿದಂತೆ ಎಂದು ಹೇಳುತ್ತೇವೆ. ಆದರೆ, ವಿಳಂಬ ನ್ಯಾಯದಾನಕ್ಕೆ ಕಾರಣವಾದ ಅಂಶಗಳ ಬಗ್ಗೆ ನಾವು ಚರ್ಚೆ ಮಾಡಲ್ಲ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಶೀಘ್ರ ನ್ಯಾಯದಾನ ಆಗಬೇಕೆಂಬ ಬಯಕೆ ಎಲ್ಲರಲ್ಲೂ ಇದೆ. ಆದರೆ, ಇದಕ್ಕೆ ಇರುವ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ. ನಮ್ಮ ದೇಶದಲ್ಲಿ ವಿಳಂಬ ನ್ಯಾಯದಾನಕ್ಕೆ ಕಾರಣವೇನು? ದೇಶದಲ್ಲಿ ಎಷ್ಟು ಜಡ್ಜ್ ಹುದ್ದೆಗಳು ಖಾಲಿ ಇವೆ, ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎನ್ನುವುದರ ವಿವರ ಇಲ್ಲಿದೆ.

ದೇಶದಲ್ಲಿ 4.4 ಕೋಟಿ ಕೇಸ್ ಕೋರ್ಟ್​ಗಳಲ್ಲಿ ಪೆಂಡಿಂಗ್ ಭಾರತದಲ್ಲಿ ಕೋಟಿಗಟ್ಟಲೇ ಕೇಸ್​ಗಳು ಕೋರ್ಟ್​ಗಳಲ್ಲಿ ಬಗೆಹರಿಯದೇ ವರ್ಷಾನುಗಟ್ಟಲೆಯಿಂದ ವಿಚಾರಣೆಗೆ ಬಾಕಿ ಇವೆ. ಭಾರತದಲ್ಲಿ ಶೀಘ್ರಗತಿಯಲ್ಲಿ ನ್ಯಾಯದಾನ ಆಗುತ್ತಿಲ್ಲ. ಈ ವಿಳಂಬ ನ್ಯಾಯದಾನ, ನ್ಯಾಯವನ್ನು ನಿರಾಕರಿಸಿದಂತೆ (Delayed justice is denied justice) ಎಂದು ವಕೀಲರು ಹೇಳ್ತಾರೆ. ನ್ಯಾಯದಾನದ ನಿರೀಕ್ಷೆಯಲ್ಲಿ ಜನರು ಕೋರ್ಟ್​ಗಳಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ. ಭಾರತದಲ್ಲಿ ಹೈಕೋರ್ಟ್​ಗಳಲ್ಲಿ 5.73 ಮಿಲಿಯನ್ ಕೇಸ್​ಗಳು (57 ಲಕ್ಷ ಕೇಸ್) ಪೆಂಡಿಂಗ್ ಇವೆ ಎಂದು ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಮದನ್ ಬಿ.ಲೋಕೂರ್ ಅವರು ಎರಡು ತಿಂಗಳ ಹಿಂದೆ ಬರೆದ ಲೇಖನವೊಂದರಲ್ಲಿ ಹೇಳಿದ್ದಾರೆ. ಇನ್ನೂ ಜಿಲ್ಲಾ ನ್ಯಾಯಾಲಯಗಳಲ್ಲಿ 38.15 ಮಿಲಿಯನ್ ಕೇಸ್​ಗಳು (3.8 ಕೋಟಿ ಕೇಸ್) ವಿಚಾರಣೆಗೆ ಪೆಂಡಿಂಗ್ ಇವೆ ಎಂದು ನಿವೃತ್ತ ನ್ಯಾಯಮೂರ್ತಿ ಮದನ್ ಬಿ.ಲೋಕೂರ್ ಲೇಖನದಲ್ಲಿ ಹೇಳಿದ್ದಾರೆ.

