
ಬೀದರ್ ತಾಲೂಕಿನ ಯಾಕತಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಖಾಸಗಿ ಶಾಲೆಗೆ ಶೆಡ್ಡು ಹೊಡೆಯೋ ರೀತಿ ಬೆಳೆದು ನಿಂತಿದೆ. ಇಲ್ಲಿನ ಮುಖ್ಯಗುರುಗಳಾದ ವಿನಾಯಕ ಚೌಹಾನ್ ಅವರು ಅಲ್ಲಿನ ಶಿಕ್ಷಕರು ಹಾಗೂ ಗ್ರಾಮಸ್ಥರ ಸಹಕಾರದಿಂದಾಗಿ ಸರಕಾರಿ ಶಾಲೆಯನ್ನ ತಾಲೂಕಿನಲ್ಲಿಯೇ ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ.

ಮಕ್ಕಳನ್ನ ಶಾಲೆಗೆ ಸೆಳೆಯುವ ಉದ್ದೇಶದಿಂದ ಶಾಲೆಯ ಆವರಣವನ್ನ ಸ್ವಚ್ಚತೆ ಕಡೆಗೆ ಹೆಚ್ಚಿನ ಗಮನ ಕೊಡಲಾಗಿದೆ. ಶಾಲೆಯ ಆವರಣದಲ್ಲಿಯೇ ಕಿರು ಉದ್ಯಾನವ ನಿರ್ಮಿಸಿದ್ದಾರೆ, ಉತ್ತಮ ಪರಿಸರ ಪ್ರಜ್ಞೆ ಮೂಡಿಸಲು ನೂರಾರು ವಿವಿಧ ತರಹದ ಸಸಿಗಳನ್ನು ನೆಡಲಾಗಿದೆ. ಇಲ್ಲಿ ಗಿಡ, ಮರಗಳನ್ನು ಮಕ್ಕಳಂತೆ ಆರೈಕೆ ಮಾಡಲಾಗುತ್ತಿದ್ದು, ಆ ಗಿಡಗಳ ಬುಡದಲ್ಲೇ ಮಕ್ಕಳು ಓದಿಕೊಳ್ಳುವುದು, ಮಕ್ಕಳ ಆಟವು ಕೂಡ ಹಸಿರು ಗಿಡದ ನೆರಳಿನಲ್ಲಿಯೇ ನಡೆಯುವುದರಿಂದ ಮಕ್ಕಳ ಉತ್ಸಾಹಕ್ಕೆ ಪ್ರೋತ್ಸಾಹ ಸಿಗುವಂತಿದೆ.

ಇನ್ನು ಶಾಲೆಯ ವಾತಾವರಣ ಮಕ್ಕಳಿಗೆ ಸಾಕಷ್ಟು ಖುಷಿಯನ್ನ ಕೊಡುತ್ತಿದೆ. ಇದರ ಜೊತೆಗೆ ಹಲವಾರು ಗಿಡಗಳನ್ನು ಬೆಳೆಸಲಾಗಿದ್ದು, ಅವುಗಳ ಆರೈಕೆಯನ್ನು ಮಕ್ಕಳೇ ವಹಿಸಿಕೊಂಡು ಬೆಳೆಸುತ್ತಿದ್ದಾರೆ. ಶಾಲಾ ಆವರಣದ ತುಂಬೆಲ್ಲಾ ಹೊಂಗೆ ಮರ, ಪೇರಲ, ನೇರಳೆ ಸೇರಿದಂತೆ ನಾನಾ ನಮೂನೆಯ ಜೌಷಧೀಯ ಸಸ್ಯಗಳು ಇಲ್ಲಿವೆ. ಶಾಲಾ ಆವರಣವನ್ನು ಕಂಡರೆ ಸರಕಾರಿ ಶಾಲೆಗಳು ಹೀಗೂ ಇರಬಹುದಾ? ಎಂದು ಅಚ್ಚರಿ ಮೂಡಿಸುವಂತಿದೆ.

