AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆ ಮುಖದ ಗಣಪನನ್ನು ಪೂಜಿಸುವ ನಾಡಿನಲ್ಲಿ ಆನೆಗಳ ಮೇಲೆ ಅತಿಹೆಚ್ಚು ದೌರ್ಜನ್ಯ ಆಗುತ್ತಿರುವುದು ವಿಪರ್ಯಾಸ!

World Elephant Day 2021: ಆನೆಗಳು ವಾಸಿಸುವ ಹುಲ್ಲುಗಾವಲು, ದಟ್ಟಡವಿಗಳು ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವುದರ ಮೂಲಕ ನದಿಗಳ ಹುಟ್ಟಿಗೆ ಕಾರಣವಾಗುತ್ತವೆ. ಆ ನದಿಗಳೇ ನಾಡಿನ ಜಲಮೂಲಕ್ಕೆ ಆಧಾರವಾಗಿದೆ.

ಆನೆ ಮುಖದ ಗಣಪನನ್ನು ಪೂಜಿಸುವ ನಾಡಿನಲ್ಲಿ ಆನೆಗಳ ಮೇಲೆ ಅತಿಹೆಚ್ಚು ದೌರ್ಜನ್ಯ ಆಗುತ್ತಿರುವುದು ವಿಪರ್ಯಾಸ!
ಏಷ್ಯಾದ ಆನೆ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on:Aug 12, 2021 | 10:10 AM

Share

ಪ್ರತಿವರ್ಷ ಜೂನ್ 12ರಂದು ವಿಶ್ವ ಆನೆ ದಿನವೆಂದು ಆಚರಿಸಲಾಗುತ್ತದೆ. ಬಹಳಷ್ಟು ಧರ್ಮಗಳಲ್ಲಿ ಆನೆಗಳನ್ನು ಪೂಜಿಸಲಾಗುತ್ತದೆ. ಹಿಂದೂಗಳಂತೂ ಆನೆಯ ಮುಖದ ಗಣಪನಿಗೆ ಪ್ರಥಮ ಪೂಜೆ ಸಲ್ಲಿಸದೇ ಯಾವ ಸತ್ಕಾರ್ಯಗಳನ್ನು ಮಾಡುವುದಿಲ್ಲ. ಹೀಗೆ ಗಣಪನನ್ನು ಪೂಜಿಸುವ ನಾಡಿನಲ್ಲೇ ಆನೆಗಳ ಮೇಲೆ ಅತಿಹೆಚ್ಚು ದೌರ್ಜನ್ಯವಾಗುತ್ತಿರುವುದು ವಿಪರ್ಯಾಸವಲ್ಲದೇ ಮತ್ತೇನು? ಆನೆ, ನೆಲದ ಮೇಲಿನ ದೈತ್ಯ ಪ್ರಾಣಿಯಾಗಿ ಅತೀ ಬುದ್ಧಿ ಹೊಂದಿದ ಪ್ರಾಣಿಗಳಲ್ಲಿ ಪ್ರಥಮ ಸ್ಥಾನ ಹೊಂದಿದೆ. ಅವುಗಳ ಕೌಟುಂಬಿಕ ಆಪ್ತತೆ ಮನುಷ್ಯನನ್ನು ಮೀರಿಸುತ್ತದೆ.