ದೇಶದ ಕೋರ್ಟ್​ಗಲ್ಲಿ 4.4 ಕೋಟಿ ಕೇಸ್ ಪೆಂಡಿಂಗ್ ಮೂರು ತಿಂಗಳ ಹಿಂದಿನ ವರದಿಯ ಪ್ರಕಾರ, ದೇಶದಲ್ಲಿ 4.4 ಕೋಟಿ ಕೇಸ್​ಗಳು ಜಿಲ್ಲಾ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆಗೆ ಪೆಂಡಿಂಗ್ ಇವೆ. 2020ರ ಮಾರ್ಚ್ ತಿಂಗಳಲ್ಲಿ ಲಾಕ್​ಡೌನ್​ ವಿಧಿಸಿದ ಬಳಿಕ ಈ ವರ್ಷದ ಏಪ್ರಿಲ್​ವರೆಗೂ 70 ಲಕ್ಷ ಕೇಸ್​ಗಳು ಹೊಸದಾಗಿ ದಾಖಲಾಗಿ ಕೋರ್ಟ್​ನಲ್ಲಿ ವಿಚಾರಣೆಗೆ ಪೆಂಡಿಂಗ್ ಇವೆ. 2020ರ ಮಾರ್ಚ್ ತಿಂಗಳಲ್ಲಿ 3.68 ಕೋಟಿ ಕೇಸ್​ಗಳು ಪೆಂಡಿಂಗ್ ಇದ್ದವು. ಆದರೆ, ಈ ವರ್ಷದ ಏಪ್ರಿಲ್ 15ರ ವೇಳೆಗೆ 4.4 ಕೋಟಿಗೆ ಕೇಸ್​ಗಳ ಸಂಖ್ಯೆ ಏರಿಕೆಯಾಗಿತ್ತು.

ಜಿಲ್ಲಾ ಮತ್ತು ಕೆಳ ನ್ಯಾಯಾಲಯಗಳಲ್ಲಿ 3.81 ಕೋಟಿ ಕೇಸ್​ಗಳು ಪೆಂಡಿಂಗ್ ಇದ್ದರೇ, ಹೈಕೋರ್ಟ್​ಗಳಲ್ಲಿ 57.53 ಲಕ್ಷ ಕೇಸ್​ಗಳು ವಿಚಾರಣೆಗೆ ಪೆಂಡಿಂಗ್ ಇವೆ. ಸುಪ್ರೀಂ ಕೋರ್ಟ್​ನಲ್ಲಿ 67,269 ಕೇಸ್ಗಳು ವಿಚಾರಣೆಗೆ ಪೆಂಡಿಂಗ್ ಇವೆ. 2020ರಲ್ಲಿ ಜಿಲ್ಲಾ ಮತ್ತು ಕೆಳ ನ್ಯಾಯಾಲಯಗಳಲ್ಲಿ 3.2 ಕೋಟಿ ಕೇಸ್​ಗಳು ಪೆಂಡಿಂಗ್ ಇದ್ದವು. ಆದರೆ, ಕಳೆದ ಒಂದು ವರ್ಷದಲ್ಲಿ ಜಿಲ್ಲಾ ಮತ್ತು ಕೆಳ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಪೆಂಡಿಂಗ್ ಇರುವ ಕೇಸ್​ಗಳ ಸಂಖ್ಯೆ 3.8 ಕೋಟಿಗೆ ಏರಿಕೆಯಾಗಿದೆ. ಹೈಕೋರ್ಟ್​ಗಳಲ್ಲಿ ಕಳೆದ ವರ್ಷ 46 ಲಕ್ಷ ಕೇಸ್​ಗಳು ವಿಚಾರಣೆಗೆ ಪೆಂಡಿಂಗ್ ಇದ್ದವು. ಆದರೆ, ಈ ವರ್ಷ 57.53 ಲಕ್ಷಕ್ಕೆ ಏರಿಕೆಯಾಗಿವೆ. ಇವುಗಳಲ್ಲಿ ಕೆಲ ಕೇಸ್​ಗಳಂತೂ 20 ವರ್ಷ, 30 ವರ್ಷದಿಂದ ವಿಚಾರಣೆಗೆ ಪೆಂಡಿಂಗ್ ಇವೆ.