ಈ ಕುರಿತು ಮಾತನಾಡಿದ ಶಿಕ್ಷಕರೊಬ್ಬರು, ‘ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಲು, ಅವರಿಗೆ ಪರಿಸರದ ಬಗ್ಗೆ ಕಾಳಜಿ, ಆಸಕ್ತಿ ಮೂಡುವಂತೆ ಮಾಡುವ ಉದ್ದೇಶದಿಂದ ಹಾಗೂ ಶಾಲೆಯ ಆವರಣವನ್ನು ಉತ್ತಮ ಪರಿಸರವನ್ನಾಗಿ ಮಾಡಲು ಶಾಲೆಯ ಶಿಕ್ಷ ಕ ವರ್ಗದವರು ವಿದ್ಯಾರ್ಥಿಗಳೊಳಗೂಡಿ ಸಸಿ ನೆಟ್ಟು ಗಿಡ ಬೆಳಿಸಿದ್ದಾರೆ. ಇದರಿಂದ ಮಕ್ಕಳು ಕೌಟುಂಬಿಕ ವಾತಾವರಣದಲ್ಲಿ ಕಲಿಯುವಂತಾಗಿದ್ದು, ಪೋಷಕರು ಸಂತೋಷದಿಂದ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ ಎಂದರು.

ಶಾಲೆಯಲ್ಲಿ ಪ್ರಸಕ್ತ ಒಂದರಿಂದಾ ಏಳನೇತರಗತಿವೆರೆಗೆ 171 ಮಕ್ಕಳು ಓದುತ್ತಿದ್ದು, ಶೇಕಡಾ 100 ಹಾಜರಿ ಇದೆ. ಮಕ್ಕಳು ಎರಡು ದಿನ ಶಾಲೆಗೆ ಬರದೆ ಹೋದರೆ ಇಲ್ಲಿನ ಶಿಕ್ಷಕರು ಮಕ್ಕಳ ಮನೆಗೆ ಹೋಗಿ ಮಕ್ಕಳ ಬಗ್ಗೆ ವಿಚಾರಿಸಿ ಅವರು ಶಾಲೆಗೆ ಬರುವಂತೆ ನೋಡಿಕೊಳ್ಳುತ್ತಿದ್ದಾರೆ, ಮಕ್ಕಳಿಗೆ ಓದಿಗೆ ಏನಾದರೂ ಸಮಸ್ಯೆಯಾದರೆ ಹಣಕಾಸಿನ ನೆರವನ್ನ ನೀಡಿ ಮಕ್ಕಳು ಶಾಲೆಗೆ ಬರುವಂತೆ ಇಲ್ಲಿನ ಶಿಕ್ಷಕರು ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಶಾಲೆಯ ಹಾಜರಾತಿ ನೂರಕ್ಕೆ ನೂರರಷ್ಟಿದೆ.

ಪ್ರತಿ ದಿನವೂ ಮಕ್ಕಳಿಗೆ ಶಿಸ್ತಿನ ಕಲಿಸಿಕೊಡುವುದರ ಮೂಲಕ ಸರಕಾರಿ ಶಾಲೆಯ ಮಕ್ಕಳು ಖಾಸಗಿ ಶಾಲೆಗೆ ಹೋಗುವ ಮಕ್ಕಳ ಹಾಗೇ ಶಾಲೆಗೆ ಬರುತ್ತಾರೆ. ಮಕ್ಕಳ ಕುತೂಹಲ ಕೆರಳಿಸುವ ಚಿತ್ರವನ್ನ ಶಾಲೆಯ ಗೋಡೆಗಳ ಮೇಳೆ ಚಿತ್ರಿಸಲಾಗಿದೆ. ಗಾದೆ ಮಾತುಗಳು ಕೂಡ ಶಾಲೆಯ ಗೋಡೆಗಳ ಮೇಲೆ ಬರೆಸಲಾಗಿದ್ದು, ಅದನ್ನ ಮಕ್ಕಳು ಪ್ರತಿದಿನವೂ ಓದಿಸುತ್ತಾರೆ. ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ಕನ್ನಡ ಶಾಲೆಯನ್ನ ಅಭಿವೃದ್ಧಿ ಪಡಿಸಿದ್ದು ಎಲ್ಲರೂ ಮೆಚ್ಚು ವಿಚಾರವೇ ಆಗಿದೆ.