ಒಂದು ಕಾಲದಲ್ಲಿ ಲಕ್ಷಗಟ್ಟಲೇ ಸಂಖ್ಯೆಯಲ್ಲಿದ್ದ ಏಷ್ಯಾ ಆನೆಗಳ ಸಂಖ್ಯೆ ಇದೀಗ ಸುಮಾರು 51 ಸಾವಿರ. ಆನೆಗಳ ಸಂಖ್ಯೆ ಕಡಿಮೆಯಾಗಲು ಮುಖ್ಯವಾದ ಕಾರಣ ಕಳ್ಳಬೇಟೆ, ಆವಾಸಸ್ಥಾನ ನಾಶ, ಕೃಷಿ ವಿಸ್ತರಣೆ, ರಸ್ತೆ, ರೈಲು, ಆಣೆಕಟ್ಟುಗಳಂತಹ ಅಭಿವೃದ್ಧಿ ಯೋಜನೆಗಳು. ಬುದ್ದಿವಂತನೆಂದು ತನಗೆ ತಾನೆ ಕರೆದುಕೊಂಡು ಬೀಗುವ ಮನುಷ್ಯನ ದುರಾಸೆಯಿಂದಾಗಿಯೇ ವನ್ಯಜೀವಿಗಳ ಆವಾಸಸ್ಥಾನ ನಾಶ ಮಾಡಿದ್ದೇವೆ. ಈಗ ನಮ್ಮ ಹೊಲಕ್ಕೆ ನುಗ್ಗುವ ಆನೆಗಳನ್ನು ವಿದ್ಯುತ್ ಹರಿಸಿ ಸಾಯಿಸಲಾಗುತ್ತದೆ. ಅವುಗಳ ನೆಲೆಯನ್ನು ನಾಶ ಮಾಡಿದ ನಾವುಗಳು ಇದೀಗ ನಮ್ಮ ನೆಲಕ್ಕೆ ಆನೆಗಳು ದಾಳಿಮಾಡುತ್ತಿವೆ ಎಂದು ದೂರುತ್ತೇವೆ. ಮೂಲವಾಗಿ ಆನೆಗಳು ವಾಸಿಸುವ ಅರಣ್ಯ ಮನುಜನ ನೆಲ ಹೇಗಾಗುತ್ತದೆ ಎಂಬುದು ಇನ್ನೂ ಅರ್ಥವಾಗಿಲ್ಲ. ಅರಣ್ಯದಲ್ಲಿ ಒಡಾಡಿಕೊಂಡಿದ್ದರೂ ಬೇಟೆಗಾರರು ದಂತಕ್ಕಾಗಿ ಆನೆಗಳನ್ನು ಕೊಲ್ಲುತ್ತಾರೆ.

ಕುಖ್ಯಾತ ದಂತಚೋರ ವೀರಪ್ಪನ್ ತನ್ನ ಜೀವಿತಾವಧಿಯಲ್ಲಿ ಸುಮಾರು 2000 ರಿಂದ 3000 ಗಂಡಾನೆಗಳನ್ನು ದಂತಕ್ಕಾಗಿ ಬೇಟೆಯಾಡಿದ್ದನು ಎಂದು ಅಂಕಿ-ಅಂಶ ಹೇಳುತ್ತವೆ. ಏಷಿಯಾದ ಗಂಡಾನೆಗಳಿಗೆ ಮಾತ್ರ ಹೊರಗೆ ಚಾಚಿದ ಕೋರೆಗಳಿರುತ್ತವೆ. ಅದೇ ಆಫ್ರಿಕಾದಲ್ಲಿ ಗಂಡು ಮತ್ತು ಹೆಣ್ಣಾನೆಗಳಿಗೂ ಕೋರೆ ಅಥವಾ ದಂತಗಳಿರುತ್ತವೆ. ಭಾರತ ಮತ್ತು ಏಷ್ಯಾದ ಇತರ ದೇಶಗಳಲ್ಲಿ ದಂತಕ್ಕಾಗಿ ಗಂಡಾನೆಯನ್ನು ಬೇಟೆಯಾಡುತ್ತಿರುವುದರಿಂದ ಗಂಡಾನೆಗಳ ಸಂಖ್ಯೆ ತೀರ್ವವಾಗಿ ಇಳಿಮುಖವಾಗುತ್ತಿದೆ. ಸದ್ಯ ಸುಮಾರು 80 ವಯಸ್ಕ ಹೆಣ್ಣಾನೆಗಳಿಗೆ ಒಂದು ಗಂಡಾನೆ ಇದೆ ಎಂದು ವರದಿಗಳು ಹೇಳುತ್ತವೆ. ಇದು ಅತ್ಯಂತ ಕಳವಳಕಾರಿ ಅಂಶವಾಗಿದೆ. ಒಂದು ಅಂದಾಜಿನಂತೆ ಇದೇ ವೇಗದಲ್ಲಿ ಆನೆಗಳ ಹತ್ಯೆ ಮುಂದುವರೆದಲ್ಲಿ, 2040ರ ಹೊತ್ತಿಗೆ ಆನೆಗಳ ಸಂತತಿ ಸಂಪೂರ್ಣ ಅಳಿದುಹೋಗಲಿದೆ ಎಂದು ವಿಶ್ವ ವನ್ಯಜೀವಿ ನಿಧಿ ಸಂಘಟನೆ ಎರಡು ವರ್ಷಗಳ ಹಿಂದೆಯೇ ಎಚ್ಚರಿಕೆ ನೀಡಿತ್ತು.

