AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ChandraShekhar Azad Birth Anniversary: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ 116ನೇ ಜನ್ಮದಿನ; ಆಜಾದ್​ರ ಆಸಕ್ತಿದಾಯಿಕ ಸಂಗತಿಗಳು ಇಲ್ಲಿವೆ

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಎಂದೇ ಖ್ಯಾತಿಗಳಿಸಿದ ಚಂದ್ರಶೇಖರ ಸೀತಾರಾಮ್ ತಿವಾರಿ ಅವರ 116ನೇ ಜನ್ಮದಿನ ಇಂದು. ಬ್ರಿಟಿಷರನ್ನು ಇನ್ನಿಲ್ಲದಂತೆ ಕಾಡಿದ ಆಜಾದ್​ರ ಆಸಕ್ತಿದಾಯಿಕ ಸಂಗತಿಗಳು ಇಲ್ಲಿವೆ.

ChandraShekhar Azad Birth Anniversary: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ 116ನೇ ಜನ್ಮದಿನ; ಆಜಾದ್​ರ ಆಸಕ್ತಿದಾಯಿಕ ಸಂಗತಿಗಳು ಇಲ್ಲಿವೆ
ಚಂದ್ರಶೇಖರ್ ಆಜಾದ್
TV9 Web
| Edited By: |

Updated on:Jul 23, 2022 | 11:59 AM

Share

ಬ್ರಿಟಿಷ್ ಆಡಳಿತದ ವಿರುದ್ಧ ಹಾಗೂ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಆಯುಧಗಳನ್ನು ಬಳಸಿದ ಮೊದಲ ಭಾರತೀಯ ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿರುವ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ (ChandraShekhar Azad)ಎಂದೇ ಖ್ಯಾತಿಗಳಿಸಿದ ಚಂದ್ರಶೇಖರ ಸೀತಾರಾಮ್ ತಿವಾರಿ ಅವರ 116ನೇ ಜನ್ಮದಿನ ಇಂದು. ಜೀವಂತವಾಗಿದ್ದಾಗ ಆಜಾದ್ ಅವರು ಬ್ರಿಟಿಷರನ್ನು ಇನ್ನಿಲ್ಲದಂತೆ ಕಾಡಿದರು. ಉತ್ಸಾಹ ಮತ್ತು ದೇಶಭಕ್ತಿಯ ಹಾದಿಯಲ್ಲಿ ನಡೆಯಲು ಜನತೆಗೆ ಮಾರ್ಗದರ್ಶನವನ್ನು ನೀಡಿದ ಮಹಾನ್ ವ್ಯಕ್ತಿ ಆಜಾದ್​ ಅವರ ಜೀವನ ಚರಿತ್ರೆ ಹಾಗೂ ಆಸಕ್ತಿದಾಯಿಕ ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ.

ಚಂದ್ರಶೇಖರ್ ಆಜಾದ್ ಅವರು ಮಧ್ಯಪ್ರದೇಶದ ಸಣ್ಣ ಭಾಬ್ರಾ ಗ್ರಾಮದಲ್ಲಿ ಪಂಡಿತ್ ಸೀತಾರಾಮ್ ಮತ್ತು ಜಾಗ್ರಣಿ ದೇವಿ ದಂಪತಿಯ ಪುತ್ರನಾಗಿ 19.6ರ ಜು.23ರಂದು ಜನಿಸಿದರು. ಭಾವರಾ ಮತ್ತು ವಾರಾಣಸಿಯ ಸಂಸ್ಕೃತ ಪಾಠ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದ ಆಜಾದ್ ಅವರಿಗೆ ಸಣ್ಣ ವಯಸ್ಸಿನಲ್ಲೇ ಸ್ವಾತಂತ್ರ್ಯದ ಕಿಚ್ಚು ಹತ್ತಿಕೊಂಡಿತ್ತು. ಅದರಂತೆ ಸ್ವಾತಂತ್ರ್ಯ ಹೋರಾಟದಲ್ಲೂ ಧುಮುಕಿ ಚಳುವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಆಜಾದ್ ಎಂಬ ಬಿರುದು ಬಂದಿದ್ದು ಹೇಗೆ?

ಅಮೃತಸರದಲ್ಲಿ 1919ರಲ್ಲಿ ನಡೆದ ಜಲಿಯನ್​ವಾಲಾ ಬಾಗ್ ಹತ್ಯಾಕಾಂಡ ಘಟನೆ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಈ ಘಟನೆಯಿಂದ ತೀವ್ರವಾಗಿ ಜರ್ಜರಿತರಾದ ಚಂದ್ರಶೇಖರ್ ಅವರು 1921ರಲ್ಲಿ ಗಾಂಧೀಜಿಯವರು ಹಮ್ಮಿಕೊಂಡ ಅಸಹಕಾರ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡರು. ಈ ರೀತಿಯ ನಾಗರಿಕ ಶಾನಸಭಂಗ ಅಥವಾ ಅವಿಧೇಯತೆಗಾಗಿ ಅವರು ಬಂಧಿತರಾದರು. ತಮ್ಮ 15ನೇ ವಯಸ್ಸಿನಲ್ಲಿಯೇ ಶಿಕ್ಷೆಗೆ ಗುರಿಯಾದರು. ನ್ಯಾಯಾಧೀಶರು ಹೆಸರೇನು ಎಂದು ಕೇಳಿದಾಗ ಆಜಾದ್ (ಸ್ವತಂತ್ರ್ಯ ಅಥವಾ ಸ್ವತಂತ್ರ ವ್ಯಕ್ತಿ ಎಂದು ಅರ್ಥ) ಎಂದು ಹೇಳಿದರು. ಇದೇ ಕಾರಣಕ್ಕೆ ಅವರಿಗೆ 15 ಛಡಿಏಟುಗಳ ಶಿಕ್ಷೆಯನ್ನು ನೀಡಲಾಯಿತು.