2018ರ ನೀತಿ ಆಯೋಗದ ಸ್ಟ್ರಾಟಜಿ ಪೇಪರ್ ಪ್ರಕಾರ, ಈಗ ಕೋರ್ಟ್ ಕೇಸ್​ಗಳನ್ನು ಇತ್ಯರ್ಥಪಡಿಸುತ್ತಿರುವ ವೇಗದಲ್ಲೇ ಕೇಸ್​ಗಳನ್ನು ಇತ್ಯರ್ಥಪಡಿಸಿದರೇ, ಬಾಕಿ ಇರುವ ಎಲ್ಲ ಕೇಸ್​ಗನ್ನು ಇತ್ಯರ್ಥಪಡಿಸಲು 324 ವರ್ಷಗಳೇ ಬೇಕಾಗುತ್ತವೆ. 2018ರಲ್ಲಿ ದೇಶದಲ್ಲಿ 2.9 ಕೋಟಿ ಕೇಸ್ಗಳು ವಿವಿಧ ಕೋರ್ಟ್​ಗಳಲ್ಲಿ ವಿಚಾರಣೆಗೆ ಪೆಂಡಿಂಗ್ ಇದ್ದವು.

ವಿಳಂಬ ನ್ಯಾಯದಾನಕ್ಕೆ ಜಡ್ಜ್​ಗಳ ಕೊರತೆ ಕಾರಣ ನಮ್ಮ ದೇಶದಲ್ಲಿ ಈ ವಿಳಂಬ ನ್ಯಾಯದಾನಕ್ಕೆ ಕೆಳ ಹಂತದ ನ್ಯಾಯಾಲಯಗಳಿಂದ ಹಿಡಿದು ಹೈಕೋರ್ಟ್, ಸುಪ್ರೀಂ ಕೋರ್ಟ್​ವರೆಗೂ ಇರುವ ಜಡ್ಜ್​ಗಳ ಕೊರತೆಯೇ ಪ್ರಮುಖ ಕಾರಣ. ಜೊತೆಗೆ ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ಕೋರ್ಟ್ ಕೇಸ್​ಗಳ ಸಂಖ್ಯೆಗೆ ತಕ್ಕಂತೆ ಜಡ್ಜ್​ಗಳ ಸಂಖ್ಯೆಯನ್ನು ಹೆಚ್ಚಿಸುತ್ತಿಲ್ಲ. ಕೋರ್ಟ್​ಗಳಿಗೆ ಮಂಜೂರಾದ ಸಂಖ್ಯೆಯಷ್ಟು ನ್ಯಾಯಮೂರ್ತಿಗಳನ್ನು ನೇಮಿಸುತ್ತಿಲ್ಲ. ಇದರಿಂದಾಗಿ ಕೋರ್ಟ್ ಕೇಸ್​ಗಳನ್ನು ಬೇಗನೆ ಬಗೆಹರಿಸಿ ತೀರ್ಪು ನೀಡಲು ಕೋರ್ಟ್​ಗಳಿಗೂ ಸಾಧ್ಯವಾಗುತ್ತಿಲ್ಲ.

ಒಮ್ಮೆ ಬೆಂಗಳೂರು ಅಡ್ವೋಕೇಟ್ಸ್ ಅಸೋಸಿಯೇಷನ್​ನಿಂದ ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್​ನಲ್ಲಿ 2014 ರಲ್ಲಿ ಸುಪ್ರೀಂ ಕೋರ್ಟ್ ಸಿಜೆ ಆಗಿ ನೇಮಕವಾಗಿದ್ದು, ಜಸ್ಟಿಸ್ ಎಚ್‌.ಎಲ್.ದತ್ತು ಅವರಿಗೆ ಸನ್ಮಾನ, ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಆ ಸಮಾರಂಭದಲ್ಲಿ ಆಗಿನ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, ದೇಶದ ಕೋರ್ಟ್​ಗಳಲ್ಲಿ ಸಾಕಷ್ಟು ಕೇಸ್​ಗಳು ಪೆಂಡಿಂಗ್ ಇವೆ. ಬಹಳಷ್ಟು ವರ್ಷಗಳಾದರೂ ಬಗೆಹರಿದು ತೀರ್ಪು ಬೇಗನೇ ಬರುತ್ತಿಲ್ಲ. ನ್ಯಾಯಾಂಗ ಶೀಘ್ರಗತಿ ನ್ಯಾಯದಾನ ಮಾಡಬೇಕೆಂದು ತಮ್ಮದೇ ಧಾಟಿಯಲ್ಲಿ ಮಾತನಾಡಿದ್ದರು.