ಏಷಿಯಾ ಆನೆಗಳ ಸಂಖ್ಯೆ ಹೆಚ್ಚು ಇರುವುದು ಭಾರತದಲ್ಲಿ. ಉಳಿದಂತೆ ನೇಪಾಳ, ಬಾಂಗ್ಲಾದೇಶ, ಭೂತಾನ್, ಮಯನ್ಮಾರ್, ಥೈಲ್ಯಾಂಡ್, ಲಾವೋಸ್, ಚೈನಾ, ಕಾಂಬೋಡಿಯಾ, ವಿಯೆಟ್ನಾಂ ದೇಶಗಳಲ್ಲಿ ಇವುಗಳ ಸಂತತಿ ಇದೆ. ಭೌಗೋಳಿಕವಾಗಿ ನಮಗಿಂತ ಮೂರುಪಟ್ಟು ಹೆಚ್ಚು ಪ್ರದೇಶ ಹೊಂದಿದ ಚೀನಾದಲ್ಲಿ ಬರೀ 250 ಆನೆಗಳಿವೆ. ಮತ್ತು ಒಂದು ಕಾಲದಲ್ಲಿ ಭಾರತದ ಭಾಗವಾಗಿದ್ದ ಪಾಕಿಸ್ತಾನದಲ್ಲಿ ಆನೆಗಳು ಅಳಿದುಹೋಗಿವೆ.

ಕೊನೆಯದಾಗಿ, ಜೀವಜಾಲದ ಸರಪಣಿಯಲ್ಲಿ ಆನೆಗಳದು ಬಹುಮುಖ್ಯ ಪಾತ್ರವಿದೆ. ಆನೆಗಳ ಆವಾಸತಾಣಗಳನ್ನು ಸಂರಕ್ಷಿಸಿದರೆ ಮಾತ್ರ, ಪ್ರತ್ಯಕ್ಷವಾಗಿ ಮನುಷ್ಯ ಸಂತತಿಗೂ ಕ್ಷೇಮ. ಆನೆಗಳು ವಾಸಿಸುವ ಹುಲ್ಲುಗಾವಲು, ದಟ್ಟಡವಿಗಳು ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವುದರ ಮೂಲಕ ನದಿಗಳ ಹುಟ್ಟಿಗೆ ಕಾರಣವಾಗುತ್ತವೆ. ಆ ನದಿಗಳೇ ನಾಡಿನ ಜಲಮೂಲಕ್ಕೆ ಆಧಾರವಾಗಿದೆ.

ಬರಹ: ಅಖಿಲೇಶ್ ಚಿಪ್ಪಳಿ ಪ್ರಧಾನ ಕಾರ್ಯದರ್ಶಿ SWAN & Man (Save-Wild-Atmosphere-Nature & Man), ಚಿಪ್ಪಳಿ, ಲಿಂಗದಹಳ್ಳಿ, ಸಾಗರ ಮೊಬೈಲ್ ಸಂಖ್ಯೆ: 9449718869

ಇದನ್ನೂ ಓದಿ: ಮೈಸೂರು ಮೃಗಾಲಯದಿಂದ ನೂತನ ಪ್ರಯೋಗ; ಆನೆಗಳಿಗಾಗಿ ಈಜುಕೊಳ ನಿರ್ಮಾಣ!

ಬೆಂಗಳೂರು: ಜೆಪಿ ನಗರದಲ್ಲಿ ಆನೆ ದಂತ, ವನ್ಯ ಜೀವಿಗಳ ಚರ್ಮ, ಮೂಳೆ ಸಂಗ್ರಹಿಸಿದ್ದ ಆರೋಪಿ ಬಂಧನ

(World Elephant Day 2021 Special Write up by Akhilesh Chippali Elephants in India)

Published On - 7:41 am, Thu, 12 August 21