ಛಡಿಏಟುಗಳ ನಡುವೆ ಚಂದ್ರಶೇಖರ್ ಅವರು ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳನ್ನು ಕೂಗಿದರು. ಪ್ರತಿ ಛಡಿಏಟುಗಳಿಗೂ ಅದೇ ಘೋಷಣೆಗಳನ್ನು ಕೂಗಿದರು. ಈ ಘಟನೆಯ ನಂತರ ಚಂದ್ರಶೇಖರ್ ಅವರಿಗೆ ಆಜಾದ್ ಎಂಬ ಬಿರುದು ಪ್ರಾಪ್ತವಾಯಿತು. ಅದರಂತೆ ಚಂದ್ರಶೇಖರ್ ಸೀತಾರಾಮ್ ತಿವಾರಿ ಅವರು ಚಂದ್ರಶೇಖರ್ ಅಜಾದ್ ಆಗಿ ಗುರುತಿಸಲ್ಪಟ್ಟರು.

ಕ್ರಾಂತಿಕಾರಿ ಚಟುವಟಕೆಗಳಲ್ಲಿ ಧುಮುಕಿದ ಆಜಾದ್

ಅಸಹಕಾರ ಚಳವಳಿಯ ನಂತರ ಚಂದ್ರಶೇಖರ್ ಆಜಾದ್ ಅವರು ಕ್ರಾಂತಿಕಾರಿ ಆದರ್ಶಗಳಿಂದ ಆಕರ್ಷಿತರಾದರು. ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಮುಡಿಪಾಗಿಟ್ಟರು. ಕ್ರಾಂತಿಕಾರಿ ನಡೆ ಹಿನ್ನೆಲೆ ಪ್ರಥಮ ಹೆಜ್ಜೆಯಾಗಿ ಹಿಂದೂಸ್ತಾನ್ ಸಮಾಜವಾದಿ ಪ್ರಜಾಪ್ರಭುತ್ವವಾದಿ ಸಂಘಟನೆ ಎಂಬ ಸಂಘವನ್ನು ಆರಂಭಿಸಿದರು. ಅಲ್ಲದೆ ಭಗತ್ ಸಿಂಗ್, ಸುಖ್​ದೇವ್, ಬಟುಕೇಶ್ವರ ದತ್ ಮತ್ತು ರಾಜ್​ಗುರುರಂತಹಾ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾದರು. ತಮ್ಮ ಸಂಘಟನೆ ಮೂಲಕ ಬ್ರಿಟಿಷರ ವಿರುದ್ಧ ಅನೇಕ ಹಿಂಸಾತ್ಮಕ ಪ್ರತಿಭಟನೆಗಳನ್ನು ಯೋಜಿಸಿ ಕಾರ್ಯಗತಗೊಳಿಸಿದರು.

ಬ್ರಿಟಿಷರಿಗೆ ಶರಣಾಗದೆ ಪ್ರಾಣತೆತ್ತ ಆಜಾದ್

ತಮ್ಮ ಕ್ರಾಂತಿಕಾರಿ ಚಟುವಟಿಕೆ ಹಾಗೂ ಪ್ರತಿಭಟನೆಗಳಿಂದ ಆಜಾದ್ ಅವರು ಬ್ರಿಟಿಷರಿಗೆ ಇನ್ನಿಲ್ಲದಂತೆ ಕಾಡತೊಡಗಿದರು, ಇದಕ್ಕಾಗಿಯೇ ಬ್ರಿಟಿಷರು ಓರ್ವ ಹಿಂದಿ ಲೇಖಕನನ್ನು ಆರಕ್ಷಕರಿಗಾಗಿ ಮಾಹಿತಿದಾರನಾಗಿ ನೇಮಿಸಿದರು. ಆತ ಆಜಾದ್ ಬಗ್ಗೆ ಮಾಹಿತಿ ನೀಡುತ್ತಿದ್ದನು. ಅದರಂತೆ ಅಲಹಾಬಾದ್​ನ ಆಲ್​ಫ್ರೆಡ್​ ಉದ್ಯಾನದಲ್ಲಿ ತಮ್ಮ ಇಬ್ಬರು ಸಂಗಡಿಗರನ್ನು ಭೇಡಿಯಾದ ಬಗ್ಗೆ ತಿಳಿದ ಪೊಲೀಸರು ಇಡೀ ಉದ್ಯಾನವನ್ನು ಸುತ್ತುವರೆದು ಶರಣಾಗುವಂತೆ ಆಜಾದ್​ಗೆ ಆದೇಶಿಸಿದರು. ಆದರೆ ಬ್ರಿಟಿಷರಿಗೆ ಶರಣಾಗಲು ಇಚ್ಛಿಸದ ಆಜಾದ್ ಅವರು ಅಲ್ಲಿಯೂ ಹೋರಾಟವನ್ನು ಮುಂದುವರಿಸಿ ಮೂವರು ಪೊಲೀಸರನ್ನು ಕೊಂದುಹಾಕಿದರು. ತಮ್ಮಲ್ಲಿದ್ದ ಬಹುತೇಕ ಗುಂಡುಗಳು ಖಾಲಿಯಾಗಿ ಉಳಿದಿದ್ದ ಕೇವಲ ಒಂದು ಗುಂಡನ್ನು ತಮ್ಮ ತಲೆಗೆ ಹಾರಿಸಿಕೊಂಡು ಪ್ರಾಣತ್ಯಾಗ ಮಾಡಿದರು.

Published On - 9:01 am, Sat, 23 July 22