ಇದಕ್ಕೆ ಅದೇ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್​ ಜಸ್ಟಿಸ್ವಿ ಗೋಪಾಲಗೌಡ ಪ್ರತ್ಯುತ್ತರ ನೀಡಿದ್ದರು. ‘ದೇಶದ ಕೋರ್ಟ್​ಗಳಲ್ಲಿ ಜಡ್ಜ್​ಗಳ ಹುದ್ದೆಗಳು ಬಹಳಷ್ಟು ಸಂಖ್ಯೆಯಲ್ಲಿ ಖಾಲಿ ಇವೆ. ಖಾಲಿ ಇರುವ ಜಡ್ಜ್​ಗಳ ಹುದ್ದೆಗಳಿಗೆ ಕಾರ್ಯಾಂಗ ನೇಮಕ ಮಾಡುತ್ತಿಲ್ಲ. ಕಾರ್ಯಾಂಗದಿಂದ ಎಲ್ಲ ಜಡ್ಜ್ ಹುದ್ದೆಗಳನ್ನು ಭರ್ತಿ ಮಾಡಿದರೇ, ನ್ಯಾಯಾಂಗ ಶೀಘ್ರಗತಿಯಲ್ಲಿ ನ್ಯಾಯದಾನ ಮಾಡುತ್ತೆ. ಖಾಲಿ ಇರುವ ಜಡ್ಜ್ ಹುದ್ದೆಗಳನ್ನ ಭರ್ತಿ ಮಾಡಿ, ಆಗ ನ್ಯಾಯಾಂಗವೂ ಶೀಘ್ರಗತಿಯಲ್ಲಿ ನ್ಯಾಯದಾನ ಮಾಡುತ್ತೆ. ದೇಶದಲ್ಲಿ ವಿಳಂಬ ನ್ಯಾಯದಾನಕ್ಕೆ ಕಾರ್ಯಾಂಗವೂ ಕಾರಣ’ ಎಂದು ಗೋಪಾಲಗೌಡ ಹೇಳಿದ್ದರು.

ಹೈಕೋರ್ಟ್, ಸುಪ್ರೀಂ ಕೋರ್ಟ್​ನಲ್ಲಿ 454 ಜಡ್ಜ್ ಹುದ್ದೆ ಖಾಲಿ ದೇಶದ ಸುಪ್ರೀಂ ಕೋರ್ಟ್, ಹೈಕೋರ್ಟ್​ಗೆ ಒಟ್ಟು 1,098 ಜಡ್ಜ್ ಹುದ್ದೆಗಳು ಮಂಜೂರಾಗಿವೆ. ಇವುಗಳ ಪೈಕಿ 454 ಜಡ್ಜ್ ಹುದ್ದೆಗಳು ಈಗ ಖಾಲಿ ಇವೆ ಎಂದು ಇಂದು ಕೇಂದ್ರದ ಕಾನೂನು ಖಾತೆ ಸಚಿವ ಕಿರಣ್ ರಿಜಿಜು ಪಾರ್ಲಿಮೆಂಟ್​ಗೆ ತಿಳಿಸಿದ್ದಾರೆ. ದೇಶದಲ್ಲಿ 25 ಹೈಕೋರ್ಟ್​ಗಳಿವೆ. ಸುಪ್ರೀಂ ಕೋರ್ಟ್​ಗೆ 34 ನ್ಯಾಯಮೂರ್ತಿಗಳ ಹುದ್ದೆ ಮಂಜೂರಾಗಿವೆ. ಆದರೆ, ಸುಪ್ರೀಂ ಕೋರ್ಟ್​ನಲ್ಲಿ ಸದ್ಯ 8 ನ್ಯಾಯಮೂರ್ತಿ ಹುದ್ದೆಗಳು ಖಾಲಿ ಇವೆ. ಒಟ್ಟಾರೆ ಸುಪ್ರೀಂ ಕೋರ್ಟ್, ಹೈಕೋರ್ಟ್​ನಲ್ಲೇ 454 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿಯಿದ್ದು, ನೇಮಕಾತಿ ಮಾಡಬೇಕಾಗಿದೆ. ಹೈಕೋರ್ಟ್, ಸುಪ್ರೀಂ ಕೋರ್ಟ್​ನಲ್ಲಿ ಹತ್ತಿರ ಅರ್ಧದಷ್ಟು ನ್ಯಾಯಮೂರ್ತಿ ಹುದ್ದೆಗಳು ಖಾಲಿ ಇವೆ.

