ಪ್ರಶಾಂತತೆ: ದ್ವಂದ್ವರಹಿತವಾದ ಮನಸ್ಸಿನ ಸ್ಥಿತಿಯೇ ಪ್ರಶಾಂತತೆ. ಸಮುದ್ರದ ತರಂಗಗಳೆಲ್ಲ ಅಡಗಿದಾಗ ಸಮುದ್ರ ಹೇಗೆ ಪ್ರಶಾಂತವಾಗಿರುತ್ತದೆಯೋ ಹಾಗೆ ಮನದ ಸಂಕಲ್ಪ-ವಿಕಲ್ಪಗಳ ತೆರೆ ಅಡಗಿದ ಸ್ಥಿತಿಯೇ ಪ್ರಶಾಂತತೆ. ಸುಖ-ದುಃಖಗಳ ಮಧ್ಯೆ ಸಮಸ್ಥಿತಿಯಿಂದ ಇರುವುದು ಗುರುವಿನ ಮೊದಲ ಲಕ್ಷಣ.
ಕ್ರೋಧರಾಹಿತ್ಯ: ಕೋಪ ಅಂಟದ ತಪಸ್ಸು ಫಲಕಾರಿಯಾಗುತ್ತದೆ. ಕ್ರೋಧ ತನ್ನ ವೈರಿ. ಆ ಕ್ರೋಧದ ಇನ್ನೊಂದು ಮುಖವೇ ದ್ವೇಷ. ಗುರುವಿನಲ್ಲಿ ಪ್ರೀತಿ ವಾತ್ಸಲ್ಯಗಳು ಇದ್ದರೆ ಮಾತ್ರ ಗುರು-ಶಿಷ್ಯರ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಇಲ್ಲದಿದ್ದರೆ ಆ ಸಂಬಂಧ ವ್ಯಾವಹಾರಿಕವಾಗಿ ಮಾತ್ರ ಸೀಮಿತವಾಗುತ್ತದೆ.
ಸದಾಚಾರಯೋಗ್ಯ: ಆಚಾರ-ವಿಚಾರದ ಕೊಂಡಿ ಕಳಚಬಾರದು. ಮಾತು ಬ್ರಹ್ಮ, ಮನ ಭ್ರಮೆಯಿಂದ ತುಂಬಿದ್ದರೆ ಏನು ಪ್ರಯೋಜನ? ಪುಣ್ಯಕ್ಷೇತ್ರದಲ್ಲಿದ್ದು ದುಷ್ಟ ವಿಚಾರಕ್ಕೆ ಕೈಹಾಕಿ ಅಧ್ಯಾತ್ಮ ಕ್ಷೇತ್ರವನ್ನು ಅಲ್ಲೋಲಕಲ್ಲೋಲ ಮಾಡುವ ಗುರುವನ್ನು ನೋಡಿದರೆ ಮನಸ್ಸು ಜುಗುಪ್ಸೆಗೆ ಒಳಗಾಗುತ್ತದೆ.
ಸಹೃದಯಿ: ಇನ್ನೊಬ್ಬರು ತೊಂದರೆಯಲ್ಲಿದ್ದಾಗ ಸಹಾಯ ಮಾಡಬೇಕು. ಆದರೆ ಅದಕ್ಕೆ ಪ್ರತಿಫಲ ಬಯಸದೆ ಇರುವುದೇ ಸಹೃದಯಿಯ ಲಕ್ಷಣ. ಅವರು ಸಮಾಜಮುಖಿಯಾಗಿ ಸಮಾಜದ ಮೇಲೆ ಬೆಳಕು ಚೆಲ್ಲಬೇಕು. ಇದು ಸಹ ಗುರುವಿನ ಒಂದು ಲಕ್ಷಣ.
ತತ್ತ್ವದರ್ಶಿ: ಗುರು ತತ್ತ್ವಾವನುಭವಿಯಾಗಿರಬೇಕು. ಚಿತ್ರದ ಹುಲಿ, ಶಿಲೆಯ ಸಿಂಹ, ಪರಿಮಳವಿಲ್ಲದ ಪುಷ್ಪ, ರಸವಿಲ್ಲದ ಹಣ್ಣು, ವಿದ್ಯೆಯಿಲ್ಲದ ಗುರು ಇವೆಲ್ಲ ವ್ಯರ್ಥ. ಶಿಷ್ಯರ-ಭಕ್ತರ ಸಂದೇಹಗಳನ್ನು ದೂರ ಮಾಡಿ ತತ್ತ್ವವನ್ನು ಉಪದೇಶಿಸುವ ಗುರು ಬೇಕು.
ಗುರು (ಶಿಕ್ಷಕ) ಅಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ, ಬುದ್ಧಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು ಈ ಬುದ್ಧಿವಂತಿಕೆಗಳನ್ನು ಬಳಸುವ ವ್ಯಕ್ತಿಯಾಗಿರುತ್ತಾನೆ. ಸಂಸ್ಕೃತದಲ್ಲಿ ಗು ಅಂದರೆ ಅಂಧಕಾರ ಮತ್ತು ರು ಅಂದರೆ ಬೆಳಕು. ಅರಿವಿನ ಅಭಿವೃದ್ಧಿಯ ಒಂದು ಮೂಲತತ್ವವಾಗಿ ಇದು ಕಾಲ್ಪನಿಕತೆಯಿಂದ ನಿಜಸ್ಥಿತಿಯ ನಿರ್ಮಾಣಕ್ಕೆ, ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತದೆ.
Importance of Guru in our life ಗುರು-ಶಿಷ್ಯ ಪರಂಪರೆ! ತರ್ಕಾತೀತ ಜ್ಞಾನವನ್ನು (ವಿದ್ಯಾ ) ತಿಳಿಸಿಕೊಡುವ ಒಬ್ಬ ಗುರುವನ್ನು ಹುಡುಕುವ ಮಹತ್ವಕ್ಕೆ ಹಿಂದೂಮತದಲ್ಲಿ ಪ್ರಾಧಾನ್ಯ ನೀಡಲಾಗಿದೆ. ಗುರು ಶಬ್ದವು ಗು ಮತ್ತು ರು ಅಕ್ಷರಗಳಿಂದ ರಚಿತವಾಗಲ್ಪಟ್ಟಿದೆ. "ಗುಕಾರೋಂಧಕಾರತ್ವಾತ್ ರುಕಾರೋ ತನ್ನಿವಾರಕಃ" ’ಗು’ ಎಂದರೆ ’ಅಂಧಕಾರ’ ಎಂದರ್ಥವಿದೆ. ’ರು’ ಎಂದರೆ ’ನಾಶಪಡಿಸುವವನು’ ಅಂದರೆ ಅಂಧಕಾರವನ್ನು ನಾಶ ಪಡಿಸುವವನು ಎಂದಾಗುತ್ತದೆ. ಅದ್ವಯಾ-ತಾರಕಾ ಉಪನಿಷದ್ ಪ್ರಕಾರ ಗುರು ಎಂದರೆ ಆತ್ಮಾಂಧಕಾರವನ್ನು ಆಧ್ಯಾತ್ಮಿಕ ಬೆಳಕಿನಿಂದ ತೊಲಗಿಸುವ ವ್ಯಕ್ತಿ ಎಂದು ನಿರೂಪಿಸಲ್ಪಡುತ್ತಾನೆ.
Published On - 6:07 am, Tue, 22 February 22