ಅಲಹಾಬಾದ್ ಹೈಕೋರ್ಟ್​ಗೆ 160 ಜಡ್ಜ್ ಹುದ್ದೆಗಳು ಮಂಜೂರಾಗಿವೆ. ಆದರೆ, 66 ಜಡ್ಜ್ ಹುದ್ದೆಗಳು ಸದ್ಯ ಖಾಲಿ ಇವೆ. ಕೋಲ್ಕತ್ತಾ ಹೈಕೋರ್ಟ್​ಗೆ 72 ಜಡ್ಜ್ ಹುದ್ದೆಗಳು ಮಂಜೂರಾಗಿವೆ. ಇವುಗಳ ಪೈಕಿ 31 ಜಡ್ಜ್ ಹುದ್ದೆಗಳು ಖಾಲಿ ಇವೆ. ಮಧ್ಯಪ್ರದೇಶದ ಹೈಕೋರ್ಟ್​ನಲ್ಲಿ 24 ಜಡ್ಜಗಳ ಹುದ್ದೆಗಳು ಖಾಲಿ ಇವೆ. ಪಾಟ್ನಾ ಹೈಕೋರ್ಟ್​ನಲ್ಲಿ 34 ಜಡ್ಜ್ ಹುದ್ದೆಗಳು ಖಾಲಿ ಇವೆ. ದೇಶದ ಸುಪ್ರೀಂ ಕೋರ್ಟ್, ಹೈಕೋರ್ಟ್​ಗಳಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ 644 ಜಡ್ಜ್​ಗಳ ಪೈಕಿ 77 ಮಂದಿ ಮಾತ್ರ ಮಹಿಳಾ ಜಡ್ಜ್​ಗಳು ಎಂಬುದು ವಿಶೇಷ.

2020 ರಲ್ಲಿ ಹೈಕೋರ್ಟ್, ಸುಪ್ರೀಂ ಕೋರ್ಟ್​ಗೆ 66 ನ್ಯಾಯಮೂರ್ತಿಗಳನ್ನು ಮಾತ್ರ ನೇಮಿಸಲಾಗಿದೆ. 2019ರಲ್ಲಿ 81 ನ್ಯಾಯಮೂರ್ತಿಗಳನ್ನು ಹೈಕೋರ್ಟ್, ಸುಪ್ರೀಂ ಕೋರ್ಟ್​ಗೆ ನೇಮಿಸಲಾಗಿದೆ. 2018ರಲ್ಲಿ 108 ನ್ಯಾಯಮೂರ್ತಿಗಳನ್ನು ಹೈಕೋರ್ಟ್, ಸುಪ್ರೀಂ ಕೋರ್ಟ್​ಗೆ ನೇಮಿಸಲಾಗಿದೆ. 2020 ರಲ್ಲಿ ಕೋಲ್ಕತ್ತಾ ಹೈಕೋರ್ಟ್ ಓರ್ವ ಜಡ್ಜ್​ನನ್ನು ಮಾತ್ರ ನೇಮಿಸಲಾಗಿದೆ. ಅಲಹಾಬಾದ್ ಹೈಕೋರ್ಟ್​ಗೆ 2020 ರಲ್ಲಿ ನಾಲ್ವರು ಜಡ್ಜ್​ಗಳನ್ನು ನೇಮಿಸಲಾಗಿದೆ.

ಜಿಲ್ಲಾ ಮತ್ತು ಕೆಳ ನ್ಯಾಯಾಲಯಗಳಲ್ಲಿ 24,368 ಜಡ್ಜ್ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಆದರೆ ಇವುಗಳ ಪೈಕಿ 5,132 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರದ ಕಾನೂನು ಖಾತೆ ಸಚಿವ ಕಿರಣ್ ರಿಜಿಜು ಪಾರ್ಲಿಮೆಂಟ್​ಗೆ ತಿಳಿಸಿದ್ದಾರೆ.

ಹೈಕೋರ್ಟ್​ಗಳಲ್ಲಿ ನ್ಯಾಯಮೂರ್ತಿಗಳ ಹುದ್ದೆ ಭರ್ತಿ ಮಾಡುವುದು ಕಾರ್ಯಾಂಗ, ನ್ಯಾಯಾಂಗದ ನಡುವಿನ ನಿರಂತರ, ಸಮಗ್ರ, ಸಹಭಾಗಿತ್ವದ ಪ್ರಕ್ರಿಯೆ. ಸಂವಿಧಾನಿಕ ಸಂಸ್ಥೆಗಳಿಂದ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಸಮಾಲೋಚನೆ, ಅನುಮೋದನೆ ನೀಡುವುದು ಅಗತ್ಯ. ಕಾನೂನು, ನಿಯಮ ಪಾಲಿಸಿ ಜಡ್ಜ್ ನೇಮಕಾತಿ ಪ್ರಕ್ರಿಯೆ ಶೀಘ್ರಗತಿಯಲ್ಲಿ ನಡೆಸಲು ಎಲ್ಲ ಶ್ರಮ ವಹಿಸಲಾಗುತ್ತಿದೆ ಎಂದು ಕೇಂದ್ರದ ಕಾನೂನು ಸಚಿವ ಕಿರಣ್ ರಿಜಿಜು ಪಾರ್ಲಿಮೆಂಟ್​ಗೆ ತಿಳಿಸಿದ್ದಾರೆ. ಸಂವಿಧಾನದ ಪ್ರಕಾರ, ಜಿಲ್ಲಾ ಮತ್ತು ಕೆಳ ನ್ಯಾಯಾಲಯಗಳಲ್ಲಿ ಜಡ್ಜ್​ಗಳ ನೇಮಕಾತಿಯಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ ಎಂದು ಕಿರಣ್ ರಿಜಿಜು ಪಾರ್ಲಿಮೆಂಟ್​ಗೆ ತಿಳಿಸಿದ್ದಾರೆ.

ಇದನ್ನೂ ಓದಿ

ನಿರೀಕ್ಷಿತ ಪ್ರಮಾಣದಲ್ಲಿ ನಡೆಯದ ಲಸಿಕೆ ಅಭಿಯಾನ; ಖಾಸಗಿ ಆಸ್ಪತ್ರೆಗಳ ಶೇ. 25 ರಷ್ಟು ಲಸಿಕೆ ಕೋಟಾ ತಗ್ಗಿಸುವ ಸಾಧ್ಯತೆ

ಭಾರತದ ಸ್ಟಾರ್ ಆಲ್-ರೌಂಡರ್ ರವೀಂದ್ರ ಜಡೇಜಾಗೆ ಕುದುರೆಗಳ ಮೇಲಿರುವ ವ್ಯಾಮೋಹ ನಿಮಗೆ ಗೊತ್ತಾ?

(Reason for Delayed justice and information about Judge posts)

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್